80ನೇ ಸ್ವಾತಂತ್ರ್ಯ ದಿನದಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯುವಜನರಿಗೆ ಉದ್ಯೋಗ, ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ, ರೈತ ಸಬಲೀಕರಣ ಮತ್ತು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಯೋಜನೆಗಳ ಮೂಲಕ 2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಅವರು ಮುಂದಿಟ್ಟಿದ್ದಾರೆ.

ಬೆಂಗಳೂರು (ಆ.15): ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ (80th Independence Day) ಐತಿಹಾಸಿಕ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಜನತೆಗೆ ಹೊಸ ಆಶಾಕಿರಣ ಮೂಡಿಸುವ ಮಹತ್ತರ ಯೋಜನೆಗಳನ್ನು ಘೋಷಿಸಿದ್ದಾರೆ. ಯುವಜನತೆಯ ಉದ್ಯೋಗ, ಕೃತಕ ಬುದ್ಧಿಮತ್ತೆ (AI) ಆಧಾರಿತ ಶಿಕ್ಷಣ ಕ್ರಾಂತಿ, ರೈತರ ಸಬಲೀಕರಣ, ಬೆಂಗಳೂರಿನ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಹಾಗೂ 2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ (₹320 ಲಕ್ಷ ಕೋಟಿ) ಆರ್ಥಿಕತೆಯನ್ನಾಗಿ ರೂಪಿಸುವ ದೂರದೃಷ್ಟಿಯ ನೀಲನಕ್ಷೆಯನ್ನು ಅವರು ಅನಾವರಣಗೊಳಿಸಿದ್ದಾರೆ.

ಮುಖ್ಯಮಂತ್ರಿಗಳ 80ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಪ್ರಮುಖ ಮುಖ್ಯಾಂಶಗಳು:

1. ನಿರುದ್ಯೋಗಿ ಯುವಜನತೆಗೆ ಸಿಹಿಸುದ್ದಿ: ‘ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ’

ರಾಜ್ಯದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಿಎಂ ಹಲವು ಕ್ರಾಂತಿಕಾರಿ ಕ್ರಮಗಳನ್ನು ಪ್ರಕಟಿಸಿದ್ದಾರೆ:

72,000 ಸರ್ಕಾರಿ ಹುದ್ದೆಗಳ ಭರ್ತಿ: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 72,000 ಪ್ರಮುಖ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ 6 ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು.

ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ: ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮ ತಡೆಗಟ್ಟಲು ಮತ್ತು ಪಾರದರ್ಶಕತೆ ತರಲು ಪರಿಣಿತ ಅಧಿಕಾರಿಗಳ ಸಮಿತಿ ರಚಿಸಲಾಗಿದ್ದು, 2 ತಿಂಗಳಲ್ಲಿ ವರದಿ ಆಧರಿಸಿ ದೇಶಕ್ಕೇ ಮಾದರಿಯಾದ ಪರೀಕ್ಷಾ ನೀತಿ ಜಾರಿಗೆ ಬರಲಿದೆ.

‘ಉದ್ಯೋಗ ನಿಧಿ’ ಯೋಜನೆ: ಹಿಂದುಳಿದ 10 ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಪ್ರತಿ ಉದ್ಯೋಗಕ್ಕೆ ತಿಂಗಳಿಗೆ ₹2,500 ಪ್ರೋತ್ಸಾಹ ಧನವನ್ನು 2 ವರ್ಷಗಳ ಕಾಲ ಸರ್ಕಾರ ನೀಡಲಿದೆ. ಇದರಿಂದ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ.

ಯುವ ಉದ್ಯೋಗ ಸೇತು: ಖಾಸಗಿ ವಲಯದ ಉದ್ಯೋಗಾವಕಾಶ, ಶಿಕ್ಷಣ ಸಂಸ್ಥೆ ಹಾಗೂ ಉದ್ಯೋಗಾಕಾಂಕ್ಷಿಗಳನ್ನು ಬೆಸೆಯಲು ಏಕೀಕೃತ ಡಿಜಿಟಲ್ ತಂತ್ರಾಂಶ ಜಾರಿ. ಜೊತೆಗೆ 100 ಸರ್ಕಾರಿ ಐಟಿಐಗಳನ್ನು ಜಾಬ್-ಕ್ಯಾಂಪಸ್‌ಗಳಾಗಿ ಪರಿವರ್ತನೆ.

10,000 ‘ಭಾರತ್ ಜೋಡೋ ಯುವ ಸಂಘಗಳು’: ಯುವ ನಾಯಕತ್ವ ಮತ್ತು ಸಾಂಸ್ಕೃತಿಕ ಪ್ರತಿಭೆ ಪ್ರೋತ್ಸಾಹಿಸಲು ಪ್ರತಿ ಸಂಘಕ್ಕೆ ₹10 ಲಕ್ಷದಂತೆ ಒಟ್ಟು ₹1,000 ಕೋಟಿ ಅನುದಾನ.

2. ಶಿಕ್ಷಣ ಕ್ರಾಂತಿ: ದೇಶದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ & ಗ್ರಾಮೀಣ ಮೀಸಲಾತಿ

ಬೆಂಗಳೂರಿನಲ್ಲಿ ಪ್ರಥಮ AI ವಿವಿ: ಬೆಂಗಳೂರಿನಲ್ಲಿ ದೇಶದ ಮೊಟ್ಟಮೊದಲ ಸರ್ಕಾರಿ ಸ್ವಾಮ್ಯದ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಸ್ಥಾಪನೆ. ಜನವರಿ 2027 ರಿಂದ AI ಸರ್ಟಿಫಿಕೇಟ್ ಕೋರ್ಸ್‌ಗಳು ಆರಂಭ.

6ನೇ ತರಗತಿಯಿಂದಲೇ AI ಶಿಕ್ಷಣ: ‘AI ಅಕ್ಷರ ಅಭಿಯಾನ’ ಮತ್ತು ಉಚಿತ ‘ಕೋಡಿಂಗ್ ಗುರುಕುಲ’ದ ಮೂಲಕ ರಾಜ್ಯದ ಎಲ್ಲಾ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಕೋಡಿಂಗ್ ಕಲಿಕೆ.

‘ವಿದ್ಯಾರ್ಥಿ ಸಹಾಯ ಹಸ್ತ’: 1 ರಿಂದ 10ನೇ ತರಗತಿವರೆಗೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಿಗೆ ವೈದ್ಯಕೀಯ (Medical), ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಹಾಲಿ ಇರುವ ಶೇ. 15 ಗ್ರಾಮೀಣ ಮೀಸಲಾತಿಯೊಳಗೆ ಶೇ. 7.5 ರಷ್ಟು ವಿಶೇಷ ಒಳಮೀಸಲಾತಿ.

1,000 ಕರ್ನಾಟಕ ಪಬ್ಲಿಕ್ ಶಾಲೆಗಳು: ಮುಂದಿನ 2 ವರ್ಷಗಳಲ್ಲಿ ₹1,000 ಶಾಲೆಗಳನ್ನು LKG ಯಿಂದ 12ನೇ ತರಗತಿಯವರೆಗೆ ದ್ವಿಭಾಷಾ, ಡಿಜಿಟಲ್ ಮಾದರಿ ಶಾಲೆಗಳಾಗಿ ಉನ್ನತೀಕರಣ (10 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ).

3. ಅನ್ನದಾತರ ನೆರವಿಗೆ ‘ಮುಖ್ಯಮಂತ್ರಿ ರೈತ ಚೈತನ್ಯ’ & ‘ರೈತ ಮಿತ್ರ’

ಡಿಜಿಟಲ್ ಕೃಷಿ ಕ್ರಾಂತಿ: ಡ್ರೋನ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಿ, ನೈಜ ಸಮಯದಲ್ಲಿ ಕೀಟ-ರೋಗ ಭಾದೆ ಹಾಗೂ ಮಾರುಕಟ್ಟೆ ಮಾಹಿತಿ ನೀಡಲು ‘ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ’.

‘ರೈತ ಮಿತ್ರ’ ಯಂತ್ರೋಪಕರಣ ಬಾಡಿಗೆ: 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ಟ್ರ್ಯಾಕ್ಟರ್, ಟಿಲ್ಲರ್, ಸೀಡ್ ಡ್ರಿಲ್ ಬಾಡಿಗೆ ಮೇಲೆ ಶೇ. 50 ಸಬ್ಸಿಡಿ.

₹30,000 ಕೋಟಿ ಶೂನ್ಯ ಬಡ್ಡಿ ಸಾಲ: ಈ ಸಾಲಿನಲ್ಲಿ 38 ಲಕ್ಷ ರೈತರಿಗೆ ಸಹಕಾರ ಸಂಸ್ಥೆಗಳ ಮೂಲಕ ₹30,000 ಕೋಟಿ ಸಾಲ ವಿತರಣೆಯ ಗುರಿ.

4. ಬ್ರ್ಯಾಂಡ್ ಬೆಂಗಳೂರು ಮತ್ತು ಮೂಲಸೌಕರ್ಯ ಹೆಜ್ಜೆಗಳು

ಬೆಂಗಳೂರು ಬಿಸಿನೆಸ್ ಕಾರಿಡಾರ್ (BBC): 2 ದಶಕಗಳಿಂದ ಬಾಕಿ ಇದ್ದ ಪೆರಿಫೆರಲ್ ರಿಂಗ್ ರಸ್ತೆಯನ್ನು ₹26,000 ಕೋಟಿ ವೆಚ್ಚದಲ್ಲಿ 117 ಕಿ.ಮೀ ಉದ್ದದ ‘ಬೆಂಗಳೂರು ಬಿಸಿನೆಸ್ ಕಾರಿಡಾರ್’ ಆಗಿ ನಿರ್ಮಾಣ (BBC-1: 68 ಕಿ.ಮೀ 12 ಪಥದ ರಸ್ತೆ; BBC-2: 44 ಕಿ.ಮೀ ಸಂಪರ್ಕ ರಸ್ತೆ). ಭೂಮಿ ನೀಡಿದ ರೈತರಿಗೆ ದೇಶದಲ್ಲೇ ಮೊದಲ ಮಾದರಿ ಪರಿಹಾರ ಪ್ಯಾಕೇಜ್.

ಮೆಟ್ರೋ ಹಂತ-3: ನಮ್ಮ ಮೆಟ್ರೋ ಜಾಲ 220 ಕಿ.ಮೀ ಗೆ ವಿಸ್ತರಣೆಗೊಳ್ಳಲಿದ್ದು, ದೇಶದ 2ನೇ ಅತಿ ದೊಡ್ಡ ಮೆಟ್ರೋ ಜಾಲವಾಗಲಿದೆ.

5 ಪೊಲೀಸ್ ಕಮಿಷನರೇಟ್‌ಗಳು: ಕಾನೂನು-ಸುವ್ಯವಸ್ಥೆಗಾಗಿ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತಾಲಯವನ್ನು 5 ಕಮಿಷನರೇಟ್‌ಗಳಾಗಿ ವಿಭಜನೆ ಹಾಗೂ ಪ್ರತ್ಯೇಕ 'ರೌಡಿ ನಿಗ್ರಹ ದಳ' ರಚನೆ.

5 ಹೊಸ ವೃಕ್ಷ ಉದ್ಯಾನಗಳು (Tree Parks): ಲಾಲ್‌ಬಾಗ್ ಮಾದರಿಯಲ್ಲಿ ತುರಹಳ್ಳಿ, ತೊಟ್ಟಿಕಲ್ಲು ಫಾಲ್ಸ್, ನೆಟ್ಟಿಗೆರೆ, ಬಿ.ಎಂ. ಕಾವಲ್, ಮಂಡೂರು-ಜ್ಯೋತಿಪುರದಲ್ಲಿ ಟ್ರೀ ಪಾರ್ಕ್ ಹಾಗೂ 7 ಬೃಹತ್ ಕೆರೆಗಳ (ಹೆಸರಘಟ್ಟ, ಹೊಸಕೋಟೆ, ಬನ್ನೇರುಘಟ್ಟ ಇತ್ಯಾದಿ) ಪುನಶ್ಚೇತನ.

‘ಬಿಯಾಂಡ್ ಬೆಂಗಳೂರು’ (Beyond Bengaluru): ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ಮತ್ತು ಮೈಸೂರಿನಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳ (GTC) ಸ್ಥಾಪನೆ.

5. 6ನೇ ಗ್ಯಾರಂಟಿ ‘ಭೂ-ಗ್ಯಾರಂಟಿ’ & ಸಾಮಾಜಿಕ ಭದ್ರತೆ:

ಇ-ಖಾತಾ ಮೂಲಕ ‘ಭೂ-ಗ್ಯಾರಂಟಿ’: ಆಸ್ತಿ ಮಾಲೀಕತ್ವದ ಗೊಂದಲ ನಿವಾರಣೆಗೆ 6ನೇ ಗ್ಯಾರಂಟಿಯಾಗಿ ಇ-ಖಾತಾ ಡಿಜಿಟಲೀಕರಣ.

ಪ್ರಜಾಸೇವೆ ಇಲಾಖೆ: ಪ್ರತಿ ತಿಂಗಳ 1 ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಂದ ಕ್ಷೇತ್ರ ಮಟ್ಟದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ.

ವಾಹನ ವಿಮಾ ಸಂಸ್ಥೆ: ಜನಸಾಮಾನ್ಯರಿಗೆ ಸುಲಭ ಹಾಗೂ ಕೈಗೆಟುಕುವ ದರದಲ್ಲಿ ಕ್ಲೈಮ್ ಸಿಗಲು ‘ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ’ ಸ್ಥಾಪನೆ.

ಎತ್ತಿನಹೊಳೆ ಯೋಜನೆ: ಮೊದಲ ಹಂತ ಪೂರ್ಣಗೊಳ್ಳುತ್ತಿದ್ದು, ನವೆಂಬರ್ ವೇಳೆಗೆ ತುಮಕೂರು ಜಿಲ್ಲೆಗೆ ನೀರು ತಲುಪಲಿದೆ.