Ramachari Kannada Serial Update: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಅಂತ್ಯ ಆಗಿದೆ. ಕೊನೆಗೂ ಮಾನ್ಯತಾ ತನ್ನ ಸೇಡು ತೀರಿಸಿಕೊಂಡಿದ್ದಾಳೆ. 

ಕಲರ್ಸ್ ಕನ್ನಡದಲ್ಲಿ ರಾತ್ರಿ ಹತ್ತಕ್ಕೆ ಪ್ರಸಾರವಾಗುತ್ತಿರುವ ಧಾರಾವಾಹಿ 'ರಾಮಾಚಾರಿ' ಧಾರಾವಾಹಿಯಲ್ಲಿ ( Ramachari Serial ) ಈಗ ಮೇಜರ್‌ ಟ್ವಿಸ್ಟ್‌ ಎದುರಾಗಿದೆ. ಈ ಧಾರಾವಾಹಿಯು ಈಗ ಅತ್ಯಂತ ರೋಚಕ ಘಟ್ಟಕ್ಕೆ ಬಂದು ನಿಂತಿದೆ. ಇದೇ ಗುರುವಾರ ಪ್ರಸಾರವಾಗಲಿರುವ ಸಂಚಿಕೆಯಲ್ಲಿ 'ರಾಮಾಚಾರಿ'ಯನ್ನು ಚೂರಿ ಚುಚ್ಚಿ ಕೊಲ್ಲುವ ಮತ್ತು ಆ ನಂತರದ ದಿನಗಳಲ್ಲಿ ರಾಮಾಚಾರಿಯ ಸಾವಿನ ಪರಿಣಾಮದಿಂದ ಆಗುವ ಎಪಿಸೋಡ್‌ಗಳು ಪ್ರಸಾರವಾಗಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಮಾಚಾರಿಯನ್ನು ಕೊಂದ ಮಾನ್ಯತಾ!

'ರಾಮಾಚಾರಿ' ಧಾರಾವಾಹಿಯ ವಿಲನ್‌ಗಳ ಗ್ಯಾಂಗ್ - ಮಾನ್ಯತಾ, ನವದೀಪ್, ರುಕ್ಕು ಮತ್ತು ಜಿಕೆ ಸೇರಿ ರಾಮಾಚಾರಿಯನ್ನು ಕೊಲ್ಲುವ ಯೋಜನೆಯನ್ನು ರೂಪಿಸುತ್ತಾರೆ. ಅವನನ್ನು ಕಟ್ಟಡವೊಂದಕ್ಕೆ ಮೋಸದಿಂದ ಕರೆದೊಯ್ಯುತ್ತಾರೆ. ಅಲ್ಲಿ ಒಂದು ನಾಟಕೀಯ ಮತ್ತು ತೀವ್ರ ಹೋರಾಟದ ದೃಶ್ಯ ಬಿಚ್ಚಿಕೊಳ್ಳುತ್ತದೆ. ರಾಮಾಚಾರಿ ಎಷ್ಟೇ ಪ್ರತಿರೋಧ ತೋರಿಸಿದರೂ ಗ್ಯಾಂಗ್ ಅವನನ್ನು ಚೂರಿ ಚುಚ್ಚಿ ಕೊಲ್ಲಲು ಯಶಸ್ವಿಯಾಗುತ್ತದೆ. ತಮ್ಮ ಶತ್ರುವನ್ನು ನಾಶ ಪಡಿಸಿದ ಖುಷಿಯಲ್ಲಿ ಅವರು ಸಂಭ್ರಮಿಸುತ್ತಾರೆ. ಈ ನಡುವೆ ಚಾರು, ಉಳಿದ ಕುಟುಂಬ ಮತ್ತು ಅಗ್ರಹಾರದ ಜನರು ತಮ್ಮ ಪ್ರೀತಿಯ ರಾಮಾಚಾರಿಯ ಸಾವಿನ ಶೋಕಾಚರಣೆಯಲ್ಲಿರುತ್ತಾರೆ.

ರಾಮಾಚಾರಿ ಸಾಯೋದು ಪಕ್ಕಾನಾ?

ಈ ಧಾರಾವಾಹಿಯು 900 ಎಪಿಸೋಡ್‌ಗಳನ್ನು ದಾಟಿಯಾಗಿದೆ. ಈಗ ಈ ಧಾರಾವಾಹಿಯ ಹೀರೋ ಸಾಯುತ್ತಾನಾ? ಇಲ್ಲವಾ ಎನ್ನುವ ಪ್ರಶ್ನೆ ಎದುರಾಗಿದೆ. ಮೊದಲು ಸತ್ತಿದ್ದಾರೆ ಎಂದು ಹೇಳಿ, ಆಮೇಲೆ ಎಷ್ಟು ಜನರು ಎದ್ದುಬಂದ ಉದಾಹರಣೆಯಿಲ್ಲ ಹೇಳಿ? ಹೀಗಾಗಿ ʼರಾಮಾಚಾರಿʼ ಅಂತ್ಯ ಆಗೋದು ಡೌಟ್.‌

ಮುಂದೆ ಏನಾಗಬಹುದು?

ಈ ಧಾರಾವಾಹಿಯಲ್ಲಿ ರಾಮಾಚಾರಿ-ಚಾರುಲತಾ ತುಂಬ ಪ್ರೀತಿಯಿಂದ ಬದುಕುತ್ತಿದ್ದಾರೆ. ಗಂಡನಿಗೋಸ್ಕರ ಸಿಕ್ಕಾಪಟ್ಟೆ ಬದಲಾಗಿ, ತವರು ಮನೆಯ ಶ್ರೀಮಂತಿಕೆಯನ್ನು ಬಿಟ್ಟು ಬಂದಿರೋ ಚಾರು ಈಗ ಗಂಡನನ್ನು ಉಳಿಸಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಆದರೆ ಧಾರಾವಾಹಿ ರೈಟರ್ಸ್‌ ಯಾವ ರೀತಿಯಲ್ಲಿ ಮುಂದಿನ ಕಥೆ ಹೆಣೆದಿದ್ದಾರೋ ಏನೋ! ಕಾದು ನೋಡಬೇಕಿದೆ.

ಈ ಧಾರಾವಾಹಿ ಕಥೆ ಏನು?

ರಾಮಾಚಾರಿ ಪೌರೋಹಿತ್ಯವನ್ನು ಮಾಡ್ತಾನೆ, ಕಂಪೆನಿಯಲ್ಲಿಯೂ ಕೆಲಸ ಮಾಡ್ತಾನೆ. ಹೀಗಿರುವಾಗ ಒಂದು ಕಂಪೆನಿಯಲ್ಲಿ ಕೆಲಸ ಮಾಡುವ ಚಾರುಲತಾ, ರಾಮಾಚಾರಿ ಪರಿಚಯ ಆಗುವುದು. ಚಾರುಲತಾಗೆ ದುಡ್ಡೇ ಎಲ್ಲ. ಅಪ್ಪನ ದುಡ್ಡಿನ ಮದದಿಂದ ಮೆರೆಯುವ ಅವಳು ಎಲ್ಲ ಚಟಗಳನ್ನು ಅಂಟಿಸಿಕೊಂಡವಳು. ಇಂಥವಳಿಗೆ ಆರಂಭದಲ್ಲಿ ರಾಮಾಚಾರಿ ಕಂಡರೆ ಆಗೋದಿಲ್ಲ. ಆಮೇಲೆ ಅವಳಿಗೆ ಅವನ ಮೇಲೆ ಲವ್‌ ಆಗಿ ಬ್ಲ್ಯಾಕ್‌ಮೇಲೆ ಮಾಡಿ ಮದುವೆ ಆಗುತ್ತಾಳೆ.

ಆರಂಭದಲ್ಲಿ ರಾಮಾಚಾರಿ ಮನೆಯಲ್ಲಿ ಅವಳಿಗೆ ಯಾವುದೇ ಬೆಲೆ ಸಿಗೋದಿಲ್ಲ. ತದನಂತರದಲ್ಲಿ ರಾಮಾಚಾರಿ ಕೂಡ ಅವಳನ್ನು ಪ್ರೀತಿಸುತ್ತಾನೆ, ಹೆಂಡ್ತಿ ಎಂದು ಒಪ್ಪುತ್ತಾನೆ. ಇದಾದ ಬಳಿಕ ಚಾರುಲತಾ ತಾಯಿ ಮಾನ್ಯತಾಗೆ ಮಗಳು ರಾಮಾಚಾರಿಯನ್ನು ಮದುವೆ ಆಗೋದು ಇಷ್ಟವೇ ಇರೋದಿಲ್ಲ. ಹೀಗಾಗಿ ದಿನಕ್ಕೊಂದು ಕುತಂತ್ರ ಮಾಡಿ ಮಗಳು-ಅಳಿಯನನ್ನು ದೂರ ಮಾಡಲು ನೋಡುತ್ತಿದ್ದಾಳೆ. ವರ್ಷಗಳಿಂದ ಪ್ರಯತ್ನಪಟ್ಟರೂ, ಜೈಲಿಗೆ ಹೋಗಿ ಬಂದರೂ, ಮಗಳು ಕ್ಯಾಕರಿಸಿ ಉಗಿದರೂ ಕೂಡ ಮಾನ್ಯತಾ ಬುದ್ಧಿ ಕಲಿತಿಲ್ಲ.

ಇನ್ನು ರುಕ್ಮಿಣಿ ಎನ್ನೋ ಕೃಷ್ಣನ ಹೆಂಡತಿ ( ರಾಮಾಚಾರಿ ತಮ್ಮನ ಪತ್ನಿ ) ಈಗ ರಾಮಾಚಾರಿಯನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ರಾಮಾಚಾರಿ ಸತ್ತೋದ ಎಂದು ಪಕ್ಕಾ ಹೇಳಲು ಸಾಧ್ಯವಿಲ್ಲ. ಕಥೆಗಾರರು ಯಾವ ರೀತಿ ಟ್ವಿಸ್ಟ್‌ ಕೊಟ್ಟರೂ ಕೊಡಬಹುದು.

ಪಾತ್ರಧಾರಿಗಳು

ರಾಮಾಚಾರಿ ಪಾತ್ರದಲ್ಲಿ ರಿತ್ವಿಕ್‌ ಕೃಪಾಕರ್‌, ಚಾರುಲತಾ ಪಾತ್ರದಲ್ಲಿ ಮೌನಾ ಗುಡ್ಡೇಮನೆ ನಟಿಸುತ್ತಿದ್ದಾಳೆ. ಉಳಿದಂತೆ ಅಂಜಲಿ, ಐಶ್ವರ್ಯಾ ಸಾಲೀಮಠ, ಗುರುದತ್‌, ಝಾನ್ಸಿ, ಶಂಕರ್‌ ಅಶ್ವತ್ಥ್‌ ಮುಂತಾದವರು ನಟಿಸುತ್ತಿದ್ದಾರೆ.