Asianet Suvarna News Asianet Suvarna News

ಸುರಕ್ಷತೆಗೆ ಆದ್ಯತೆ ನೀಡಿ ದಾಂಡೇಲಿ -ಜೋಯಿಡಾದಲ್ಲಿ ಜಲಸಾಹಸ ಕ್ರೀಡೆಗಳಿಗೆ ಅನುಮತಿ

ವೀಕೆಂಡ್ (Weekend) ಬಂದ್ರೆ ಸಾಕು ಪಶ್ಚಿಮಘಟ್ಟ ಪ್ರದೇಶದ ದಾಂಡೇಲಿ ಹಾಗೂ ಜೋಯಿಡಾದಲ್ಲಿ ನಡೆಯೋ ಜಲಸಾಹಸ ಕ್ರೀಡೆಗಳನ್ನು ಆಡಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಆದ್ರೆ, ಇತ್ತೀಚೆಗೆ ನಡೆದ ಒಂದು ಅವಘಡದಿಂದಾಗಿ ಪರವಾನಗಿಯಿಲ್ಲದೇ ನಡೆಯುತ್ತಿದ್ದ ವಾಟರ್ ಸ್ಪೋರ್ಟ್ಸ್ (Water sports) ಚಟುವಟಿಕೆಗಳನ್ನು ಜಿಲ್ಲಾಡಳಿತ ಬ್ಯಾನ್ (Ban) ಮಾಡಿತ್ತು. ಇದೀಗ ಪ್ರವಾಸಿಗರ ಸುರಕ್ಷತೆಗೆ (Safety) ಆದ್ಯತೆ ನೀಡಿ ಮತ್ತೆ ಅನುಮತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ದಟ್ಟ ಅರಣ್ಯಗಳ ನಡುವೆ ಹರಿಯುವ ಸುಂದರ ನದಿ (River) ಪ್ರದೇಶದಲ್ಲಿ ರ‍್ಯಾಫ್ಟಿಂಗ್, ಕಯಾಕಿಂಗ್‌ನಂತಹ ಜಲಸಾಹಸ ಕ್ರೀಡೆಗಳನ್ನು ಆಡುವ ಮಜಾನೇ ಬೇರೆ. ಹೀಗಾಗಿ ಉತ್ತರಕನ್ನಡ ಜಿಲ್ಲೆಯ ಪಶ್ಚಿಮಘಟ್ಟದ ತಪ್ಪಲಿನಲ್ಲಿರುವ ದಾಂಡೇಲಿ, ಜೋಯಿಡಾ ವ್ಯಾಪ್ತಿಯಲ್ಲಿ ಹರಿಯುವ ಕಾಳಿ ನದಿಯಲ್ಲಿ ಇಂತಹ ಜಲಸಾಹಸ ಕ್ರೀಡೆಗಳನ್ನು ಆಡಿ ಎಂಜಾಯ್ ಮಾಡೋದಕ್ಕೆ ಅಂತಾನೇ ಪ್ರವಾಸಿಗರು ಇಲ್ಲಿನ ರೆಸಾರ್ಟ್‌, ಹೋಂ‌ ಸ್ಟೇಗಳಿಗೆ ಮುಗಿಬೀಳುತ್ತಾರೆ. ಅದರಲ್ಲೂ ವಾರಾಂತ್ಯ (Weekend) ಹಾಗೂ ಸರ್ಕಾರಿ ರಜಾ ದಿನಗಳಲ್ಲಂತೂ ತಂಡೋಪತಂಡವಾಗಿ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದುಬರುತ್ತದೆ. 

ಆದ್ರೆ, ಕಳೆದ ಹದಿನೈದು ದಿನಗಳ ಹಿಂದೆ ರ‍್ಯಾಫ್ಟಿಂಗ್ ವೇಳೆ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸಿಕೊಂಡು ಹೋದ ಪರಿಣಾಮ ರ‍್ಯಾಫ್ಟ್‌ವೊಂದು ಬಂಡೆಗಳ ಬಳಿ ಸಿಕ್ಕಿಕೊಂಡು ಪ್ರವಾಸಿಗರನ್ನು ಅಪಾಯಕ್ಕೆ ದೂಡಿತ್ತು. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ಈ ವೇಳೆ ಸಾಕಷ್ಟು ಮಂದಿ ಪರವಾನಗಿ ಇಲ್ಲದೆಯೇ ಜಲಸಾಹಸ ಕ್ರೀಡೆಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿತ್ತು. ಈ ನಿಟ್ಟಿನಲ್ಲಿ ಜಲಸಾಹಸ ಕ್ರೀಡೆಗಳನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ಅನಧಿಕೃತ ಜಲಸಾಹಸ ಕ್ರೀಡೆಗಳಿಗೆ ಬ್ರೇಕ್ ಹಾಕಿದ್ದು, ಪರವಾನಗಿ ಪಡೆದು ನಡೆಸುವಂತೆ ಸೂಚನೆ ನೀಡಿದ್ದರು. ಆದರೆ, ಪ್ರವಾಸಿಗರು ಆಗಮಿಸುವ ಅವಧಿಯಲ್ಲಿ ಜಲಸಾಹಸ ಕ್ರೀಡೆಗಳನ್ನು ಸ್ಥಗಿತಗೊಳಿಸಿ ಪ್ರವಾಸೋದ್ಯಮಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಜಲಸಾಹಸ ಕ್ರೀಡಾ ಆಯೋಜಕರು ಆಕ್ಷೇಪ ವ್ಯಕ್ತಪಡಿಸಿದ್ದರು. 

Travel Tips : ಬೇಸಿಗೆ ಪ್ರಯಾಣದ ವೇಳೆ ಹೆಚ್ಚಾಗುವ ಮೋಷನ್ ಸಿಕ್ನೆಸ್ ಗೆ ಇಲ್ಲಿದೆ ಮದ್ದು

ಈ ಸಂಬಂಧ ಸ್ಪಷ್ಟನೆ ನೀಡಿರುವ ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಪರವಾನಗಿ ಪಡೆದು ಜಲಸಾಹಸ ಕ್ರೀಡೆ ನಡೆಸುತ್ತಿದ್ದವರಿಗೆ ಯಾವುದೇ ನಿರ್ಬಂಧ ಇಲ್ಲವಾಗಿದ್ದು, ಪರವಾನಗಿ ಪಡೆಯದವರು ನೋಂದಾಯಿಸಿಕೊಂಡು ಪರವಾನಗಿ ಪಡೆಯಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಬೇಸಿಗೆ ರಜಾದಿನಗಳನ್ನು ಎಂಜಾಯ್ ಮಾಡಲೆಂದು ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ ದಾಂಡೇಲಿ, ಜೋಯಿಡಾ ಭಾಗದ ರೆಸಾರ್ಟ್‌, ಹೋಂಸ್ಟೇಗಳಿಗೆ ಆಗಮಿಸುತ್ತಾರೆ. ಆದ್ರೆ, ಇಲ್ಲಿ ಜಲಸಾಹಸ ಕ್ರೀಡೆ ನಡೆಸುತ್ತಿರುವ ಸಾಕಷ್ಟು ಮಂದಿ ಆಯೋಜಕರ ಬಳಿ ಪರವಾನಗಿಯೇ ಇಲ್ಲವಾಗಿದ್ದು, ಪ್ರವಾಸಿಗರ ಸುರಕ್ಷತಾ ಕ್ರಮಗಳನ್ನು ಕೂಡಾ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಉತ್ತರಾಖಂಡ ಹಾಗೂ ರಾಜ್ಯದ ಕೊಡಗು ಮಾದರಿಯಲ್ಲಿ ರ‍್ಯಾಫ್ಟಿಂಗ್, ಕಯಾಕಿಂಗ್‌ನಂತಹ ಜಲಸಾಹಸ ಕ್ರೀಡೆಗಳನ್ನು ಸುರಕ್ಷಿತ ರೀತಿಯಲ್ಲಿ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಸುರಕ್ಷಿತ ಪ್ರವಾಸೋದ್ಯಮದ ಜತೆಗೆ ಆಯೋಜಕರ ಒಳಿತಿಗಾಗಿಯೇ ಜಿಲ್ಲಾಡಳಿತ ಈ ಕ್ರಮಗಳನ್ನು ಕೈಗೊಳ್ಳುತ್ತಿರೋದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಇನ್ನು ದಾಂಡೇಲಿ, ಜೋಯಿಡಾ ಭಾಗದಲ್ಲಿ ನಡೆಯುತ್ತಿರುವ ಪರವಾನಗಿ ರಹಿತ ಜಲಸಾಹಸ ಕ್ರೀಡೆಗಳ ಹಿನ್ನೆಲೆಯನ್ನು ಪರಿಶೀಲಿಸಿದಾಗ 2013 ರಿಂದ ಈವರೆಗೆ ಸಾಕಷ್ಟು ಅವಘಡಗಳು ಸಂಭವಿಸಿರುವುದು ಬೆಳಕಿಗೆ ಬಂದಿದ್ದು, ಸುಮಾರು 8 ವಾಟರ್‌ಸ್ಪೋರ್ಟ್ಸ್ ಆಪರೇಟರ್‌ಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರವಾಸಿಗರ ಸುರಕ್ಷತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆಪರೇಟರ್‌ಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪೆನ್ನೇಕರ್ ಸೂಚನೆ ನೀಡಿದ್ದಾರೆ.

ಭಾರತದ ಈ ಸ್ಥಳಗಳು ಮೇ ತಿಂಗಳಿನಲ್ಲಿ ಭೇಟಿ ನೀಡಲು ಬೆಸ್ಟ್‌, ಜಸ್ಟ್‌ 5000 ರೂ. ಇದ್ದರೆ ಸಾಕು !

ಒಟ್ಟಿನಲ್ಲಿ ಜಿಲ್ಲೆಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಜಲಸಾಹಸ ಕ್ರೀಡೆಗಳಿಗೆ ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲು ಜಿಲ್ಲಾಡಳಿತ ಮುಂದಾಗಿರೋದು ಉತ್ತಮ‌ ಕ್ರಮವೇ ಸರಿ ಆಗಿದೆ. ಆದ್ರೆ, ಇದಕ್ಕೆ ಕೆಲವು ಆಪರೇಟರ್‌ಗಳಿಂದ ತೀವ್ರ ವಿರೋಧ ಕೂಡಾ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನು ಕಾದುನೋಡಬೇಕಿದೆ.