ಅಧಿಕಾರ ಹಂಚಿಕೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್‌ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಿದೆ. ಅಲ್ಲಿಯವರೆಗೆ ತಾಳ್ಮೆ ವಹಿಸುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು : ಅಧಿಕಾರ ಹಂಚಿಕೆ ಅಥವಾ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್‌ ಚರ್ಚಿಸಿ ಸೂಕ್ತ ನಿರ್ಧಾರ ಮಾಡಲಿದೆ. ಅಲ್ಲಿಯವರೆಗೆ ತಾಳ್ಮೆ ವಹಿಸುವಂತೆ ಇಂಧನ ಸಚಿವ ಕೆ.ಜೆ. ಜಾರ್ಜ್‌ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಸಂಧಾನ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Add Asianetnews Kannada as a Preferred SourcegooglePreferred

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಅವರು ವಾಪಸಾದ ಬಳಿಕ ಹೈಕಮಾಂಡ್‌ ಚರ್ಚಿಸಿ ಅಗತ್ಯ ತೀರ್ಮಾನ ಮಾಡಲಿದೆ. ಅಲ್ಲಿಯವರೆಗೆ ಸಮಾಧಾನವಾಗಿದ್ದು, ತಮ್ಮ ಬಣದ ಶಾಸಕರನ್ನೂ ಸಮಾಧಾನಪಡಿಸುವಂತೆ ಶಿವಕುಮಾರ್‌ ಅವರ ಮನವೊಲಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಸಚಿವ ಕೆ.ಜೆ. ಜಾರ್ಜ್‌

ಭಾನುವಾರ ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಸಚಿವ ಕೆ.ಜೆ. ಜಾರ್ಜ್‌ ಅವರು ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿದ್ದರು. ಈ ವೇಳೆ ಯಾವುದೇ ಬಣದ ನಾಯಕರೂ ಅನಗತ್ಯ ವಿವಾದ ಸೃಷ್ಟಿಸಿ ಪ್ರತಿಪಕ್ಷಗಳಿಗೆ ಆಹಾರವಾಗುವುದು ಬೇಡ. ಈ ವಿಚಾರ ವರಿಷ್ಠರ ಮಟ್ಟದಲ್ಲಿ ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಿ ನಿರ್ಧಾರವಾಗಲಿದೆ. ಅಲ್ಲಿಯವರೆಗೆ ಎರಡೂ ಕಡೆಯವರು ತಾಳ್ಮೆ ವಹಿಸುವಂತೆ ಖರ್ಗೆ ಅವರು ಸೂಚಿಸಿದ್ದರು ಎನ್ನಲಾಗಿದೆ.

ಡಿ.ಕೆ. ಶಿವಕುಮಾರ್‌ ಅವರು ಜಾರ್ಜ್‌ ಅಧಿಕೃತ ನಿವಾಸಕ್ಕೆ ಭೇಟಿ

ಜಾರ್ಜ್‌ ಅವರು ಖರ್ಗೆ ಅವರ ಭೇಟಿ ಮಾಡಿ ವಾಪಸಾದ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಾರ್ಜ್‌ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಖರ್ಗೆ ಅವರೊಂದಿಗಿನ ಚರ್ಚೆ ಬಗ್ಗೆ ಜಾರ್ಜ್‌ ತಿಳಿಸಿದ್ದಾರೆ. ಹೈಕಮಾಂಡ್‌ ನಿರ್ಧರಿಸುವವರೆಗೆ ತಾಳ್ಮೆ ವಹಿಸುವಂತೆ ಶಿವಕುಮಾರ್‌ ಅವರ ಮನವೊಲಿಸಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

- ನ.21ಕ್ಕೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 2.5 ವರ್ಷ ಪೂರ್ಣವಾಗಿತ್ತು

- ಹೀಗಾಗಿ ಉಳಿದ ಅವಧಿಗೆ ಡಿಕೆಶಿ ಸಿಎಂ ಮಾಡುವಂತೆ ಅವರ ಆಪ್ತರ ಪಟ್ಟು

- ಇದರ ಬೆನ್ನಲ್ಲೇ ಡಿಕೆಶಿ ನಡೆ ನುಡಿಗಳಿಂದ ಕೂಡ ರಾಜಕಾರಣದಲ್ಲಿ ಸಂಚಲನ

- ಹೀಗಾಗಿ ನಿನ್ನೆ ಸಂಜೆ ಡಿಕೆಶಿ ಮನೆಗೆ ದೌಡಾಯಿಸಿದ ಇಂಧನ ಸಚಿವ ಜಾರ್ಜ್‌

- ಹೈಕಮಾಂಡ್‌ ತೀರ್ಮಾನಿಸುವವರಗೆ ತಾಳ್ಮೆಯಿಂದ ಇರಿ ಎಂದು ಮನವಿ

- ನಿಮ್ಮ ಆಪ್ತ ಶಾಸಕರಿಗೂ ಸುಮ್ಮನಿರಿ ಎಂದು ಹೇಳಿ ಎಂದು ಡಿಕೆಶಿಗೆ ಕೋರಿಕೆ