Asianet Suvarna News Asianet Suvarna News

ಒಡಿಶಾ ಟ್ರೈನ್‌ ದುರಂತ ಹಿನ್ನೆಲೆ: ಕರ್ನಾಟಕದಲ್ಲಿ ರೈಲ್ವೆ ಹಳಿಗಳ ವಿಶೇಷ ತಪಾಸಣೆ ಆರಂಭ

ತಿಂಗಳಲ್ಲಿ ಸಾಮಾನ್ಯವಾಗಿ ನಡೆಯುವ ಹಳಿಗಳ ಪರಿಶೀಲನಾ ಕಾರ್ಯದ ವೇಳಾಪಟ್ಟಿ ಹೆಚ್ಚಿಸಲಾಗಿದ್ದು, ವಲಯ ಹಾಗೂ ವಿಭಾಗವಾರು ತಪಾಸಣಾ ಕಾರ್ಯವನ್ನು ಹೆಚ್ಚುವರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಈಗಾಗಲೇ ಸ್ಪೆಷಲ್‌ ಸೇಫ್ಟಿಡ್ರೈವ್‌ ಆರಂಭ 

Special Inspection of Railway Tracks begins in Karnataka grg
Author
First Published Jun 10, 2023, 2:00 AM IST

ಮಯೂರ್‌ ಹೆಗಡೆ

ಬೆಂಗಳೂರು(ಜೂ.10):  ಒಡಿಶಾದ ಭೀಕರ ರೈಲ್ವೆ ದುರಂತದ ಹಿನ್ನೆಲೆಯಲ್ಲಿ ನೈಋುತ್ಯ ರೈಲ್ವೆಯಿಂದ ಹಳಿಗಳ ವಿಶೇಷ ತಪಾಸಣೆಗೆ ಆರಂಭವಾಗಿದ್ದು, ಜೊತೆಗೆ ರೈಲ್ವೆ ಮಂಡಳಿ ಸೂಚನೆಯಂತೆ ಅಂತರ್‌ ವಲಯ ಸುರಕ್ಷತೆ ಪರಿಶೀಲನಾ ಕಾರ್ಯಾಚರಣೆ ಕೂಡ ಶೀಘ್ರವೇ ನಡೆಯಲಿದೆ.

ತಿಂಗಳಲ್ಲಿ ಸಾಮಾನ್ಯವಾಗಿ ನಡೆಯುವ ಹಳಿಗಳ ಪರಿಶೀಲನಾ ಕಾರ್ಯದ ವೇಳಾಪಟ್ಟಿ ಹೆಚ್ಚಿಸಲಾಗಿದ್ದು, ವಲಯ ಹಾಗೂ ವಿಭಾಗವಾರು ತಪಾಸಣಾ ಕಾರ್ಯವನ್ನು ಹೆಚ್ಚುವರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರು ವಿಭಾಗ ವ್ಯಾಪ್ತಿಯಲ್ಲಿ ಈಗಾಗಲೇ ಸ್ಪೆಷಲ್‌ ಸೇಫ್ಟಿಡ್ರೈವ್‌ ಆರಂಭಿಸಲಾಗಿದೆ.

ಒಡಿಶಾದ ಬಾಲಸೋರ್ ತ್ರಿವಳಿ ರೈಲು ದುರಂತ: ಸ್ಟೇಶನ್‌ ಮ್ಯಾನೇಜರ್‌ ಎಡವಟ್ಟೇ ದುರಂತಕ್ಕೆ ಕಾರಣ?

ನೈಋುತ್ಯ ರೈಲ್ವೆ ವಲಯದಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗ ಸೇರಿ 3629 ಕಿ.ಮೀ. ಉದ್ದದ ರೈಲ್ವೆ ಹಳಿ ಇದೆ. ವಲಯ ಹಾಗೂ ವಿಭಾಗದ ವಿವಿಧ ಹಂತದ ಅಧಿಕಾರಿಗಳಿಗೆ ಪ್ರತಿ ತಿಂಗಳು ಅವರದೇ ಆದ ಸ್ಥಳ ಪರಿಶೀಲನೆ ಅವಧಿ ನಿಗದಿ ಪಡಿಸಿದ್ದು, ಈ ಬಾರಿ ವಿಶೇಷವಾಗಿ ಸಿಗ್ನಲ್‌, ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಇಲ್ಲವೆ, ಅಪಘಾತ ತಪ್ಪಿಸುವ ‘ಕವಚ್‌ ವ್ಯವಸ್ಥೆ’ ಸರಿಯಾಗಿದೆಯೇ ಎಂಬ ತಪಾಸಣೆ ನಡೆಸಲಾಗುತ್ತಿದೆ.

ಈವರೆಗೆ ಫುಟ್‌ಪ್ಲೇಟ್‌ ಇನ್‌ಸ್ಪೆಕ್ಷನ್‌ ಅಂದರೆ ಲೋಕೋಪೈಲಟ್‌, ಸಹಾಯಕ ಲೋಕೋಪೈಲಟ್‌ ಜೊತೆಗೆ ವಿಭಾಗದ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು ತೆರಳಿ ನಡೆಸುವ ತಪಾಸಣೆ ಹದಿನೈದು ದಿನಗಳಿಗೆ ಎರಡು ಬಾರಿ ನಡೆಯುತ್ತಿತ್ತು. ಇದೀಗ ವಾರಕ್ಕೆ ಎರಡು ಬಾರಿ ನಡೆಸಲು ನಿರ್ಧರಿಸಲಾಗಿದೆ. 80-150 ಕಿ.ಮೀ. ಹಳಿಯುದ್ದಕ್ಕೆ ನಡೆಯುವ ಈ ತಪಾಸಣೆ ವೇಳೆ ಲೋಕೋಪೈಲಟ್‌ ಸರಿಯಾಗಿ ಸಿಗ್ನಲ್‌ಗಳನ್ನು ಪಾಲಿಸುತ್ತಾರೆಯೆ ಇಲ್ಲವೆ? ಹಳಿ ಸರಿಯಾಗಿದೆಯೇ ಇಲ್ಲವೆ ಹಾಗೂ ನಿಲ್ದಾಣಗಳಿಂದ ಸರಿಯಾಗಿ ಸಿಗ್ನಲ್‌ ಹೊರಡುತ್ತಿದೆಯೆ ಇಲ್ಲವೆ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಬೆಂಗಳೂರು ವಿಭಾಗಿಯ ಅಧಿಕಾರಿಗಳು ತಿಳಿಸಿದರು.

ಈಗಾಗಲೇ ವಿಶೇಷ ತಪಾಸಣೆಯನ್ನು ಬೆಂಗಳೂರು ವಿಭಾಗದಲ್ಲಿ ಆರಂಭಿಸಲಾಗಿದೆ. ಟವರ್‌ ವ್ಯಾಗನ್‌ ಇನ್‌ಸ್ಪೆಕ್ಷನ್‌ ಅಂದರೆ ತಪಾಸಣಾ ಬೋಗಿಗಳ ಮೂಲಕ ಪರಿಶೀಲನೆ ನಡೆಸಲಾಗುವುದು. ರಾತ್ರಿ ವೇಳೆಯೂ ಅಧಿಕಾರಿಗಳು ತೆರಳಿ ರೈಲ್ವೇ ಹಳಿಗಳ ಸ್ಥಿತಿಯನ್ನು ಗಮನಿಸಲಿದ್ದು, ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ವಿವರಿಸಿದರು.

ಒಡಿಶಾ ರೈಲು ದುರಂತ: ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದಿಳಿದ ರಾಜ್ಯದ ವಾಲಿಬಾಲ್ ಆಟಗಾರರು

ಅಂತರ್‌ ವಲಯ ತಪಾಸಣೆ:

ಪ್ರಮುಖವಾಗಿ ರೈಲ್ವೆ ಮಂಡಳಿಯು ಬುಧವಾರ 16 ರೈಲ್ವೆ ವಲಯಗಳ ನಡುವೆ ಅಂತರ್‌ ವಲಯ ಸುರಕ್ಷತಾ ಪರಿಶೀಲನಾ ಕಾರ್ಯಾಚರಣೆಗೆ ಆದೇಶ ಹೊರಡಿಸಿದೆ. ಅದರಂತೆ ನೈಋುತ್ಯ ರೈಲ್ವೆ ವಲಯದಲ್ಲಿ ಪಶ್ಚಿಮ ಮಧ್ಯ ರೈಲ್ವೆ ಅಧಿಕಾರಿಗಳ ತಂಡ ಶೀಘ್ರ ತಪಾಸಣೆ ನಡೆಸಲಿದೆ. ಟ್ರ್ಯಾಕ್‌, ಸಿಗ್ನಲ್‌, ಇಂಟರ್‌ಲಾಕ್‌ ಹಾಗೂ ನಿಲ್ದಾಣಗಳ ಪರಿಶೋಧನೆಯನ್ನು ಈ ತಂತ ಕೈಗೊಳ್ಳಲಿದೆ. ಜೊತೆಗೆ ದಿಢೀರ್‌ ಪರಿಶೀಲನೆ ನಡೆಸಲಿದ್ದು, ನಿಲ್ದಾಣ ಹಾಗೂ ಸಣ್ಣಪುಟ್ಟಜಂಕ್ಷನ್‌ಗಳಲ್ಲಿ ರೈಲ್ವೆ ಮಾಸ್ಟರ್‌ಗಳು ರಾತ್ರಿ ವೇಳೆ ಎಚ್ಚರವಾಗಿದ್ದಾರಾ? ನಿದ್ರಿಸುತ್ತಿದ್ದಾರಾ ಎಂಬುದನ್ನೂ ಗಮನಿಸಲಾಗುವುದು. ಇನ್ನು, ಸರಕು ಸಾಗಾಣಿಕೆಯ ರೈಲುಗಳ ವೇಗ, ನಿಲುಗಡೆ ಸೇರಿ ಇತರೆ ಸಂಗತಿಗಳ ಬಗ್ಗೆಯೂ ಪರಿಶೀಲನೆ ನಡೆಯಲಿದೆ ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ವಿವರಿಸಿದರು.

ಹಳಿ ಮೇಲೆ ಕಲ್ಲು ಇಡುವ ಸಮಸ್ಯೆ

ಪ್ರತಿದಿನ 8 ಕಿಮೀಗೆ ಒಬ್ಬರಂತೆ ಟ್ರ್ಯಾಕ್‌ಮನ್‌ಗಳು ನಿರಂತರವಾಗಿ ನಡೆಯುತ್ತಾ ತಪಾಸಣೆ ಮಾಡುತ್ತಿರುತ್ತಾರೆ. ಈ ವೇಳೆ ಹಳಿ ಮೇಲೆ ಕಲ್ಲು, ಇನ್ನಿತರ ವಸ್ತುಗಳನ್ನು ಇಡುವ ವಿಚಾರ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಎಲ್ಲವನ್ನೂ ಇಲಾಖೆ ಬಹಿರಂಗ ಪಡಿಸುವುದಿಲ್ಲ. ಟ್ರ್ಯಾಕ್‌ಮನ್‌ಗಳು ಅದನ್ನು ತೆರವು ಮಾಡುತ್ತ ಸಾಗುತ್ತಾರೆ. ಇಂತಹ ಕೆಲವು ಸ್ಥಳಗಳನ್ನು ಗುರುತು ಮಾಡಲಾಗಿದ್ದು, ಅಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ ಎಂದು ನೈಋುತ್ಯ ರೈಲ್ವೆ ಹಿರಿಯ ಅಧಿಕಾರಿಗಳು ತಿಳಿಸಿದರು.

Follow Us:
Download App:
  • android
  • ios