ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ತೋಟದ ಶೆಡ್ ಬಳಿ 6 ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿವೆ. ಒಂದೇ ಸ್ಥಳದಲ್ಲಿ 3 ಗಂಡು ಮತ್ತು 3 ಹೆಣ್ಣು ನವಿಲುಗಳ ಕಳೇಬರ ಪತ್ತೆಯಾಗಿದ್ದು, ದುಷ್ಕರ್ಮಿಗಳು ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯಾಧಿಕಾರಿಗಳು ಮೃತದೇಹಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

ದಾಬಸ್‍ಪೇಟೆ/ನೆಲಮಂಗಲ (ಮಾ.15): ತೋಟದ ಶೆಡ್‌ವೊಂದರ ಸಮೀಪ 6 ನವಿಲುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ 3 ಹೆಣ್ಣು ಮತ್ತು 3 ಗಂಡು ನವಿಲುಗಳ ಕಳೇಬರಗಳು ಪತ್ತೆಯಾಗಿವೆ.

Add Asianetnews Kannada as a Preferred SourcegooglePreferred

ಒಂದೇ ಜಾಗದಲ್ಲಿ ಆರು ನವಿಲು ಸಾವು

ಒಂದೇ ಜಾಗದಲ್ಲಿ 6 ನವಿಲುಗಳು ಸತ್ತಿರುವುದರಿಂದ ದುಷ್ಕರ್ಮಿಗಳು ವಿಷಪ್ರಾಶನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ನೆಲಮಂಗಲ ವಲಯ ಅರಣ್ಯಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಹಜ ಸಾವೋ, ವಿಷ ಪ್ರಾಶನವೋ?

ಈ ವೇಳೆ ವಲಯ ಅರಣ್ಯಾಧಿಕಾರಿ ಮಂಜುನಾಥ್ ಪ್ರತಿಕ್ರಿಯಿಸಿ, 6 ನವಿಲುಗಳು ಸಹಜವಾಗಿ ಸಾವನ್ನಪ್ಪಿವೆಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿದ್ದಾವೋ ಸದ್ಯಕ್ಕೆ ಮಾಹಿತಿ ಇಲ್ಲ. ಮೃತ ನವಿಲುಗಳ ಕಳೇಬರಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಹೆಬ್ಬಾಳದ ಜಿಕೆವಿಕೆಗೆ ರವಾನೆ ಮಾಡಲಾಗಿದೆ. ನವಿಲುಗಳ ಸಾವಿನ ನಿಖರ ಕಾರಣದ ಬಗ್ಗೆ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.