ತಮಿಳುನಾಡಿನ ಕಾವೇರಿ ಹೆಚ್ಚುವರಿ ನೀರು ಯೋಜನೆ ಆಕ್ಷೇಪಿಸಿ ಸಲ್ಲಿಸಿದ್ದ ಕರ್ನಾಟಕ ಅರ್ಜಿ ವಿಚಾರಣೆ ಮುಂದೂಡಿಕೆ!
ಕಾವೇರಿ ಹೆಚ್ವುವರಿ ನೀರು ಬಳಸಿಕೊಂಡು ತಮಿಳುನಾಡು ಕೈಗೊಂಡಿರುವ ಯೋಜನೆಗಳನ್ನು ಆಕ್ಷೇಪಿಸಿ ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿದೆ.
ನವದೆಹಲಿ(ನ.02): ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಕಾವೇರಿ ನೀರು ವಿವಾದ ಇದೀಗ ಮತ್ತೆ ಕೋರ್ಟ್ನಲ್ಲಿ ವಿಚಾರಣೆ ಆರಂಭಗೊಂಡಿದೆ. ಈ ಬಾರಿ ಹೆಚ್ಚುವರಿ ನೀರು ಬಳಸಿಕೊಂಡು ತಮಿಳುನಾಡು ರೂಪಿಸಿರುವ ಯೋಜನೆಗಳಿಗೆ ಅಕ್ಷೇಪಣೆ ಸಲ್ಲಿಸಿದ ಕರ್ನಾಟಕ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ನ್ಯಾಯಮೂರ್ತಿ ರವೀಂದ್ರ ಭಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಈ ವೇಳೆ ಪ್ರಕರಣದ ವಿಚಾರಣೆಯನ್ನು ಆರು ವಾರಗಳ ಕಾಲ ಮುಂದೂಡಿತು. ಜೊತೆಗೆ ದ್ವಿಸದಸ್ಯ ಪೀಠ ದ ಮುಂದೆ ಈ ಪ್ರಕರಣ ಪಟ್ಟಿ ಆಗಲಿದೆ ಎಂದು ಸೂಚಿಸಿತು. ಈ ಕುರಿತು ಕರ್ನಾಟಕ ದ ಆಕ್ಷೇಪಣಾ ಅರ್ಜಿಗೆ ತಮಿಳುನಾಡು ಅಫಿಡೆವಿಟ್ ಕೂಡ ಕೋರ್ಟಿಗೆ ಸಲ್ಲಿಕೆ ಮಾಡಿದೆ.
ಹೆಚ್ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಸಮಯದಲ್ಲಿ ಕಾವೇರಿ ಹೆಚ್ಚುವರಿ ನೀರು ಬಳಸಿಕೊಂಡು ತಮಿಳುನಾಡು ರೂಪಿಸುತ್ತಿರುವ ಯೋಜನೆಗಳಿಂದ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗಲಿದೆ ಎಂದು ವಿಧಾನಮಂಡಲದ ಸರ್ವಪಕ್ಷಗಳ ನಾಯಕರ ಸಭೆ ಒಮ್ಮತ ಅಭಿಪ್ರಾಯ ವ್ಯಕ್ತವಾಗಿತ್ತು. ತಮಿಳುನಾಡು ರಾಜ್ಯಕ್ಕೆ ನಿಗದಿಪಡಿಸಿರುವ 177.25 ಟಿಎಂಸಿ ನೀರನ್ನು ರಾಜ್ಯವು ಪೂರೈಸಿದ ನಂತರ ಕರ್ನಾಟಕದಲ್ಲಿ ಉತ್ಪತ್ತಿಯಾಗುವ ಹೆಚ್ಚುವರಿ ನೀರನ್ನು ಕರ್ನಾಟಕವೇ ಬಳಸಿಕೊಳ್ಳುವುದು ರಾಜ್ಯದ ಹಕ್ಕಾಗಿದೆ. ಆದರೆ ಕಾವೇರಿ ಕಣಿವೆಯಲ್ಲಿನ ಹೆಚ್ಚುವರಿ ನೀರನ್ನು ಬಳಸಿಕೊಳ್ಳುವ ಸಲುವಾಗಿ ತಮಿಳುನಾಡು ಸರ್ಕಾರ ನದಿ ಜೋಡಣೆ ಯೋಜನೆ ರೂಪಿಸಿದೆ.
Mysuru : ಎರಡು ಪಾರಂಪಾರಿಕ ಸೇತುವೆಗಳನ್ನು ಸಂರಕ್ಷಣೆ ಮಾಡಿ
ತಮಿಳುನಾಡು ಸರ್ಕಾರ ಈಗಾಗಲೇ ಕಾವೇರಿ- ದಕ್ಷಿಣ ವೆಲ್ಲಾರ್ ಯೋಜನೆಯನ್ನು ಕೈಗೆತ್ತಿಕೊಂಡಿದೆ. ತಮಿಳುನಾಡು ಸರ್ಕಾರವು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜಿಸಿರುವ ಕಾವೇರಿ-ವೈಗೈ-ಗುಂಡಾರ್ ನದಿ ಜೋಡಣೆ ಯೋಜನೆಯ ಕಾಮಗಾರಿಗಳನ್ನು ಮುಂಚಿತವಾಗಿ ಕೈಗೊಳ್ಳಲು 6,941 ಕೋಟಿ ರು.ಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗೆ ಸಮಯ ತಗಲುವುದರಿಂದ ಅಲ್ಲಿಯವರೆಗೆ ಮೆಟ್ಟೂರು ಜಲಾಶಯದಿಂದ 8.6 ಟಿಎಂಸಿ ನೀರು ಬಳಸಿಕೊಳ್ಳಲು ತಮಿಳುನಾಡು ಮುಂದಾಗಿದೆ.
ಕಾವೇರಿ ನದಿಯ 45 ಟಿಎಂಸಿ ನೀರನ್ನು ಅಕ್ರಮವಾಗಿ ಬಳಸಿಕೊಂಡು ನದಿ ಜೋಡಣೆ ಯೋಜನೆಯನ್ನು ಆರಂಭಿಸಲು ಹೊರಟಿರುವುದನ್ನು ಖಂಡಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಇದೀಗ 6 ವಾರಗಳ ಕಾಲ ಮುಂದೂಡಲಾಗಿದೆ. ಮಾಯನೂರ್ ಜಲಾಶಯದಿಂದ ಕಾವೇರಿಯ ಹೆಚ್ಚುವರಿ ನೀರನ್ನು ತಿರುಚ್ಚಿ, ಪುದುಕೋಟೆ, ಶಿವಗಂಗಾ ಹಾಗೂ ವಿರುಧುನಗರ ಜಿಲ್ಲೆಗಳಿಗೆ ಒದಗಿಸಲು 118.45 ಕಿ.ಮೀ. ಉದ್ದದ ಬೃಹತ್ ಕಾಲುವೆ ನಿರ್ಮಿಸಿ ಗುಂಡಾರು ನದಿಗೆ ಜೋಡಿಸಲು ಯೋಜನೆ ರೂಪಿಸಿದೆ. ಈ ಮೂಲಕ ಕಾವೇರಿ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲು ತಮಿಳುನಾಡು ಸರ್ಕಾರ ಮುಂದಾಗಿದೆ ಎಂದು ರಾಜ್ಯ ಸರ್ಕಾರ ಅರ್ಜಿಯಲ್ಲಿ ಹೇಳಿದೆ.
ಹೊಗೇನಕಲ್, ಭರಚುಕ್ಕಿ, ವೆಲ್ಲೆಸ್ಲಿ ಸೇತುವೆಗೆ ನಿರ್ಬಂಧ; ಅರಣ್ಯ ಪ್ರದೇಶದಿಂದ ಅಕ್ರಮ ಎಂಟ್ರಿ