ಭಾರತದ ರೈಲು, ಟೈಂ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತೆ. ನಿಗದಿತ ಸಮಯಕ್ಕೆ ಬರದ ಟ್ರೈನ್ ಗೆ ಪ್ರಯಾಣಿಕರು ಒಂದಿಷ್ಟು ಹಿಡಿಶಾಪ ಹಾಕಿ ಸುಮ್ಮನಾಗ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಗ್ರಾಹಕ ವೇದಿಕೆಗೆ ಅರ್ಜಿ ಸಲ್ಲಿಸಿ, ಮೂರು ವರ್ಷ ಹೋರಾಡಿದ್ದಾನೆ.   

ಭಾರತೀಯ ರೈಲುಗಳು (Indian trains) ತಡವಾಗಿ ಬರೋದು ಹೊಸದೇನಲ್ಲ. ಅರ್ಧ ಗಂಟೆ, ಒಂದು ಗಂಟೆ ತಡವಾಗಿ ಬರೋದು ಮಾಮೂಲಿ. ಇದೇ ಕಾರಣಕ್ಕೆ ಜನರು, ತುರ್ತು ಸಂದರ್ಭದಲ್ಲಿ ರೈಲಿನ ಪ್ರಯಾಣ ಆಯ್ಕೆ ಮಾಡಿಕೊಳ್ಳುವುದಿಲ್ಲ. ಎರಡು – ಮೂರು ಗಂಟೆ ರೈಲು ತಡವಾಗಿ ಬಂದು ನಮ್ಮೆಲ್ಲ ಕೆಲಸ ಹಾಳಾಗ್ತಾನೆ ಇರುತ್ತೆ. ಆದ್ರೆ ಲಾಯರ್ ಒಬ್ಬರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ರೈಲು, ಮೂರು ಗಂಟೆ ಲೇಟಾಗಿ ಬಂದ ಕಾರಣ ಗ್ರಾಹಕ ವೇದಿಕೆ ಮೊರೆ ಹೋಗಿದ್ದರು. ಮೂರು ವರ್ಷಗಳ ನಂತ್ರ ಕೊನೆಗೂ ನ್ಯಾಯ ಸಿಕ್ಕಿದೆ. ಆದ್ರೆ ಗ್ರಾಹಕ ವೇದಿಕೆ (consumer forum) ನೀಡಿದ ಪರಿಹಾರದ ಹಣ ಮಾತ್ರ ಅಚ್ಚರಿ ಹುಟ್ಟಿಸುವಂತಿದೆ.

Add Asianetnews Kannada as a Preferred SourcegooglePreferred

ಜಬಲ್ಪುರದ ನಿವಾಸಿ ಅರುಣ್ ಕುಮಾರ್ ಜೈನ್, ಮಾರ್ಚ್ 11, 2022 ರಂದು ಜಬಲ್ಪುರದಿಂದ ದೆಹಲಿಯ ಹಜರತ್ ನಿಜಾಮುದ್ದೀನ್ ಗೆ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸುವವರಿದ್ದರು. ರೈಲಿನ ಸಮಯ ಮಧ್ಯಾಹ್ನ 3.30 ಆಗಿತ್ತು. ಅದು ಮಾರ್ಚ್ 12 ರಂದು ಬೆಳಿಗ್ಗೆ 4 ಗಂಟೆ 10 ನಿಮಿಷಕ್ಕೆ ಹಜರತ್ ನಿಜಾಮುದ್ದೀನ್ ನಿಲ್ದಾಣವನ್ನು ತಲುಪಬೇಕಿತ್ತು. ಆದರೆ ರೈಲು ಸುಮಾರು 3 ಗಂಟೆ ವಿಳಂಬವಾಗಿ ಬಂದಿದೆ. ಇದರಿಂದಾಗಿ ಅರುಣ್ ತಮ್ಮ ಮುಂದಿನ ಕನೆಕ್ಷನ್ ತಪ್ಪಿಸಿಕೊಂಡರು. ರೈಲ್ವೆಯ ಈ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿದ ಅರುಣ್ ಕುಮಾರ್ ಜೈನ್, ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದರು. ಸುಮಾರು ಮೂರು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ ಅರುಣ್ ಕುಮಾರ್ ಗೆ ಇದೀಗ ನ್ಯಾಯ ಸಿಕ್ಕಿದೆ.

ರೈಲ್ವೆ ಟಿಕೆಟ್ ಬುಕಿಂಗ್‌ಗೆ IRCTC ಆ್ಯಪ್ ಬಳಸೋ ಮುನ್ನ ಎಚ್ಚರ, ವಂಚಿಸಬಹುದು ಹುಷಾರು!

ಯಾವುದೇ ಸಮಸ್ಯೆ ಆಗ್ಬಾರದು ಎನ್ನುವ ಕಾರಣಕ್ಕೆ ಒಂದು ರೈಲಿನಿಂದ ಇನ್ನೊಂದು ರೈಲಿನ ಮಧ್ಯೆ ಸುಮಾರು ಮೂರು ಗಂಟೆಗಳ ಅಂತರ ಇಟ್ಕೊಂಡು, ಅರುಣ್ ಕುಮಾರ್ ಟ್ರೈನ್ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ ಮೊದಲೇ ಟ್ರೈನ್ 3 ಗಂಟೆ ತಡವಾಗಿ ಬಂದಿದ್ದರಿಂದ ಅವರ ಎಲ್ಲ ಪ್ಲಾನ್ ಉಲ್ಟಾ ಆಯ್ತು. ಇದಕ್ಕೆಲ್ಲ ರೈಲ್ವೆ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಅವರು ವಾದಿಸಿದ್ದರು. 

ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಕೂಡ ತನ್ನ ವಾದವನ್ನು ಮಂಡಿಸಿತ್ತು. ಆದ್ರೆ ಯಾವುದೇ ಸೂಕ್ತ ದಾಖಲೆಯನ್ನು ನೀಡಲು ಸಾಧ್ಯವಾಗ್ಲಿಲ್ಲ. ಮೂರು ವರ್ಷಗಳ ನಂತ್ರ ಗ್ರಾಹಕ ವೇದಿಕೆ, ರೈಲ್ವೆ ಇಲಾಖೆಯನ್ನು ದೋಷಿಯಾಗಿ ಮಾಡಿದೆ. ಫೋರಂ ರೈಲ್ವೆಗೆ 7 ಸಾವಿರ ರೂಪಾಯಿ ದಂಡ ವಿಧಿಸಿದೆ. ಇದರಲ್ಲಿ ಟಿಕೆಟ್ ಮರುಪಾವತಿಯಾಗಿ 803.60 ರೂಪಾಯಿ ಸೇರಿದೆ. ಮಾನಸಿಕ ಹಿಂಸೆ ನೀಡಿದ್ದಕ್ಕೆ 5,000 ರೂಪಾಯಿ, ಪ್ರಕರಣದ ವಿಚಾರಣೆ ವೆಚ್ಚವಾಗಿ 2,000 ರೂಪಾಯಿ ನೀಡುವಂತೆ ಗ್ರಾಹಕ ವೇದಿಕೆ ಸೂಚಿಸಿದೆ. ಅಷ್ಟೇ ಅಲ್ಲ, 45 ದಿನಗಳೊಳಗೆ ದಂಡದ ಮೊತ್ತವನ್ನು, ವಕೀಲರಿಗೆ ಪಾವತಿ ಮಾಡುವಂತೆ ರೈಲ್ವೇ ಇಲಾಖೆಗೆ ಸೂಚನೆ ನೀಡಲಾಗಿದೆ. ವಾರ್ಷಿಕ ಶೇಕಡಾ 9ರ ಬಡ್ಡಿದರಲ್ಲಿ ಹಣ ಪಾವತಿ ಮಾಡುವಂತೆ ಆದೇಶ ನೀಡಲಾಗಿದೆ. ಈ ಪ್ರಕರಣವು ಪ್ರಯಾಣಿಕರ ಹಕ್ಕುಗಳ ರಕ್ಷಣೆಗೆ ಪ್ರಮುಖ ಉದಾಹರಣೆಯಾಗಿದೆ. 

ಹಬ್ಬಕ್ಕೆ ವಿಮಾನದಲ್ಲೇ ಹೋಗಿ, 1000 ರೂ.ಉಳಿಸಿ – ಇಲ್ಲಿದೆ ಭರ್ಜರಿ ಆಫರ್

ದೂರು ಸಲ್ಲಿಸೋದು ಹೇಗೆ? : ಲ್ಯಾಪ್ ಟಾಪ್ ಅಥವಾ ಫೋನ್‌ನಲ್ಲಿ https://railmadad ಇಲ್ಲವೆ indianrailways.gov.in/madad/final/home.jsp ಗೆ ಭೇಟಿ ನೀಡಿ ಅಲ್ಲಿ ದೂರು ಸಲ್ಲಿಸಬಹುದು. ರೈಲುಗಳಿಗೆ ಸಂಬಂಧಿಸಿದ ದೂರು ಸಲ್ಲಿಸಲು, ರೈಲು ದೂರು ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಒಟಿಪಿ ಪಡೆಯಬೇಕು. ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು. ನಂತ್ರ ಪಿಎಎನ್ ಆರ್ ಸಂಖ್ಯೆ ಮತ್ತು ದೂರಿನ ಪ್ರಕಾರವನ್ನು ನಮೂದಿಸಬೇಕು. ಉಪ ಪ್ರಕಾರವನ್ನು ಆಯ್ಕೆಮಾಡಿ ಮತ್ತು ಘಟನೆ ಡೇಟಾವನ್ನು ನಮೂದಿಸಿ. ದೂರಿಗೆ ಸಂಬಂಧಿಸಿದ ಫೋಟೋ ಅಥವಾ ವೀಡಿಯೊ ಅಪ್ಲೋಡ್ ಮಾಡಿ. ದೂರಿನ ಸಂಕ್ಷಿಪ್ತ ವಿವರ ಬರೆಯಬೇಕು. ನಂತ್ರ ಅದನ್ನು ಸಲ್ಲಿಸಬೇಕು.