ನೇಪಾಳದಲ್ಲಿ ಪ್ರವಾಹ ಸಂತ್ರಸ್ತರ ನೆರವಿನ ಹೆಸರಿನಲ್ಲಿ ವಂಚನೆ ಎಸಗಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ChatGPT ಬಳಸಿ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ದೇಣಿಗೆ ನೀಡಿದ ನಕಲಿ ರಸೀದಿ ಸೃಷ್ಟಿಸಿ, ತನ್ನ ವೈಯಕ್ತಿಕ QR ಕೋಡ್ ಬಳಸಿ ಹಣ ಸಂಗ್ರಹಿಸುತ್ತಿದ್ದ. ಈ ಬಗ್ಗೆ ನೇಪಾಳ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು, ಎಐ ತಂತ್ರಜ್ಞಾನದ ನೆರವಿನಿಂದ ಸಾರ್ವಜನಿಕರನ್ನು ವಂಚಿಸಲು ಯತ್ನಿಸಿದ 32 ವರ್ಷದ ವ್ಯಕ್ತಿಯೊಬ್ಬನನ್ನು ನೇಪಾಳ ಪೊಲೀಸರು ಬಂಧಿಸಿದ್ದಾರೆ.

ChatGPT ಬಳಸಿ ನಕಲಿ ರಸೀದಿ ಸೃಷ್ಟಿ!

ರಾಮೆಚಾಪ್ ಜಿಲ್ಲೆಯ ಗೋಕುಲಗಂಗಾ ಗ್ರಾಮೀಣ ಪುರಸಭೆಯ ಭಗವಾನ್ ಕರ್ಕಿ ಎಂಬಾತ ಈ ಕೃತ್ಯ ಎಸಗಿದ ಆರೋಪಿ. ಈತ ನೇಪಾಳ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 1,20,000 ನೇಪಾಳಿ ರೂಪಾಯಿ (ಸುಮಾರು ₹75,000) ದೇಣಿಗೆ ನೀಡಿರುವುದಾಗಿ ಹೇಳಿಕೊಳ್ಳುವ ನಕಲಿ ಸ್ವೀಕೃತಿ ಪತ್ರವನ್ನು ChatGPT ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ್ದ.

ನಂತರ, ಈ ನಕಲಿ ರಸೀದಿಯ ಜೊತೆಗೆ ತನ್ನ ವೈಯಕ್ತಿಕ QR ಕೋಡ್ ಅನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಇದನ್ನು ಕಂಡ ಸಾರ್ವಜನಿಕರು ಹಾಗೂ ದಾನಿಗಳು ಇದು ಸರ್ಕಾರಿ ಅಧಿಕೃತ ಖಾತೆಯೆಂದೇ ಭಾವಿಸಿ ಆತನ ಖಾತೆಗೆ ಹಣ ವರ್ಗಾಯಿಸಿದ್ದರು. ಆರೋಪಿಯ ಈ ಆನ್‌ಲೈನ್ ವಂಚನೆ ಜಾಲವನ್ನು ಪತ್ತೆಹಚ್ಚಿದ ಪೊಲೀಸರು ಆತನನ್ನು ಬಂಧಿಸಿ, ತನಿಖೆ ಚುರುಕುಗೊಳಿಸಿದ್ದಾರೆ.

ವ್ಯಾಪಕವಾಗುತ್ತಿದೆ ಸೋಶಿಯಲ್ ಮೀಡಿಯಾ ವಂಚನೆ ಜಾಲ

ಇತ್ತೀಚೆಗೆ ನೇಪಾಳದ ರಸುವಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ಜಾಗತಿಕ ಮಟ್ಟದಲ್ಲಿ ನಿಧಿ ಸಂಗ್ರಹಣೆ ನಡೆಯುತ್ತಿದೆ. ಇದನ್ನೇ ಹಾದಿ ತಪ್ಪಿಸಲು ಹಲವು ನಕಲಿ ಸಾಮಾಜಿಕ ಜಾಲತಾಣ ಖಾತೆಗಳು ಸೃಷ್ಟಿಯಾಗಿವೆ.

ಇಂಡಿಯಾ ಟುಡೇ ನಡೆಸಿದ ತನಿಖೆಯಲ್ಲಿ, ಪ್ರವಾಹ ಸಂತ್ರಸ್ತರ ನೆರವಿನ ಹೆಸರಿನಲ್ಲಿ ಹೊಸದಾಗಿ ರಚಿಸಲಾದ ಅಥವಾ ಮರುನಾಮಕರಣಗೊಂಡ ಹಲವು ಖಾತೆಗಳು ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್‌ಗಳನ್ನು ಪ್ರಚಾರ ಮಾಡುತ್ತಿರುವುದು ಪತ್ತೆಯಾಗಿದೆ.

ನೇಪಾಳ ಸರ್ಕಾರದ ಎಚ್ಚರಿಕೆ ಮತ್ತು ಮಾರ್ಗದರ್ಶಿ:

ಆಗಸ್ಟ್ 30 ರ ವೇಳೆಗೆ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 5 ಬಿಲಿಯನ್ NPR (ನೇಪಾಳಿ ರೂಪಾಯಿ) ಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ರೇಡಿಯೋ ನೇಪಾಳ ವರದಿ ಮಾಡಿದೆ. ಅನಧಿಕೃತ ವೈಯಕ್ತಿಕ ಬ್ಯಾಂಕ್ ಖಾತೆಗಳು, ಇ-ವ್ಯಾಲೆಟ್‌ಗಳು, ನಕಲಿ ಸರ್ಕಾರಿ ಲೋಗೋಗಳು ಮತ್ತು ಪರಿಚಯವಿಲ್ಲದ QR ಕೋಡ್‌ಗಳನ್ನು ನಂಬಿ ಹಣ ವರ್ಗಾಯಿಸದಂತೆ ಪೊಲೀಸರು ಜಾಗೃತಿ ಮೂಡಿಸಿದ್ದಾರೆ. ದೇಣಿಗೆ ನೀಡುವ ಮುನ್ನ ಪ್ರಧಾನ ಮಂತ್ರಿಗಳ ಕಚೇರಿ ಅಥವಾ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾದ ಬ್ಯಾಂಕ್ ವಿವರಗಳನ್ನು ಮಾತ್ರ ಬಳಸುವಂತೆ ನೇಪಾಳ ಸರ್ಕಾರ ಮನವಿ ಮಾಡಿದೆ.