ಹಳೆ ಮೈಸೂರು ಭಾಗದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಪ್ರಾಬಲ್ಯ ಮೆರೆಯಬೇಕು ಎಂದು ಕೇಸರಿ ಪಡೆ ಪ್ಲಾನ್ ಮೇಲೆ ಪ್ಲಾನ್ ಮಾಡ್ತಿದೆ. ಇದರ ಭಾಗವಾಗಿಯೇ ನಿನ್ನೆ ರಾತ್ರಿ (ಗುರುವಾರ) ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿಳಿದಿದ್ದಾರೆ. 

ಬೆಂಗಳೂರು (ಡಿ.30): ಹಳೆ ಮೈಸೂರು ಭಾಗದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಹೇಗಾದ್ರೂ ಮಾಡಿ ಪ್ರಾಬಲ್ಯ ಮೆರೆಯಬೇಕು ಎಂದು ಕೇಸರಿ ಪಡೆ ಪ್ಲಾನ್ ಮೇಲೆ ಪ್ಲಾನ್ ಮಾಡ್ತಿದೆ. ಇದರ ಭಾಗವಾಗಿಯೇ ನಿನ್ನೆ ರಾತ್ರಿ (ಗುರುವಾರ) ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿಳಿದಿದ್ದಾರೆ. ವಿಶೇಷ ವಿಮಾನದಲ್ಲಿ ‌ಯಲಹಂಕ ಏರ್‌ಪೋರ್ಸ್ ಸ್ಟೇಶನ್‌ಗೆ ಬಂದ ಅಮಿತ್‌ ಶಾರನ್ನು ಸಿಎಂ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡಿದ್ದಾರೆ. ಸದ್ಯ ಯಲಹಂಕ ಏರ್‌ಪೋರ್ಸ್‌ನಿಂದ ತಾಜ್ ವೆಸ್ಟ್ ಎಂಡ್ ಹೋಟೆಲ್‌ಗೆ ಅಮಿತ್ ಶಾ ತೆರಳಿದ್ದಾರೆ. ಇನ್ನು ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ರಸ್ತೆ ಸಂಪೂರ್ಣ ಬಂದ್ ಮಾಡಿದ್ದು, ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿತ್ತು. 

ಮಂಡ್ಯ ನಗರ ಸಂಪೂರ್ಣ ಕೇಸರೀಕರಣ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಕ್ಕರೆ ನಗರ ಸಂಪೂರ್ಣವಾಗಿ ಕೇಸರೀಕರಣಗೊಂಡಿದೆ. ಅಮಿತ್‌ ಶಾ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಜ್ಜುಗೊಂಡಿದೆ. ಮಂಡ್ಯದ ಬೆಂಗಳೂರು-ಮೈಸೂರು ಹೆದ್ದಾರಿ ಕೇಸರಿ ಮಯವಾಗಿದೆ. ರಸ್ತೆಯ ಇಕ್ಕೆಲಗಳಲ್ಲೂ ಬಿಜೆಪಿ ಬಾವುಟ ರಾರಾಜಿಸುತ್ತಿದೆ. ಹೆದ್ದಾರಿಯುದ್ದಕ್ಕೂ ಅಮಿತ್‌ ಶಾಗೆ ಸ್ವಾಗತ ಕೋರುವ ಕಮಲ ನಾಯಕರ ಬೃಹದಾಕಾರದ ಫ್ಲೆಕ್ಸ್‌ಗಳು ತಲೆಎತ್ತಿವೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಪಣ ತೊಟ್ಟು ನಿಂತಂತೆ ಕಂಡುಬರುತ್ತಿದೆ.

ಡಿ.30ಕ್ಕೆ ಮಂಡ್ಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ರ್ಯಾಲಿ

ಕಾರ್ಯಕ್ರಮಕ್ಕೆ 40*80 ಅಳತೆಯ ಬೃಹತ್‌ ವೇದಿಕೆ ಸಜ್ಜುಗೊಂಡಿದೆ. 50 ಸಾವಿರ ಮಂದಿ ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಂಡ್ಯ ವಿಶ್ವವಿದ್ಯಾನಿಲಯದ ಆವರಣದ ವೇದಿಕೆ ಇರುವ ಎಂಟು ಎಲ್‌ಇಡಿ ಸ್ಕ್ರೀನ್‌ ಅಳವಡಿಸಲಾಗುವುದು. ಅದಲ್ಲದೆ ಮೈದಾನದ ಮತ್ತೊಂದು ಬದಿಯಲ್ಲಿ 15 ಸಾವಿರ ಜನರು ಕೂರುವಂತೆ ಶಾಮಿಯಾನ ಹಾಕಲಾಗಿದ್ದು, ಅಲ್ಲಿಗೂ ನಾಲ್ಕು ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿದೆ.

ಅಮಿತ್‌ ಶಾ ಸಂಚರಿಸುವ ರಸ್ತೆಗೆ ಡಾಂಬರು ಭಾಗ್ಯ: ಹಲವಾರು ವರ್ಷಗಳಿಂದ ಹಳ್ಳಗಳಿಂದ ಕೂಡಿದ್ದ ಪಿಇಎಸ್‌ ಇಂಜಿನಿಯರಿಂಗ್‌ ಕಾಲೇಜು ರಸ್ತೆ ಅಭಿವೃದ್ಧಿಯನ್ನೇ ಕಾಣದೆ ನಿರ್ಲಕ್ಷ್ಯಕ್ಕೊಳಗಾಗಿತ್ತು. ಈಗ ಆ ರಸ್ತೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂಚರಿಸುವರೆಂಬ ಕಾರಣಕ್ಕೆ ತರಾತುರಿಯಲ್ಲಿ ಡಾಂಬರು ಭಾಗ್ಯ ಕಾಣುತ್ತಿದೆ. ರಸ್ತೆ ಹಾಳಾಗಿದ್ದರೂ ಡೋಂಟ್‌ ಕೇರ್‌ ಎಂಬಂತಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಗೆ ಡಾಂಬರೀಕರಣಕ್ಕೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಒಂದೇ ದಿನಕ್ಕೆ ರಸ್ತೆಯ ಹಳ್ಳಗಳನ್ನೆಲ್ಲಾ ಮುಚ್ಚಿ ಡಾಂಬರು ರಸ್ತೆಯ ಮೇಲೆಯೇ ಹೊಸದಾಗಿ ಡಾಂಬರೀಕರಣ ಮಾಡುತ್ತಿದ್ದಾರೆ. 

ಸಂಪುಟ, ಮೀಸಲಾತಿ: ಸಿಎಂ, ಅಮಿತ್‌ ಶಾ 2.5 ತಾಸು ಚರ್ಚೆ

ಪಿಇಟಿ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್‌ ನಿರ್ಮಾಣವಾಗಿರುವುದರಿಂದ ಮದ್ದೂರು ತಾಲೂಕು ಗೆಜ್ಜಲಗೆರೆಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಮೆಗಾಡೇರಿಗೆ ಚಾಲನೆ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಲ್ಲಿ ಸಮಾರಂಭ ಮುಗಿಸಿ ಹುಲಿಗೆರೆಪುರ ಹೆಲಿಪ್ಯಾಡ್‌ನಿಂದ ಹೊರಟು ಪಿಇಟಿ ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಬಂದಿಳಿಯುವರು. ಅಲ್ಲಿಂದ ಮಂಡ್ಯ ವಿಶ್ವವಿದ್ಯಾನಿಲಯಕ್ಕೆ ರಸ್ತೆ ಮೂಲಕ ಆಗಮಿಸಲಿರುವುದರಿಂದ ಆ ರಸ್ತೆಗೆ ಡಾಂಬರು ಹಾಕಿ ಅಭಿವೃದ್ಧಿಪಡಿಸಲಾಗಿದೆ.