ಸೌಜನ್ಯ ಪ್ರಕರಣ ವರದಿ ಮಾಡುತ್ತಿದ್ದ ಯೂಟ್ಯೂಬರ್‌ಗಳ ಮೇಲೆ ಹಲ್ಲೆ ನಡೆದ ಬಳಿಕ, ಉಜಿರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಲು ತೆರಳಿದ ಸುವರ್ಣ ನ್ಯೂಸ್ ವರದಿಗಾರ ಹರೀಶ್ ಮೇಲೆಯೂ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್ ಗ್ಯಾಂಗ್ ಹಲ್ಲೆ ನಡೆಸಿದೆ. ತಡೆಯಲು ಯತ್ನಿಸಿದ ಪೊಲೀಸರ ಮೇಲೂ ಹಲ್ಲೆ ನಡೆದಿದೆ.

ಬೆಂಗಳೂರು (ಆ.06): ಧರ್ಮಸ್ಥಳದ ಹತ್ಯೆಗೀಡಾದ ಸೌಜನ್ಯಾ ಪರವಾಗಿ ವರದಿ ಮಾಡುತ್ತಿದ್ದ ಯೂಟ್ಯೂಬರ್ಗಳ ಮೇಲೆ ಹಲ್ಲೆ ಮಾಡಿದ ಘಟನೆ ನಡೆದ ಬೆನ್ನಲ್ಲಿಯೇ ಗಾಯಾಳುಗಳನ್ನು ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳು ಯೂಟ್ಯೂಬರ್ಗಳನ್ನು ಮಾತನಾಡಿಸಿ ವರದಿ ಮಾಡಲು ತೆರಳಿದ್ದ, ಸುವರ್ಣ ನ್ಯೂಸ್ ವರದಿಗಾರ ಹರೀಶ್ ಅವರ ಮೇಲೆ ಗಿರೀಶ್ ಮಟ್ಟೆಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್‌ನಿಂದ ಹಲ್ಲೆ ಮಾಡಲಾಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಅನಾಮಿಕನ ದೂರನ್ನಾಧರಿಸಿ ಎಸ್‌ಐಟಿ ತಂಡವು ಸಮಾಧಿ ಶೋಧ ಕಾರ್ಯ ಮಾಡುತ್ತಿದೆ. ಈ ಸಮಾಧಿ ಶೋಧ ಕಾರ್ಯವನ್ನು ಲೈವ್ ಆಗಿ ವರದಿ ಮಾಡಲು ಸುವರ್ಣ ನ್ಯೂಸ್ ವರದಿಗಾರ ಹರೀಶ್ ಬಂದಿದ್ದರು. ಎಸ್‌ಐಟಿ ತಂಡದಿಂದ ಸಮಾಧಿ ಶೋಧ ಕಾರ್ಯ ಮುಗಿದ ನಂತರ, ಪಾಂಗಳ ಗ್ರಾಮದ ಬಳಿ ಯೂಟ್ಯೂಬರ್ಗಳ ಮೇಲೆ ಹಲ್ಲೆ ನಡೆದ ಘಟನೆ ನಡೆದಿದೆ. ಅಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರು ಲೈವ್ ಆಗಿ ವರದಿ ನೀಡುತ್ತಿದ್ದರು. ಇನ್ನೊಂದು ಕಡೆ ಗಾಯಾಳುಗಳನ್ನು ದಾಖಲು ಮಾಡಿದ್ದ ಉಜಿರೆಯ ಬೆನಕ ಆಸ್ಪತ್ರೆಯಿಂದ ಗಾಯಾಳುಗಳನ್ನು ಮಾತನಾಡಿಸಿ ವರದಿ ಮಾಡುವುದಕ್ಕೆ ವಿಶೇಷ ಪ್ರತಿನಿಧಿ ಹರೀಶ್ ತೆರಳಿದ್ದರು.

ಈ ವೇಳೆ ಸುವರ್ಣ ನ್ಯೂಸ್ ವರದಿಗಾರ ಹರೀಶ್ ಮೇಲೆ ಗಿರೀಶ್ ಮಟ್ಟೆಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಸದಸ್ಯರು ಬಂದು ಹಲ್ಲೆ ಮಾಡಿದ್ದಾರೆ. ಈ ವೇಳೆ ತಡೆಯಲು ಮುಂದಾದ ಪೊಲೀಸರ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಸುವರ್ಣ ನ್ಯೂಸ್ ವರದಿಗಾರನ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯೇ ಹಲ್ಲೆ ಮಾಡಿದ್ದಾರೆ.

ಸೌಜನ್ಯ ಕೇಸ್‌ನಲ್ಲಿ ಇಲ್ಲಿಯವರೆಗೂ ಅತ್ಯಂತ ನಿಷ್ಪಕ್ಷಪಾತವಾಗಿ ವರದಿ ಮಾಡಿರುವ ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಆ ಕೇಸ್‌ನಲ್ಲಿ ಆಗಿರುವ ವಿಚಾರಗಳನ್ನು ಸಾರ್ವಜನಿಕರ ಮುಂದಿಟ್ಟಿತ್ತು. ಕಳೆದ ಎರಡು ನ್ಯೂಸ್‌ ಹವರ್‌ ಸ್ಪೆಷಲ್‌ ಎಪಿಸೋಡ್‌ನಲ್ಲಿ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ರಕರ್ತ ವಸಂತ್‌ ಗಿಳಿಯಾರ್‌ ಹಾಗೂ ಇಡೀ ಸೌಜನ್ಯ ಪ್ರಕರಣದ ತನಿಖೆ ಮಾಡಿದ್ದ ಡಿವೈಎಸ್‌ಪಿ ರುದ್ರಮುನಿ ಅವರು ಸುಧೀರ್ಘವಾಗಿ ಮಾತನಾಡಿದ್ದರು. ಈ ಎರಡೂ ಕಾರ್ಯಕ್ರಮಗಳಿಗೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್‌ ಶೆಟ್ಟಿ ತಿಮರೋಡಿ, ಗಿರೀಶ್‌ ಮಟ್ಟೆಣ್ಣನವರ್ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಮಾತನಾಡುವ ಸಮೀರ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ, ಇವರುಗಳು ಸುವರ್ಣ ನ್ಯೂಸ್‌ನ ಆಹ್ವಾನವನ್ನು ತಿರಸ್ಕರಿಸಿದ್ದರು.