Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ, ಭೂಮಿಕಾಗೆ ಮಕ್ಕಳಾಗಲ್ಲ ಎಂಬ ಸತ್ಯ ಅಪೇಕ್ಷಾ ಮೂಲಕ ಕುಟುಂಬಕ್ಕೆ ತಿಳಿಯುತ್ತದೆ. ಇದರಿಂದ ಗೌತಮ್ ಮತ್ತು ಭೂಮಿಕಾ ದುಃಖಿತರಾಗಿದ್ದು, ಶಕುಂತಲಾ ಹೊಸ ಪ್ಲಾನ್ ಮಾಡುತ್ತಿದ್ದಾಳೆ.

ಬೆಂಗಳೂರು: ಝೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಗಿ ಹಲವು ಕಾರಣಗಳಿಂದ ಜನರಿಗೆ ಇಷ್ಟವಾಗುತ್ತದೆ. ಕೇವಲ ಧಾರಾವಾಹಿಯಾಗಿ ಜನರನ್ನು ಮನರಂಜಿಸದೇ ಮನೆಯ ಮಗನಾಗಿ, ಮಡದಿಯ ಗಂಡನಾಗಿ, ಮನೆ ಮಗಳು, ಸೊಸೆ ಹೇಗಿರಬೇಕು ಎಂಬ ವಿಷಯವನ್ನು ಜನರಿಗೆ ಮನದಟ್ಟು ಮಾಡುವ ಕೆಲಸವನ್ನು ಮಾಡುತ್ತಿದೆ. ಶಕುಂತಲಾಳ ಕುತಂತ್ರದಿಂದ ಭೂಮಿಕಾಗೆ ಮಕ್ಕಳು ಆಗಲ್ಲ ಎಂದು ಡಾಕ್ಟರ್ ಹೇಳಿದ್ದರು. ಇದನ್ನೇ ನಂಬಿದ ಭೂಮಿಕಾ ಮತ್ತು ಗೌತಮ್ ದುಃಖದಲ್ಲಿದ್ದಾರೆ. ಗೆಳೆಯ ಆನಂದ್ ಸೆಕೆಂಡ್ ಒಪಿನಿಯನ್ ತೆಗೆದುಕೊಳ್ಳೋಣ ಅಂದ್ರು ಗೌತಮ್ ಒಪ್ಪಿಲ್ಲ. ಇತ್ತ ಮನೆಯಲ್ಲಿ ತನ್ನಿಂದಾಗಿಯೇ ಭೂಮಿಕಾಗೆ ಮಕ್ಕಳು ಆಗ್ತಿಲ್ಲ ಎಂದು ಎಲ್ಲಾ ಅಪವಾದವನ್ನು ಗೌತಮ್ ತನ್ಮೇಲೆ ಎಳೆದುಕೊಂಡಿದ್ದಾನೆ. 

Add Asianetnews Kannada as a Preferred SourcegooglePreferred

ಇತ್ತ ಈ ವಿಷಯ ತಂಗಿ ಅಪೇಕ್ಷಾಗೆ ಹಾಲು ಕುಡಿದಷ್ಟು ಖುಷಿಯಾಗಿದ್ದಾಳೆ. ಈ ವಿಷಯವನ್ನು ಹೆತ್ತವರಿಗೆ ತಿಳಿಸಲು ತವರಿಗೆ ಹೋಗಿದ್ದಾಳೆ. ತಂದೆ-ತಾಯಿಯೊಂದಿಗೆ ಜಗಳ ಮಾಡಿಕೊಂಡಿದ್ದ ಅಪೇಕ್ಷಾ ತವರಿನಿಂದ ದೂರವಾಗಿದ್ದಳು. ಈಗ ಭೂಮಿಕಾಗೆ ಮಕ್ಕಳಾಗಲ್ಲ ಎಂಬ ವಿಷಯವನ್ನು ತಿಳಿಸಲು ಅಪೇಕ್ಷಾ ತವರಿಗೆ ಹೋಗಿದ್ದಾಳೆ. ತಮ್ಮ ಮೇಲೆ ಮುನಿಸಿಕೊಂಡಿದ್ದ ಮಗಳನ್ನು ಕಂಡು ಮಂದಾಕಿನಿ ಮತ್ತು ಸದಾಶಿವ ತುಂಬಾನೇ ಖುಷಿಯಾಗಿದ್ದಾರೆ. 

ಮಗಳೇ ನೀನು ಹೀಗೆ ದಿಢೀರ್ ಅಂತ ಬರ್ತಿಯಾ ಎಂದು ನಾನು ನಿರೀಕ್ಷೆಯೂ ಮಾಡಿರಲಿಲ್ಲ. ಮನೆ ಗೃಹಪ್ರವೇಶದಲ್ಲಿ ಏನೇನೋ ಆಗಿ ಹೋಯ್ತು. ನೀನು ಎಲ್ಲಿ ನಮ್ಮಿಂದ ದೂರ ಆಗ್ತಿಯಾ ಅನ್ನೋ ಭಯ ಶುರುವಾಗಿತ್ತು. ನಾನು ಮತ್ತು ನಿನ್ನಮ್ಮ, ಅಪ್ಪಿಗೆ ನಮ್ಮಿಂದ ಬೇಜಾರು ಆಗಿದೆ. ಅವಮಾನ ಆದಂತೆ ಆಗಿದೆ. ಅವಳು ನಮ್ಮಿಂದ ದೂರ ಆದ್ರೆ ಏನು ಮಾಡೋದು ಅಂತ ಮಾತಾಡಿಕೊಂಡಿದ್ದೇವೆ. ಎಲ್ಲವೂ ಕಾಲದಿಂದ ಸರಿ ಹೋಗುತ್ತೆ ಎಂಬ ವಿಶ್ವಾಸದಲ್ಲಿದ್ದೇವು ಎಂದು ಸದಾಶಿವ ಮಗಳಿಗೆ ಹೇಳುತ್ತಾರೆ. ಇನ್ನು ಮಂದಾಕಿನಿಯಂತೂ ಮಗಳು ಬಂದ ಖುಷಿಯಲ್ಲಿ ಸಿಹಿ ತೆಗೆದುಕೊಂಡು ಬರಲು ಹೋಗುತ್ತಾಳೆ. 

ಇದನ್ನೂ ಓದಿ: ಅಮೃತಧಾರೆ ಭೂಮಿಕಾಗೆ ಠಕ್ಕರ್​ ಕೊಟ್ಟ ನಿವೇದಿತಾ ಅಮ್ಮ! ನೀವೇ ಹೀಗಾದ್ರೆ ಮಗಳ ಗತಿಯೇನು ಕೇಳ್ತಿರೋ ನೆಟ್ಟಿಗರು

ತಾಯಿ ಸಿಹಿ ತಿನ್ನಿಸಲು ಬರುತ್ತಿದ್ದಂತೆ, ಅಪೇಕ್ಷಾ ನಿಮಗೆಲ್ಲರಿಗೂ ಗುಡ್ ನ್ಯೂಸ್ ಹೇಳಬೇಕು ಎಂದು ಹೇಳುತ್ತಾಳೆ. ಅಮ್ಮನ ಕೈಯಲ್ಲಿದ್ದ ಸಿಹಿಯನ್ನು ತೆಗೆದುಕೊಂಡು ಅಪ್ಪ-ಅಮ್ಮನಿಗೆ ತಿನ್ನಿಸುತ್ತಾಳೆ. ನನಗೂ ಮನೆಯಲ್ಲಿಯೂ ಏನು ಅಂತ ಹೇಳದೇ ಇಲ್ಲಿಗೆ ಕರೆದುಕೊಂಡು ಬಂದಿದ್ದಾಳೆ ಎಂದು ಪಾರ್ಥ್ ಹೇಳುತ್ತಾನೆ. ಆಗ ನಿಮ್ಮ ಹಿರಿಯ ಮಗಳು ಭೂಮಿಕಾಗೆ ಮಕ್ಕಳು ಆಗಲ್ಲ ಎಂಬ ಸತ್ಯವನ್ನು ಪೋಷಕರ ಮುಂದೆ ಅಪೇಕ್ಷಾ ಹೇಳುತ್ತಾಳೆ. ಈ ವಿಷಯ ತಿಳಿಯುತ್ತಿದ್ದಂತೆ ಸದಾಶಿವ್, ಮಂದಾಕಿನಿ, ಜೀವ, ಮಹಿ ಶಾಕ್ ಆಗುತ್ತಾರೆ. 

ಇನ್ನು ಮಕ್ಕಳು ಆಗಲ್ಲ ಎಂಬ ವಿಷಯ ತಿಳಿದಿರುವ ಭೂಮಿಕಾ ಮತ್ತು ಗೌತಮ್ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಂಡಿದ್ದಾರೆ. ನನಗೆ ನೀವು ಮಗು, ನಿಮಗೆ ನಾನು ಮಗು ಎಂದು ಹೇಳಿಕೊಂಡು ಇರೋ ಜೀವನವನ್ನು ಆನಂದಿಸೋಣ ಎಂದು ಹೇಳಿಕೊಂಡಿದ್ದಾರೆ. ಆದ್ರೆ ಇದೇ ವಿಷಯವನ್ನು ಮುಂದಿಟ್ಟುಕೊಂಡು ಭೂಮಿಕಾಳನ್ನು ಮನೆಯಿಂದ ಹೊರ ಹಾಕಲು ಶಕುಂತಲಾ ಪ್ಲಾನ್ ಮಾಡಿದ್ದಾಳೆ. 

ಇದನ್ನೂ ಓದಿ: ಗೌತಮ್ ಮಲತಾಯಿ ಅಲ್ಲವಾ ಶಕುಂತಲಾ? ಜೈದೇವ್ ಮಾತು ಕೇಳಿ ಬೆಕ್ಕಸ ಬೆರಗಾಗಿ ನ್ಯಾಯ ಬೇಕೆಂದ ವೀಕ್ಷಕರು!