ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಸೃಷ್ಟಿಸಿದ ಆರೋಪದ ಮೇಲೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿಸಿ ವಿಚಾರಣೆ ನಡೆಸಬೇಕೆಂದು ಆರೋಪಿ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯನ್ನಾಗಿಸಿ ವಿಚಾರಣೆ ನಡೆಸಬೇಕು ಎಂದು 3ನೇ ಆರೋಪಿ ಪವನ್ ಪರ ವಕೀಲರು ನ್ಯಾಯಾಲಯವನ್ನು ಕೋರಿದ್ದಾರೆ.
ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತರು ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಂಗಳವಾರ ಮುಂದುವರಿಸಿತು. ಈ ವೇಳೆ ಆರೋಪಿ ಪವನ್ ಪರ ವಕೀಲ ಸುಧನ್ವ ಹಾಜರಾಗಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಆವರಣ ಪ್ರವೇಶಿಸಲು ತಮಗೆ ಅನುಮತಿ ನೀಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಮೆಮೊ ಸಲ್ಲಿಸಿದರು.
ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಯಲ್ಲಿನ ಟೈಲ್ಸ್
ಅಲ್ಲದೆ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು, 2024ರ ಜೂ.11ರಂದು ರಾತ್ರಿ 1 ಗಂಟೆಗೆ ಪ್ರಕರಣದ ಏಳು ಮಂದಿ ಆರೋಪಿಗಳ 8 ಮೊಬೈಲ್ಗಳನ್ನು ಮಹಜರು ನಡೆಸಿ ಜಪ್ತಿ ಮಾಡಿದ್ದಾರೆ. ಈ ವೇಳೆ ಮೊಬೈಲ್ಗಳನ್ನು ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿ, ಆ ಕುರಿತು ಪೋಟೋ ಸಲ್ಲಿಸಿದ್ದಾರೆ. ಆದರೆ, ಪೋಟೋದಲ್ಲಿ ಕಾಣುವ ಟೈಲ್ಸ್, ಬಿಳಿ ಬಣ್ಣದ ವೆಟ್ರಿಫೈಯ್ಡ್ ಟೈಲ್ಸ್ ಆಗಿರುತ್ತದೆ. ಆ ರೀತಿಯ ಟೈಲ್ಸ್ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಇಲ್ಲ. ಹಾಗಾಗಿ, ಪೊಲೀಸ್ ಠಾಣೆಯಲ್ಲಿ ಮಹಜರು ನಡೆದಿಲ್ಲ. ಈ ಕುರಿತು ಪರಿಶೀಲಿಸಲು ಸೋಮವಾರ ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆಗೆ ನಾನು ಭೇಟಿ ನೀಡಿದ್ದೆ. ಠಾಣೆ ಪ್ರವೇಶಿಸಲು ಪೊಲೀಸರು ಅವಕಾಶವೇ ನೀಡಿಲ್ಲ ಎಂದು ಸುಧನ್ವ ನ್ಯಾಯಾಲಯದ ಮುಂದೆ ಆರೋಪಿಸಿದರು.
ಪೊಲೀಸ್ ಠಾಣೆಗೆ ಭೇಟಿ ನೀಡುವಂತೆ ನ್ಯಾಯಾಧೀಶರಿಗೆ ಮನವಿ
ಹಾಗೆಯೇ, ಪೊಲೀಸ್ ಠಾಣೆಯು ಸಾರ್ವಜನಿಕ ಪ್ರದೇಶವಾಗಿದ್ದು, ಪ್ರವೇಶ ನಿರಾಕರಿಸುವ ಅಧಿಕಾರ ಪೊಲೀಸರಿಗೆ ಇಲ್ಲ. ಆದ್ದರಿಂದ ಸುಳ್ಳು ಸಾಕ್ಷ್ಯ ಒದಗಿಸಿರುವ ಕಾರಣಕ್ಕೆ ಪ್ರಕರಣವನ್ನು ಮೊದಲಿಗೆ ತನಿಖೆ ನಡೆಸಿದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ಅವರನ್ನು ಆರೋಪಿಯಾಗಿ ಮಾಡಿ ವಿಚಾರಣೆ ನಡೆಸಬೇಕು. ಇನ್ನೂ ಈ ನ್ಯಾಯಾಲಯದ ನ್ಯಾಯಾಧೀಶರೇ ಪೊಲೀಸ್ ಠಾಣೆಗೆ ಖುದ್ದು ಭೇಟಿ ನೀಡಬೇಕು ಎಂದು ಕೋರಿದರು.
ಅದನ್ನು ಪರಿಗಣಿಸಿದ ನ್ಯಾಯಾಧೀಶರು, ಸುಧನ್ವ ಅವರು ಸೋಮವಾರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಸಂರಕ್ಷಣೆ ಮಾಡಬೇಕು ಎಂದು ಪೊಲೀಸರಿಗೆ ಸೂಚಿಸಿತು. ಜೊತೆಗೆ, ಪೊಲೀಸ್ ಠಾಣೆಗೆ ಭೇಟಿ ಪರಿಶೀಲಿಸಲು ಪೊಲೀಸರು ಅನುಮತಿ ನಿರಾಕರಿಸಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ವಕೀಲ ಸುಧನ್ವಗೆ ನಿರ್ದೇಶಿಸಿತು.
ಇದೇ ವೇಳೆ ದರ್ಶನ್ ಪರ ವಕೀಲರು, ಜೈಲಿನ ಒಳಗೆ ದರ್ಶನ್ ಭೇಟಿ ಮಾಡಲು ಅವರ ಕುಟುಂಬದ ಸದಸ್ಯರಿಗೆ ಅನುಮತಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಮತ್ತು ಪ್ರಕರಣವನ್ನು ಪ್ರತಿ ದಿನ ವಿಚಾರಣೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದರು. ಅದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ಈ ಪ್ರಕರಣವನ್ನು ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಹೇಳಿತು.
ದೋಷಾರೊಪ ಪಟ್ಟಿಯಲ್ಲಿ ಹೆಸರಿಸದ ಸಾಕ್ಷಿಗಳು
ಇನ್ನೂ ಘಟನೆ ನಡೆದ ಸ್ಥಳಕ್ಕೆ ನ್ಯಾಯಾಧೀಶರೇ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಮತ್ತು ದೋಷಾರೊಪ ಪಟ್ಟಿಯಲ್ಲಿ ಹೆಸರಿಸದ ಸಾಕ್ಷಿಗಳನ್ನು ವಿಚಾರಣೆಗೆ ಕರೆಸಬೇಕು ಎಂದು ಕೋರಿ ದರ್ಶನ್ ಮತ್ತೊಂದು ಅರ್ಜಿ ಸಲ್ಲಿಸಿದ್ದಾರೆ. ಅದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ವಿಶೇಷ ಸರ್ಕಾರ ಅಭಿಯೋಜಕರಿಗೆ ಕೋರ್ಟ್ ನಿರ್ದೇಶಿಸಿತು.
ಅಂತಿಮವಾಗಿ ಪ್ರಕರಣದ 17 ಮತ್ತು 18ನೇ ಕೋರ್ಟ್ ಸಾಕ್ಷಿಗೆ ಸಮನ್ಸ್ ಜಾರಿ ಮಾಡಿದ ನ್ಯಾಯಾಲಯ, ವಿಚಾರಣೆಯನ್ನು ಮಾ.2ಕ್ಕೆ ಮುಂದೂಡಿತು. ಅಲ್ಲಿಯವರೆಗೆ ದರ್ಶನ್ ಮತ್ತು ಪವಿತ್ರಾಗೌಡ ಸೇರಿದ ಜೈಲಿನಲ್ಲಿರುವ ಪ್ರಕರಣದ 7 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿತು.
ಶವದ ಮೇಲಿದ್ದ ಆಭರಣ ಪೋಷಕರಿಗೆ ಹಸ್ತಾಂತರಿಸಿ
ರೇಣುಕಾಸ್ವಾಮಿ ಮೃತ ದೇಹದ ಮೇಲಿದ್ದ ಆಭರಣಗಳನ್ನ ಪೋಷಕರಿಗೆ ನೀಡಲು ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ. ಹಾಗೆಯೇ, ಆ ಆಭರಣಗಳನ್ನು ಬದಲಾವಣೆ ಮಾಡದೆ ಸಂಗ್ರಹಿಸಿಟ್ಟುಕೊಳ್ಳಬೇಕು ಹಾಗೂ ಕೋರ್ಟ್ ಸೂಚಿಸಿದಾಗ ಹಾಜರುಪಡಿಸಬೇಕು ಎಂದು ನಿರ್ದೇಶಿಸಿದೆ.
ಇದನ್ನೂ ಓದಿ: ಬರ್ತ್ಡೇ ಮುಗಿದ ಬೆನ್ನಲ್ಲೇ ದರ್ಶನ್ಗೆ ಶುರುವಾಯ್ತಾ ಒಳ್ಳೆ ದಿನ? ಕೋರ್ಟ್ನಿಂದ ಗುಡ್ ನ್ಯೂಸ್ ಪಡೆದ ಕಿಲ್ಲಿಂಗ್ ಸ್ಟಾರ್!
ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಜರು
ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ದರ್ಶನ್, ಜೈಲಿನ ತಮ್ಮ ಕೊಠಡಿಗೆ ಟಿವಿ ಅಳವಡಿಸಲು ಆದೇಶಿಸಿದಕ್ಕೆ ನ್ಯಾಯಾಧೀಶರಿಗೆ ಧನ್ಯವಾದ ಹೇಳಿದರು. ಹಾಗೆಯೇ, ವಿಚಾರಣೆಗೆ ತಮ್ಮನ್ನು ಖುದ್ದು ಹಾಜರುಪಡಿಸುವಂತೆ ಸೂಚಿಸಬೇಕು. ಆಗ ನಮಗೆ ಒಂದು ಹೊತ್ತು ಮನೆ ಊಟ ಸಿಗುತ್ತದೆ ಎಂದು ನ್ಯಾಯಾಧೀಶರನ್ನು ಕೋರಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನಿಂದ ಮತ್ತೊಂದು ಬೇಡಿಕೆ, ಕೋರ್ಟ್ ಗೆ ಅರ್ಜಿ ಸಲ್ಲಿಕೆ


