ಐಸ್ಕ್ರೀಂ, ಹಣ್ಣಿಗೆ ಡ್ರಗ್ಸ್ ಸವರಿ ಶಾಲಾ ಮಕ್ಕಳಿಗೆ ನೀಡಿಕೆ: ಶಿಕ್ಷಣ ಸಚಿವ ಶಂಕೆ
ಸ್ಯಾಂಡಲ್ವುಡ್ಗೆ ಡ್ರಗ್ ಮಾಫಿಯಾದೊಂದಿಗೆ ಇರುವ ನಂಟು ಒಂದೊಂದಾಗಿ ಬಯಲಿಗೆ ಬರುತ್ತಿದೆ. ಇದರೊಂದಿಗೆ ರಾಜ್ಯದ ಪ್ರತಿಷ್ಠಿತ ಶಾಲೆಗಳೂ ಈ ಮಾಫಿಯಾದಲ್ಲಿ ಸಿಕ್ಕಿರುವ ಸಾಧ್ಯತೆಗಳಿದ್ದು, ಮಕ್ಕಳು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ ಶಿಕ್ಷಣ ಸಚಿವರ.
ಚಾಮರಾಜನಗರ (ಸೆ.8): ಮಾದಕ ವಸ್ತು ಜಾಲ ಶ್ರೀಮಂತರ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿರುವ ಆತಂಕಕಾರಿ ಮಾಹಿತಿಯನ್ನು ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಹೊರಹಾಕಿದ್ದಾರೆ. ಶ್ರೀಮಂತರ ಮಕ್ಕಳನ್ನು ಮಾದಕ ವಸ್ತುಗಳ ಜಾಲಕ್ಕೆ ಸೆಳೆಯಲು ಪ್ರತಿಷ್ಠಿತ ಶಾಲೆಯ ಮಕ್ಕಳು ತಿನ್ನುವ ಐಸ್ ಕ್ರೀಂ ಅಥವಾ ಹಣ್ಣುಗಳಿಗೆ ಡ್ರಗ್ಸ್ ಸವರುತ್ತಿರುವ ಗುಮಾನಿ ಇದೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಯುವ ಜನತೆಯನ್ನು ಹಾಳು ಮಾಡುವ ಜನರನ್ನು ಹಿಡಿದು ಜೈಲಿಗೆ ಕಳುಹಿಸುತ್ತೇವೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ, ಡ್ರಗ್ಸ್ ಸಮಾಜ ಹಾಗೂ ಯುವ ಜನಾಂಗವನ್ನು ದುರ್ಬಲ ಮಾಡುವ ಪ್ರಯತ್ನವಾಗಿದೆ. ಈ ಪ್ರಯತ್ನವನ್ನು ಬೇರು ಸಮೇತವಾಗಿ ಕಿತ್ತು ಹಾಕಬೇಕು ಎಂದರು.
ನಾನು ಡ್ರಗ್ಸ್ ವಿಚಾರದಲ್ಲಿ ಯಾವುದೇ ಶಾಲೆಯ ಬಗ್ಗೆ ಆರೋಪ ಮಾಡಿಲ್ಲ. ಬದಲಿಗೆ ಖಾಸಗಿ ಶ್ರೀಮಂತ ಶಾಲೆಗಳ ಪರಿಸರದಲ್ಲಿ ಈ ಮಾದಕ ವಸ್ತುಗಳ...
Posted by Suresh Kumar S on Monday, September 7, 2020
ಡ್ರಗ್ ಮಾಫಿಯಾಕ್ಕೆ ಸಿಎಂ ಖಡಕ್ ವಾರ್ನಿಂಗ್
ಕರ್ನಾಟಕದಲ್ಲಿ ಸಾಕಷ್ಟುಡ್ರಗ್ಸ್ ದಂಧೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸ್ಯಾಂಡಲ್ವುಡ್ನಲ್ಲೂ ಡ್ರಗ್ಸ್ಗೆ ಸಂಬಂಧಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಡ್ರಗ್ಸ್ ದಂಧೆ ಕುರಿತು ಮೂರು ವರ್ಷದ ಹಿಂದೆಯೇ ಬಿಜೆಪಿ ಧ್ವನಿ ಎತ್ತಿದೆ. ಆಗಿನ ಡೆಪ್ಯುಟಿ ಸ್ಪೀಕರ್ ಯೋಗೀಶ್ ಭಟ್ ಈ ಬಗ್ಗೆ ತನಿಖೆಯನ್ನೂ ಮಾಡಿಸಿದ್ದರು ಎಂದು ಸುರೇಶ್ ಕುಮಾರ್ ಹೇಳಿದರು.
ಡ್ರಗ್ ಪೆಡ್ಲರ್ ವಿರುದ್ಧ ಖಾಕಿ ಸಮರ
ರಾಜಧಾನಿ ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಸಮರ ಸಾರಿರುವ ಖಾಕಿ ಪಡೆ 11 ಮಂದಿ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್ಸ್ ಸೇರಿ ಒಟ್ಟು 31 ಮಂದಿಯನ್ನು ಬಂಧಿಸಿದೆ.
ಈ ಆರೋಪಿಗಳಿಂದ ಬರೋಬ್ಬರಿ .2.10 ಕೋಟಿ ಮೌಲ್ಯದ ಹಶೀಶ್ ಆಯಿಲ್, ಬ್ರೌನ್ಶುಗರ್ ಸೇರಿ ಹಲವು ರೀತಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಹೇಳಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬಂಧಿತರಲ್ಲಿ ವಿದ್ಯಾರ್ಥಿಗಳು ಇದ್ದಾರೆ. ಈ ಆರೋಪಿಗಳು ಡಾರ್ಕ್ವೆಬ್ ಸೈಟ್ ಮೂಲಕ ಮಾದಕ ವಸ್ತುಗಳನ್ನು ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಗ್ನೇಯ ಮತ್ತು ಪೂರ್ವ ವಿಭಾಗದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿಸಿದರು.
ರಾಗಿಣಿ ಆಯ್ತು, ಇದೀಗ ಸಂಜನಾ ಗರ್ಲಾನಿಯೂ ಅರೆಸ್ಟ್
ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ವಿದ್ಯಾರ್ಥಿಗಳ ಬಂಧನ!
ತಿಲಕ್ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಮಾದಕ ವ್ಯಸನಿಯಾಗಿದ್ದ ವಿದ್ಯಾರ್ಥಿಯೊಬ್ಬನನ್ನು ವಿಚಾರಣೆ ನಡೆಸಿದಾಗ ಅದೇ ಕಾಲೇಜಿನ ವಿದ್ಯಾರ್ಥಿಗಳೇ ಡ್ರಗ್ ಪೆಡ್ಲರ್ಗಳೆಂಬುದು ಗೊತ್ತಾಗಿತ್ತು.
ಈ ಸಂಬಂಧ ಜೆ.ಪಿ.ನಗರ ನಿವಾಸಿ ಬಿ.ಇ.ವಿದ್ಯಾರ್ಥಿ ಅತಿಥ್ಯ ವೋರಾ ಅಲಿಯಾಸ್ ಗುಜ್ಜು(23), ಜಯನಗರ ನಿವಾಸಿ ಬಿ.ಇ.ವಿದ್ಯಾರ್ಥಿ ಪ್ರಶಾಂತ್ (21), ಬಿ.ಕಾಂ ವಿದ್ಯಾರ್ಥಿ ಪುನೀತ್ (22), ಬಿಎಸ್ಕೆ ಲೇಔಟ್ ಬಿಸಿಎ ವಿದ್ಯಾರ್ಥಿ ನಚಿಕೇತ್(19) ಮತ್ತು ಬಿಎಂಎಸ್ ವಿದ್ಯಾರ್ಥಿ ನಾಗರಾಜ್ ರಾವ್(21) ಬಂಧಿಸಲಾಗಿದೆ.
ಬಂಧಿತರಿಂದ ನಾಲ್ಕು ಲಕ್ಷ ಮೌಲ್ಯದ 1 ಕೆ.ಜಿ. 500 ಗ್ರಾಂ ಗಾಂಜಾ, 25 ಗ್ರಾಂ ಹೈಡ್ರೋ ಗಾಂಜಾ, ಗಾಂಜಾ ಗಿಡಗಳು, ಐದು ಎಂಡಿಎಂಎ ಮಾತ್ರೆಗಳು, ಎಲ್ಎಸ್ಡಿ ಸ್ಟ್ರೀಫ್ಸ್ ಮತ್ತು ಎರಡು ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳ ಪೈಕಿ ಎಂಜಿನಿಯರ್ ಹಾಗೂ ಕೆಲ ಪದವಿ ವಿದ್ಯಾರ್ಥಿಗಳಾಗಿದ್ದು, ಮೋಜಿನ ಜೀವನಕ್ಕಾಗಿ ದಂಧೆಯಲ್ಲಿ ತೊಡಗಿದ್ದರು.
ಈ ಪೈಕಿ ಅತಿಥ್ಯ ವೋರಾ ಗುಜರಾತ್ ಮೂಲದವನಾಗಿದ್ದು, ನಗರದಲ್ಲಿರುವ ಬಾಡಿಗೆ ಮನೆಯೊಳಗೆ ಹೂವಿನ ಕುಂಡಗಳಲ್ಲಿ ಗಾಂಜಾ ಬೆಳೆಯುತ್ತಿದ್ದ. ನೆರೆ ರಾಜ್ಯಗಳಿಂದ ಗಾಂಜಾ ಗಿಡ ತರಿಸಿ ಅವುಗಳನ್ನು ಹೂವಿನ ಕುಂಡುಗಳಲ್ಲಿ ಹಾಕಿ ಹೈಡ್ರೋ ಗಾಂಜಾ(ನರ್ಸರಿ ಮಾದರಿಯಲ್ಲಿ) ಬೆಳೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.