Asianet Suvarna News Asianet Suvarna News

ಭತ್ತದ ಇಳುವರಿ ಹೆಚ್ಚಿಸಲು ಅಜೋಲಾ!

ಅಜೋಲಾವನ್ನು ಪ್ರತ್ಯೇಕವಾಗಿ ಬೆಳೆದು ಪಶು ಆಹಾರವಾಗಿ ಬಳಸುವುದು ತಮಗೆಲ್ಲ ಗೊತ್ತೇ ಇದೆ. ಹಸಿರು ಮೇವು ಸಿಗದ ಕಡೆ ಇದು ವರದಾನ. ಸಾಕಷ್ಟುಪೋಷಕಾಂಶ ಹೊಂದಿರುವ ಅಜೋಲಾ ಜಾನುವಾರುಗಳ ಪರಿಪೂರ್ಣ ಆಹಾರ. ಇದೇ ಅಜೋಲಾವನ್ನು ಭತ್ತದ ಗದ್ದೆಯಲ್ಲಿ ಬೆಳೆದರೆ ಬೆಳೆಗೂ ಸೇರಿದಂತೆ ನಮ್ಮ ಭೂಮಿಗೂ ಕೂಡ ಒಳ್ಳೆಯದು.

Azola hybride plants helps to grown paddy yield in large number
Author
Bangalore, First Published Nov 19, 2019, 1:08 PM IST

ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಝರಿ ರೀತಿಯ ಸಸ್ಯವೇ ಅಜೋಲಾ. ಇದರ ಕಾಂಡ ಮತ್ತು ಎಲೆಗಳು ಚಿಕ್ಕದಾಗಿದ್ದು, ಬೇರುಗಳು ನೀರಿನಲ್ಲಿ ಇಳಿಬಿದ್ದಿರುತ್ತವೆ. ಅಜೋಲಾ ಸಸ್ಯದ ಎಲೆಯ ಕೆಳಭಾಗದಲ್ಲಿ ಸಣ್ಣ ರಂಧ್ರಗಳಿದ್ದು, ಅವುಗಳಲ್ಲಿ ಅನಬೀನಾ ಎಂಬ ನೀಲಿ ಹಸಿರು ಪಾಚಿಯು ಅಡಕವಾಗಿರುತ್ತವೆ, ಇವು ವಾಯುಮಂಡಲದಲ್ಲಿ ಮುಕ್ತವಾಗಿ ಸಿಗುವ ಸಾರಜನಕವನ್ನು ಹೀರಿ ಹಿಡಿದಿಟ್ಟುಕೊಳ್ಳುವ ಶಕ್ತಿ ಪಡೆದಿರುತ್ತವೆ. ಭತ್ತದ ಗದ್ದೆಯಲ್ಲಿ ಅಜೋಲಾ ಹಾಕಿದಾಗ ಸ್ಥಿರೀಕರಣಗೊಂಡ ಸಾರಜನಕ ನಮ್ಮ ಭತ್ತದ ಬೆಳೆಗೆ ಲಭಿಸುತ್ತದೆ. ಬೇರೆಲ್ಲಾ ಸಾವಯವ ಪದಾರ್ಥಗಳ ಮೂಲಗಳಿಗೆ ಹೋಲಿಸಿದರೆ ಭತ್ತದ ಗದ್ದೆಯಲ್ಲಿ ಉತ್ತಮವಾಗಿ ಬೆಳೆಯಬಲ್ಲ ಹಾಗೂ ಸಾರಜನಕವನ್ನು ಸ್ಥಿರೀಕರಿಸುವ ಶಕ್ತಿ ಹೊಂದಿರುವ ಅಜೋಲವನ್ನು ಬೆಳೆಸಿದರೆ ಉತ್ತಮ.

ಜೇನುಕೃಷಿ ಮಾಡಿ ಲಕ್ಷ ಎಣಿಸುವ ಅರವಿಂದ್!

ಸಸಿ ಮಡಿ ತಯಾರಿಸುವ ಸಮಯದಲ್ಲಿಯೇ ಅಜೋಲಾ ಮಡಿಯನ್ನೂ ತಯಾರಿಸಿಕೊಳ್ಳಬೇಕು. ಸುಮಾರು 100 ಚದರ ಅಡಿಯ ಒಂದು ಸಮತಟ್ಟಾದ ಪ್ರದೇಶವನ್ನು ಗುರುತಿಸಿ ಇದರ ಸುತ್ತ ನೀರು ನಿಲ್ಲಲು ಸೂಕ್ತವಾಗುವಂತೆ ಸುಮಾರು ಅರ್ಧ ಅಡಿ ಎತ್ತರದ ಬದುವನ್ನು ನಿರ್ಮಿಸಬೇಕು. ಆ ಮಡಿಯ ತುಂಬ 150 ಕೆ.ಜಿ ಕೊಟ್ಟಿಗೆ ಗೊಬ್ಬರ, ಜೊತೆಗೆ 2 ಕೆ.ಜಿ ಸೂಪರ್‌ ಫಾಸ್ಪೇಟನ್ನು ಸಮನಾಗಿ ಹರಡಬೇಕು.

ತದನಂತರ ಈ ಮಡಿಯಲ್ಲಿ ನಾಲ್ಕು ಇಂಚು ನೀರು ನಿಲ್ಲಿಸಿ, ನೀರಿನ ಮೇಲೆ ಸುಮಾರು 3 ಕೆ.ಜಿ ಅಜೋಲವನ್ನು ಸಮನಾಗಿ ಹರಡಬೇಕು. ಈ ರೀತಿ ಸಿದ್ಧಪಡಿಸಿದ ಅಜೋಲ ಮಡಿಯಲ್ಲಿ ಸುಮಾರು 4 ಇಂಚು ನೀರಿರುವಂತೆ 20 ದಿನಗಳವರೆಗೆ ನೀರಿನ ಮಟ್ಟಕಾಪಾಡಿಕೊಂಡರೆ, ಭತ್ತದ ನಾಟಿ ಹೊತ್ತಿಗೆ ನಮಗೆ ಸುಮಾರು 300-400 ಕೆ.ಜಿ ಅಜೋಲ ದೊರೆಯುತ್ತದೆ.

ಕರ್ನಾಟಕದಲ್ಲೊಂದು ಬಾಳೆ ಗ್ರಾಮ; ಗದಗ ಜಿಲ್ಲೆಯ ಹಮ್ಮಗಿಗೆ ಭೇಟಿ ನೀಡಿ!

ಭತ್ತ ನಾಟಿ ಮಾಡಿದ ಹತ್ತು ದಿನಗಳ ನಂತರ ಅಜೋಲವನ್ನು ಭತ್ತದ ಗದ್ದೆಯ ತುಂಬ ಸಮನಾಗಿ ಚೆಲ್ಲಬೇಕು. ಹೀಗೆ ಬೀಜರೂಪದಲ್ಲಿ ಹಾಕಿದ ಅಜೋಲ ಸುಮಾರು 20 ರಿಂದ 30 ದಿನಗಳಲ್ಲಿ ಭತ್ತದ ಸಸ್ಯಗಳಿಂದ ದೊರೆಯುವ ನೆರಳಿನ ಆಸರೆಯಲ್ಲಿ ಒಂದು ಎಕರೆ ಪ್ರದೇಶಕ್ಕೂ ಹರಡಿ ಕೊಳ್ಳುತ್ತದೆ ಅಂದರೆ 300 ಕೆ.ಜಿ ಇದ್ದಿದ್ದು ಸುಮಾರು 5ರಿಂದ 10 ಟನ್‌ಗಳಷ್ಟಾಗುತ್ತದೆ! ಈ ರೀತಿ ಹುಲುಸಾಗಿ ಬೆಳೆದ ಅಜೋಲವನ್ನು, ಭತ್ತದ ಮೊದಲನೆಯ ಕಳೆ ತೆಗೆಯುವ ಸಮಯದಲ್ಲಿ ಮಣ್ಣಿಗೆ ಸೇರಿಸಬಹುದು. ಅಥವಾ ಅದು ತಾನಾಗಿ ಕಳೆತು ಗೊಬ್ಬರವಾಗಿ,ನಿಧಾನವಾಗಿ ಬೆಳೆಗೆ ಸಾರಜನಕವನ್ನು ಒದಗಿಸುತ್ತದೆ.

10 ಲಕ್ಷ ಸಂಬಳದ ಕೆಲಸ ಬಿಟ್ಟು ಗುಲಾಬಿ ಕೃಷಿಗಿಳಿದ ಇಂಜಿನಿಯರ್‌!

ಅಳಿದುಳಿದ ಅಜೋಲ ಬೆಳವಣಿಗೆ ಹೊಂದಿ ಮುಂದಿನ 20 ದಿನಗಳಲ್ಲಿ ಮತ್ತೆ 5 ರಿಂದ 10 ಟನ್‌ ಗಳಷ್ಟಾಗುತ್ತದೆ. ಹೀಗೆ ಒಂದು ಭತ್ತದ ಬೆಳೆಯ ಅವಧಿಯಲ್ಲಿ ಸುಮಾರು 2 ರಿಂದ 6 ಅಜೋಲಾ ಬೆಳೆಯನ್ನು ಬೆಳೆಯುವುದರಿಂದ ಭತ್ತದ ಗದ್ದೆಗೆ ಸುಮಾರು 20ರಿಂದ 30 ಟನ್‌ ಸಾವಯವ ಪದಾರ್ಥ ಒದಗಿಸಿದಂತಾಗುತ್ತದೆ ಹಾಗೂ ಹೀಗೆ ಮಾಡುವುದರಿಂದ ಭತ್ತದ ಇಳುವರಿ ಶೇ 20 ರಿಂದ 40 ರಷ್ಟುವೃದ್ಧಿಯಾಗುತ್ತದೆ. ಅಜೋಲಾದಿಂದ ಸಾರಜನಕ ಸೇರಿದಂತೆ ಹಲವು ಪೋಷಕಾಂಶಗಳನ್ನು ಪಡೆದ ಭತ್ತದ ಇಳುವರಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ರಾಸಾಯನಿಕ ಗೊಬ್ಬರದ ಬಳಕೆ ಅರ್ಧಕ್ಕರ್ಧ ಕಡಿಮೆ ಮಾಡಬಹುದು. ಹಾಗೆಯೆ ಕಳೆ ನಿಯಂತ್ರಣವಾಗಿ ಅಲ್ಲಿಯೂ ನಮಗೆ ಖರ್ಚು ಕಮ್ಮಿ ಆಗುತ್ತದೆ.

Follow Us:
Download App:
  • android
  • ios