ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಚರ್ಚೆಯಲ್ಲಿವೆ.
ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಬಹುದು ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಚರ್ಚೆಯಲ್ಲಿವೆ. ಅದರಲ್ಲಿ ನಟಿ ಅರ್ಚನಾ ಕೊಟ್ಟಿಗೆ ಹೆಸರು ಕೂಡ ಭಾರೀ ಟ್ರೆಂಡ್ ಆಗಿತ್ತು. ಇತ್ತೀಚೆಗೆ ಕರ್ನಾಟಕದ ಸ್ಟಾರ್ ಕ್ರಿಕೆಟರ್ ಶರತ್ ಅವರನ್ನು ವಿವಾಹವಾದ ನಂತರ, ಅರ್ಚನಾ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎಂಬ ಊಹಾಪೋಹಗಳು ಇನ್ನಷ್ಟು ಜೋರಾಗಿದ್ದವು. ಆದರೆ ಈ ಎಲ್ಲಾ ಗಾಸಿಪ್ಗಳಿಗೆ ಈಗ ಸ್ವತಃ ನಟಿಯೇ ಸ್ಪಷ್ಟ ಉತ್ತರ ನೀಡಿದ್ದಾರೆ.
ಬಿಗ್ಬಾಸ್ ಎಂಟ್ರಿ ಕುರಿತು ಮಾತನಾಡಿರುವ ಅರ್ಚನಾ, 'ಈ ಕ್ಷಣಕ್ಕೆ ನನ್ನ ಸಂಪೂರ್ಣ ಗಮನ ಸಿನಿಮಾಗಳ ಮೇಲೆಯೇ ಇದೆ. ಬಿಗ್ಬಾಸ್ಗೆ ಸ್ಪರ್ಧಿಯಾಗಿ ಹೋಗುವ ಯಾವುದೇ ಯೋಜನೆ ಇಲ್ಲ. ಹಿಂದೆ ಕೂಡ ಆಫರ್ ಬಂದಿತ್ತು, ಆದರೆ ಆಗಲೂ ನಾನು ನಿರಾಕರಿಸಿದ್ದೆ. ಸಿನಿಮಾ ಪ್ರಚಾರಕ್ಕೆ ಅತಿಥಿಯಾಗಿ ಹೋಗುವ ಸಾಧ್ಯತೆ ಇರಬಹುದು, ಆದರೆ ಸ್ಪರ್ಧಿಯಾಗಿ ಭಾಗವಹಿಸುವುದಿಲ್ಲ' ಎಂದು ಹೇಳಿದ್ದಾರೆ. ಇದರಿಂದ ಬಿಗ್ಬಾಸ್ ಫ್ಯಾನ್ಸ್ಗಳಿಗೆ ಸ್ವಲ್ಪ ನಿರಾಶೆಯಾಗಿದ್ದರೂ, ಅವರ ಸ್ಪಷ್ಟ ನಿಲುವು ಈಗ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಕೀರ್ತಿ ಇಎನ್ಟಿ ಕ್ಲಿನಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಖುಷಿ ರವಿ ಹಾಗೂ ಅಮೃತಾ ಅಯ್ಯಂಗಾರ್ ಜೊತೆ ಕಾಣಿಸಿಕೊಂಡಿದ್ದ ಅರ್ಚನಾ, ತಮ್ಮ ನೈಸರ್ಗಿಕ ಹಾಸ್ಯಶೈಲಿಯಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದರು. ಆ ವಿಡಿಯೋ ನಂತರ ಹಲವರು 'ಇವರು ಬಿಗ್ಬಾಸ್ ಮನೆಗೆ ಹೋದರೆ ಮನರಂಜನೆ ಗ್ಯಾರಂಟಿ' ಎಂದು ಕಾಮೆಂಟ್ ಮಾಡಿದ್ದರು. ಆದರೆ ಈಗ ಅವರು ಸಿನಿಮಾಗಳತ್ತಲೇ ಸಂಪೂರ್ಣ ಗಮನ ಹರಿಸುತ್ತಿದ್ದಾರೆ. ಸದ್ಯ ಹೊಸ ಚಿತ್ರವೊಂದರ ಮಾತುಕತೆ ನಡೆಯುತ್ತಿದ್ದು, ತಮ್ಮ ಸಿನಿ ಕೆರಿಯರ್ ಅನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದ್ದಾರೆ.
ಸಿಲ್ವರ್ ಸ್ಕ್ರೀನ್ ಮೇಲೆ ಫೋಕಸ್
ಇನ್ನು ‘ಡಿಯರ್ ಸತ್ಯಾ’, ‘ತ್ರಿಬಲ್ ರೈಡಿಂಗ್’, ‘ವಿಜಯಾನಂದ’, ‘ಹೊಂದಿಸಿ ಬರೆಯಿರಿ’ ಹಾಗೂ ‘ಫಾರೆಸ್ಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿರುವ ಅರ್ಚನಾ ಕೊಟ್ಟಿಗೆ, ಈಗ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆಯೇ ಫೋಕಸ್ ಮಾಡಿದ್ದಾರೆ. ಬಿಗ್ಬಾಸ್ 13 ಸೀಸನ್ನಲ್ಲಿ ಅವರ ಎಂಟ್ರಿ ಇಲ್ಲದಿರುವುದು ಖಚಿತವಾದರೂ, ಅಭಿಮಾನಿಗಳ ಕುತೂಹಲ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮುಂದಿನ ಸೀಸನ್ನಲ್ಲಿ ಅವರು ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆ ಈಗ ಉಳಿದಿದೆ.


