ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹತ್ತಿರವಾಗಿದ್ದು, ಸ್ಪರ್ಧಿ ಗಿಲ್ಲಿ ಗೆಲ್ಲುವ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಗಿಲ್ಲಿಯ ಜನಪ್ರಿಯತೆಯಿಂದಾಗಿ, ಚೆನ್ನೈನ 'ಗಿಲ್ಲಿ ಬಿರಿಯಾನಿ' ಕೂಡ ಪ್ರಸಿದ್ಧವಾಗಿದ್ದು, ಈ ಬಿರಿಯಾನಿಗೂ ಸೂಪರ್‌ಸ್ಟಾರ್ ರಜನಿಕಾಂತ್‌ಗೂ ಒಂದು ವಿಶೇಷ ನಂಟಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಭಾನುವಾರ ಸಂಜೆ ಈ ಸೀಸನ್​ನ ವಿನ್ನರ್ ಯಾರು ಅನ್ನೋದು ಅನೌನ್ಸ್ ಆಗಲಿದೆ. ಈ ಸೀಸನ್​ನಲ್ಲಿ ಸಖತ್ ಎಂಟರ್​ಟೈನ್​​ಮೆಂಟ್ ಕೊಟ್ಟುಕೊಂಡು ಬಂದ ಗಿಲ್ಲಿನೇ ವಿನ್ನರ್ ಆಗಬೇಕು ಅನ್ನೋದು ಬಹಳಷ್ಟು ವೀಕ್ಷಕರ ಆಸೆ. ಗಿಲ್ಲಿ ಹೆಸರನ್ನ ಅನೇಕರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಗಲ್ಲಿ ಗಲ್ಲಿಯಲ್ಲಿ ಗಿಲ್ಲಿ ಪೋಸ್ಟರ್ಸ್ ರಾರಾಜಿಸ್ತಾ ಇವೆ. ಈ ನಡುವೆ ಗಿಲ್ಲಿ ನಟನಿಂದ ಚೆನ್ನೈನ ಗಿಲ್ಲಿ ಬಿರಿಯಾನಿ ಕೂಡ ಸಖತ್ ಫೇಮಸ್ ಆಗಿದೆ.

ಗಲ್ಲಿ ಗಲ್ಲಿಲೂ ಗಿಲ್ಲಿ ಹವಾ. ಗೆಲ್ತಾನಾ ಹಳ್ಳಿ ಹೈದ?

ಯೆಸ್, ಇದೇ ಭಾನುವಾರ ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಅಂತಿಮ ತೆರೆ ಬೀಳಲಿದೆ. ಭಾನುವಾರ ಸಂಜೆ ಫಿನಾಲೆ ನಡೆಯಲಿದ್ದು ಕಿಚ್ಚ ಒಬ್ಬರ ಕೈಯೆತ್ತಿ ಈ ಬಾರಿಯ ವಿನ್ನರ್ ಯಾರು ಅನ್ನೋದನ್ನ ಅನೌನ್ಸ್ ಮಾಡಲಿದ್ದಾರೆ. ನಿಮಗೆಲ್ಲಾ ಗೊತ್ತಿರೋ ಹಾಗೆ ಈ ಸೀಸನ್​ನುದ್ದಕ್ಕೂ ಸಖತ್ ಎಂಟರ್​​ಟೈನ್ ಮೆಂಟ್ ಕೊಟ್ಟುಕೊಂಡು ಬಂದಿರೋ ಗಿಲ್ಲಿ ಗೆಲ್ಲುವ ರೇಸ್​ನಲ್ಲಿ ನಂ.1 ಸ್ಥಾನದಲ್ಲಿದ್ದಾನೆ.

ಈ ವಾರದ ಮಿಡ್‌ವೀಕ್ ವೋಟಿಂಗ್​​ನಲ್ಲಿ ಗಿಲ್ಲಿಗೆ ಬಂದಿರೋ ವೋಟ್ಸ್ ದಂಗು ಬಡಿಸುವ ಹಾಗೆ ಇದೆ. ಕೊನೆ ಕೊನೆಗೆ ಗಿಲ್ಲಿ ಕೊಂಚ ಡಲ್ ಆದ್ರೂ ಆತನ ಜನಪ್ರಿಯತೆ ಮಾತ್ರ ಕಡಿಮೆ ಆಗಿಲ್ಲ. ವೋಟಿಂಗ್ ಲೆಕ್ಕದಲ್ಲಿ ನೋಡಿದ್ರೆ ಗಿಲ್ಲಿನೇ ವಿನ್ನರ್ ಆಗೋದು ಖಚಿತ ಅಂತಿವೆ ಕಲರ್ಸ್ ವಾಹಿನಿ ಮೂಲಗಳು.

ಗಿಲ್ಲಿ ಪರ ವೋಟ್ ಕೇಳಿದ ಮಳವಳ್ಳಿ ಶಾಸಕ!

ಗಿಲ್ಲಿಗೆ ವೋಟ್ ಮಾಡಿ ಅಂತ ಆತನ ಫ್ಯಾನ್ಸ್ ಕೇಳಿಕೊಳ್ತಾ ಇರೋದು ಗೊತ್ತೇ ಇದೆ. ಆದ್ರೆ ವಿಶೇಷ ಅಂದ್ರೆ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಗಿಲ್ಲಿಗೆ ವೋಟ್ ಹಾಕಿ ಅಂತ ಕೇಳಿಕೊಂಡಿದ್ದಾರೆ. ರಾಜಕಾರಣಿಗಳು ತಮಗೆ ವೋಟ್ ಹಾಕಿ ಅಂತ ಮನವಿ ಮಾಡೋದು ಸಹಜ. ಆದ್ರೆ ಫಾರ್ ಎ ಚೇಂಜ್ ಎಂ.ಎಲ್.ಎ ಒಬ್ರು ಬಿಗ್ ಬಾಸ್ ಸ್ಪರ್ಧಿಗೆ ವೋಟ್​ ಕೇಳಿದ್ದಾರೆ. ತಮ್ಮ ಕ್ಷೇತ್ರದ ಹುಡುಗ ಗಿಲ್ಲಿನ ಗೆಲ್ಸಿ ಅಂತ ಮನವಿ ಮಾಡಿದ್ದಾರೆ.

ಗಿಲ್ಲಿಯಿಂದ ಫೇಮಸ್ ಆಯ್ತು ಚೆನ್ನೈ ಬಿರಿಯಾನಿ!

ಗಿಲ್ಲಿ ಬಗ್ಗೆ ಕರ್ನಾಟಕದಲ್ಲಷ್ಟೇ ಅಲ್ಲದೇ ತಮಿಳುನಾಡು, ಆಂಧ್ರದಲ್ಲೂ ಹವಾ ಕ್ರಿಯೇಟ್ ಆಗಿದೆ ಅನ್ನೋದು ಗೊತ್ತೇ ಇದೆ. ಅನೇಕರು ತಮಿಳು, ತೆಲುಗುನಲ್ಲೂ ಗಿಲ್ಲಿ ಬಗ್ಗೆ ವಿಡಿಯೋಗಳನ್ನ ಮಾಡಿದ್ದಾರೆ. ಈ ನಡುವೆ ಗಿಲ್ಲಿ ಪರ ಸೋಷಿಯಲ್ ಮಿಡಿಯಾನಲ್ಲಿ ಸರ್ಚ್ ಮಾಡೋರಿಗೆ ಗಿಲ್ಲಿ ಹೆಸರಲ್ಲಿ ಚೆನ್ನೈನಲ್ಲಿ ಒಂದು ಬಿರಿಯಾನಿ ಇದೆ ಅನ್ನೋದು ಗೊತ್ತಾಗಿದೆ. ಈ ಬಿರಿಯಾನಿ ಹೆಸರೇ ಗಿಲ್ಲಿ ಬಿರಿಯಾನಿ ಅಂತ. ಇದು ಅಂತಿಂಥಾ ಬಿರಿಯಾನಿ ಅಲ್ಲ. ಇದರ ಬೆಲೆ ಪ್ಲೇಟ್‌ಗೆ ಬರೊಬ್ಬರಿ 1300 ರೂಪಾಯಿ. ಗಿಲ್ಲಿಯಿಂದಾಗಿ ಈ ಗಿಲ್ಲಿ ಬಿರಿಯಾನಿ ಕೂಡ ಈಗ ಟ್ರೆಂಡ್ ಆಗ್ತಾ ಇದೆ.

ಗಿಲ್ಲಿ ಬಿರಿಯಾನಿಗೆ ಉಂಟು ರಜನಿಕಾಂತ್ ನಂಟು..!

ಹೌದು ಈ ಗಿಲ್ಲಿ ಬಿರಿಯಾನಿಗೂ ಸೂಪರ್ ಸ್ಟಾರ್ ರಜನಿಕಾಂತ್‌ಗೂ ಒಂದು ನಂಟು ಇದೆ. 1996ರಲ್ಲಿ ಈ ಬಿರಿಯಾನಿ ಹುಟ್ಟಿಕೊಳ್ತು. ಮತ್ತಿದರ ಅನ್ವೇಷಣೆಗೆ ಕಾರಣವಾಗಿದ್ದೇ ತಲೈವಾ. ರಜನೀಕಾಂತ್ ಆಗ ಮದ್ರಾಸ್‌ನ ತಾಜ್ ಕೋರಮಂಡಲ್​​ ಹೊಟೆಲ್‌ಗೆ ರೆಗ್ಯೂಲರ್​ ಆಗಿ ಬರ್ತಾ ಇದ್ರಂತೆ. ವಿಶೇಷವಾಗಿ ಅವರ ರಾತ್ರಿ ಊಟ ಅಲ್ಲೇ ಆಗುತ್ತಿತ್ತಂತೆ. ರಜನೀಕಾಂತ್ ಅಲ್ಲಿಗೆ ಹೋದಾಗೆಲ್ಲ ಸಾಮಾನ್ಯವಾಗಿ ಪೂರಿ ಮತ್ತು ಅದರ ಜೊತೆಗೆ ಚಿಕನ್ ಅಥವಾ ಮಟನ್ ಗ್ರೇವಿ ತಿನ್ನುತ್ತಿದ್ದರಂತೆ. ಆದರೆ ಒಂದು ದಿನ ರಾತ್ರಿ ಒಂದು ಗಂಟೆ ವೇಳೆಗೆ ಬಂದ ರಜನೀಕಾಂತ್, ‘ನನಗೆ ಬಿರಿಯಾನಿ ತಿನ್ನುವ ಆಸೆಯಾಗಿದೆ’ ಅಂತ ಅಲ್ಲಿನ ಶೆಫ್ ರಾಮ್ ಮೋಹನ್ ಬಳಿ ಹೇಳಿದ್ರಂತೆ. ಆದರೆ ಬಿರಿಯಾನಿ ಹೆವಿ ಆಗಿರುವುದು ಬೇಡ, ತಡರಾತ್ರಿ ತಿನ್ನುತ್ತಿರುವ ಕಾರಣ ಸುಲಭವಾಗಿ ಜೀರ್ಣವಾಗುವಂಥಹ ಬಿರಿಯಾನಿ ಮಾಡಿಕೊಂಡು ಬಾ’ ಅಂದ್ರಂತೆ. ಆಗ ಶೆಫ್ ರಾಮ್ ಮೋಹನ್ ಮಾಡಿದ್ದೇ ಈ ಗಿಲ್ಲಿ ಬಿರಿಯಾನಿ.

ಬಿಸಿ ಬೇಳೆ ಬಾತ್ ರೀತಿ ಇದ್ದ ಮೆತ್ತನೆಯ ಬಿರಿಯಾನಿ ರಜನಿಕಾಂತ್‌ಗೆ ತುಂಬಾನೇ ಇಷ್ಟವಾಯ್ತು. ಬಳಿಕ ರಜನೀಕಾಂತ್ ಬಂದಾಗೆಲ್ಲ ಇದೇ ಬಿರಿಯಾನಿ ಕೇಳ್ತಾ ಇದ್ರಂತೆ. ಆ ಬಳಿಕ ಇದು ತಾಜ್ ಹೊಟೆಲ್‌ನ ಮೆನ್ಯೂಗೆ ಸೇರಿಸಲ್ಪಟ್ಟಿತು. ಅಂದಹಾಗೆ ಈ ಬಿರಿಯಾನಿಗೆ ಗಿಲ್ಲಿ ಬಿರಿಯಾನಿ ಅನ್ನೋ ಹೆಸರು ಬಂದಿದ್ದರ ಹಿಂದೆನೂ ಒಂದು ಕಥೆ ಇದೆ. . ಬಿರಿಯಾನಿಗೆ ಗ್ರೇವಿ ಬೆರೆಸುವ ಕಾರಣ ಇದನ್ನ ‘ಗೀಲಾ ಬಿರಿಯಾನಿ’ ಅಂತ ಕರೆಯಲಾಗ್ತಾ ಇತ್ತು. ಗೀಲಾ ಎಂದರೆ ಹಿಂದಿಯಲ್ಲಿ ಒದ್ದೆ ಅಂತ ಅರ್ಥ. ಆದರೆ ಬಳಿಕ ಗೀಲಾ ಎಂಬುದು ಗಿಲ್ಲಿ ಆಗಿ, ‘ಗಿಲ್ಲಿ ಬಿರಿಯಾನಿ’ ಅನ್ನೋ ಹೆಸರು ಬಂದಿದೆ. 30 ವರ್ಷಗಳ ಬಳಿಕ ಈಗಲೂ ತಾಜ್ ಕೋರಮಂಡಲ್ ಹೊಟೆಲ್‌ನಲ್ಲಿ ಗಿಲ್ಲಿ ಬಿರಿಯಾನಿ ಸರ್ವ್ ಆಗುತ್ತೆ.

ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಗಿಲ್ಲಿ ಹೆಸರು ಸಖತ್ ಫೇಮಸ್ ಆಗಿರೋದ್ರಿಂದ ಗಿಲ್ಲಿ ಬಿರಿಯಾನಿ ಕೂಡ ಮತ್ತೆ ಟ್ರೆಂಡ್​​ ಆಗಿದೆ. ಇದರ ಹಿಂದಿನ ಕಥೆ ಕೇಳಿ ಅನೇಕರು ಒಮ್ಮೆಯಾದ್ರೂ ಗಿಲ್ಲಿ ಬಿರಿಯಾನಿ ಸವಿಬೇಕು ಅಂತಿದ್ದಾರೆ. ಅತ್ತ ಗಿಲ್ಲಿ ನಟ ದೊಡ್ಮನೆಯೊಳಗೆ ನಲ್ಲಿ ಮೂಳೆ ಸವೀತಾ ಇದ್ರೆ, ಇತ್ತ ಗಿಲ್ಲಿ ಫ್ಯಾನ್ಸ್ ಗಿಲ್ಲಿ ಬಿರಿಯಾನಿ ತಿನ್ನೋ ಮೂಡ್​ನಲ್ಲಿದ್ದಾರೆ.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.