ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ 30 ವರ್ಷಗಳ ಹೋರಾಟಕ್ಕೆ ರೈಲ್ವೆ ಮಂಡಳಿ ಅಧಿಸೂಚನೆ ಹೊರಡಿಸಿದೆ. ಆದರೆ, ಕೇರಳದ ಒತ್ತಡಕ್ಕೆ ಮಣಿದು ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿದರೆ ತೀವ್ರ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

 ಬೆಂಗಳೂರು (ಆ.28): ಮಂಗಳೂರನ್ನು ಕರ್ನಾಟಕದ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡಬೇಕೆಂಬುದು 30 ವರ್ಷಗಳ ಕನ್ನಡಿಗರ ಹೋರಾಟ. ಅದರಂತೆ ಇದೀಗ ರೈಲ್ವೆ ಮಂಡಳಿಯು ಮೈಸೂರಿನ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಮಂಗಳೂರನ್ನು ವರ್ಗಾವಣೆ ಮಾಡುವ ಅಧಿಸೂಚನೆ ಹೊರಡಿಸಿದ್ದು, ಕೇರಳದ ಒತ್ತಡಕ್ಕೆ ಮಣಿದು ಇದರಲ್ಲಿ ಯಾವುದೇ ಬದಲಾವಣೆ ಮಾಡಿದರೂ ಹೋರಾಟ ನಡೆಸುವುದಾಗಿ ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಜತೆಗೆ, ಮಂಗಳೂರನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆ ಕೇವಲ ನಕ್ಷೆ ಬದಲಾವಣೆಗಷ್ಟೇ ಸೀಮಿತ ಆಗಬಾರದು, ಮಂಗಳೂರಿನ ಮಹತ್ವ ಕುಗ್ಗಿಸಿ ಕೇರಳ ಅಥ‍ವಾ ಕೊಂಕಣಕ್ಕೆ ರೈಲುಗಳನ್ನು ವಿಸ್ತರಿಸುವ ಯಾವುದೇ ಕ್ರಮಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಕನ್ನಡಪರ ಸಂಘಟನೆಗಳು ಹಾಗೂ ರೈಲ್ವೆ ಬಳಕೆದಾರರ ಸಮಿತಿ ಎಚ್ಚರಿಸಿವೆ.

ದಿಲ್ಲಿಯಲ್ಲಿ ಕರವೇ ಪ್ರತಿಭಟನೆ:

ಅ.1ರಿಂದ ಮಂಗಳೂರನ್ನು ನೈಋತ್ಯ ವಿಭಾಗಕ್ಕೆ ಸೇರ್ಪಡೆ ಮಾಡುವ ನಿರ್ಧಾರ ಕನ್ನಡಿಗರ ಹೋರಾಟಕ್ಕೆ ಕೇಂದ್ರ ನೀಡಿದ ಕೊಡುಗೆ. ಈ ಕುರಿತು ಹೊರಡಿಸಿರುವ ಅಧಿಸೂಚನೆಯನ್ನು ಯಥಾವತ್ತಾಗಿ ಜಾರಿಗೆ ತಂದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭೂತ ಪೂರ್ವ ಅಭಿನಂದನೆ ಸಲ್ಲಿಸುತ್ತೇವೆ. ಇದರಲ್ಲಿ ಒಂದು ರೈಲು ನಿಲ್ದಾಣವೂ ಪಾಲಕ್ಕಾಡ್ ( ದಕ್ಷಿಣ ರೈಲ್ವೆ)ಗೆ ಸೇರಿದರೆ, ನಮ್ಮ ಸಂಘಟನೆ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ. ನಮ್ಮೊಂದಿಗೆ ರಾಜ್ಯದ ಎಲ್ಲಾ ಸಂಘಟನೆಗಳ ಕಾರ್ಯಕರ್ತರನ್ನು ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದೆ.

ಇದೇ ವೇಳೆ ಬುಧವಾರ ಕೇರಳಂನಲ್ಲಿ ಕರ್ನಾಟಕದ ಬೆಳವಣಿಗೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ರಾಜ್ಯದ ಯಾವ ರಾಜಕಾರಣಿಯೂ ಒಂದೇ ಒಂದು ಮಾತನ್ನೂ ಹೇಳದಿರುವುದು ಖಂಡನೀಯ ಎಂದು ಕರವೇ ಸೇರಿ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ನಾರಾಯಣಗೌಡ ಹೇಳಿದ್ದೇನು?

ಈ ಸಂಬಂಧ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು, ಕೇಂದ್ರದ ಈ ಐತಿಹಾಸಿಕ ನಿರ್ಣಯವನ್ನು ಒಬ್ಬ ಜನಪ್ರತಿನಿಧಿಯೂ ಸ್ವಾಗತಿಸಿಲ್ಲ. ಕೇಂದ್ರಕ್ಕೆ ಅಭಿನಂದನೆ ತಿಳಿಸಿಲ್ಲ. ಒಳ್ಳೆಯ ಕೆಲಸ ಯಾರಿಂದಾದರೂ ಆಗಲಿ ಅವರಿಗೆ ಅಭಿನಂದಿಸುವುದು ನಮ್ಮ ಕರ್ತವ್ಯ. ಕೇರಳಂನಲ್ಲಿ ಅಷ್ಟು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಇವರಾರಿಗೂ ಸಂಬಂಧವೇ ಇಲ್ಲವೆಂಬಂತೆ ಇದ್ದಾರೆ ಎಂದರು.

ಕಳೆದ ಮೂವತ್ತು ವರ್ಷಗಳಿಂದ ಮಂಗಳೂರನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬುದೂ ಸೇರಿ ರೈಲ್ವೆ ಇಲಾಖೆಯಲ್ಲಿ ಹಲವು ಬೇಡಿಕೆ ಈಡೇರಿಕೆಗೆ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ನಡೆಸುತ್ತಲೇ ಬಂದಿದೆ. ನಮ್ಮ ಸಂಘಟನೆ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಕರ್ನಾಟಕಕ್ಕೆ ಯಾವ ಮಟ್ಟದಲ್ಲಾದರೂ ಅನ್ಯಾಯವಾದರೆ ಸಂಘಟನೆ ಹೋರಾಟ ತೀವ್ರಗೊಳಿಸುತ್ತದೆ ಎಂದರು.