Muddu Sose Serial Episode: ಮುದ್ದುಸೊಸೆ ಧಾರಾವಾಹಿಯಲ್ಲಿ ವೀರಭದ್ರನಿಗೆ ಹಾವು ಕಚ್ಚಿದೆ. ಇನ್ನೊಂದು ಕಡೆ ವೀರಭದ್ರ ಪಾತ್ರಧಾರಿ ತ್ರಿವಿಕ್ರಮ್‌ ಅವರು ಬಿಗ್‌ ಬಾಸ್ ಮನೆ ಸೇರಿಕೊಂಡಿದ್ದಾರೆ. ಭದ್ರ ಪಾತ್ರ ಮುಗಿದರೆ, ಅವರು ದೊಡ್ಮನೆಯಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿಯಾಗಿ ಸ್ಪರ್ಧೆ ಮಾಡಲಿದ್ದಾರೆ.

ಮುದ್ದುಸೊಸೆ ಧಾರಾವಾಹಿಯಲ್ಲಿ ತಂದೆ ಶಿವರಾಮೇಗೌಡ್ರ ಪ್ರೀತಿಯಿಂದ ವೀರಭದ್ರ ದೂರ ಆಗಿದ್ದಾನೆ. ಪತ್ನಿ ವಿದ್ಯಾ ಕೂಡ ಮಾವ-ಗಂಡ ದೂರ ಆಗಿದ್ದಾರೆ ಎಂದು ಬೇಸರದಲ್ಲಿದ್ದಾಳೆ. ಈಗ ವೀರಭದ್ರ ಸಾವಿನ ಮನೆ ಕದ ತಟ್ಟಿದ್ದಾನೆ.

ಸುಭಾಷ್‌ ಮನೆಯಿಂದ ಹೊರಬಿದ್ದಾಯ್ತು

ಹೌದು, ಶಿವರಾಮೇಗೌಡ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಭರ್ಜರಿ ಪ್ರಚಾರ ನಡೆಯುತ್ತಿದೆ. ಅತ್ತ ಶಿವರಾಮೇಗೌಡ ಸಹೋದರನ ಮಗ ಸುಭಾಷ್‌ ಮಾತ್ರ ಮದುವೆಯಾಗಿದ್ದರೂ ಕೂಡ, ಇನ್ನೊಂದು ಹುಡುಗಿ ಜೊತೆ ಸಂಸಾರ ಮಾಡೋಕೆ ರೆಡಿಯಾಗಿದ್ದನು. ಇದು ಶಿವರಾಮೇಗೌಡನಿಗೆ ಗೊತ್ತಾಗಿ, ಅವನು ಸುಭಾಷ್‌ನನ್ನು ಮನೆಯಿಂದ ಹೊರಹಾಕಿದ್ದಾನೆ.

ಈಶ್ವರಿ ಮಹಾ ಸಂಚು

ಸುಭಾಷ್‌ ಇಂದು ಗುಡಿಸಲಿನಲ್ಲಿ ಬದುಕುತ್ತಿದ್ದಾನೆ, ಇಂದು ತನ್ನ ಮಗ ಇಂಥ ಸ್ಥಿತಿಯಲ್ಲಿದ್ದಾನೆ ಎಂದು ಈಶ್ವರಿ ಈಗ ಸಿಟ್ಟಿನಲ್ಲಿದ್ದಾಳೆ. ಶಿವರಾಮೇಗೌಡ ಜೈಲಿಗೆ ಹೋಗಬೇಕು, ಚುನಾವಣೆಯಲ್ಲಿ ಸೋಲಬೇಕು ಎಂದು ಅವಳು ಪ್ಲ್ಯಾನ್‌ ಮಾಡಿದ್ದಳು.

ಭದ್ರನಿಗೆ ಪ್ಲ್ಯಾನ್‌ ಹೇಳಿದ ವಿದ್ಯಾ

ಶಿವರಾಮೇಗೌಡ ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದನು. ಅವನ ಕಾರ್‌ನಲ್ಲಿ ಈಶ್ವರಿ ಕೋಟಾ ನೋಟು ಇಟ್ಟಿದ್ದಳು. ಇದು ಶಿವರಾಮೇಗೌಡ್ರಿಗೆ ಗೊತ್ತಿರಲಿಲ್ಲ. ಪೊಲೀಸರಿಗೆ ಫೋನ್‌ ಮಾಡಿ ಕಾರ್‌ನ್ನು ಚೆಕ್‌ ಮಾಡಿಸೋದು, ಜೈಲಿಗೆ ಕಳಿಸೋದು ಅವಳ ಪ್ಲ್ಯಾನ್‌ ಆಗಿತ್ತು. ಈಗ ಈ ವಿಚಾರ ವಿದ್ಯಾಗೆ ಗೊತ್ತಿತ್ತು. ವಿದ್ಯಾ ಇದನ್ನು ಭದ್ರನಿಗೆ ಹೇಳಿದಳು.

ಭದ್ರನಿಗೆ ಹಾವು ಕಚ್ಚಿದೆ

ವೀರಭದ್ರ ಬೈಕ್‌ನಲ್ಲಿ ಹೋಗಿ ಕಾರ್‌ನ್ನು ತಡೆದಿದ್ದಾನೆ. ಕಾರ್‌ನಲ್ಲಿದ್ದ ಕೋಟಾ ನೋಟಿನ ಬ್ಯಾಗ್‌ನ್ನು ಅವನು ತಕ್ಷಣ ತಗೊಂಡು ಹೊರಗಡೆ ಓಡಿದ್ದಾನೆ. ಅಲ್ಲಿ ಪೊಲೀಸರು ಬಂದಿದ್ದಾರೆ. ಅವರು ಕಾರ್‌ ಚೆಕ್‌ ಮಾಡಿದಾಗ ಕೋಟಾ ನೋಟು ಇರಲಿಲ್ಲ. ಆದರೆ ಮರೆಯಲ್ಲಿ ಇದನ್ನೆಲ್ಲ ನಿಂತು ನೋಡುತ್ತಿದ್ದ ಭದ್ರನಿಗೆ ಹಾವು ಕಚ್ಚಿದೆ.

ತಂದೆಯನ್ನು ಕಾಪಾಡಿದ ಭದ್ರ

ತಾನು ನೋವಿನಿಂದ ಕೂಗಿದರೆ ಪೊಲೀಸರು ತಾನಿದ್ದ ಸ್ಥಳಕ್ಕೆ ಬರುತ್ತಾರೆ, ತಂದೆ ಅರೆಸ್ಟ್‌ ಆಗ್ತಾರೆ ಎಂದು ನೋವಿದ್ದರೂ ಕೂಡ ಭದ್ರ ಸುಮ್ಮನೆ ಇದ್ದನು. ಈಗ ಭದ್ರನ ಜೀವ ಏನಾಗಲಿದೆ ಎಂದು ಕಾದು ನೋಡಬೇಕಿದೆ.

ವೀರಭದ್ರನಿಗೆ ವಿದ್ಯಾಳನ್ನು ನೋಡಿ ಮದುವೆ ಆಗುವ ಆಸೆ ಇತ್ತು. ಆದರೆ ವಿದ್ಯಾಗೆ ಮದುವೆ ಆಗುವ ಆಸೆ ಇರಲಿಲ್ಲ. ಓದಬೇಕು ಎಂದುಕೊಂಡಿದ್ದ ಅವಳು ತಂದೆಯ ಹಠಕ್ಕೆ ಗುರಿಯಾಗಿ ಮದುವೆ ಆಗುವ ಹಾಗೆ ಆಯ್ತು. ಆದರೆ ವಿದ್ಯಾ ಅದೇ ಟೈಮ್‌ಗೆ ಪೊಲೀಸರಿಗೆ ಫೋನ್‌ ಮಾಡಿದ್ದಳು. ಹದಿನೆಂಟು ವರ್ಷ ತುಂಬದ ವಿದ್ಯಾಳನ್ನು ಮದುವೆ ಆಗ್ತಿದ್ದಾರೆ ಎಂದು ಪೊಲೀಸರು ಶಿವರಾಮೇಗೌಡನನ್ನು ಜೈಲಿಗೆ ಹಾಕಿದರು. ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಓದನ್ನು ದ್ವೇಷ ಮಾಡುತ್ತಿದ್ದ ಶಿವರಾಮೇಗೌಡ್ರಿಗೆ ಗೊತ್ತಾಗದಂತೆ ಭದ್ರ, ವಿದ್ಯಾಳನ್ನು ಓದಿಸುತ್ತಿದ್ದನು. ಈ ವಿಷಯ ಶಿವರಾಮೇಗೌಡ್ರಿಗೆ ಗೊತ್ತಾಗಿ ಮಗ-ಸೊಸೆಯನ್ನು ದೂರ ಇಟ್ಟಿದ್ದನು. ಈಗ ತಂದೆ-ಮಗನನ್ನು ಒಂದು ಮಾಡಬೇಕು ಎಂದು ವಿದ್ಯಾ ಪಣ ತೊಟ್ಟಿದ್ದಾಳೆ.

ಬಿಗ್‌ ಬಾಸ್‌ ಮನೆಯಲ್ಲಿದ್ದಾರಾ?

ಸದ್ಯ ತ್ರಿವಿಕ್ರಮ್‌ ಅವರು ಬಿಗ್‌ ಬಾಸ್‌ ಮನೆಗೆ ಹೋಗಿದ್ದಾರೆ. ಇನ್ನೊಂದು ಕಡೆ ಅವರ ಜೀವಕ್ಕೆ ಅಪಾಯ ಬಂದಿದೆ. ಇನ್ನು ಬಿಗ್‌ ಬಾಸ್‌ ಮನೆಗೆ ಹೋದ ಅತಿಥಿಗಳಲ್ಲಿ ಇಬ್ಬರು ವೈಲ್ಡ್‌ಕಾರ್ಡ್‌ ಸ್ಪರ್ಧಿ ಆಗಲಿದ್ದಾರಂತೆ. ಸೀರಿಯಲ್‌ನಲ್ಲಿ ಭದ್ರ ಪಾತ್ರ ಮುಗಿದರೆ ಅವರು ಬಿಗ್‌ ಬಾಸ್‌ ಮನೆಯಲ್ಲಿ ಆಟ ಆಡಬಹುದು. ಈಗ ಏನಾಗಲಿದೆ ಎಂದು ಕಾದು ನೋಡಬೇಕಿದೆ.