ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ ಅಥವಾ ಆಸ್ತಿ ನೋಂದಣಿಯಾದ ಏಳು ದಿನಗಳ ನೋಟಿಸ್‌ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಸ್ವಯಂಚಾಲಿತವಾಗಿ ಖಾತೆ ಬದಲಾವಣೆ ಆಗುವ ಸ್ವಯಂಚಾಲಿತ ಮ್ಯುಟೇಷನ್‌ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಕಾಸಸೌಧದಲ್ಲಿ ಮಂಗಳವಾರ ಚಾಲನೆ ನೀಡಿದರು.

ಬೆಂಗಳೂರು : ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ ಅಥವಾ ಆಸ್ತಿ ನೋಂದಣಿಯಾದ ಏಳು ದಿನಗಳ ನೋಟಿಸ್‌ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಸ್ವಯಂಚಾಲಿತವಾಗಿ ಖಾತೆ ಬದಲಾವಣೆ ಆಗುವ ಸ್ವಯಂಚಾಲಿತ ಮ್ಯುಟೇಷನ್‌ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಕಾಸಸೌಧದಲ್ಲಿ ಮಂಗಳವಾರ ಚಾಲನೆ ನೀಡಿದರು.

Add Asianetnews Kannada as a Preferred SourcegooglePreferred

ಇದರ ಅನ್ವಯ ಆನ್‌ಲೈನ್‌ ಮೂಲಕ ಖಾತೆ ಬದಲಾವಣೆಗೆ ಮನವಿ ಸಲ್ಲಿಸಿದರೆ 7 ದಿನ ನೋಟಿಸ್ ಅವಧಿ ಇರುತ್ತದೆ. ಈ ಅವಧಿಯಲ್ಲಿ ಭೂಮಿ ತಂತ್ರಾಂಶದ ಮೂಲಕ ಯಾರೂ ತಕರಾರು ಸಲ್ಲಿಸದಿದ್ದರೆ ಎಂಟನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗುತ್ತದೆ.

ಇನ್ನು ಉಪನೋಂದಣಿ ಕಚೇರಿಯಲ್ಲಿ ಹೊಸದಾಗಿ ಆಸ್ತಿ ನೋಂದಣಿ ಆದರೆ ಉಪನೋಂದಣಿ ಕಚೇರಿಯಿಂದ ಜೆ-ಸ್ಲಿಪ್ (ಜಮಾಬಂಧಿ) ಬಂದ ನಂತರ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದರೆ ಕಂದಾಯ ನಿರೀಕ್ಷಕರ ಬೆರಳಚ್ಚು ಅಥವಾ ಭೌತಿಕ ಒಪ್ಪಿಗೆಯ ಅಗತ್ಯವಿಲ್ಲದೆಯೇ ಖಾತಾ ಬದಲಾವಣೆಯಾಗಲಿದೆ.

ಈ ಮೊದಲು ನೋಟಿಸ್ ನೀಡಿದ ಬಳಿಕ ಅಧಿಕಾರಿಗಳು ಮ್ಯುಟೇಷನ್ ಮಾಡಲು ವಿಳಂಬ ಮಾಡುತ್ತಿದ್ದರು. ಇದಕ್ಕೆ ಈಗ ಬ್ರೇಕ್‌ ಬಿದ್ದಿದೆ. ಆಸ್ತಿ ಖರೀದಿದಾರರಿಗೆ ಹಾಗೂ ರೈತರಿಗೆ ಅತ್ಯಂತ ವೇಗವಾಗಿ ಹಕ್ಕು ವರ್ಗಾವಣೆ ದಾಖಲೆಗಳು ಸಿಗಲಿವೆ.

ವಾರಸತ್ವ ಹಕ್ಕು, ನ್ಯಾಯಾಲಯ ಆದೇಶ ಮತ್ತಿತರ ಪ್ರಕರಣಗಳಲ್ಲಿ ಖಾತೆ ಬದಲಾವಣೆಗೆ ಮನವಿ ಬಂದರೆ 15 ದಿನ ನೋಟಿಸ್ ಅವಧಿ ಇದ್ದು, ತಕರಾರು ಸಲ್ಲಿಸಬಹುದಾಗಿದೆ. ತಕರಾರು ಇಲ್ಲದಿದ್ದರೆ 16ನೇ ದಿನ ಸ್ವಯಂ ಚಾಲಿತವಾಗಿ ಖಾತೆ ಬದಲಾವಣೆಯಾಗಲಿದೆ.

ಸಾರ್ವಜನಿಕರ ಶೋಷಣೆ ತಪ್ಪಲಿದೆ:

ಈ ಬಗ್ಗೆ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಈ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆ ಮಂಡ್ಯದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದೆವು. ಈಗ ಶೇ.98ರಷ್ಟು ಖಾತೆಗಳನ್ನು ಸ್ವಯಂಚಾಲಿತವಾಗಿ ಬದಲಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ. ಶಾನುಭೋಗರು ಮಾಡುತ್ತಿದ್ದ ಕೆಲಸವನ್ನು ಭೂಮಿ ತಂತ್ರಾಂಶ ಮಾಡಲಿದೆ. ಇದರಿಂದ ಸಾರ್ವಜನಿಕರಿಗೆ ಅಧಿಕಾರಿಗಳ ಸ್ವೇಚ್ಛಾಚಾರ, ಮಧ್ಯವರ್ತಿಗಳ ಸುಲಿಗೆಯಿಂದ ಆಗುತ್ತಿದ್ದ ಕಿರುಕುಳ ತಪ್ಪಲಿದೆ ಎಂದು ಹೇಳಿದರು.

ನೋಟಿಸ್‌ ಅಗತ್ಯವಿಲ್ಲದ ಅಂದರೆ ಸಾಲ ಪಡೆಯುವುದು, ಭೂ ಪರಿವರ್ತನೆ, ಪೋಡಿ, ಭೂಸ್ವಾಧೀನ, ನ್ಯಾಯಾಲಯ ಆದೇಶ, ನ್ಯಾಯಾಲಯ ತಡೆಯಾಜ್ಞೆ, ಸರ್ಕಾರದ ಆದೇಶ, ಸಾಗುವಳಿ ಚೀಟಿ ನಮೂದು, ಪಹಣಿ ವರ್ಗಾವಣೆ ಸೇವೆಗಳನ್ನು 2024ರಿಂದಲೇ ಸ್ವಯಂ ಚಾಲಿತಗೊಳಿಸಲಾಗಿತ್ತು. ಇಂತಹ ಪ್ರಕರಣಗಳು ತಿಂಗಳಿಗೆ ಸರಾಸರಿ 2.47 ಲಕ್ಷ ಖಾತೆ ಬದಲಾವಣೆಗಾಗಿ ಬರುತ್ತಿದ್ದು, ಈ ಪೈಕಿ ಶೇ.70 ರಷ್ಟು ಖಾತೆ ಬದಲಾವಣೆಯನ್ನು ಈಗಾಗಲೇ ಸ್ಚಯಂ ಚಾಲಿತವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಪಹಣಿ ಜೊತೆಗೆ ಆಧಾರ್ ಜೋಡಿಸಲು ಕರೆ:

ನಕಲಿ ವಹಿವಾಟು ತಪ್ಪಿಸಿ ಆಸ್ತಿ ಮಾಲೀಕತ್ವವನ್ನು ಮತ್ತಷ್ಟು ಸುಭದ್ರಗೊಳಿಸಲು ಸಾರ್ವಜನಿಕರು ತಮ್ಮ ಪಹಣಿಯ ಜೊತೆಗೆ ಆಧಾರ್ ಜೋಡಣೆಗೊಳಿಸಬೇಕು. ಇದರಿಂದ ತಮ್ಮ ಆಸ್ತಿಯ ಬಗ್ಗೆ ಯಾವುದೇ ಅನಧಿಕೃತ ವಹಿವಾಟು ನಡೆದರೂ ಮೊಬೈಲ್‌ಗೆ ಸಂದೇಶ ಬರಲಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.

ಮ್ಯುಟೇಷನ್ ಅಂದರೇನು?

ಜಮೀನು ಅಥವಾ ಆಸ್ತಿಯ ಮಾಲೀಕತ್ವವು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾದಾಗ (ಮಾರಾಟ, ದಾನ, ವಿಭಾಗ ಪತ್ರ ಅಥವಾ ಮರಣದ ನಂತರದ ವಾರಸತ್ವ ಹಕ್ಕು) ಸರ್ಕಾರದ ಅಧಿಕೃತ ದಾಖಲೆಗಳಾದ ಪಹಣಿ ಮತ್ತು ಇತರೆ ರಿಜಿಸ್ಟರ್‌ಗಳಲ್ಲಿ ಹೊಸ ಮಾಲೀಕನ ಹೆಸರನ್ನು ಸೇರಿಸುವ ಪ್ರಕ್ರಿಯೆಯೇ ಮ್ಯುಟೇಷನ್.