ನಟಿ ಮೇಘನಾ ರಾಜ್, ತಮ್ಮ ಮಗ ರಾಯಾನ್ ರಾಜ್ ಸರ್ಜಾ 'ಅಪ್ಪ ಎಲ್ಲಿ?' ಎಂದು ಕೇಳಿದ ಕ್ಷಣದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಆ ಪ್ರಶ್ನೆಗೆ ತಾನು ಉತ್ತರಿಸಲಿಲ್ಲ ಎಂದಿರುವ ಅವರು, ಮಗನ ಮನಸ್ಸಿನಲ್ಲಿ ತಂದೆ ಚಿರಂಜೀವಿ ಸರ್ಜಾ ಅವರ ಕಲ್ಪನೆ ಹೇಗೆ ಜೀವಂತವಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಬೆಂಗಳೂರು (ಫೆ.21): ಪತಿ ಚಿರಂಜೀವಿ ಸರ್ಜಾ ಅಗಲಿಕೆಯ ನಂತರ ಮಗ ರಾಯಾನ್ ಸರ್ಜಾನನ್ನು ಬೆಳೆಸುತ್ತಿರುವ ನಟಿ ಮೇಘನಾ ರಾಜ್, ಮಗನ ಎಳೆಯ ಮನಸ್ಸಿನಲ್ಲಿ ತಂದೆಯ ಬಿಂಬವನ್ನು ಈಗಲೂ ಜೀವಂತವಾಗಿಟ್ಟಿದ್ದಾರೆ. ಇದರ ಬಗ್ಗೆ ಅವರು ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

ಚಿರಂಜೀವಿ ಸರ್ಜಾ ಅಗಲಿದಾಗ ರಾಯಾನ್ ಇನ್ನೂ ಭೂಮಿಗೆ ಬಂದಿರಲಿಲ್ಲ. ಇಂದು ಬೆಳೆಯುತ್ತಿರುವ ರಾಯಾನ್‌ಗೆ ತನ್ನ ತಂದೆಯ ಭೌತಿಕ ಅಸ್ತಿತ್ವದ ಅರಿವಿಲ್ಲದಿದ್ದರೂ, ಆತನ ಮನಸ್ಸಿನ ಪ್ರತಿ ಕಣದಲ್ಲೂ 'ಅಪ್ಪ' ಜೀವಂತವಾಗಿದ್ದಾರೆ. ಮಗ ಕೇಳಬಹುದಾದ ಕಠಿಣ ಪ್ರಶ್ನೆಗಳಿಗೆ ತಾನು ಮೊದಲೇ ಸಿದ್ಧವಾಗಿದ್ದೆ ಎಂದಿರುವ ಮೇಘನಾ ರಾಜ್,‌ ಆತ ಕೇಳಿದ ಪ್ರಶ್ನೆಗೆ ಮಾತ್ರ ಈವರೆಗೂ ಉತ್ತರ ನೀಡಿಲ್ಲ ಎಂದಿದ್ದಾರೆ.

ಹಠಾತ್ತನೆ ಎದುರಾದ ಆ ಪ್ರಶ್ನೆ: "ಅಮ್ಮ, ಅಪ್ಪ ಎಲ್ಲಿ?"

ರಾಯಾನ್‌ ಸರ್ಜಾ ಪಾಲಿಗೆ ಚಿರಂಜೀವಿ ಸರ್ಜಾ ಪ್ರಸೆನ್ಸ್‌ ಅನ್ನು ಹೇಗೆ ಜೀವಂತವಾಗಿಟ್ಟಿದ್ದೀರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ಮೇಘನಾ ರಾಜ್‌, 'ತುಂಬಾ ದೀರ್ಘ ಕಾಲದಿಂದ ನಾನು ಈ ಪ್ರಶ್ನೆಗೆ ಹೇಗೆ ಉತ್ತರ ನೀಡಬೇಕು ಅಂತಾ ನಾನು ಸಿದ್ದವಾಗಿದ್ದೆ. ಒಮ್ಮೆ ಮಗ 'ಅಪ್ಪ ಎಲ್ಲಿ..? ಪ್ರಶ್ನೆ ಕೇಳಿದರೆ, ಅದಕ್ಕೆ ನಾನು ಏನು ಉತ್ತರ ನೀಡಬೇಕು ಅನ್ನೋ ವಿಚಾರ ನನ್ನ ತಲೆಯಲ್ಲಿತ್ತು. ಆ ದಿನ ಕೂಡ ಬಂದೇ ಬಿಟ್ಟಿತು. ನನಗೆ ಆ ದಿನ ಕೂಡ ಇಂದಿಗೂ ಸ್ಪಷ್ಟವಾಗಿ ನೆನಪಲ್ಲಿದೆ. ಒಂದು ದಿನ ರಾತ್ರಿ ರಾಯಾನ್‌ ಈ ಪ್ರಶ್ನೆ ನನಗೆ ಕೇಳಿದ್ದ. ನಾವು ಟಿವಿಯಲ್ಲಿ ಕಾರ್ಟೂನ್‌ ನೋಡುತ್ತಿದ್ದೆವು. ಸಡನ್‌ ಆಗಿ ನನ್ನ ಕಡೆ ತಿರುಗಿದ ರಾಯಾನ್‌ , 'ಅಪ್ಪ ಎಲ್ಲಿ..' ಅಂತಾ ಕೇಳಿದ್ದ.

ಅಲ್ಲಿಯವರೆಗೂ ನಾನು ಆತನ ಜೊತೆ ಅಪ್ಪನ ಬಗ್ಗೆ ಮಾತನಾಡುತ್ತಿದ್ದೆವು. ಚಿರು ಇಲ್ಲ ಎಂದರೂ, ಅಪ್ಪ ಅನ್ನೋದು ಮನೆಯಲ್ಲಿ ಮಾತನಾಡದೇ ಇರುವ ವಿಚಾರ ಆಗಿರಲಿಲ್ಲ. ನಾವಿಬ್ಬರೂ ಬಹಳ ಸಂತೋಷದಿಂದ ಇದರ ಬಗ್ಗೆ ಮಾತನಾಡುತ್ತಿದ್ದೆವು. ನಾನು ಆತನಿಗೆ ಊಟ ಮಾಡಿಸುವಾಗ, 'ನೀನು ಇದನ್ನು ತಿಂದರೆ ಮಾತ್ರ ಅಪ್ಪನ ರೀತಿ ಆಗ್ತೀಯಾ. ಅಪ್ಪನಷ್ಟು ಉದ್ದ ಆಗ್ತೀಯ. ಚಿಕ್ಕಪ್ಪ (ಧ್ರುವ ಸರ್ಜಾ) ರೀತಿ ಬೈಸೆಪ್ಸ್‌ ಅಂತಾ ಹೇಳುತ್ತಿದ್ದೆ'. ಆತ ಇದನ್ನೆಲ್ಲಾ ಕೇಳಿಕೊಂಡೇ ಬೆಳೆದಿದ್ದಾನೆ.

ಆತ ಅಪ್ಪ ಎಲ್ಲಿ ಅನ್ನೋ ಪ್ರಶ್ನೆ ಕೇಳ್ತಾನೆ ಅಂತಾ ಅಂದುಕೊಂಡಿರಲಿಲ್ಲ. ಬಹುಶಃ ಇದು ಕಳೆದ ವರ್ಷ ಆಗಿರುವ ವಿಚಾರ. 'ಅಪ್ಪ ಎಲ್ಲಿದ್ದಾರೆ..' ಅಂತಾ ಕೇಳಿಬಿಟ್ಟ. ನಾನು ಆತನಿಗೆ ಉತ್ತರ ನೀಡಲಿಲ್ಲ. ಅದಲ್ಲದೆ, ರಾಯಾನ್‌ಗೂ ಇದಕ್ಕೆ ಉತ್ತರ ಕೂಡ ಬೇಕಿರಲಿಲ್ಲ ಅನಿಸುತ್ತೆ. ಆ ಪ್ರಶ್ನೆ ಕೇಳಿ ಆತ ತನ್ನ ಪಾಡಿಗೆ ಇದ್ದುಬಿಟ್ಟ. ನಾನು ಕೂಡ ಏನೂ ನಾಟಕೀಯವಾಗಿ ವರ್ತಿಸಲಿಲ್ಲ. ಆ ಕ್ಷಣದಲ್ಲಿ ಯಾವುದೇ ಭಾವನೆಗಳೂ ನನಗೆ ಬರಲಿಲ್ಲ. ನಾಟಕೀಯತೆ, ಭಾವುಕತೆ ಇದ್ಯಾವುದೂ ಇರಲಿಲ್ಲ. ನಾನು ಆ ಪ್ರಶ್ನೆಯನ್ನು ನಿರ್ಲಕ್ಷ್ಯ ಮಾಡಿ, ಉತ್ತರ ನೀಡದೇ ಇರಲು ತೀರ್ಮಾನಿಸಿದ್ದೆ.

ಮರುದಿನ ನನ್ನ ಸ್ನೇಹಿತೆಯರಿಗೆ ಮೆಸೇಜ್‌ ಮಾಡಿ, ರಾಯಾನ್‌ ಹೀಗೆ ಕೇಳಿದ ನನಗೆ ಏನು ಹೇಳಬೇಕು ಎಂದು ತೋಚಲಿಲ್ಲ ಎಂದಿದ್ದೆ. ಈಗಲೂ ಕೂಡ ಆತನ ಈ ಪ್ರಶ್ನೆಗೆ ನಾನು ಉತ್ತರ ನೀಡಿಲ್ಲ.

ರಾಯಾನ್‌ ಪಾಲಿಗೆ ಅಪ್ಪ ಇನ್ನೂ ಇದ್ದಾರೆ

ಆದರೆ, ರಾಯಾನ್‌ ಮಾತ್ರ ಅಪ್ಪ ಇದ್ದಾರೆ ಅಂತಲೇ ಅಂದುಕೊಂಡಿದ್ದಾನೆ. ಅವನ ಪಾಲಿಗೆ ಅಪ್ಪ ಅನ್ನೋದು ಕಲ್ಪನೆಯಲ್ಲಿದ್ದಾರೆ. ಆತನ ಪಾಲಿಗೆ ಚಿರು ಮಿಥಿಕಲ್‌ ವ್ಯಕ್ತಿ. ಅಪ್ಪನ ಹಾಗೆ ಆಗಬೇಕು. ಅಪ್ಪನಷ್ಟು ಎತ್ತರಕ್ಕೆ ಬೆಳೆಯಬೇಕು ಅಂತಾ ಇರ್ತಾನೆ. ಚಿರು ಸಾಂಗ್‌ಗಳನ್ನು ನೋಡ್ತಾ ಇರ್ತಾನೆ. ಇನ್ನು ನನ್ನೊಂದಿಗೆ ಹಾಗೂ ಜನರೊಂದಿಗೆ ಕೂಡ ಅಪ್ಪನ ಬಗ್ಗೆ ಮಾತನಾಡ್ತಾನೆ. 'ಅಪ್ಪ ಇದನ್ನು ತಿಂತಾರೆ..' ಅವರು ಇದನ್ನ ಮಾಡಿದ್ರು..' ಅಂತಾ ಹೇಳೋದನ್ನ ಕೇಳಿದ್ದೇನೆ. 'ಅಪ್ಪಾ ನಾನು ಚಿಕ್ಕವನಿದ್ದಾಗ ಇದನ್ನ ಹೇಳಿದ್ರಮ್ಮ, ಇದನ್ನ ಮಾಡ್ಬೇಡ ಅಂತಾ' ಅಂತಾ ಹೇಳ್ತಿರ್ತಾನೆ. ಆತನ ತಲೆಯಲ್ಲಿ ಅಪ್ಪನ ಬಗ್ಗೆ ಒಂದು ಕಲ್ಪನೆ ಇದೆ. ಅದನ್ನು ನಾನು ಹಾಳು ಮಾಡಲು ಬಯಸೋದಿಲ್ಲ.

ಆದರೆ, ಮುಂದೊಂದು ದಿನ ನೀವು ಈ ಪ್ರಶ್ನೆಗೆ ಉತ್ತರ ನೀಡಲೇಬೇಕಾದ ಸ್ಥಿತಿ ಬರುತ್ತೆ ಅಂದಾಗ, 'ಆ ವಿಚಾರದಲ್ಲಿ ಒನ್‌ ಡೇ ಎಟ್‌ ಎ ಟೈಮ್‌' ಅಂತಾ ನೋಡ್ತೇನೆ ಎಂದು ಮೇಘನಾ ರಾಜ್‌ ಹೇಳಿದ್ದಾರೆ.