ಕುವೆಂಪು ವಿರಚಿತ ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಸೇರಿಸುವ ಶಿಫಾರಸಿಗೆ ಸಾಹಿತಿ, ಕಲಾವಿದರ ಒಕ್ಕೂಟ ಬೆಂಬಲ ಸೂಚಿಸಿದೆ. ಸರ್ವಜನಾಂಗದ ಶಾಂತಿಯ ಹರಿಕಾರರಾದ ಕುವೆಂಪು ಅವರು ಬದುಕಿದ್ದರೆ ಇದನ್ನು ಒಪ್ಪುತ್ತಿದ್ದರು ಮತ್ತು ಸಂವಿಧಾನದ ಆಶಯದಂತೆ ಮೂಲ ಧರ್ಮಕ್ಕೆ ಸ್ಥಾನ ಸಿಗಬೇಕು ಎಂದು ಒಕ್ಕೂಟ ಪ್ರತಿಪಾದಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು(ಜು.19): ಕುವೆಂಪು ವಿರಚಿತ ನಾಡಗೀತೆಗೆ ‘ಬೌದ್ಧರುದ್ಯಾನ’ ಎಂಬ ಪದ ಸೇರ್ಪಡೆಗೆ ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರು, ಸಾಂಸ್ಕೃತಿಕ ಚಿಂತಕರ ಸಂಘ-ಸಂಸ್ಥೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ನಾಡಗೀತೆಗೆ ‘ಬೌದ್ಧರುದ್ಯಾನ’ ಪದ ಸೇರ್ಪಡೆಗಾಗಿ ಸರ್ಕಾರಕ್ಕೆ ಶಿಫಾರಸು ಮಾಡಿರುವುದಕ್ಕೆ ವಿವಿಧ ಸಂಘ-ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿರುವುದು ಖಂಡನೀಯ. ರಾಷ್ಟ್ರಕವಿ ಕುವೆಂಪು ಎಂದಿಗೂ ಧರ್ಮ ವಿರೋಧಿಯಾಗಿರಲಿಲ್ಲ. ಸರ್ವಜನಾಂಗದ ಶಾಂತಿಗಾಗಿ ಸಾಹಿತ್ಯ ರಚನೆ ಮಾಡಿದವರು ಎಂದು ಒಕ್ಕೂಟದ ಅಧ್ಯಕ್ಷ ರಂಗೋತ್ರಿ ಕುಮಾರ್‌ ಹೇಳಿದ್ದಾರೆ.

ಕುವೆಂಪು ಬದುಕಿದ್ದರೆ ಇದನ್ನ ಒಪ್ಪುತ್ತಿದ್ದರು

ಕುವೆಂಪು ಅವರು ಇಂದು ಬದುಕಿದಿದ್ದರೆ ‘ಬೌದ್ಧರುದ್ಯಾನ’ ಪದದ ಸೇರ್ಪಡೆಗೆ ಖಂಡಿತ ಒಪ್ಪುತ್ತಿದ್ದರು. ಹೊರಗಿನಿಂದ ಬಂದ ಕ್ರೈಸ್ತ, ಹಿಂದೂ, ಮುಸಲ್ಮಾನ ಧರ್ಮಗಳಿಗೆ ನಾಡಗೀತೆಯಲ್ಲಿ ಸ್ಥಾನ ಇರುವಾಗ, ಇಲ್ಲಿನ ಮೂಲ ನಿವಾಸಿಗಳಾಗಿ ಇಡೀ ‘ವಿಶ್ವದಾದ್ಯಾಂತ ಇದ್ದ ಮೊದಲ ಧರ್ಮವಾದ ‘ಬೌದ್ದಧರ್ಮಕ್ಕೆ ಸ್ಥಾನ ಕೊಡುತ್ತಿದ್ದರು ಎಂಬುದು ನಮ್ಮ ಅಭಿಪ್ರಾಯ.

ಅಲ್ಪಸಂಖ್ಯಾತರ ಧರ್ಮದ ರಕ್ಷಣೆ ಮಾಡಬೇಕೆಂದು ಮತ್ತು ಎಲ್ಲರೂ ಬಾಳಬೇಕೆಂದು ನಮ್ಮ ಸಂವಿಧಾನ ಪೀಠಿಕೆ ಹೇಳಿದೆ. ಹೀಗಾಗಿ ನಾಡಗೀತೆಗೆ ‘ಬೌದ್ಧರುದ್ಯಾನ’ ಪದದ ಸೇರ್ಪಡೆ ಆಗಲೇಬೇಕು. ಸರ್ಕಾರದ ತೀರ್ಮಾನವನ್ನು ನಾವು ಒಕ್ಕೊರಲಿನಿಂದ ಬೆಂಬಲಿಸುತ್ತೆವೆ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎ.ಆರ್‌.ಗೋವಿಂದ ಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.