ಮಲೆ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದ ಡ್ರೋನ್​ ಪ್ರತಾಪ್​ಗೆ ಅಭಿಮಾನಿಗಳು ಭವ್ಯ ಸ್ವಾಗತ ಕೋರಿದ್ದು, ಅದರ ವಿಡಿಯೋ ವೈರಲ್​ ಆಗಿದೆ.  

ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್​ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ. 


ಅವರು ನಿನ್ನೆ ಅಂದ್ರೆ ಫೆಬ್ರುವರಿ 7ರಂದು ಡ್ರೋನ್​ ಪ್ರತಾಪ್​ ಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ಚಾಮರಾಜನಗರದ ಹನೂರು ತಾಲೂಕಿನಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಪ್ರತಾಪ್ ತೆರಳಿ ಆಶೀರ್ವಾದ ಪಡೆದಿದ್ದಾರೆ. ಯಾವುದೇ ಫೇಮಸ್​ ನಟರು ಬಂದರೆ ಅವರ ಅಭಿಮಾನಿಗಳು ಹೇಗೆಲ್ಲಾ ನಡೆದುಕೊಳ್ಳುತ್ತಾರೆಯೋ ಅದೇ ರೀತಿ ಅಭಿಮಾನಿಗಳು ಡ್ರೋನ್​ ಪ್ರತಾಪ್​ ಅವರನ್ನು ಮುತ್ತಿಗೆ ಹಾಕಿದ್ದಾರೆ. ಅಭಿಮಾನಿಗಳ ಈ ಗುಂಪಿನಿಂದ ಒಂದು ಕ್ಷಣ ಪ್ರತಾಪ್​ ಕೂಡ ವಿಚಲಿತರಾದ್ದದ್ದನ್ನು ವಿಡಿಯೋದಲ್ಲಿ ನೋಡಬಹುದು. ಡ್ರೋನ್​ ಪ್ರತಾಪ್​ ಫ್ಯಾನ್ಸ್​ ಪೇಜ್​ ಈ ವಿಡಿಯೋ ಶೇರ್​ ಮಾಡಿಕೊಂಡಿದೆ. ಮಹಾದೇವನ ಕುರಿತಾದ ಹಾಡಿನ ಹಿನ್ನೆಲೆಯಲ್ಲಿ ಈ ವಿಡಿಯೋ ಶೇರ್​ ಮಾಡಲಾಗಿದೆ. ಇದರಲ್ಲಿ ಅಭಿಮಾನಿಗಳು ಡ್ರೋನ್​ ಪ್ರತಾಪ್​ ಅವರನ್ನು ಎಷ್ಟರಮಟ್ಟಿಗೆ ಪ್ರೀತಿಸುತ್ತಿದ್ದಾರೆ ಎನ್ನುವುದನ್ನು ಕಾಣಬಹುದಾಗಿದೆ. ಕಮೆಂಟ್​ ಬಾಕ್ಸ್​ನಲ್ಲಿ ಕೂಡ ಎಲ್ಲರೂ ಡ್ರೋನ್​ ಪ್ರತಾಪ್​ ಅವರನ್ನು ಹಾಡಿ ಹೊಗಳಿದ್ದಾರೆ. 

ಎರಡೇ ವಾರಕ್ಕೆ ಕಳಿಸಿ ಎಂದ್ರೂ ರನ್ನರ್​ ಅಪ್​ ಮಾಡಿದ್ರು: ನನ್ನ ಉದ್ದೇಶವೇ ಬೇರೆಯಿತ್ತು ಎಂದ ಡ್ರೋನ್​ ಪ್ರತಾಪ್

ಅಂದಹಾಗೆ, ಡ್ರೋನ್​ ಪ್ರತಾಪ್​ ಕೆಲ ವರ್ಷಗಳ ಹಿಂದೆ ತುಂಬಾ ಆರೋಪ, ಟೀಕೆಗಳಿಗೆ ಗುರಿಯಾದವರು. ತಾವೊಬ್ಬ ಯುವ ವಿಜ್ಞಾನಿ ಎಂದು ಹೇಳಿಕೊಂಡು ಹಲವರನ್ನು ಯಾಮಾರಿಸಿರುವ ಗಂಭೀರ ಆರೋಪ ಇವರ ಮೇಲಿದೆ. ಮಾತಿನಲ್ಲಿ ಎಂಥವರನ್ನೂ ಮೋಡಿ ಮಾಡಬಲ್ಲ ಚಾಣಾಕ್ಷತೆ ಇವರಿಗೆ ಇದೆ. ಭಿನ್ನ ಕ್ಷೇತ್ರಗಳ ನುರಿತರು, ಮೇಧಾವಿಗಳು ಎನಿಸಿಕೊಂಡವರೂ ಪ್ರತಾಪ್​ ಮಾತಿಗೆ ತಲೆದೂಗಿದರು. ಎಷ್ಟೋ ವೇದಿಕೆಗಳಲ್ಲಿ ಇವರು ಮಾಡುತ್ತಿದ್ದ ಪ್ರೇರಣಾತ್ಮಕ ಭಾಷಣಕ್ಕೆ ತಲೆದೂಗಿದರು. ಕೇಳುವ ಪ್ರಶ್ನೆಗಳಿಗೆ ಅಷ್ಟೇ ಚೆನ್ನಾಗಿ ಉತ್ತರಿಸುವ ಮೇಧಾವಿ ಎನಿಸಿಕೊಂಡವರು ಡ್ರೋಣ್​. ಡ್ರೋನ್​ ತಯಾರಿಸಲು ತಾನು ಪಟ್ಟಿರುವ ಕಷ್ಟಗಳನ್ನು, ಬೀದಿ ಬದಿಯಲ್ಲಿ ಮಲಗಿ ತುತ್ತು ಅನ್ನಕ್ಕಾಗಿ ಪರದಾಡಿದ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಕೇಳುಗರ ಕಣ್ಣಲ್ಲಿ ನೀರು ತರಿಸಿದ್ದ ಪ್ರತಾಪ್​ ನಿಜ ಬಣ್ಣ ಬದಲಾಗಲು ಹಲವಾರು ವರ್ಷಗಳೇ ಬೇಕಾದವು. ಕೊನೆಗೂ ಇಷ್ಟು ವರ್ಷ ಹೇಳಿದ್ದು, ಮಾತನಾಡಿದ್ದು, ತಮ್ಮ ಬಗ್ಗೆ ಹೇಳಿಕೊಂಡಿದ್ದು, ಡ್ರೋನ್​ ತಯಾರಿಕೆ ಕುರಿತು ವಿವರಣೆ ನೀಡಿದ್ದು ಎಲ್ಲವೂ ಹಸಿಹಸಿ ಸುಳ್ಳು ಎಂದು ತಿಳಿದು ಹಲವು ಕೇಸ್​ಗಳು ದಾಖಲಾದವು. ಸ್ವಲ್ಪ ಸಮಯ ತಲೆ ಮರೆಸಿಕೊಂಡಿದ್ದ ಪ್ರತಾಪ್‌ ಬಿಗ್‌ಬಾಸ್‌ನಲ್ಲಿ ಪ್ರತ್ಯಕ್ಷ ಆಗಿ ಭಾರಿ ಅಭಿಮಾನಿಗಳನ್ನೂ ಗಳಿಸಿದರು. ಜೊತೆಗೆ ಅಚ್ಚರಿ ಎನ್ನುವಂತೆ ರನ್ನರ್‌ ಅಪ್‌ ಕೂಡ ಆದರು.

 ಬಿಗ್​ಬಾಸ್​ನಲ್ಲಿ ಫಿನಾಲೆವರೆಗೆ ಹೋಗಲು ತಮಗೆ ಬೂಸ್ಟ್​ ಕೊಟ್ಟಿದ್ದು ಕೆಲವರು ಆಡಿದಂಥ ಕೆಲವು ಮಾತುಗಳು, ನೀಡಿದಂಥ ಕೆಲವು ಪ್ರತಿಕ್ರಿಯೆಗಳು ಎಂದು ಸಂದರ್ಶನದಲ್ಲಿ ಡ್ರೋನ್​ ಹೇಳಿದ್ದರು. ಬಿಗ್​ಬಾಸ್​​ ಮನೆಯಲ್ಲಿ ರಕ್ಷಕ್​, ವಿನಯ್​, ಈಶಾನಿ, ಮೈಕೆಲ್​ ಸೇರಿದಂತೆ ಕೆಲವರು ಆಡಿದ ಮಾತುಗಳಿಂದ ನನಗೆ ತುಂಬಾ ನೋವಾಯಿತು. ನಮ್ರತಾ ದೀದೀ ಅವರೂ ಅಪ್ಪ-ಅಮ್ಮನ ಕುರಿತು ಹೇಳಿದರು. ಇದರಿಂದ ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು. ಆದರೆ ನನಗೆ ಗೊತ್ತು. ಎಲ್ಲರೂ ಆಟಕ್ಕೋಸ್ಕರ ಮಾಡಿದ್ದಾರೆ. ಕೊನೆಗೆ ನಮ್ರತಾ ದೀದೀ, ವಿನಯ್​ ಎಲ್ಲರೂ ಸಾರಿ ಕೇಳಿದ್ರು. ಅಲ್ಲಿಗೇ ಎಲ್ಲವೂ ಮುಗಿಯಿತು. ಆದರೂ ಕೆಲವು ಮಾತುಗಳನ್ನು ನೆನಪಿಸಿಕೊಂಡಾಗ ನೋವಾಗುತ್ತದೆ. ಆದರೆ ಬಿಗ್​ಬಾಸ್​ ಮನೆಯಲ್ಲಿಯೇ ಎಲ್ಲ ಗಲಾಟೆ ಮುಗಿದಿದೆ. ಅಲ್ಲಿ ನಡೆದಿದ್ದನ್ನು ಮರೆತಿದ್ದೇನೆ ಎಂದಿದ್ದರು. ಈಗ ಅಪಾರ ಜನಪ್ರಿಯತೆ ಗಳಿಸಿದ್ದಾರೆ.

ಡ್ರೋನ್​ ಪ್ರತಾಪ್​ಗೆ ಕೊನೆಗೂ ಅಮ್ಮನ ಕೈತುತ್ತು: ದೃಷ್ಟಿ ತೆಗೆದು ಬರಮಾಡಿಕೊಂಡ ವಿಡಿಯೋಗೆ ನೆಟ್ಟಿಗರು ಏನಂದ್ರು?

View post on Instagram