Asianet Suvarna News Asianet Suvarna News

New Year 2022: ರೆಸಾರ್ಟ್‌ಗಳು, ಹೋಂ ಸ್ಟೇಗಳು, ಹೋಟೆಲ್‌ಗಳು ಫುಲ್, ಪ್ರವಾಸೋದ್ಯಮಕ್ಕೆ ಕಳೆ

 ಹೊಸ ವರ್ಷಾಚರಣೆಗಾಗಿ (New Year 2022) ಜನರು ಇದೀಗ ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಹತ್ತು ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಕರಾವಳಿ ಜಿಲ್ಲೆ ಉತ್ತರಕನ್ನಡದತ್ತ (Uttara Kannada) ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು ರೆಸಾರ್ಟ್, ಹೋಂಸ್ಟೇಗಳು ಈಗಾಗಲೇ ತುಂಬಿ ತುಳುಕುತ್ತಿವೆ. 

Uttara Kannada New Year 2022 Celebration Brings Cheer in Tourism Sector hls
Author
Bengaluru, First Published Dec 31, 2021, 10:08 AM IST

ಉತ್ತರ ಕನ್ನಡ (ಡಿ. 31):  ಹೊಸ ವರ್ಷಾಚರಣೆಗಾಗಿ (New Year 2022) ಜನರು ಇದೀಗ ಪ್ರವಾಸಿ ತಾಣಗಳಿಗೆ ಮುಗಿಬೀಳುತ್ತಿದ್ದಾರೆ. ಅದರಲ್ಲೂ ಹತ್ತು ಹಲವು ಪ್ರವಾಸಿ ತಾಣಗಳನ್ನು ಹೊಂದಿರುವ ಕರಾವಳಿ ಜಿಲ್ಲೆ ಉತ್ತರ ಕನ್ನಡದತ್ತ (Uttara Kannada) ವರ್ಷಾಂತ್ಯಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು ರೆಸಾರ್ಟ್, ಹೋಂಸ್ಟೇಗಳು ಈಗಾಗಲೇ ತುಂಬಿ ತುಳುಕುತ್ತಿವೆ. ಇದು ಒಂದೆಡೆ ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದವರಲ್ಲಿ ಸಂತಸ ಮೂಡಿಸಿದ್ರೆ, ಇನ್ನೊಂದೆಡೆ ಕೊರೊನಾ, ಒಮಿಕ್ರಾನ್ ಆತಂಕಕ್ಕೂ ಕಾರಣವಾಗಿದೆ.  

"

ಉತ್ತರಕನ್ನಡ ಜಿಲ್ಲೆ ಒಂದೆಡೆ ವಿಶಾಲವಾದ ಕರಾವಳಿ ತೀರವನ್ನು ಹೊಂದಿದ್ರೆ, ಇನ್ನೊಂದೆಡೆ ಹಚ್ಚ ಹಸಿರಿನ ತಾಣವನ್ನು ಒಳಗೊಂಡಿರುವ ಕಾರಣ ಇಲ್ಲಿ ಪ್ರವಾಸಿ ತಾಣಗಳಿಗೇನೂ (Tourist Place) ಕೊರತೆ ಇಲ್ಲ. ಹೀಗಾಗಿ ವರ್ಷಾಂತ್ಯ ಬಂತು  ಅಂದ್ರೆ ಸಾಕು ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿನ ಕಡಲತೀರಗಳು, ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ರಜೆಯ ಮಜವನ್ನು ಕಳೆಯಲು ಆಗಮಿಸುತ್ತಾರೆ. ಇಲ್ಲಿನ ವಿವಿಧ ಜಲಸಾಹಸ ಕ್ರೀಡೆಗಳು, ನದಿಯಲ್ಲಿನ ರಿವರ್ ರ್ಯಾಫ್ಟಿಂಗ್, ಕಯಾಕಿಂಗ್ ಸೇರಿದಂತೆ ಹಚ್ಚ ಹಸಿರಿನ ಪರಿಸರದಲ್ಲಿ ಕಾಲ ಕಳೆಯೋದಕ್ಕೆ ಅಂತಾನೇ ರಾಜ್ಯ, ಹೊರರಾಜ್ಯಗಳಿಂದಲೂ ಪ್ರವಾಸಿಗರು ಭೇಟಿ ನೀಡ್ತಾರೆ. ನೂತನ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಮಂದಿ ಪ್ರವಾಸಿಗರು ಈಗಾಗಲೇ ಜಿಲ್ಲೆಯ ರೆಸಾರ್ಟ್, ಹೋಂ ಸ್ಟೇಗಳತ್ತ ಮುಖಮಾಡಿದ್ದು, ಬಹುತೇಕ ಎಲ್ಲವೂ ಈಗಾಗಲೇ ಬುಕ್ಕಿಂಗ್ ಆಗಿವೆ. ಕಳೆದ ವರ್ಷ ಕೊರೊನಾ ಕಾರಣದಿಂದ ಮಂಕಾಗಿದ್ದ ರೆಸಾರ್ಟ್‌ಗಳು ಈ ಬಾರಿ ಪ್ರವಾಸಿಗರ ಆಗಮದಿಂದ ಮತ್ತೆ ಚೇತರಿಕೆ ಕಾಣುತ್ತಿವೆ ಅಂತಾರೆ ರೆಸಾರ್ಟ್ ಸಿಬ್ಬಂದಿ. 

Karwar: ವೀಸಾ ವಿಸ್ತರಣೆಗಾಗಿ ಗೋಕರ್ಣದಲ್ಲಿರುವ ವಿದೇಶಿಗರ ಹರಸಾಹಸ

ಕಳೆದ ವರ್ಷ ಕೊರೊನಾ ಅಬ್ಬರ ಜೋರಾಗಿದ್ದರಿಂದ ರೆಸಾರ್ಟ್, ಹೋಂಸ್ಟೇಗಳು ಬಂದ್ ಆಗಿ ಪ್ರವಾಸಿಗರಿಲ್ಲದೇ ಸಿಬ್ಬಂದಿಗೆ ವೇತನ ನೀಡಲೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವರ್ಷದ ಕೊನೆಯಲ್ಲಿ ಪ್ರವಾಸಿ ತಾಣಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತಾದರೂ, ಕೊರೊನಾ ಆತಂಕದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರ ಆಗಮನವಾಗಿರಲಿಲ್ಲ. ಈ ಬಾರಿ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರೋದು ರೆಸಾರ್ಟ್, ಹೋಂಸ್ಟೇಗಳಿಗೆ ಜೀವ ಬಂದಂತಾಗಿದೆ. 

ಕಳೆದ ತಿಂಗಳು ಜಿಲ್ಲೆಗೆ 29,03,263 ಪ್ರವಾಸಿಗರು ಭೇಟಿ ನೀಡಿದ್ದರೆ, ಈ ತಿಂಗಳಲ್ಲಿ 40 ಲಕ್ಷಕ್ಕೂ ಮಿಕ್ಕಿ ಪ್ರವಾಸಿಗರು ಜಿಲ್ಲೆಗೆ ಭೇಟಿ ಸಾಧ್ಯತೆಯನ್ನು ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ. ಈ ನಡುವೆ ಮಹಾರಾಷ್ಟ್ರ, ಕೇರಳದಲ್ಲಿ ಒಮಿಕ್ರಾನ್ ಆತಂಕವಿರುವ ಹಿನ್ನೆಲೆ ಹೊರರಾಜ್ಯಗಳಿಂದ ಆಗಮಿಸುವವರ ಮೇಲೆ ಜಿಲ್ಲಾಡಳಿತ ನಿಗಾ ಇರಿಸಿದ್ದು ಪ್ರವಾಸಿಗರ ನೆಗೆಟಿವ್ ವರದಿ ಪಡೆಯುವಂತೆ ಮಾಲಕರಿಗೆ ಸೂಚನೆ ನೀಡಿದೆ. ಆದರೆ, ರಾಜ್ಯ ಸರಕಾರ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಿರೋದ್ರಿಂದ ಪ್ರವಾಸೋದ್ಯಮವನ್ನೇ ನಂಬಿದ್ದವರಿಗೆ ಚಾಟಿ ಬೀಸಿದಂತಾಗಿದ್ರೂ, ರೆಸಾರ್ಟ್ ವ್ಯಾಪ್ತಿಗಳಲ್ಲಿ ಪ್ರವಾಸಿಗರ ಮನೋರಂಜನೆಗಾಗಿ ಸಣ್ಣ ಸಣ್ಣ ಪಾರ್ಟಿಗಳನ್ನು ಆಯೋಜಿಸಲಾಗಿದೆ. 

Uttara Kannada: ಹೆಣ್ಣು ಮಕ್ಕಳು ನಾಪತ್ತೆ ಕೇಸ್ ಹೆಚ್ಚಳ, ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೊವು.!

ಒಟ್ಟಿನಲ್ಲಿ ಕೊರೊನಾದಿಂದಾಗಿ ಕಳೆದ ಬಾರಿ ನೆಲಕಚ್ಚಿದ್ದ ಪ್ರವಾಸೋದ್ಯಮಕ್ಕೆ ಈ ಬಾರಿ ಕೊಂಚ ಜೀವ ಬಂದಂತಾಗಿದೆ. ಈಗಾಗಲೇ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಗಾಗಿ ಜಿಲ್ಲೆಯಲ್ಲಿ ಬಂದು ತಂಗಿರುವ ಪ್ರವಾಸಿಗರಂತೂ ಸರಕಾರದ ನಿಯಮಗಳ ನಡುವೆಯೂ ಸಣ್ಣ ಮಟ್ಟಿನಲ್ಲಾದ್ರೂ ಎಂಜಾಯ್ ಮಾಡಿಕೊಂಡು ತೆರಳಲು ಯೋಜನೆ ಹಾಕಿಕೊಂಡಿರೋದು ಮಾತ್ರ ಸುಳ್ಳಲ್ಲ.

Follow Us:
Download App:
  • android
  • ios