ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆ ಮಂಗಳೂರು ಮತ್ತು ಕಾರವಾರಕ್ಕೆ ವಿಶೇಷ ರೈಲುಗಳನ್ನು ಘೋಷಿಸಿದೆ. ಬೆಂಗಳೂರಿನಿಂದ ಕಾರವಾರಕ್ಕೆ ಮತ್ತು ಯಶವಂತಪುರದಿಂದ ಮಂಗಳೂರಿಗೆ ಅಕ್ಟೋಬರ್ 30 ರಿಂದ ವಿಶೇಷ ರೈಲುಗಳು ಸಂಚರಿಸಲಿವೆ.

ಬೆಂಗಳೂರು (ಅ.18): ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ ಘೋಷಣೆಯಾಗಿದೆ. ಕಳೆದ ದಸರಾ ಹಬ್ಬದ ಸಮಯದಲ್ಲಿ ಮಂಗಳೂರಿಗೆ ಸ್ಪೆಷಲ್‌ ಟ್ರೇನ್‌ ಬಿಡದೇ ಇದ್ದ ಕಾರಣಕ್ಕೆ ಮಂಗಳೂರಿನ ಪ್ರಯಾಣಿಕರು ರೈಲ್ವೆ ಇಲಾಖೆ ಮೇಲೆ ಸಿಟ್ಟಾಗಿದ್ದರು. ಆದರೆ, ದೀಪಾವಳಿ ಸಮಯದಲ್ಲಿ ನೈಋತ್ಯ ರೈಲ್ವೆ ಮಂಗಳೂರು ಹಾಗೂ ಕರಾವಳಿಗೆ ಎರಡು ಸ್ಪೆಷಲ್‌ ಟ್ರೇನ್‌ಗಳನ್ನು ಓಡಿಸುವ ನಿರ್ಧಾರ ಮಾಡಿದೆ. ಈಗಾಗಳೇ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಈ ಎರಡೂ ಟ್ರೇನ್‌ಗಳ ಬುಕ್ಕಿಂಗ್‌ ಕೂಡ ಆರಂಭವಾಗಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಸರಿದೂಗಿಸುವ ಸಲುವಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಕಾರವಾರ ಮತ್ತು ಯಶವಂತಪುರದಿಂದ ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ. 

ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ಕಾರವಾರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06597/98) ರೈಲು ಸಂಚಾರ ಈ ಕೆಳಗಿನಂತೆ ಇರಲಿದೆ.

ರೈಲು ಸಂಖ್ಯೆ 06597 ಅಕ್ಟೋಬರ್ 30 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿರುವ ಈ ರೈಲು ಚಿಕ್ಕಬಾಣಾವರ, ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್ ಮತ್ತು ಅಂಕೋಲಾ ನಿಲ್ದಾಣಗಳ ಮೂಲಕ ಮರುದಿನ ಬೆಳಗಿನ ಜಾವ 4 ಗಂಟೆಗೆ ಕಾರವಾರ ನಿಲ್ದಾಣವನ್ನು ತಲುಪಲಿದೆ.
ಹಿಂದಿರುಗುವ ದಿಕ್ಕಿನಲ್ಲಿ, ಪುನಃ ಇದೇ ರೈಲು (06598) ಅಕ್ಟೋಬರ್ 31ರಂದು ಮಧ್ಯಾಹ್ನ 12 ಗಂಟೆಗೆ ಕಾರವಾರದಿಂದ ಹೊರಡಲಿರುವ ರೈಲು ಅದೇ ಮಾರ್ಗವಾಗಿ, ಮರುದಿನ ಬೆಳಗಿನ ಜಾವ 4 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ . ಈ ರೈಲಿನಲ್ಲಿ 4 ಜನರಲ್ ಸೆಕೆಂಡ್ ಕ್ಲಾಸ್, 10 ಸ್ಲೀಪರ್ ಕ್ಲಾಸ್, 2 ಎಸಿ ತ್ರಿ ಟೈಯರ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ / ಬ್ರೇಕ್ ವ್ಯಾನ್ಗಳು ಸೇರಿದಂತೆ 18 ಬೋಗಿಗಳು ಇರಲಿವೆ.

ಯಶವಂತಪುರ-ಮಂಗಳೂರು ಜಂಕ್ಷನ್ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ (06565/66) ರೈಲು ಸಂಚಾರ ಈ ಕೆಳಗಿನಂತೆ ಇರಲಿದೆ.

ರೈಲು ಸಂಖ್ಯೆ 06565 ಅಕ್ಟೋಬರ್ 30 ರಂದು ಯಶವಂತಪುರದಿಂದ ರಾತ್ರಿ 11.50ಕ್ಕೆ ಹೊರಡಲಿರುವ ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ ನಿಲ್ದಾಣಗಳ ಮೂಲಕ ಮರುದಿನ ಬೆಳಗ್ಗೆ 11.45ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ಹಿಂದಿರುಗುವ ದಿಕ್ಕಿನಲ್ಲಿ, ಪುನಃ ಇದೇ ರೈಲು (06566) ಅಕ್ಟೋಬರ್ 31 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರು ಜಂಕ್ಷನ್ ನಿಂದ ಹೊರಡಲಿರುವ ರೈಲು ಅದೇ ಮಾರ್ಗವಾಗಿ ಅದೇ ದಿನ ರಾತ್ರಿ 9:15 ಕ್ಕೆ ಯಶವಂತಪುರವನ್ನು ತಲುಪಲಿದೆ.

ರೈಲ್ವೆ ಟಿಕೆಟ್‌ ಬುಕ್ಕಿಂಗ್‌ನಲ್ಲಿ ದೊಡ್ಡ ಬದಲಾವಣೆ, 120 ದಿನಗಳ ಮುಂಚೆ ಮುಂಗಡ ಟಿಕೆಟ್‌ ಮಾಡೋ ಹಾಗಿಲ್ಲ!

ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನದ ಸಮಯ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.

ರೈಲಿನ RAC ಟಿಕೆಟ್‌ ಕ್ಯಾನ್ಸಲ್‌ ಆದ್ರೆ, ರೀಫಂಡ್‌ ಆಗೋ ಹಣವೆಷ್ಟು? ಇಲ್ಲಿದೆ ರೂಲ್ಸ್