ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ, ಹೈ-ವೋಲ್ಟೇಜ್ ವಿದ್ಯುತ್ ಯೋಜನೆಗಾಗಿ ದಶಕದಿಂದ ಪೋಷಿಸಿದ್ದ 100ಕ್ಕೂ ಹೆಚ್ಚು ಮರಗಳನ್ನು ಕಡಿದಾಗ ಮಹಿಳೆಯೊಬ್ಬರು ಮರಗಳನ್ನು ಅಪ್ಪಿ ಅತ್ತಿದ್ದಾರೆ. ಮಕ್ಕಳಂತೆ ಸಾಕಿದ್ದ ಮರಗಳನ್ನು ಕಡಿಯದಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರೂ, ಪೊಲೀಸರ ಸಹಾಯದಿಂದ ಮರಗಳನ್ನು ಕಡಿಯಲಾಗಿದ್ದು, ಈ ಘಟನೆಯು ಅಭಿವೃದ್ಧಿ ಮತ್ತು ರೈತರ ಸಂಕಟದ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತದೆ.
ಮನೆಯಲ್ಲಿ ಗಿಡಗಳನ್ನು ನೆಟ್ಟಾಗ, ಅವು ಸರಿಯಾಗಿ ಬೆಳೆಯದೇ ಬಾಡಿ ಹೋಗುತ್ತಿದ್ದರೆ, ಅದನ್ನು ನೆಟ್ಟವರಿಗೆ ಆಗುವ ಸಂಕಟ ಅಷ್ಟಿಷ್ಟಲ್ಲ. ಏಕೆಂದರೆ ಅದನ್ನು ಪ್ರತಿನಿತ್ಯವೂ ಪೋಷಿಸುವವರಿಗೆ ಅದೊಂದು ಕೇವಲ ಗಿಡವಲ್ಲ, ಬದಲಿಗೆ ತಮ್ಮ ಮಗುವೇ ಎಂದು ಎನ್ನಿಸುರುತ್ತದೆ. ಅದರ ಜೊತೆ ಬಾಂಧವ್ಯ ಬೆಳೆದಿರುತ್ತದೆ. ಆದ್ದರಿಂದ ಅದು ಸಾಯುವ ಸ್ಥಿತಿ ಬಂದಾಗ ಕರುಳು ಹಿಂಡಿ ಹೋಗುತ್ತದೆ. ಹೀಗಿರುವಾಗ ಸಣ್ಣ ಸಸಿಯನ್ನು ತಂದು, ಅದನ್ನು ಜತನದಿಂದ ಹತ್ತಾರು ವರ್ಷಗಳವರೆಗೆ ಕಾಪಾಡಿಕೊಂಡು ಬಂದು ಅದು ಹೆಮ್ಮರವಾದಾಗ, ಅದನ್ನು ಬೆಳೆಸಿದವರಿಗೆ ಅದೆಷ್ಟು ಖುಷಿ, ಚಿಕ್ಕ ಪಾಪುವನ್ನು ದೊಡ್ಡವರನ್ನಾಗಿ ಮಾಡಿದ ಹೆಮ್ಮೆ ಅಲ್ಲಿರುತ್ತದೆ. ಅದೇ ಬಾಂಧವ್ಯವೂ ಬೆಳೆದಿರುತ್ತದೆ. ಆದರೆ ಆ ಹೆಮ್ಮರವನ್ನು ಯಾರಾದರೂ ಕಡಿದುಬಿಟ್ಟರೆ...? ಅವರ ಪಾಲಿಗೆ ದೊಡ್ಡ ಮಕ್ಕಳನ್ನು ಕಣ್ಣೆದುರಿಗೇ ಕೊಲೆ ಮಾಡಿದಂತೆಯೇ ಎನ್ನಿಸಿಬಿಡುತ್ತದೆ. ಅದೂ ಒಂದಲ್ಲ, ಎರಡಲ್ಲ 100 ಮರಗಳನ್ನು ಕಡಿದರೆ? ಊಹಿಸಲೂ ಸಾಧ್ಯವಿಲ್ಲದ ಒಡಲ ಸಂಕಟವದು!
100ಕ್ಕೂ ಹೆಚ್ಚು ಮರಕ್ಕೆ ಕೊಡಲಿ
ಅಂಥದ್ದೇ ಒಂದು ಮನಕಲುಕುವ ದೃಶ್ಯ ತಮಿಳುನಾಡಿನಿಂದ ವೈರಲ್ ಆಗಿದೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಹೈ-ವೋಲ್ಟೇಜ್ ವಿದ್ಯುತ್ ಪ್ರಸರಣ ಯೋಜನೆಗಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ತನ್ನ ಕುಟುಂಬವು ಬೆಳೆಸಿದ 100 ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಯಿತು. ಮರಗಳನ್ನು ಕಡಿಯಲು ಬಂದಾಗ ತಿಯಾಗದುರ್ಗಂ ಬಳಿಯ ವಡತೋರಸಲೂರ್ ಗ್ರಾಮದಲ್ಲಿರುವ ಸೆಲ್ವಿ ಮರಗಳನ್ನು ಬಿಗಿದಪ್ಪಿ ಇದನ್ನು ಕೊಲ್ಲಬೇಡಿ, ನಾವೇ ನೆಟ್ಟು ಬೆಳೆಸಿದ ಕೂಸಿದು, ನಮಗೆ ಮಕ್ಕಳ ಸಮಾನ. ನಾನು ಇದನ್ನು ಕಡಿಯಲು ಬಿಡಲ್ಲ ಎಂದು ಬಿಕ್ಕಿಬಿಕ್ಕಿ ಅತ್ತಿರುವ ಮಹಿಳೆಯ ವಿಡಿಯೋ ವೈರಲ್ ಆಗಿದೆ. ಮಹಿಳೆ ಮರಗಳನ್ನು ಅಪ್ಪಿಕೊಂಡು ಅವುಗಳನ್ನು ಕಡಿಯುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ದಂತವೈದ್ಯರಾದ ಸೆಲ್ವಿ ಮತ್ತು ಅವರ ಮಗ ಬಾಲಮುರುಗನ್, ನೈಸರ್ಗಿಕ ಕೃಷಿ ವಿಧಾನಗಳನ್ನು ಬಳಸಿಕೊಂಡು ಭೂಮಿಯನ್ನು ವೈವಿಧ್ಯಮಯ ತೋಟವಾಗಿ ಅಭಿವೃದ್ಧಿಪಡಿಸಿದ್ದರು. ಕುಟುಂಬವು ನಿರ್ವಹಿಸುತ್ತಿದ್ದ ಮರಗಳಲ್ಲಿ ಮಾವು, ತೇಗ, ಮಹೋಗಾನಿ ಮತ್ತು ಪಪ್ಪಾಯಿ ಸೇರಿವೆ. 100 ಕ್ಕೂ ಹೆಚ್ಚು ಮರಗಳನ್ನು ಕಡಿದು ಹಾಕಲಾಗಿದೆ. ಅವುಗಳನ್ನು ಕಡಿಯದಂತೆ ಮನವಿ ಮಾಡಿದರೂ, ಪೊಲೀಸರು ಹರಸಾಹಸಪಟ್ಟು ಆ ಮಹಿಳೆಯನ್ನು ಎಳೆದೊಯ್ಯುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಮಾತು ತಪ್ಪಿದ ಅಧಿಕಾರಿಗಳು?
ತಿಯಾಗದುರ್ಗಂ ಪ್ರದೇಶದಲ್ಲಿ ಹೈ-ವೋಲ್ಟೇಜ್ ಪ್ರಸರಣ ಗೋಪುರ ಮತ್ತು ವಿದ್ಯುತ್ ಮಾರ್ಗದ ಕೆಲಸದ ಭಾಗವಾಗಿ ಅಧಿಕಾರಿಗಳು ಆಸ್ತಿಯನ್ನು ಪರಿಶೀಲಿಸುವ ಸಮಯದಲ್ಲಿ, ಮರಗಳನ್ನು ನಾಶಪಡಿಸದೆ ಲೈನ್ ಹಾದುಹೋಗುವಂತೆ ಜೋಡಣೆಯನ್ನು ಸ್ವಲ್ಪ ಬದಲಾಯಿಸಬೇಕೆಂದು ಸೆಲ್ವಿ ವಿನಂತಿಸಿದ್ದರು. ಪರ್ಯಾಯ ವ್ಯವಸ್ಥೆಯನ್ನು ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ಆರಂಭದಲ್ಲಿ ಸೂಚಿಸಿದ್ದರು. ಆದಾಗ್ಯೂ, ನಂತರ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ಮರಗಳನ್ನು ಯಂತ್ರೋಪಕರಣಗಳನ್ನು ಬಳಸಿ ಕಡಿಯಲಾಯಿತು. ಕಾರ್ಯಾಚರಣೆಗೆ ಮುನ್ನ ಸೆಲ್ವಿ ಮತ್ತು ಬಾಲಮುರುಗನ್ ಸರಿಯಾದ ಒಪ್ಪಿಗೆ ನೀಡಿಲ್ಲ ಮತ್ತು ಪೂರ್ಣ ಪರಿಹಾರವನ್ನು ಪಡೆದಿಲ್ಲ.
ಕಾರ್ಮಿಕರು ಮರಗಳನ್ನು ಕಡಿಯುತ್ತಿದ್ದಂತೆ ಸೆಲ್ವಿ ಭಾವುಕರಾಗುತ್ತಿರುವುದನ್ನು ಸ್ಥಳದಿಂದ ಬಂದ ದೃಶ್ಯಗಳು ತೋರಿಸಿವೆ. ಕುಟುಂಬವು ವರ್ಷಗಳಿಂದ ಅವುಗಳನ್ನು ಪೋಷಿಸಿದೆ ಮತ್ತು ಪರಿಸರ ಹಾನಿಯನ್ನು ಕಡಿಮೆ ಮಾಡುವಾಗ ಅಭಿವೃದ್ಧಿ ಯೋಜನೆಗಳನ್ನು ಏಕೆ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಕೃಷಿ ಭೂಮಿಯಲ್ಲಿ ಪ್ರಸರಣ ಯೋಜನೆಗಳ ಸುತ್ತಲಿನ ವಿವಾದಗಳತ್ತ ಈ ಘಟನೆಯು ಮತ್ತೆ ಗಮನ ಸೆಳೆದಿದೆ. ವಿದ್ಯುತ್ ಸಂಪರ್ಕವನ್ನು ವಿಸ್ತರಿಸಲು ಇಂತಹ ಮೂಲಸೌಕರ್ಯ ಅತ್ಯಗತ್ಯವಾದರೂ, ರೈತರು ಆಗಾಗ್ಗೆ ಜೋಡಣೆ ನಿರ್ಧಾರಗಳು, ಬೆಳೆಗಳು ಮತ್ತು ಮರಗಳಿಗೆ ಹಾನಿ ಮತ್ತು ಪರಿಹಾರದ ಲೆಕ್ಕಾಚಾರ ಮತ್ತು ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ.


