Bigg Boss: ಬಿಗ್ ಬಾಸ್ ಶೋನಲ್ಲಿ ಇಬ್ಬರು ಸ್ಪರ್ಧಿಗಳಿಗೆ ಏಕಕಾಲಕ್ಕೆ ರೆಡ್ ಕಾರ್ಡ್ ನೀಡಲಾಗಿದೆ. ಐಪಿಎಲ್ ಗೆದ್ದಷ್ಟು ವೀಕ್ಷಕರು ಖುಷಿಪಟ್ಟಿದ್ದಾರೆ. ಹಾಗಾದರೆ ಆ ರೆಡ್ ಕಾರ್ಡ್ ಅರ್ಥ ಏನು? ಇದು ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಘಟನೆ ಆಗಿದೆ.
ಬಿಗ್ ಬಾಸ್ ಶೋಗೂ ಕಾಂಟ್ರವರ್ಸಿಗೂ ಅವಿನಾಭಾವ ಸಂಬಂಧವಿದೆ. ಅದರಲ್ಲಿಯೂ ಇತ್ತೀಚೆಗೆ ತಮಿಳು ಸೀಸನ್ ಬೆಳವಣಿಗೆಗಳು ನಿಜಕ್ಕೂ ರಿಯಾಲಿಟಿ ಶೋಗಳ ಇತಿಹಾಸದಲ್ಲಿ ಒಂದು ಕಪ್ಪು ಚುಕ್ಕೆಯಾಗಿ ಉಳಿಯುವಂತೆ ಆಗಿದೆ. ಇನ್ನೇನು ಬಿಗ್ ಬಾಸ್ ಶೋ ಮುಗಿಯಿತು ಎನ್ನುತ್ತಿರುವಾಗ, 'ಟಿಕೆಟ್ ಟು ಫಿನಾಲೆ' ಟಾಸ್ಕ್ನಲ್ಲಿ ಫಿಸಿಕಲ್ ಟಾಸ್ಕ್ನಲ್ಲಿ ನಡೆದುಕೊಂಡಿದ್ದು ಮಾತ್ರ ದೊಡ್ಡ ಚರ್ಚೆಯಾಯ್ತು.
ನಿಜಕ್ಕೂ ಏನಾಯ್ತು?
ಬಿಗ್ ಬಾಸ್ ತಮಿಳು ಸ್ಪರ್ಧಿಗಳಾದ ವಿಜೆ ಪಾರು (ಪಾರ್ವತಿ) ಮತ್ತು ಕಮರುದ್ದೀನ್ ಅವರು ಕಾರ್ ಟಾಸ್ಕ್ ಒಂದರಲ್ಲಿ ಸಹ-ಸ್ಪರ್ಧಿ ಸ್ಯಾಂಡ್ರಾ ಆಮಿ ಅವರನ್ನು ಅತ್ಯಂತ ಕ್ರೂರವಾಗಿ ನೂಕಿದ್ದಲ್ಲದೆ, ಕಾರ್ನಿಂದ ಹೊರಹಾಕಿದ್ದಾರೆ. ಯಾರು ಎಷ್ಟು ಹೊತ್ತು ಕಾರ್ವೊಳಗಡೆ ಕೂರುತ್ತಾರೆ ಎನ್ನೋದು ಈ ಟಾಸ್ಕ್ ಆಗಿತ್ತು. ಇದರಿಂದ ಸ್ಯಾಂಡ್ರಾಗೆ ತೀವ್ರವಾಗಿ ಪ್ಯಾನಿಕ್ ಅಟ್ಯಾಕ್ (Panic Attack) ಆಗಿದೆ. ಆ ಸ್ಥಳದಲ್ಲಿ ಅವರು ಕುಸಿದು ಬಿದ್ದರು. ಮತ್ತೆ ತನ್ನ ಮೇಲೆ ಅಟ್ಯಾಕ್ ಮಾಡ್ತಾರೆ ಎಂಬ ಭಯಕ್ಕೆ ಅವರು ಬಿಗ್ ಬಾಸ್ ಶೋನಿಂದ ಕಳಿಸಿಕೊಡಿ ಎಂದು ಮನವಿ ಮಾಡಿದ್ದರು, ಇದು ವೀಕ್ಷಕರಿಗೆ ಬೇಸರ ಉಂಟು ಮಾಡಿತ್ತು.
ಸಾರ್ವಜನಿಕರ ಆಕ್ರೋಶ
ಈ ಟಾಸ್ಕ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಬಿಗ್ ಬಾಸ್ ಹಾಗೂ ನಿರೂಪಕ ವಿಜಯ ಸೇತುಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. "ಟಿಆರ್ಪಿಗಾಗಿ ಇಂತಹ ಹಿಂಸಾತ್ಮಕ ಟಾಸ್ಕ್ ಆಡಿಸೋದು, ಅದನ್ನು ಪ್ರೋತ್ಸಾಹಿಸುವುದು ಅಕ್ಷಮ್ಯ ಅಪರಾಧ" ಎಂದು ಹೇಳಿದರು. ಸ್ಪರ್ಧಿಗಳ ಸುರಕ್ಷತೆ ಬಗ್ಗೆ ವಾಹಿನಿ ತಲೆಕೆಡಿಸಿಕೊಂಡಿಲ್ಲ ಎಂದು ಆರೋಪ ಮಾಡಲಾಗಿತ್ತು.
ವಿಜಯ ಸೇತುಪತಿ ಏನು ಮಾಡಿದ್ರು?
ವೀಕೆಂಡ್ ಎಪಿಸೋಡ್ನಲ್ಲಿ ನಿರೂಪಕ ವಿಜಯ್ ಸೇತುಪತಿ ಕೈಗೊಂಡ ನಿರ್ಧಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗ್ತಿದೆ. "ಯಾವುದೇ ಮನರಂಜನೆಯು ಸ್ಪರ್ಧಿಯ ಸುರಕ್ಷತೆಗಿಂತ ದೊಡ್ಡದಲ್ಲ" ಎಂದು ಅವರು ಹೇಳಿದ್ದಾರೆ. ಟಾಸ್ಕ್ನ ನಿಯಮ ಉಲ್ಲಂಘಿಸಿದ ಕಮರುದ್ದೀನ್, ವಿಜೆ ಪಾರು ಇಬ್ಬರಿಗೂ 'ರೆಡ್ ಕಾರ್ಡ್' ನೀಡಿ ಈ ಸ್ಪರ್ಧೆಯಿಂದ ತಕ್ಷಣವೇ ಹೊರಹಾಕಿದ್ದಾರೆ.
ರೆಡ್ ಕಾರ್ಡ್ ಎಂದರೇನು?
90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದರೂ ಕೂಡ ಯಾವುದೇ ಸಂಭಾವನೆ ಕೊಡೋದಿಲ್ಲ
ಮತ್ತೆ ಬಿಗ್ ಬಾಸ್ ಮನೆಯೊಳಗಡೆ ಕರೆಯೋದಿಲ್ಲ
ಬಿಗ್ ಬಾಸ್ ಶೋನ ಯಾವುದೇ ಆಚರಣೆಯಲ್ಲಿ ಭಾಗಿ ಆಗುವಂತಿಲ್ಲ
ಯಾವುದೇ ಸ್ಪಾನ್ಸರ್ ಬಹುಮಾನ ಕೂಡ ಸಿಗೋದಿಲ್ಲ
ಐಪಿಎಲ್ ಗೆದ್ದಷ್ಟೇ ಸಂಭ್ರಮ
ಇವರಿಬ್ಬರಿಗೂ ರೆಡ್ ಕಾರ್ಡ್ ಸಿಕ್ಕಿದ್ದು ನೋಡಿ ಮನೆಯಲ್ಲಿದ್ದವರು, ಹೊರಗಡೆಯವರು ಕೂಡ ಖುಷಿಪಟ್ಟಿದ್ದಾರೆ. ಚೆನ್ನೈ ಐಪಿಎಲ್ ಗೆದ್ದಷ್ಟು ಸಂಭ್ರಮಿಸಿದ್ದಾರೆ ಎಂದರೆ ಈ ಘಟನೆ ಎಷ್ಟರಮಟ್ಟಿಗೆ ಸಂಚಲನ ಮೂಡಿಸಿದೆ ಎಂದು ಯೋಚನೆ ಮಾಡಿ. ಪಾರು ಅವರಿಂದ ಕಮರುದ್ದೀನ್ ಆಟ ಹಾಳಾಗಿದೆ ಎಂದು ವೀಕ್ಷಕರು, ಸ್ಪರ್ಧಿಗಳು ಕೂಡ ಹೇಳಿದ್ದಾರೆ. ರೆಡ್ ಕಾರ್ಡ್ ಸಿಕ್ಕಿದಕೂಡಲೇ ಸ್ಪರ್ಧಿಗಳ ಜೊತೆ ಪಾರು ಜಗಳ ಆಡಿದ್ದಾರೆ. ಆಮೇಲೆ ಸ್ಯಾಂಡ್ರಾ ಅವರಿಗೆ ಪಾರು ಕ್ಷಮೆ ಕೇಳಿ, ದೊಡ್ಮನೆಯಿಂದ ಹೊರಟಿದ್ದಾರೆ. ಕಮರುದ್ದೀನ್ ಅವರು ಸ್ಯಾಂಡ್ರಾ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ನೀನು ಯಾರ ಜೊತೆ ಬೇಕಿದ್ರೂ ಸ್ನೇಹ ಮಾಡು, ಆದರೆ ಪಾರು ಜೊತೆ ಸ್ನೇಹ ಮಾಡಬೇಡ ಎಂದು ಸಹಸ್ಪರ್ಧಿಗಳು ಬುದ್ಧಿ ಹೇಳಿ ಕಳಿಸಿದ್ದಾರೆ.



