Dileep Raj: ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಇತ್ತೀಚೆಗೆ ಹೃದಾಯಾಘಾತದಿಂದ ನಿಧನರಾಗಿದ್ದರು. ಇದೀಗ ದಿಲೀಪ್ ರಾಜ್ ಎರಡನೇ ಮಗಳು ಧೃತಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಪನ ಜೊತೆಗಿನ ಫೋಟೊ ಹಂಚಿಕೊಂಡು ಭಾವುಕರಾಗಿ ಅಪ್ಪನಿಗೆ ಪತ್ರ ಬರೆದು ನೋವು ಹೇಳಿಕೊಂಡಿದ್ದಾರೆ.
ಅಪ್ಪ ದಿಲೀಪ್ ರಾಜ್ ಗೆ ಭಾವುಕ ಪತ್ರ ಬರೆದ ಮಗಳು ಧೃತಿ
ಕನ್ನಡ ಹಿರಿತೆರೆ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್, ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಇವರ ಸಾವು ಇಡೀ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿದ್ದು. ಪತ್ನಿ ಹಾಗೂ ಇಬ್ಬರು ಮಕ್ಕಳು ನಟ ದಿಢೀರ್ ಅಗಲುವಿಕೆಯ ನೋವನ್ನು ನಂಬಲಾರದೆ ಗೋಳಾಡಿದರು. ಇವರ ಕಣ್ಣೀರು ಪ್ರತಿಯೊಬ್ಬರ ಕಣ್ಣುಗಳನ್ನು ಒದ್ದೆಯಾಗಿಸಿತ್ತು. ಇದೀಗ, ದಿಲೀಪ್ ರಾಜ್ ಮುದ್ದಿನ ಮಗಳು, ಧೃತಿ ಅಪ್ಪನನ್ನು ನೆನೆದು ಭಾವುಕ ಪಾತ್ರ ಬರೆದಿದ್ದು, ಆ ಮೂಲಕ ತಮ್ಮ ಮನಸಿನ ಭಾವನೆಯನ್ನು ತೋಡಿಕೊಂಡಿದ್ದಾರೆ. ಧೃತಿ ರಾಜ್ ಗೆ ಕೇವಲ 16 ವರ್ಷ ವಯಸ್ಸಾಗಿದ್ದು, ಈಗಿನ್ನೂ ಶಾಲೆಯಲ್ಲಿ ಓದುತ್ತಿದ್ದಾರೆ. ಗೆಳೆಯನಂತಿದ್ದ ಅಪ್ಪನನ್ನು ಕಳೆದುಕೊಂಡ ನೋವನ್ನು ಧೃತಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ.

“ಐ ಟೇಕ್ ಇಟ್ ಬ್ಯಾಕ್, ಡ್ಯೂಟ್. ನಾನು ಭೇಟಿಯಾದವರಲ್ಲಿ ನೀನು ಈವಾಗ, ಆವಾಗ ಮತ್ತು ಎಂದಿಂದಿಗೂ ಗ್ರೇಟೆಸ್ಟ್ ವ್ಯಕ್ತಿ.. ನಾನು ನಿನ್ನನ್ನು 16 ವರ್ಷಗಳಿಂದ ತಿಳಿದಿದ್ದೇನೆ, ಅದು ನನ್ನ ಇಡೀ ಜೀವನ, ಮತ್ತು ನೀನು ಇಲ್ಲದೆ ನಾನು ನಟಿಯಾಗುವುದು ಹೇಗೆ ಎಂದು ನನಗೆ ಊಹಿಸಲೂ ಸಾಧ್ಯವಿಲ್ಲ. ನಾನು ಹೇಳುವುದಕ್ಕಿಂತ ಹೆಚ್ಚಾಗಿ ಇವತ್ತು ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಇದನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ. ಆದರೆ ನೀನು ನನಗೆ ತುಂಬಾ ವಿಶೇಷ ಎಂದು ನಾನು ನಿನಗೆ ವಿವರಿಸುವ ಅಗತ್ಯವಿಲ್ಲ ಎಂದು ನನಗೆ ಗೊತ್ತಿದೆ. ಜೊತೆಗೆ ನಾನು ಕೂಡ ನಿನಗೆ ತುಂಬಾ ಸ್ಪೆಷಲ್ ಅನ್ನೋದು ನನಗೆ ತಿಳಿದಿದೆ. ನಾನು ಎಂದಾದರೂ ನಟಿಯಾಗಿ ಬೆಳೆದರೆ ನಿನ್ನ ಹೆಸರನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ನಮಗೆ DR ಎಂಬ ಒಂದೇ ಹೆಸರಿನ ಮೊದಲಕ್ಷರಗಳಿವೆ ಮತ್ತು ನಿನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಿನದನ್ನು ಏನನ್ನೂ ಮಾಡಲು ಸಾಧ್ಯವಿಲ್ಲ. ಐ ಲವ್ ಯೂ ಡ್ಯೂಡ್. ಐ ಲವ್ ಯೂ ಅಪ್ಪಾ” ಎಂದು ಧೃತಿ ಭಾವುಕರಾಗಿ ಬರೆದಿದ್ದಾರೆ. ಜೊತೆಗೆ ಅಪ್ಪನ ಜೊತೆಗೆ ಕಳೆದ ಸುಂದರ ಸಮಯಗಳ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಸಾಂತ್ವಾನ ನೀಡಿದ ನಟ ಶರತ್ ಪದ್ಮನಾಭ್
ಪಾರು ಹಾಗೂ ನಾ ನಿನ್ನ ಬಿಡಲಾರೆ ನಟ ಶರತ್ ಪದ್ಮನಾಭ್ ಕಾಮೆಂಟ್ ಮಾಡಿ ‘ನಿನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಅವರು ನಿನ್ನ ಗಮನಿಸುತ್ತಿರುತ್ತಾನೆ ಮತ್ತು ಒಂದಲ್ಲ ಒಂದು ರೀತಿಯಲ್ಲಿ ನಿನಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ. ನೀನು ಅವರನ್ನು ಖಂಡಿತವಾಗಿಯೂ ಹೆಮ್ಮೆಪಡುವಂತೆ ಮಾಡುತ್ತೀರಿ ಪುಟ್ಟಿ. ಇದರಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎಂದು ಸಾಂತ್ವಾನ ನೀಡಿದ್ದಾರೆ.
ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಪೋಸ್ಟ್
“ನನಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ದಿಲೀಪ್ ಅವರು ಕಲೆ, ಸಿನಿಮಾ ಮತ್ತು ಇನ್ನು ಮುಂದೆ ನಾವು ಕಾಣುವ ಪ್ರತಿಯೊಂದು ಕರುಣೆಯ ಕೆಲಸದ ರೂಪದಲ್ಲಿ ನಮ್ಮ ನಡುವೆಯೇ ಇರುತ್ತಾರೆ. ಅವರು ಶಾಂತಿಯಿಂದ ಇರಲಿ ಎಂದು ನಾನು ಅವರನ್ನು ಕಳುಹಿಸಿಕೊಡಲು ನಿರ್ಧರಿಸಿದ್ದೇನೆ. ಆದರೆ ಒಂದು ವಿಷಯವಂತೂ ಖಚಿತ - ಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದು” ಎಂದು ಶ್ರೀವಿದ್ಯಾ ರಾಜ್ ಪೋಸ್ಟ್ ಹಂಚಿಕೊಂಡಿದ್ದಾರೆ.


