ಚಾರ್‌ಧಾಮ್ ಯಾತ್ರೆ ಬಗ್ಗೆ ಬಹಳಷ್ಟು ಜನ ಕೇಳಿರುತ್ತೀರಿ. ಆದರೆ ಆ ಬಗ್ಗೆ ಹೆಚ್ಚಿನ ವಿವರಗಳು ಗೊತ್ತಿರುವುದಿಲ್ಲ. ಚಾರ್‌ ಎಂದರೆ ನಾಲ್ಕು ಎಂದರ್ಥ. ಧಾಮ್ ಎಂದರೆ ಸ್ಥಳ. ಹೀಗೆ ನಾಲ್ಕು ಪವಿತ್ರ ಸ್ಥಳಗಳ ಒಕ್ಕೂಟವೇ ಚಾರ್‌ಧಾಮ್. ಈ ಯಾತ್ರೆ ಮೋಕ್ಷದ ಹಾದಿ ಎಂಬುದು ನಂಬಿಕೆ. 

ಚಾರ್‌ಧಾಮ್ ತೀರ್ಥಯಾತ್ರೆ ಬಹುತೇಕ ಹಿಂದೂ ಭಕ್ತರ ಕನಸು. ಬಹಳ ಕ್ಲಿಷ್ಟಕರವಾದ ಹಾದಿ ಸವೆಸಿ ಹೋಗಬೇಕಾದ ಈ ಯಾತ್ರೆಯು ಅಷ್ಟೇ ಪುಣ್ಯ ನೀಡುವಂಥದು ಎಂಬ ನಂಬಿಕೆ ಭಕ್ತರದು. ಮನುಷ್ಯ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಈ ನಾಲ್ಕು ಕ್ಷೇತ್ರಗಳ ದರ್ಶನ ಮಾಡಿದರೆ ಎಲ್ಲ ಪಾಪ ಕರ್ಮಗಳಿಂದ ಮುಕ್ತನಾಗಿ ಭಗವಂತನ ಕೃಪೆಗೆ ಪಾತ್ರನಾಗುತ್ತಾನೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.

Add Asianetnews Kannada as a Preferred SourcegooglePreferred

ದೇಶದ ಪ್ರವಾಸೋದ್ಯಮ ವಲಯಕ್ಕೆ ವರವಾಗಿರುವ ಸ್ಮಾರಕಗಳು! .

ಇಷ್ಟಕ್ಕೂ ಚಾರ್‌ಧಾಮ್ ಎಂದರೆ ಹೆಸರೇ ಹೇಳುವಂತೆ ನಾಲ್ಕು ಪವಿತ್ರ ಸ್ಥಳಗಳ ಸಂಗಮ. ಈ ಯಾತ್ರೆಯಲ್ಲಿ ಬೇರೆಬೇರೆ ದೇವರ ದರ್ಶನ ಮಾಡುವ ಬಯಕೆಯೊಂದಿಗೆ ಉತ್ತರಾಖಂಡದ ಯಮುನೋತ್ರಿಯಿಂದ ಆರಂಭಗೊಂಡು ಗಂಗೋತ್ರಿ, ಕೇದಾರನಾಥ ಹಾಗೂ ಬದ್ರಿನಾಥ್ ಕ್ಕೆ ಭೇಟಿ ನೀಡಲಾಗುತ್ತದೆ. ಈ ಹಾದಿಯಲ್ಲಿ ಪ್ರಮುಖ ನದಿಗಳಾದ ಯಮುನಾ, ಗಂಗಾ, ಮಂದಾಕಿನಿ ಹಾಗೂ ಅಲಕನಂದಾ ನದಿಗಳು ಸಿಗುತ್ತವೆ. ಕೇದಾರನಾಥ, ಬದರಿನಾಥಕ್ಕೆ ತೆರಳುವ ಮುನ್ನ ಗಂಗಾ, ಯಮುನಾ ನದಿಯ ತೀರ್ಥವನ್ನು ತಮ್ಮೊಂದಿಗೆ ಕೊಂಡೊಯ್ದು ಅಲ್ಲಿ ಅಭಿಷೇಕಕ್ಕೆ ನೀಡುವುದು ಪದ್ಧತಿ.

ಯಾತ್ರಾ ಸಮಯ

ಸಾಮಾನ್ಯವಾಗಿ ಮೇನಿಂದ ಅಕ್ಟೋಬರ್‌ವರೆಗೆ ಮಾತ್ರ ಚಾರ್‌ಧಾಮ್‌ ಯಾತ್ರೆ ಕೈಗೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ಹಲವಾರು ಪ್ಯಾಕೇಜ್‌ಗಳು ಕೂಡಾ ಲಭ್ಯವಿರುತ್ತವೆ. ಹೃಷಿಕೇಶ, ಹರಿದ್ವಾರ, ಕೋಟದ್ವಾರ್‌ ಮತ್ತು ಡೆಹ್ರಾಡೂನ್‌ಗೆ ಸಾಕಷ್ಟು ರೈಲಿನ ಸಂಪರ್ಕಗಳಿವೆ.

ಇದೇನು ಅಚ್ಚರಿ! ದೆಹಲಿಯಲ್ಲಿ ಟಾಯ್ಲೆಟ್ ಗಾಗಿಯೇ ಇದೆ ಒಂದು ಮ್ಯೂಸಿಯಂ!

ಡೆಹ್ರಾಡೂನ್‌ ಸಮೀಪದ ವಿಮಾನ ನಿಲ್ದಾಣ. ರೈಲು, ವಿಮಾನ ಪ್ರಯಾಣ ಬೋರಾಗಿದ್ದಲ್ಲಿ ದೆಹಲಿ, ಡೆಹ್ರಾಡೂನ್‌, ಪಾಟ್ನಾ, ರುದ್ರಪ್ರಯಾಗದಿಂದ ಕೇದಾರನಾಥ ಮತ್ತು ಬದರಿನಾಥ್‌ಗೆ ತೆರಳಲು ಹೆಲಿಕಾಪ್ಟರ್‌ ಸೌಲಭ್ಯ ಕೂಡಾ ಇದೆ. ಜಗತ್ತಿನ ಉದ್ದಗಲದಿಂದ ಲಕ್ಷಾಂತರ ಭಕ್ತರು ಈ ಸಂದರ್ಭದಲ್ಲಿ ಈ ನಾಲ್ಕು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಅಕ್ಟೋಬರ್‌ನಿಂದ ಮೇವರೆಗೆ ಈ ಪ್ರದೇಶಗಳು ಸಂಪೂರ್ಣ ಹಿಮದಿಂದ ಆವೃತವಾಗುವ ಕಾರಣ ರಸ್ತೆ ಮುಚ್ಚಲಾಗಿರುತ್ತದೆ. 

ಯಮುನೋತ್ರಿ

ಹಿಮಾಲಯದ ಪಶ್ಚಿಮ ಭಾಗದಲ್ಲಿರುವ ಯಮುನೋತ್ರಿ ಪವಿತ್ರ ನದಿ ಎನಿಸಿಕೊಂಡ ಯಮುನೆಯ ಉಗಮ ಸ್ಥಾನ. ಇಲ್ಲಿನ ಜಂಕಿ ಚಟ್ಟಿಯಲ್ಲಿ ನೈಸರ್ಗಿಕ ಬಿಸಿನೀರ ಬುಗ್ಗೆ ಸೂರ್ಯಕುಂಡ ಉಕ್ಕುತ್ತದೆ. ಯಮನ ತಂಗಿ ಯಮುನಾದೇವಿಯ ದೇವಾಲಯಕ್ಕೆ ನಡಿಗೆ ಆರಂಭಿಸುವ ಮುನ್ನ ಭಕ್ತರು ಈ ಬಿಸಿನೀರ ಬುಗ್ಗೆಯಲ್ಲಿ ಮುಳುಗೇಳುವುದು ಸಂಪ್ರದಾಯ. ಬಹಳ ಹಿಂದೆ ಮಹಾರಾಜಾ ಪ್ರತಾಪ್ ಸಿಂಗ್ ಈ ಯಮುನೆ ನದಿ ತಟದಲ್ಲಿ ತಾಯಿ ಯಮುನೆಗಾಗಿ ದೇವಾಲಯ ಕಟ್ಟಿಸಿದ. ಇದು ಸಮುದ್ರಮಟ್ಟದಿಂದ 3293 ಮೀಟರ್ ಎತ್ತರದಲ್ಲಿದೆ. 

ಗಂಗೋತ್ರಿ

ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಗಂಗೋತ್ರಿಯು ದೇಶದ ಮಹಾ ನದಿ ಗಂಗೆಯ ಉಗಮಸ್ಥಾನ. ಈ ಕ್ಷೇತ್ರವು ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು ಭಗೀರತಿ ನದಿ ತಟದಲ್ಲಿ ನೆಲೆಸಿದೆ. ಅದೇ ಕಾರಣಕ್ಕೆ ಈ ಕ್ಷೇತ್ರ ಕಣ್ಣಿಗೂ ಮನಸ್ಸಿಗೂ ಹಬ್ಬ. ಸ್ವಚ್ಛ ಗಾಳಿಯ ಸೇವನೆ ಹಿತ ನೀಡುತ್ತದೆ. ಯಮುನಾ ದೇವಾಲಯ ತೆರೆದ ದಿನವೇ ಗಂಗೆಗಾಗಿ ಇಲ್ಲಿರುವ ದೇವಾಲಯದ ಬಾಗಿಲನ್ನೂ ತೆರೆಯಲಾಗುತ್ತದೆ. ಇಲ್ಲಿ ಗಂಗ್‌ನಾನಿ, ಕೇದಾರ್‌ತಲ್, ಭೋಜ್‌ಬಾಸಾ, ಭೈರೋಂಗಟಿ, ಜಲಮಗ್ನ ಶಿವಲಿಂಗ, ತಪೋವನ ಮುಂತಾದ ಪವಿತ್ರ ಸ್ಥಳಗಳಿವೆ. 

ದೇಶದಲ್ಲೇ ಅತಿ ಉದ್ದದ ರೈಲುಗಳಿವು; ನೀವು ಪಯಾಣಿಸಿದ್ದೀರಾ?

ಗೋಮುಖ್

ಗಂಗೋತ್ರಿ ದೇವಾಲಯದಿಂದ 9 ಕಿಲೋಮೀಟರ್ ದೂರದಲ್ಲಿ ಗೋಮುಖವೆಂಬ ಹಿಮನದಿ ಸಿಗುತ್ತದೆ. ಇದೇ ಗಂಗಾ ಮೂಲ. ಈ ಗಂಗೆಯು ದೇವಪ್ರಯಾಗದಲ್ಲಿ ಅಲಕನಂದಾ ಜೊತೆ ಸಂಗಮವಾಗುತ್ತಾಳೆ. 

ಬದ್ರಿನಾಥ್

ಅಲಕನಂದಾ ನದಿಯ ಎಡದಲ್ಲಿರುವ ಬದ್ರಿನಾಥ ವಿಷ್ಣುವಿನ ದೇವಾಲಯ ಹೊಂದಿದೆ. ಆದರೆ, ಮೂಲತಃ ಈ ದೇವಾಯಲವಿದ್ದುದು ಗರುಡ ಗುಹೆಯೊಳಗೆ. ಆದಿ ಶಂಕರಾಚಾರ್ಯರು ಇದನ್ನಿಲ್ಲಿ ಗುರುತಿಸಿ್ದ್ದರು. ಆದರೆ, 8ನೇ ಶತಮಾನದ ಹೊತ್ತಿಗೆ ಬದ್ರಿಯ ಮೂರ್ತಿ ಅಲ್ಲಿಂದ ಕಣ್ಮರೆಯಾಗಿತ್ತು. ನಂತರ ರಾಮಾನುಜಾಚಾರ್ಯರು ವಿಷ್ಣುವನ್ನು ಮತ್ತೆ ಗರುಡ ಗುಹೆಯಲ್ಲಿ ಪ್ರತಿಷ್ಠಾಪಿಸಿದರು. ಈ ಬಾರಿ ಕೂಡಾ ಮೂರ್ತಿ ಮಾಯವಾಯಿತು. ನಂತರದಲ್ಲಿ 16ನೇ ಶತಮಾನದಲ್ಲಿ ಘರ್‌ವಾಲ್‌ನ ರಾಜ ಬದ್ರಿನಾಥದಲ್ಲಿ ಪ್ರಸ್ತುತ ಇರುವ ದೇವಾಲಯ ಕಟ್ಟಿಸಿ ವಿಷ್ಣುವನ್ನು ಪ್ರತಿಷ್ಠಾಪಿಸಿದರು. 

ಈ ದೇವಾಲಯದ ಹತ್ತಿರದಲ್ಲಿ ವ್ಯಾಸ ಗುಹೆ ಇದ್ದು, ಇಲ್ಲಿಯೇ ವ್ಯಾಸ ಮಹರ್ಷಿಗಳು ವೇದವನ್ನು ನಾಲ್ಕು ಭಾಗಗಳಾಗಿಸಿ, 18 ಪುರಾಣಗಳನ್ನು ರಚನೆ ಮಾಡಿದ್ದು. ಭಾರತದ ಕಟ್ಟಕಡೆಯ ಹಳ್ಳಿ-ಮನ ಹಳ್ಳಿ ಇಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಯಾತ್ರಿಕರು ಮನ ಹಳ್ಳಿಯನ್ನು ದಾಟಿ ಸತೋಪಂತ್ ಕೆರೆವರೆಗೆ ಚಾರಣ ಮಾಡುತ್ತಾರೆ.

ಕೇದಾರನಾಥ್

ಸಾವಿರಾರು ವರ್ಷ ಹಳೆಯ ಈ ದೇವಾಲಯ ಎತ್ತರದ ಪರ್ವತ ಪ್ರದೇಶದಲ್ಲಿದೆ. ಇಲ್ಲಿಗೆ ಹೋಗಲು ಕ್ಲಿಷ್ಟ ಹಾದಿಯನ್ನು ಸವೆಸಬೇಕು ಇಲ್ಲವೇ ಪೋನಿ ರೈಡ್ ಮೂಲಕ ಹೋಗಬಹುದು(ಕುದುರೆಗಳ ಮೇಲೆ) . ಶಿವನು ಇಲ್ಲಿ ಲಿಂಗ ರೂಪದಲ್ಲಿದ್ದಾನೆ. ಹತ್ತಿರದಲ್ಲಿ ಆದಿ ಶಂಕರಾಚಾರ್ಯರ ಸಮಾಧಿ, ಕಾಳೀಮಠ, ಗೌರಿಕುಂಡ್ ಹಾಗೂ ಸೋನ್‌ಪ್ರಯಾಗ್‌ಗಳಿವೆ.