Parrot astrology for Karnataka CM :ಮಂಡ್ಯದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುமார் ಮುಂದಿನ ಮುಖ್ಯಮಂತ್ರಿಯಾಗುತ್ತಾರೆಯೇ ಎಂದು ತಿಳಿಯಲು ಬಿಜೆಪಿ ಕಾರ್ಯಕರ್ತರು ಗಿಳಿ ಶಾಸ್ತ್ರದ ಮೊರೆ ಹೋಗಿದ್ದಾರೆ. ಪಂಜರದಿಂದ ಹೊರಬಂದ ಗಿಳಿಯು 'ಚೊಂಬು' ಮತ್ತು 'ಚೆಂಡು ಹೂವು'  ಕಾರ್ಡ್‌ ತೋರಿಸಿದೆ.

ಮಂಡ್ಯ (ನ.24): ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆಯ (ಪವರ್‌ಶೇರಿಂಗ್) ಕಿತ್ತಾಟ ತಾರಕಕ್ಕೇರಿರುವ ಬೆನ್ನಲ್ಲೇ, ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕೀಯ ಹೈಡ್ರಾಮಾ ಮತ್ತು ವ್ಯಂಗ್ಯದ ಪ್ರಸಂಗವೊಂದು ನಡೆದಿದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರಾ ಎಂಬ ಪ್ರಶ್ನೆಗೆ ಬಿಜೆಪಿ ಕಾರ್ಯಕರ್ತರು 'ಗಿಳಿ ಶಾಸ್ತ್ರ'ದ ಮೊರೆ ಹೋಗಿದ್ದು, ಫಲಿತಾಂಶ ಕಂಡು ದಂಗಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆಶಿಗೆ ಚೊಂಬೇ ಗತಿ : ಗಿಳಿ ಭವಿಷ್ಯ

​ಮಂಡ್ಯದ ನಗರಸಭೆ ಕಚೇರಿ ಮುಂಭಾಗ ಕುಳಿತಿದ್ದ ಗಿಳಿಶಾಸ್ತ್ರ ಹೇಳುವ ವ್ಯಕ್ತಿಯ ಬಳಿ ತೆರಳಿದ ಬಿಜೆಪಿ ಕಾರ್ಯಕರ್ತರು, ಎಂದಿನ ಸಂಪ್ರದಾಯದಂತೆ ಎಲೆ-ಅಡಿಕೆ ಮತ್ತು ದಕ್ಷಿಣೆ ಇಟ್ಟು ಭವಿಷ್ಯ ಕೇಳಿದ್ದಾರೆ. 'ಕರ್ನಾಟಕದ ಮುಂದಿನ ಸಿಎಂ ಯಾರಾಗುತ್ತಾರೆ? ಡಿಕೆಶಿಯವರು ಮುಖ್ಯಮಂತ್ರಿಯಾದರೆ ರಾಜ್ಯಕ್ಕೆ ಒಳ್ಳೆಯದಾಗುತ್ತಾ?' ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಗಿಳಿಶಾಸ್ತ್ರದ ವಿಡಿಯೋ ವೈರಲ್:

​ಪಂಜರದಿಂದ ಹೊರಬಂದ ಗಿಳಿ ತೆಗೆದ ಕಾರ್ಡ್‌ ಅಲ್ಲಿ ನೆರೆದಿದ್ದವರಲ್ಲಿ ಅಚ್ಚರಿ ಮತ್ತು ನಗೆಯುಕ್ಕಿಸಿದೆ. ಗಿಳಿಯು 'ಚೊಂಬು' ಮತ್ತು 'ಚೆಂಡು ಹೂವು' ಇರುವ ಕಾರ್ಡ್‌ಗಳನ್ನು ಆಯ್ದುಕೊಂಡಿದೆ. ಇದನ್ನು ವಿಶ್ಲೇಷಿಸಿದ ಬಿಜೆಪಿ ಕಾರ್ಯಕರ್ತರು, 'ಡಿಕೆಶಿ ಅವರಿಗೆ ಸಿಎಂ ಪಟ್ಟ ಸಿಗುವುದಿಲ್ಲ, ಅವರಿಗೆ ಅಂತಿಮವಾಗಿ ಸಿಗುವುದು 'ಚೊಂಬೇ' ಗತಿ ಎಂದು ಭವಿಷ್ಯ ನುಡಿದು ವ್ಯಂಗ್ಯವಾಡಿದ್ದಾರೆ. ಪ್ರಸ್ತುತ ಈ ಗಿಳಿ ಶಾಸ್ತ್ರದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.