ಸೀತಾ ಅಮ್ಮ ಮಾಡಿದ್ರು ಅಕ್ಷತೆ ಪಾಯಸ: ಪುಟಾಣಿ ಸಿಹಿ ಜೊತೆ ಮಕ್ಕಳಿಂದ ರಾಮನ ಪ್ರತಿಷ್ಠಾಪನೆ!
ಸೀತಾರಾಮ ಸೀರಿಯಲ್ನಲ್ಲಿ ಪುಟಾಣಿ ಸಿಹಿಯ ನೇತೃತ್ವದಲ್ಲಿ ನಡೆದಿದೆ ಶ್ರೀರಾಮನ ಪ್ರತಿಷ್ಠಾಪನೆ. ಇದರ ವಿವರ ಇಲ್ಲಿದೆ...
![installation of Lord Rama took place under the leadership of Sihi in Seetarama suc installation of Lord Rama took place under the leadership of Sihi in Seetarama suc](https://static-ai.asianetnews.com/images/01hmrbzdeytdc8xn1mq2czvnpc/sihi-rama_363x203xt.jpg)
ಇಂದು ಭಾರತ ಮಾತ್ರವಲ್ಲದೇ ಬಹುತೇಕ ದೇಶಗಳಲ್ಲಿ ರಾಮಮಯವಾಗಿದೆ. ಇನ್ನು ಭಾರತದಲ್ಲಂತೂ ಹೇಳುವುದೇ ಬೇಡ. ಎಲ್ಲೆಡೆ ರಾಮನಾಮನ ಜಪ ಜೋರಾಗಿ ನಡೆದಿದೆ. ಎಲ್ಲೆಲ್ಲೂ ಕೇಸರಿಮಯವಾಗಿದೆ. 550 ವರ್ಷಕ್ಕೂ ಅಧಿಕ ಕಾಯುವಿಕೆ, ನಾಲ್ಕು ಲಕ್ಷಕ್ಕೂ ಅಧಿಕ ಜನರ ಪ್ರಾಣತ್ಯಾಗದ ಬಳಿಕ ಕೊನೆಗೂ ತವರೂರು ಅಯೋಧ್ಯೆಗೆ ಶ್ರೀರಾಮ ಮರಳಿದ್ದಾನೆ. ಬಾಲರಾಮನ ರೂಪದಲ್ಲಿ ಇಂದು ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡಿದ್ದಾನೆ. ಈ ಐತಿಹಾಸಿಕ ಕ್ಷಣಕ್ಕೆ ದೇಶ-ವಿದೇಶಗಳ ಕೋಟಿ ಕೋಟಿ ಜನರು ಸಾಕ್ಷಿಯಾದರು. ಪ್ರಾಣಪ್ರತಿಷ್ಠೆಯ ಅಪೂರ್ವ ಕ್ಷಣವನ್ನು ಕಣ್ತುಂಬಿಸಿಕೊಂಡರು.
ಇಂದು ಪ್ರಾಣಪ್ರತಿಷ್ಠೆ ಅಂಗವಾಗಿ ಮನೆಮನೆಗೂ ಹೋಗಿ ಅಕ್ಷತೆ ಕೊಟ್ಟು ಪ್ರಾಣಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನ ನೀಡಲಾಗಿತ್ತು. ಈ ಅಕ್ಷತೆಯಿಂದ ಸಿಹಿ ತಿನಿಸು ಮಾಡಿ ಹಲವರು ಸೇವನೆ ಮಾಡಿದ್ದರೆ, ಇನ್ನು ಕೆಲವರು ಅದನ್ನು ತಮ್ಮ ದೇವರ ಮನೆಯಲ್ಲಿಯೇ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಅಕ್ಷತೆ ಮನೆಗೆ ಬಂದ ಬಳಿಕ ಮಾಂಸ ಸೇವನೆ ಮಾಡುವುದನ್ನೂ ಕೆಲವರು ನಿಲ್ಲಿಸಿರುವ ಘಟನೆ ನಡೆದಿದೆ. ಹೀಗೆ ತಮ್ಮದೇ ಆದ ರೀತಿಯಲ್ಲಿ ಈ ಅಕ್ಷತೆಯನ್ನು ಶ್ರೀರಾಮನ ಭಕ್ತರು ಸ್ವೀಕರಿಸಿದ್ದಾರೆ.
ನೃತ್ಯ, ಸಂಗೀತ, ಜಪದ ಮೂಲಕ ಸ್ಯಾಂಡಲ್ವುಡ್ನಲ್ಲಿ ರಾಮನ ಸ್ಮರಣೆ... ಯಾರು ಹೇಗೆಲ್ಲಾ ಆಚರಿಸಿದ್ರು ನೋಡಿ...
ಇದೀಗ ಸೀತಾರಾಮನ ಸೀರಿಯಲ್ನಲ್ಲಿ ಸೀತಾಳ ಅಮ್ಮ ಮನೆಗೆ ಬಂದಿರುವ ಅಕ್ಷತೆಯಿಂದ ಪಾಯಸ ಮಾಡಿದ್ದಾಳೆ. ಅದೇ ಇನ್ನೊಂದೆಡೆ ಸಿಹಿ ಅಜ್ಜನಿಂದ ಹಣ ಕೇಳಿದ್ದಾಳೆ. ಯಾಕೆ ಎಂದು ಹೇಳಲಿಲ್ಲ. ಆದರೆ ಎಷ್ಟು ಹಣ ಬೇಕು ಎಂದೂ ಅವಳಿಗೆ ಗೊತ್ತಿಲ್ಲ. ಆದರೆ ಮೊಮ್ಮಗಳು ಹಾಗೆಲ್ಲಾ ಸುಮ್ಮನೇ ಹಣ ಕೇಳುವುದಿಲ್ಲ ಎಂದು ಗೊತ್ತಿದ್ದ ಅಜ್ಜ, 100 ರೂಪಾಯಿ ಕೊಟ್ಟಿದ್ದಾನೆ. ಕೊನೆಗೆ ಆ ಹಣದಿಂದ ಸಿಹಿ ಏನು ಮಾಡುತ್ತಾಳೆ ಎನ್ನುವ ಕುತೂಹಲ ವೀಕ್ಷಕರಿಗೆ ಉಂಟಾಗುತ್ತದೆ.
ಅಸಲಿಗೆ ಸಿಹಿ ಆ ಹಣವನ್ನು ತೆಗೆದುಕೊಂಡು ಇಟ್ಟಿಗೆ ಖರೀದಿಗೆ ಕೊಟ್ಟಿದ್ದಾಳೆ. ಸಿಹಿ ಜೊತೆ ಓಣಿಯ ಮಕ್ಕಳೆಲ್ಲರೂ ಸೇರಿ ಇಟ್ಟಿಗೆ ಇಟ್ಟು ತಮ್ಮದೇ ಆದ ರೀತಿಯಲ್ಲಿ ಗುಡಿ ನಿರ್ಮಿಸಿದ್ದಾರೆ. ಅದರ ಮೇಲೆ ಶ್ರೀರಾಮ ಫೋಟೋ ಇಟ್ಟು, ಶ್ರೀರಾಮನಿಗೆ ಜೈಜೈಕಾರ ಹಾಕಿದ್ದಾರೆ. ಈ ಮೂಲಕ ಮಕ್ಕಳು ಅಯೋಧ್ಯೆಯಲ್ಲಿ ನಡೆಯುತ್ತಿರುವ ರಾಮಲಲ್ಲಾ ಪ್ರಾಣಪ್ರತಿಷ್ಠೆಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಕಮೆಂಟ್ ತುಂಬಾ ಜೈ ಶ್ರೀರಾಮ್ ಎನ್ನುವ ಕಮೆಂಟ್ಗಳು ತುಂಬಿಹೋಗಿವೆ. ಇಂದಿನ ಮಕ್ಕಳಿಗೂ ಇಂಥ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಹೇಳಿಕೊಡುತ್ತಿರುವ ಸೀರಿಯಲ್ ತಂಡಕ್ಕೆ ಹಲವರು ಭೇಷ್ ಎನ್ನುತ್ತಿದ್ದಾರೆ. ಇನ್ನು ಕೆಲವರು ಆದಷ್ಟು ಬೇಗ ಸೀರಿಯಲ್ ಸೀತಾ-ರಾಮನನ್ನೂ ಒಂದು ಮಾಡಿ ಎನ್ನುತ್ತಿದ್ದಾರೆ.
ಕೊಟ್ಟ ಮಾತಿನಂತೆ ನಡೆದ ಹನುಮಾನ್ ಚಿತ್ರತಂಡ: ಅಯೋಧ್ಯೆಗೆ 2.67 ಕೋಟಿ ದೇಣಿಗೆ- ಹೀಗಿದೆ ಲೆಕ್ಕಾಚಾರ