ಚಾಮರಾಜನಗರದಲ್ಲಿ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ರಾತ್ರಿ ವೇಳೆ ಕಾಡು ಹಂದಿಯೊಂದನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಚಿರತೆಗಳನ್ನು ಬೇಟೆಯಾಡಲು ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಬೇಟೆಗಾರರನ್ನು ಶೀಘ್ರವೇ ಬಂಧಿಸುವಂತೆ ಅರಣ್ಯ ಇಲಾಖೆಗೆ ಒತ್ತಾಯ.
ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.
ಚಾಮರಾಜನಗರ(ಡಿ.14): ರಾತ್ರಿ ವೇಳೆ ಬೇಟೆಗಾರರ ಅರ್ಭಟ ಜೋರಾಗ್ತಿದೆ. ಒಂದೇ ಗನ್ ಶಾಟಿಗೆ ದಪ್ಪನೆಯ ಹಂದಿಯನ್ನೇ ಹೊಡೆದುರುಳಿಸಿದ್ದಾರೆ. ಚಿರತೆ, ನವಿಲು ಜೊತೆಗೆ ಹಂದಿ ಬೇಟೆ ಕೂಡ ನಿರಾತಂಕವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಬೇಟೆಗಾರರನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ. ಇದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..
ಗಡಿ ಜಿಲ್ಲೆ ಚಾಮರಾಜನಗರ ಅಂದ್ರೆ ವನ್ಯಪ್ರಾಣಿಗಳ ತವರು, ಅಲ್ಲದೇ ಪ್ರಾಕೃತಿಕ ಸೌಂದರ್ಯದ ಬೀಡು. ಇದೀಗ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಿಕಾರಿ ಅಥವಾ ಬೇಟೆಗಾರರ ಹಾವಳಿ ಹೆಚ್ಚಾಗ್ತಿದೆ. ಜಿಲ್ಲಾ ಕೇಂದ್ರದಲ್ಲಿ ಬಂದೂಕಿನ ಸದ್ದು ಕೇಳಿಬಂದಿದೆ. ರಾತ್ರೀ ವೇಳೆಯಲ್ಲಿ ಬೇಟೆಗಾರರ ಬಂದೂಕು ಸದ್ದು ಕೇಳಿಬಂದಿದೆ. ಚಿರತೆ, ನವಿಲು, ಕಾಡು ಹಂದಿಗಳನ್ನು ಬೇಟೆಗಾರರು ಟಾರ್ಗೆಟ್ ಮಾಡಿದ್ದಾರೆಂಬ ಆರೋಪ ಮಾಡ್ತಿದ್ದಾರೆ. ನಗರದ ರಾಮಸಮುದ್ರ ದೊಡ್ಡಕೆರೆ ರಸ್ತೆಯಲ್ಲಿ ಕಾಡು ಹಂದಿಯನ್ನು ಬೇಟೆಗಾರರ ತಂಡ ಬೇಟೆಯಾಡಿದೆ.ಒಂದೇ ಏಟಿಗೆ ನೇರವಾಗಿ ಬೃಹತ್ ಗಾತ್ರದ ಕಾಡು ಹಂದಿ ತಲೆಗೆ ಗುಂಡು ಹೊಡೆದಿದ್ದಾರೆ. ಬಂದೂಕಿನ ಸದ್ದು ಕೇಳಿ ಮನೆಯಿಂದ ಹೊರ ಬಂದು ರೈತ ಟಾರ್ಚ್ ಬಿಟ್ಟಿದ್ದಾನೆ. ಟಾರ್ಚ್ ಲೈಟ್ ಕಂಡು ಬೇಟೆಗಾರರು ಪರಾರಿಯಾಗಿದ್ದಾರೆ. ರೈತ ಕೂಡ ಆ ಬೇಟೆಗಾರರನ್ನು ಫಾಲೋ ಕೂಡ ಮಾಡಿದ್ದಾರೆ. ಆದ್ರೆ ಆ ಕ್ಷಣದಲ್ಲಿ ಬೇಟೆಗಾರರು ಎಸ್ಕೇಪ್ ಆಗಿದ್ದಾರೆ. ನಡು ರಸ್ತೆಯಲ್ಲಿ ಬೃಹತ್ ಗಾತ್ರದ ಕಾಡುಹಂದಿ ಸತ್ತು ಬಿದ್ದಿತ್ತು. ಕೂಡಲೆ ಸ್ಥಳೀಯ ಪೋಲೀಸರಿಗೆ ರೈತ ದೂರು ನೀಡಿದ್ದಾನೆ. ಚಾಮರಾಜನಗರ ಜಿಲ್ಲಾ ಕೇಂದ್ರದ ರಾಮಸಮುದ್ರ ದೊಡ್ಡಕೆರೆ ರಸ್ತೆಯಲ್ಲಿ ಘಟನೆ ಸಂಭವಿಸಿದೆ.
ಇನ್ನೂ ಬಂದೂಕಿನ ಸದ್ದಿಗೆ ಸ್ಥಳಿಯ ರೈತರು ಬೆಚ್ಚಿ ಬಿದ್ದಿದ್ದಾರೆ. ನಿರಂತರ ಶಿಕಾರಿ ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಮೂರು ಚಿರತೆಗಳು ಕಂಡು ಕಾಣಿಸಿಕೊಂಡು ಆತಂಕ ಮೂಡಿಸಿದ್ದವು. ಒಂದೆಡೆ ಕಾಡು ಪ್ರಾಣಿಗಳ ಕಾಟ ಆದ್ರೆ ಮತ್ತೊಂದೆಡೆ ಬೇಟೆಗಾರರ ಅರ್ಭಟ ಇದೀಗಾ ಹೆಚ್ಚಾಗ್ತಿದೆ. ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ರೈತರು ದಾಖಲಿಸಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಹೋಗಿದ್ದಾರೆ.
ಒಟ್ನಲ್ಲಿ ನಗರದ ಹೊರಭಾಗದಲ್ಲಿ ಬೇಟೆಗಾರರು ಬೇಟೆಗೆ ಇಳಿದಿದ್ದು ಆತಂಕಕ್ಕೆ ಕಾರಣವಾಗಿದೆ. ಚಿರತೆ ಇರುವ ವಿಷ್ಯ ಗೊತ್ತಾಗಿ ಬೇಟೆಗೆ ಬಂದಿದ್ದಾರೆಂಬುದು ಸ್ಥಳೀಯರ ಅಭಿಪ್ರಾಯ. ಆದ್ರೆ ಶಿಕಾರಿ ಅಥವಾ ಬೇಟೆಗಾರರ ಹೆಡೆಮುರಿ ಕಟ್ಟಿ ಅಂತಾ ಸ್ಥಳೀಯರು ಒತ್ತಾಯಿಸಿದ್ದಾರೆ.


