ಅಗಸ್ತ್ಯ ರಾಥೋಡ್ ಕೈಲಿ ಅಡುಗೆ ಪಾಠ ಹೇಳಿಸ್ಕೊಳ್ರೋ..!
'ನನ್ನರಸಿ ರಾಧೆ' ಸೀರಿಯಲ್ ಸದ್ಯಕ್ಕೆ ತಂಗಾಳಿಯ ಹಾಗೆ ಕಚಗುಳಿ ಇಡೋ ಲವ್ ಸ್ಟೋರಿ ಜೊತೆಗೆ ಸಾಗ್ತಿದೆ. ಇದೀಗ ಅಗಸ್ತ್ಯ ಅಡುಗೆ ಮನೇಲಿದ್ದಾನೆ. ಅಡುಗೆ ಹೇಗ್ ಮಾಡ್ತಾನೆ ಗೊತ್ತಾ..
'ನನ್ನರಸಿ ರಾಧೆ' ಸೀರಿಯಲ್ನ ಹೆಚ್ಚಿನವರು ನೋಡೋದು ಅಗಸ್ತ್ಯ ಮತ್ತು ಇಂಚರಾಳ ಹುಸಿ ಮುನಿಸು, ಆಗಾಗ ಕಚಗುಳಿ ಇಡೋ ಥರ ಸಣ್ಣ ಪ್ರೀತಿ, ಜಗಳ ಎಲ್ಲ ನೋಡೋಕೆ. ಫ್ಯಾಮಿಲಿ ಗೋಳಾಟ ಬಂದ ಕೂಡ್ಲೇ ಚಾನೆಲ್ ಚೇಂಜ್ ಮಾಡೋರಿಗೇನು ಕಡ್ಮೆ ಇಲ್ಲ.
ಇಂಚರಾಗೆ ತನ್ನ ಅಮ್ಮನ ಬಗ್ಗೆ ಏನೆಲ್ಲ ಗೊತ್ತು ಅನ್ನೋದನ್ನೆಲ್ಲ ಹೊರ ತೆಗಿಸಬೇಕು ಅಂತ ಅಗಸ್ತ್ಯ ಪ್ಲಾನ್ ಮಾಡಿದ್ದೇ ಮಾಡಿದ್ದು. ಆ ಪ್ಲಾನ್ ಅವನಿಗೇ ಎರವಾಗೋದಾ? ಇಂಚರಾ ಅವನು ಕೊಟ್ಟ ಔಷಧಿಯನ್ನೇನೋ ಕುಡಿದಳು. ಆದರೆ ಅಮ್ಮನ ಬಗೆಗಿನ ಸತ್ಯ ಹೊರಗೆ ಬರಲಿಲ್ಲ. ಬದಲಾಗಿ ಇಂಚರಾಗೆ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರೋ ಹಾಗಾಯ್ತು.
ಈ ವಿಚಾರವನ್ನು ಅಗಸ್ತ್ಯ ಯಾರ ಕೈಲಿ ಬೇಕಾದ್ರೂ ಮುಚ್ಚಿಡಬಹುದು, ಆದರೆ ಡಾಕ್ಟರ್ ಕೈಯಿಂದ ಮುಚ್ಚಿಡಕ್ಕಾಗುತ್ತಾ, ಅವ್ರಿಗೆ ಸತ್ಯ ಏನು ಅಂತ ಗೊತ್ತಾಗೇ ಗೊತ್ತಾಗುತ್ತೆ. ಡ್ರಗ್ಸ್ ನ ಎಫೆಕ್ಟ್ ಇರೋ ಪ್ರಾಣಕ್ಕೇ ಎರವಾಗೋ ಔಷಧಿಯನ್ನ ಅಗಸ್ತ್ಯ ಕೊಟ್ಟಿದ್ದಾನೆ ಅನ್ನೋದನ್ನು ಅವರು ಪೊಲೀಸ್ ಗೆ ತಿಳಿಸುತ್ತಾರೆ. ಪೊಲೀಸರು ಬಂದು, ಅಗಸ್ತ್ಯನಿಗೆ ಚೆನ್ನಾಗಿ ಕ್ಲಾಸ್ ತಗೊಂಡು ಇನ್ನೇನು ಅಗಸ್ತ್ಯ ಅರೆಸ್ಟ್ ಆದ, ಅವನ ನೆಕ್ಸ್ಟ್ ಸೀನ್ ಜೈಲಿಂದಲೇ ಶುರುವಾಗುತ್ತೆ ಅಂದುಕೊಂಡಿದ್ದರೆ ಅಲ್ಲೊಂದು ಟ್ವಿಸ್ಟ್. ಅಷ್ಟರಲ್ಲೇ ಇಂಚರಾಗೆ ಎಚ್ಚರ ಆಗುತ್ತೆ. ಅವಳು ಅಗಸ್ತ್ಯ ನಂಗೆ ಆ ಔಷಧ ಕೊಟ್ಟಿಲ್ಲ. ತುಂಬ ತಲೆನೋವು ಅಂತ ನಾನೇ ತಗೊಂಡೆ ಅಂತಾಳೆ. ಅಲ್ಲಿಗೆ ಅಗಸ್ತ್ಯ ಬಚಾವ್.
5 ವರ್ಷದಲ್ಲೇ ರೇಪ್ಗೊಳಗಾದ ಜಯಶ್ರೀ ರಾಮಯ್ಯ ಕೊನೆಯವರೆಗೂ ಅದನ್ನು ಮರೆತಿರಲಿಲ್ಲ! ...
ಮುಂದೆ ಪೊಲೀಸ್ ಬುದ್ಧಿವಾದ ಹೇಳೋದು, ಇಂಚರಾ ಮಾವ ಮನೆಗ್ ಬರೋದು, ವಿಲನ್ ಗಳು ಒಟ್ಟಾಗಿ ಪ್ಲಾನ್ ಹಾಳಾಗಿದ್ದಕ್ಕೆ ಹಳಹಳಿಸೋದು.. ಇತ್ಯಾದಿಗಳೆಲ್ಲ ಆಗುತ್ತವೆ. ಆದರೆ ಮಜಾ ಅನಿಸೋದು ಆಮೇಲಿನ ಸೀನ್. ಇಂಚರಾಗೆ ಹುಷಾರಿಲ್ಲ ಸುಸ್ತು ಅಂದ್ರೆ ಅಗಸ್ತ್ಯ ಇರು ಅತ್ತೆಗೆ ಹೇಳ್ತೀನಿ ಅಂತಾನೆ. ಅಷ್ಟೊತ್ತಿಗೆ ಅಲ್ಲಿಗೆ ಬರೋ ಸುಧಾ, 'ಅವಳಿಗೆ ಸುಸ್ತಾದ್ರೆ ನಾನ್ಯಾಕೆ ಬೇಕು, ನೀನು ನೋಡ್ಕೋ, ನೀನವಳ ಗಂಡ ಅಲ್ವಾ' ಅನ್ನುತ್ತಾ ಅವಳನ್ನು ನೋಡಿಕೊಳ್ಳೋ ಜವಾಬ್ದಾರಿಯಿಡೀ ಅಗಸ್ತ್ಯನ ಮೇಲೇ ಹೊರಿಸ್ತಾಳೆ.
ಜೊತೆಗೆ ಅಡುಗೆಯವ್ರು ರಜೆ ಹಾಕಿರೋ ಕಾರಣ ಅಡುಗೆ ಜವಾಬ್ದಾರಿಯೂ ಅಗಸ್ತ್ಯನ ಮೇಲೇ ಬೀಳುತ್ತೆ. ಈಗ ಶುರುವಾಗುತ್ತೆ ರಿಯಲ್ ಸ್ಟೋರಿ. ಇಂಚರಾಗೆ ಹಾಲು ಕೊಡಲು ಬರುವ ಅಗಸ್ತ್ಯನಿಗೆ ಹಿಂದೆ ತಾನು ಹಾಲಿಗೆ ಡ್ರಗ್ಸ್ ಹಾಕಿದ್ದು ನೆನಪಾಗಿ ಗಿಲ್ಟ್ ಕಾಡುತ್ತೆ. ಆದರೆ ಆಗಲೂ ಮುದ್ದು ಇಂಚರಾನೇ ಅವನ ಗಿಲ್ಟ್ಅನ್ನು ಹೋಗಲಾಡಿಸ್ತಾಳೆ. 'ನೀನು ಮತ್ತೆ ಹಾಲಿಗೆ ಔಷಧಿ ಹಾಕಿ ಕೊಟ್ರೂ ಕುಡೀತೀನಿ ಅಗಸ್ತ್ಯ, ನಂಗೆ ನಿನ್ನ ಬಿಟ್ಟು ಯಾರಿದ್ದಾರೆ' ಅಂತ ಅವಳು ಇನೋಸೆಂಟಾಗಿ ಹೇಳುವಾಗ ಅಗಸ್ತ್ಯ ಏನು, ನಮ್ ಮನಸೂ ಕರಗಿ ನೀರಾಗುತ್ತೆ.
ಶ್ರದ್ದಾ ಶ್ರೀನಾಥ್ ಮದ್ವೆ ಸಂಗತಿ ಮುಚ್ಚಿಡ್ತಿದ್ದಾರಾ..? ...
ಬೆಳಬೆಳಗ್ಗೆ ಆರಕ್ಕೆಲ್ಲ ಇಂಚರಾ ಎದ್ದು ನೋಡಿದ್ರೆ ಕೈಯನ್ನು ಯಾರೋ ಕಟ್ಟಿ ಹಾಕಿದ್ದಾರೆ. ಅದರ ಇನ್ನೊಂದು ಬದಿ ಅಗಸ್ತ್ಯನ ಕೈಗೆ ಕಟ್ಟಲಾಗಿದೆ. ಇಂಚರಾ ಬೇಗ ಎದ್ದು ಅಡುಗೆ ಮನೆಗೆ ಹೋಗ್ತಾಳೆ, ಅದನ್ನು ತಪ್ಪಿಸೋದಕ್ಕೆ ಅಂತ ಅಗಸ್ತ್ಯ ಮಾಡಿರೋ ಪ್ಲಾನ್ ಅದು. ಇಂಚರಾ ಅಡುಗೆ ಮನೆಗೆ ಬರಬಹುದು, ಆದರೆ ಅಡುಗೆ ಮಾಡೋ ಹಾಗಿಲ್ಲ ಅನ್ನೋದು ಅಗಸ್ತ್ಯ ಇಂಚರಾಗೆ ಹಾಕಿರೋ ಕಟ್ಟುನಿಟ್ಟಿನ ನಿಯಮ.
ಹಾಗೆಲ್ಲ ಕೂತೇ ಗೊತ್ತಿಲ್ಲದ ಇಂಚರಾಗೆ ಅದು ಹಿಂಸೆ. ಇತ್ತ ಅಗಸ್ತ್ಯನ ಅಡುಗೆ ಶುರು. ದೋಸೆ ಹಿಟ್ಟನ್ನು ಅಷ್ಟೆತ್ತರದಿಂದ ಕಾವಲಿ ಮೇಲೆ ಹುಯ್ಯೋದನ್ನು ಕಂಡು ಇಂಚರಾಗೆ ನಗುವೋ ನಗು. 'ಈ ಹಿಟ್ಟು ತಗೊಂಡು ಹೋಗಿ ಟೆರೇಸ್ ಮೇಲಿಂದ ಹುಯ್ದುಬಿಡು ಅಗಸ್ತ್ಯ, ಆಗ ಇನ್ನೂ ಎಲ್ಲಾ ಕಡೆ ಚೆನ್ನಾಗಿ ಹರಡಿಕೊಳ್ಳುತ್ತೆ' ಅಂತ ಇಂಚರ ಕಾಲೆಳೆಯೋವಾಗ ನಮ್ದೂ ನಿಮ್ದೂ ನಗು ತಡ್ಕೊಳ್ಳಾದ್ರೆ ಹೇಳಿ. ಆದರೆ ಅಗಸ್ತ್ಯ ಪ್ರಾಮಿಸ್ ಮಾಡಿದ್ದಾನಲ್ಲಾ.. ಸೋ, ಜಗಳ ಮಾಡೋ ಹಾಗಿಲ್ಲ. ಮೂತಿ ದಪ್ಪ ಮಾಡ್ಕೊಂಡು ಯಾವ್ಯಾವುದೋ ಶೇಪ್ ನಲ್ಲಿ ಮಕ್ಕಳ ಥರ ದೋಸೆ ಹುಯ್ಯುತ್ತಾನೆ. ಗಡ್ಡದ ಮೇಲೆ ಹಿಟ್ಟು, ಅದನ್ನುಒರೆಸೋ ಇಂಚರಾ. ಇಬ್ಬರ ಕಣ್ಣಲ್ಲೂ ಪ್ರೀತಿ. ಇನ್ನೊಮ್ಮೆ ಚಟ್ನಿ ಮಾಡೋದಕ್ಕೆ ಅಂತ ಮಿಕ್ಸಿ ಆನ್ ಮಾಡಿದ್ರೆ, ಮಿಕ್ಸಿ ಮುಚ್ಚಳ ಹಾರಿ ಹೋಗಿ ಅಡುಗೆ ಮನೆ ಇಡೀ ಚಟ್ನಿ. ಅಗಸ್ತ್ಯ ಬಟ್ಟೆಗೂ ಚಟ್ನಿಯ ಅಭಿಷೇಕ.
ಮಿಲನಾ ನಾಗರಾಜ್ ಮುಂದೆ ಮಿಲನಾ ಕೃಷ್ಣ ಆಗ್ತಾರಾ..? ...
ಹೀಗೆ ಅಗಸ್ತ್ಯ-ಇಂಚರಾ ನಡುವಿನ ಪ್ರೀತಿ, ಮುನಿಸು, ದೂರ ಮಾಡಲು ಪ್ರಯತ್ನಿಸಿದಷ್ಟೂ ಅವರನ್ನು ಹತ್ತಿರ ಮಾಡುತ್ತಲೇ ಇರುವ ವಿಧಿ. ದಿನದಿಂದ ದಿನಕ್ಕೆ ಇವರಿಬ್ಬರ ಕತೆ ಇಂಟೆರೆಸ್ಟಿಂಗ್ ಆಗ್ತನೇ ಹೋಗ್ತಿದೆ.