ಅರ್ಧಾಂಗಿ: ಬನಶಂಕರಿ ಪವಾಡ, ದೇವಿ ಅವತಾರದಲ್ಲಿ ರಾಧಿಕಾ ನಾರಾಯಣ್!
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಅರ್ಧಾಂಗಿ ಸೀರಿಯಲ್ನಲ್ಲಿ ಬಾದಾಮಿಯ ಬನಶಂಕರಿ ದೇವಿಯ ಪವಾಡಗಳನ್ನು ತೋರಿಸಲಾಗಿದೆ. ನವರಾತ್ರಿ ಹಬ್ಬಕ್ಕೆ ಸಿನಿಮಾ ನಟಿ ರಾಧಿಕಾ ಚೇತನ್ ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗ್ತಿರೋ ಅರ್ಧಾಂಗಿ ಸೀರಿಯಲ್ನಲ್ಲಿ ನವರಾತ್ರಿಯ ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತಿವೆ. ಇದರಲ್ಲಿ ನಾಯಕಿ ಅದಿತಿ ತನ್ನ ಪತಿ ದಿಗಂತ್ನನ್ನು ಉಳಿಸಿಕೊಳ್ಳಲು ದೇವಿ ಬಾದಾಮಿಯ ಬನಶಂಕರಿಯ ಮೊರೆ ಹೋಗಿದ್ದಾಳೆ. ಬನಶಂಕರಿ ದೇವಿ ಸದಾ ಭಕ್ತವತ್ಸಲೆಯಾಗಿ ಪ್ರಸಿದ್ಧಿ ಪಡೆದ ತಾಯಿ. ಆಕೆಯ ಬಗ್ಗೆ, ಆ ತಾಯಿಯ ಪವಾಡಗಳ ಬಗ್ಗೆ ಅನೇಕ ಕಥೆಗಳಿವೆ. 'ಅರ್ಧಾಂಗಿ' ಸೀರಿಯಲ್ ತಂಡ ಇದೀಗ ಈ ತಾಯಿಯ ಮಹಿಮೆಯನ್ನು ಸಾರುವ ಎಪಿಸೋಡ್ಗಳನ್ನು ಪ್ರಸಾರ ಮಾಡುತ್ತಿದೆ. ಇದರಲ್ಲಿ ದುಷ್ಟ ಶಿಕ್ಷಕಿ, ಶಿಷ್ಟ ರಕ್ಷಕಿ ಬನಶಂಕರಿ ದೇವಿಯ ಮಹಾತ್ಮೆಯನ್ನು ಸೀರಿಯಲ್ ಕಥೆಯ ಮೂಲಕ ಹೇಳಲಾಗಿದೆ. ಈ ಎಪಿಸೋಡ್ನ ಇನ್ನೊಂದು ವಿಶೇಷ ಅಂದರೆ ನಟಿ ರಾಧಿಕಾ ನಾರಾಯಣ್ ಈ ಸೀರಿಯಲ್ನಲ್ಲಿ ದೇವಿಯ ಅವತಾರ ತಾಳಿದ್ದಾರೆ. ವೇಷ ಮರೆಸಿಕೊಂಡ ದೇವಿ ಬನಶಂಕರಿ ಅಜ್ಜಿಯ ರೂಪದಲ್ಲಿ ನಾಯಕಿ ಅದಿತಿಗೆ ಸಹಾಯ ಹಸ್ತ ಚಾಚುವ ಹಾಗೆ ರಾಧಿಕಾ ಅವರ ಪಾತ್ರ ಚಿತ್ರಣವಿದೆ. ಬನಶಂಕರಿಯ ಸುತ್ತಮುತ್ತ ಚಿತ್ರೀಕರಿಸಲಾಗಿರುವ ಈ ಸೀರಿಯಲ್ ಕಥೆಯಲ್ಲಿ ವಿಎಫ್ಎಕ್ಸ್ ಬಳಸಿ ಮೊಸಳೆಯನ್ನು ಚಿತ್ರೀಕರಿಸಲಾಗಿದೆ.
ಇಪ್ಪತ್ತೆಂಟು ವರ್ಷದ ಯುವಕನಾದರೂ ಎಂಟು ವರ್ಷದ ಬಾಲಕನಷ್ಟೇ ಬುದ್ಧಿ ಇರುವ ದಿಗಂತ್ನನ್ನು ಮದುವೆಯಾಗುವ ಧೀರ ದಿಟ್ಟ ಹೆಣ್ಣುಮಗಳು ಅದಿತಿ. ಮಗುವಿನಂತಿರುವ ಗಂಡನನ್ನು ಪೋಷಿಸುತ್ತಾ ಸದಾ ಆತನನ್ನು ಕಾಯುತ್ತಾ ಇರುವಾಗ ಆಕೆಗೆ ಕಷ್ಟದ ಮೇಲೆ ಕಷ್ಟಗಳು ಬರುತ್ತವೆ. ಅದೆಲ್ಲವನ್ನೂ ತನ್ನ ಧೈರ್ಯ, ಛಲದಿಂದ ಎದುರಿಸುವ ಅದಿತಿ ಇದೀಗ ಪರಿಸ್ಥಿತಿ ತನ್ನ ಕೈ ಮೀರಿದಾಗ ಬನಶಂಕರಿ ದೇವಿಯ ಮೊರೆ ಹೋಗಿದ್ದಾಳೆ. ದಿಗಂತನಿಗೆ ಆರಾಮ ಇಲ್ಲದಿದ್ದರೂ ಕಾರಲ್ಲಿ ಆತನನ್ನು ಕರೆದೊಯ್ದಿದ್ದಾಳೆ. ನಡುವೆ ಎದುರಾದ ಸಂಕಷ್ಟಗಳಿಂದೆಲ್ಲ ಈ ದಂಪತಿಯನ್ನು ಪಾರು ಮಾಡಿ ದೇವಿ ತನ್ನ ಮಕ್ಕಳನ್ನ ತನ್ನ ಬಳಿಗೆ ಕರೆಸಿಕೊಂಡಿದ್ದಾಳೆ.
Ramachari: ಫೈನಲೀ ಚಾರುಗೆ ಚಾರಿ ಮೇಲೆ ಪ್ರೀತಿ ಹುಟ್ಟಿದೆ! ಆದ್ರೆ...
ಇಂಥಾ ಸ್ಥಿತಿಯಲ್ಲಿ ದೇವಿಯ ಕಠೋರ ವ್ರತವನ್ನು ಅದಿತಿ ಕೈಗೊಂಡಿದ್ದಾಳೆ. ಕೊಳದಲ್ಲಿ ಮಿಂದು ಒದ್ದೆ ಮೈಯಲ್ಲಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಬೇಕು ಎಂದು ಕೊಳಕ್ಕೆ ಬಂದರೆ ಅಲ್ಲಿ ಮೊಸಳೆಯೊಂದು ಆಕೆಯ ಮೇಲೆ ದಾಳಿ ಮಾಡುತ್ತದೆ. ಕೊಳದ ನೀರಲ್ಲಿ ಮಿಂದು ದೇವಿಯನ್ನು ಪ್ರಾರ್ಥಿಸುತ್ತಿರುವಾಗಲೇ ಮೊಸಳೆ ಆಕ್ರಮಣಕ್ಕೆ ಮುಂದಾಗಿದೆ. ಅದಿತಿ ದಿಕ್ಕೇ ತೋಚದೇ ದೇವಿಯನ್ನು ಪ್ರಾರ್ಥಿಸಿದಾಗ ಆ ತಾಯಿ ತನ್ನ ತ್ರಿಶೂಲವನ್ನೇ ಅದಿತಿಗೆ ನೀಡಿದ್ದಾಳೆ. ಆ ತ್ರಿಶೂಲದಿಂದ ಮೊಸಳೆಯೊಂದಿಗೆ ಹೋರಾಡಿ ಪಾರಾಗಿ ಬಂದಿದ್ದಾಳೆ ಅದಿತಿ. ಆಕೆ ದೇವಾಲಯಕ್ಕೆ ಬಂದಾಗ ಆ ತಾಯಿಯ ಮಹಿಮೆಯಿಂದಲೇ ಅದಿತಿ ಮೊಸಳೆಯಿಂದ ಪಾರಾಗಿ ಬಂದಿರುವುದಾಗಿ ದೇವಿಯ ಭಕ್ತರೊಬ್ಬರು ಹೇಳುತ್ತಾರೆ. ಮುಂದೆ ಒದ್ದೆ ಮೈಯಲ್ಲಿ ಪ್ರದಕ್ಷಿಣೆ ಹಾಕುವ ಅದಿತಿ ನೆಲದಲ್ಲೇ ತಾಯಿಯ ಪ್ರಸಾದವನ್ನು ಉಂಡಿದ್ದಾಳೆ.
Lakshana serial: ಬೊಂಬೆಯಾಟದಲ್ಲಿ ನಕ್ಷತ್ರಾ ಬದುಕನ್ನೇ ಕತೆಯಾಗಿಸಿದ ಮಯೂರಿ, ನಕ್ಷತ್ರಾ ಪರ ನಿಂತ ಭೂಪತಿ!
ಇತ್ತ ದಿಗಂತನಿಗೆ ಚಿಕಿತ್ಸೆ ನಡೆಯುತ್ತಿದೆ. ಪ್ರಾಚೀನ ವಿದ್ಯೆ ಬಲ್ಲ ಪಂಡಿತರು ದಿಗಂತನ ಚಿಕಿತ್ಸೆ(Treatment) ಮುಗಿಸಿ ತನ್ನ ಶಿಷ್ಯರಿಗೆ ಒಂದಿಷ್ಟು ಮುನ್ನೆಚ್ಚರಿಕೆ ನೀಡಿ ಅವರು ತೆರಳಿದ್ದಾರೆ. ಸ್ವಲ್ಪ ಹೊತ್ತು ಆತ ಮಲಗಿರೋದನ್ನು ನೋಡಿ ಆಮೇಲೆ ಶಿಷ್ಯರು ಬಿಟ್ಟು ತೆರಳುತ್ತಾರೆ. ಯಾರೂ ಇಲ್ಲದ ಹೊತ್ತಲ್ಲಿ ದಿಗಂತನಿಗೆ ಎಚ್ಚರವಾಗುತ್ತದೆ. ಜೋರಾಗಿ ಕಿರುಚಿಕೊಳ್ಳುವ ಆತ ಅಲ್ಲಿಂದೆದ್ದು ನಡೆಯುತ್ತಾನೆ.
ಇತ್ತ ಪತಿಯನ್ನು ಕಾಣದೇ ದಿಕ್ಕೆಡುವ ಅದಿತಿಗೆ ದೇವಿಯೇ ಅಜ್ಜಿಯ ರೂಪದಲ್ಲಿ ಬಂದು ದಾರಿ ತೋರಿಸುತ್ತಾಳೆ. ದೇವಿ, ಅಜ್ಜಿಯ ಪಾತ್ರದಲ್ಲಿ ಸ್ಯಾಂಡಲ್ ವುಡ್ ನಟಿ(Sandalwood Actress) ರಾಧಿಕಾ ನಾರಾಯಣ್ ಕಾಣಿಸಿಕೊಂಡಿದ್ದಾರೆ.
ಇನ್ನೊಂದೆಡೆ ಈ ಸೀರಿಯಲ್ ಪ್ರೋಮೋ(Promo)ದಲ್ಲಿ ತೋರಿಸಿದಂತೆ ಬನಶಂಕರಿ ಮಹಿಮೆಯಿಂದ ದಿಗಂತ್ ಮೊದಲಿನಂತಾಗುತ್ತಾನೆ. ಮಾತ್ರವಲ್ಲ, ಸೂಟು ತೊಟ್ಟು ಆಫೀಸಿ(Office)ಗೂ ಹೋಗ್ತಾನೆ. ಕಥೆ(Story) ಇನ್ಯಾವ ರೂಪ ಪಡೆಯಬಹುದು ಅನ್ನೋ ಕುತೂಹಲ ಹೆಚ್ಚಿಸಿದೆ.
ವಿದ್ಯಾಶ್ರೀ ಜಯರಾಮ್ ಇದರಲ್ಲಿ ನಾಯಕಿ ಅದಿತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೃಥ್ವಿ ಶೆಟ್ಟಿ ನಾಯಕನಾಗಿ ದಿಗಂತ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ ಕುಮಾರ್ ನಿರ್ದೇಶನದಲ್ಲಿ ಸ್ಟಾರ್ ಸುವರ್ಣದಲ್ಲಿ ಸಂಜೆ ಏಳು ಗಂಟೆಗೆ ಪ್ರಸಾರವಾಗುತ್ತಿದೆ.