ಅಹಂ ಇಲ್ಲದ ಆತ್ಮೀಯ ಸ್ನೇಹಿತನ ಅಗಲಿಕೆ ನೋವುಂಟು ಮಾಡಿದೆ : ಪ್ರಜ್ವಲ್
- ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಇಂದು ನನ್ನನ್ನಾವರಿಸಿದೆ
- ವಿಜಯ್ ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ಊಹಿಸಲೂ ಕಷ್ಟ - ಪ್ರಜ್ವಲ್ ರೇವಣ್ಣ
- ಭರವಸೆಯ ನಟ ವಿಜಯ್ ಕೂಡ ಅಂಥದ್ದೇ ನಿರಾಶೆ ಮೂಡಿಸಿಬಿಟ್ಟರು -HDK ಸಂತಾಪ
ಬೆಂಗಳೂರು (ಜೂ.15): ನಟ, ಮಾನವೀಯ ಗುಣದ ಸಂಚಾರಿ ವಿಜಯ್ ನಿಧನಕ್ಕೆ ಅವರ ಆತ್ಮೀಯ ಬಳಗದಲ್ಲಿ ಒಬ್ಬರಾಗಿದ್ದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಸಂಚಾರಿ ವಿಜಯ್ ಜೊತೆಗಿನ ಒಡನಾಟದ ಬಗ್ಗೆ ನೆನೆದ ಪ್ರಜ್ವಲ್ ರೇವಣ್ಣ ವಿಜಯ್ ಅವರು ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬರು. ನಾವಿಬ್ಬರೂ ಒಟ್ಟಿಗೆ ಬ್ಯಾಡ್ಮಿಂಟನ್ ಆಡ್ತಾ ಇದ್ವಿ. ವಿಜಯ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ನಾನು ರಾಷ್ಟ್ರ ಪ್ರಶಸ್ತಿ ತೆಗೆದುಕೊಂಡಿದ್ದೇನೆ ಅನ್ನೋ ಒಂದು ಸಣ್ಣ ಅಹಂ ಕೂಡ ವಿಜಯ್ ಅವರಿಗೆ ಇರಲಿಲ್ಲ ಎಂದು ನೆನಪಿಸಿಕೊಂಡರು.
ಸಂಚಾರಿ ವಿಜಯ್ ಕಿಡ್ನಿ ಕಸಿ ಸಕ್ಸಸ್: ಅಂಧರ ಬಾಳಿಗೆ ಬೆಳಕಾದ ಕಣ್ಣುಗಳು! .
ಅವರಿಗೆ ಸಮಾಜದ ಬಗ್ಗೆ ಒಂದು ವಿಶೇಷ ಕಾಳಜಿ ಇತ್ತು, ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದರು. ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ವಿಜಯ್ ಇಂದು ನಮ್ಮೊಂದಿಗಿಲ್ಲ ಎನ್ನುವುದನ್ನು ಊಹಿಸಲೂ ಕಷ್ಟವಾಗುತ್ತಿದೆ. ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡ ದುಃಖ ಇಂದು ನನ್ನನ್ನಾವರಿಸಿದೆ ಎಂದು ಪ್ರಜ್ವಲ್ ಸಂಚಾರಿ ವಿಜಯ್ ಅವರನ್ನು ನೆನೆದಿದ್ದಾರೆ.
ಎಲ್ಲರ ನೋವಿಗೂ ಸ್ಪಂದಿಸುತ್ತಿದ್ದ ಜೀವ ವಿಜಯ್; ಭಾವುಕರಾದ ಡಾಲಿ ಧನಂಜಯ್!
ಕುಮಾರಸ್ವಾಮಿ ಸಂತಾಪ : ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಅವರ ಅಭಿಮಾನಿಗಳಿಗೆ ಕುಟುಂಬ ವರ್ಗದವರಿಗೆ ವಿಜಯ್ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ವೈವಿಧ್ಯಮಯ ಪಾತ್ರಗಳ ಬೆನ್ನೇರಿ ಸಂಚರಿಸುತ್ತಿದ್ದ, ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ, ಅಪರೂಪದ ವ್ಯಕ್ತಿತ್ವದ ಸಂಚಾರಿ ವಿಜಯ್ ನಿರ್ಗಮನ ದುಃಖ ತರಿಸಿದೆ. ಶಂಕರ್ ನಾಗ್ ಇದ್ದಿದ್ದರೆ ಕನ್ನಡ ಚಿತ್ರರಂಗ ಮಹತ್ತರ ಸ್ಥಾನಕ್ಕೇರುತ್ತಿತ್ತು ಎಂದು ನಾವೆಲ್ಲ ಇಂದಿಗೂ ಬೇಸರಿಸಿಕೊಳ್ಳುತ್ತೇವೆ. ಭರವಸೆಯ ನಟ ವಿಜಯ್ ಕೂಡ ಅಂಥದ್ದೇ ನಿರಾಶೆ ಮೂಡಿಸಿಬಿಟ್ಟರು.
ಸರಳ, ಸಜ್ಜನಿಕೆಯ ವಿಜಯ್ ಅವರು ಕೋವಿಡ್ ಪರಿಹಾರ ಕಾರ್ಯಗಳಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಇದು ಅವರ ಜನಪರ ನಿಲುವಿಗೆ ಹಿಡಿದ ಕನ್ನಡಿ. ವಿಜಯ್ ಸಾವಿನ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಿಲಿ. ಸಂಚಾರಿ ವಿಜಯ್ ಅವರ ಕುಟುಂಬಸ್ಥರ ದುಃಖ ನಮ್ಮದೂ ಆಗಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದರು.