ಬೆಂಗಳೂರಿನ ಪ್ರಸಿದ್ಧ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಇದೀಗ ಕನ್ನಡಮಯವಾಗುತ್ತಿದೆ. ಈ ಹಿಂದೆ ಕನ್ನಡ ಕಡೆಗಣನೆಗೆ ಟೀಕೆಗೊಳಗಾಗಿದ್ದ ಕೆಎಸ್ಸಿಎ, ಇದೀಗ ಹೊಸ ಗೇಟ್ಗಳು, ಸೂಚನಾ ಫಲಕಗಳಲ್ಲಿ ಕನ್ನಡಕ್ಕೆ ಮತ್ತು ಕರ್ನಾಟಕದ ಬಾವುಟದ ಹಳದಿ-ಕೆಂಪು ಬಣ್ಣಗಳಿಗೆ ಆದ್ಯತೆ ನೀಡಿದೆ.
ಬೆಂಗಳೂರು (ಮಾ.15): ಒಂದು ಕಾಲದಲ್ಲಿ ಕನ್ನಡ ಬಳಸಲು ಹಿಂದೇಟು ಹಾಕುತ್ತಿದ್ದ, ಕನ್ನಡ ಎಲ್ಲಿ ಎಂದು ಹುಡುಕಬೇಕಾಗಿದ್ದ ನಗರದ ಪ್ರಸಿದ್ಧ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಕನ್ನಡಮಯವಾಗುತ್ತಿದೆ. ಕರ್ನಾಟಕದ ಬಾವುಟದ ಹಳದಿ-ಕೆಂಪು ಬಣ್ಣಗಳು, ಕನ್ನಡ ಭಾಷೆಯ ಕಂಪು ಕ್ರೀಡಾಂಗಣ ಸುತ್ತಲೂ ಹರಡಿದ್ದು, ರಾಜ್ಯದ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುತ್ತಿದೆ.
ಕಳೆದ ವರ್ಷ ಜೂನ್ನಲ್ಲಿ ಕಾಲ್ತುಳಿತ ಸಂಭವಿಸಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಮಹತ್ವದ ಪಂದ್ಯಗಳು ನಡೆದಿಲ್ಲ. ಈ ಬಾರಿ ಐಪಿಎಲ್ಗೆ ಆತಿಥ್ಯ ವಹಿಸಬೇಕಿರುವ ಈ ಕ್ರೀಡಾಂಗಣದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಹಲವು ಬೃಹತ್ ಗೇಟ್ಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್ಸಿಎ) ಅಳವಡಿಸಿದ್ದು, ಇನ್ನಷ್ಟು ಕಾಮಗಾರಿಗಳು ಕೆಲವೇ ದಿನಗಳಲ್ಲಿ ಮುಗಿಯಬೇಕಿದೆ.
ಈ ನಡುವೆ ಕ್ರೀಡಾಂಗಣದಲ್ಲಿ ಕೆಎಸ್ಸಿಎ ಕನ್ನಡಕ್ಕೆ ಒತ್ತು ಕೊಡುವ ಕೆಲಸ ಮಾಡುತ್ತಿದೆ. ಹೊಸದಾಗಿ ಅಳವಡಿಸಿರುವ ಗೇಟ್ಗಳ ಹೆಸರನ್ನು ಕನ್ನಡದಲ್ಲೇ ಮುದ್ರಿಸಲಾಗಿದೆ. ಸೂಚನಾ ಫಲಕ, ನಿಯಮಾವಳಿಗಳಲ್ಲಿ ಕೂಡಾ ಕನ್ನಡಕ್ಕೆ ಒತ್ತು ನೀಡಲಾಗಿದೆ. ವಿಶೇಷ ಏನೆಂದರೆ, ಗೇಟ್ಗಳ ಅಂಕಿ-ಸಂಖ್ಯೆಗಳನ್ನು ಕೂಡಾ ಕನ್ನಡದಲ್ಲೇ ಬರೆಯಲಾಗಿದೆ. ಇದರ ಜೊತೆಗೆ ಇಂಗ್ಲಿಷ್ ಕೂಡಾ ಬಳಸಲಾಗಿದೆ.
ಹಳದಿ-ಕೆಂಪು ರಂಗು:
ಕೇವಲ ಕನ್ನಡಕ್ಕೆ ಒತ್ತು ಕೊಟ್ಟಿದ್ದು ಮಾತ್ರವಲ್ಲದೇ ಕರ್ನಾಟಕ ಬಾವುಟದ ಬಣ್ಣವಾಗಿರುವ ಹಳದಿ-ಕೆಂಪು ಕೂಡಾ ಕ್ರೀಡಾಂಗಣದ ಸುತ್ತಲೂ ಕಂಗೊಳಿಸುತ್ತಿದೆ. ಪ್ರವೇಶ ದ್ವಾರದ ಮೇಲ್ಭಾಗದ ಫಲಕ ಕೆಂಪು ಬಣ್ಣದಲ್ಲಿದ್ದರೆ, ಅದರಲ್ಲಿ ಬರೆದಿರುವ ಅಕ್ಷರಗಳು ಹಳದಿ ಬಣ್ಣದಲ್ಲಿವೆ. ಕ್ರೀಡಾಂಗಣದ ಒಳ ಭಾಗದಲ್ಲಿ ಹಾಕಿರುವ ಸೂಚನಾ ಫಲಕ, ನಿಯಮಾವಳಿ ಕೂಡಾ ಹಳದಿ-ಕೆಂಪು ಬಣ್ಣಗಳಲ್ಲಿವೆ.
ಕನ್ನಡ ಬಳಸದೆ ಕೆಂಗಣ್ಣಿಗೆ ಗುರಿಯಾಗಿದ್ದ ಕೆಎಸ್ಸಿಎ!
ಕೆಎಸ್ಸಿಎಯಲ್ಲಿ ಈ ಹಿಂದಿನಿಂದಲೂ ಕನ್ನಡಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲ. ಅದರಲ್ಲೂ 2023ರ ಮಹಾರಾಜ ಟ್ರೋಫಿ ವೇಳೆ ಕೆಎಸ್ಸಿಎ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಿ, ಕೇವಲ ಇಂಗ್ಲಿಷ್ಗೆ ಒತ್ತುಕೊಟ್ಟಿತ್ತು. ಈ ಬಗ್ಗೆ ‘ಕನ್ನಡಪ್ರಭ’ ಮಾಡಿದ್ದ ವರದಿಯನ್ನು ಉಲ್ಲೇಖಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೆಎಸ್ಸಿಎಗೆ ನೋಟಿಸ್ ಜಾರಿ ಮಾಡಿತ್ತು. ಆ ಬಳಿಕ ಕೆಎಸ್ಸಿಎ ಕನ್ನಡ ಬಳಸದ್ದಕ್ಕೆ ವಿಷಾಧ ವ್ಯಕ್ತಪಡಿಸಿತ್ತು.


