ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಸಿಡಿದೆದ್ದ ಸಚಿವ ರಾಮಲಿಂಗಾರೆಡ್ಡಿ; ಪೊಲೀಸ್ ಆಯುಕ್ತರಿಗೆ ವಾರ್ನಿಂಗ್!

ಬೆಂಗಳೂರಿನಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಮೂರು ಹಲ್ಲೆ ಪ್ರಕರಣಗಳು ವರದಿಯಾಗಿವೆ. ಸಚಿವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Minister Ramalinga Reddy Warning to police commissioner for attacked on BMTC staff sat

ಬೆಂಗಳೂರು (ಅ.28): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಜೀವನಾಡಿ ಆಗಿರುವ ಬಿಎಂಟಿಸಿ ಬಸ್‌ಗಳ ಸಿಬ್ಬಂದಿ ಮೇಲೆ ಸಾರ್ವಜನಿಕರು ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೂಡಲೇ ಬಗ್ಗೆ ಕಠಿಣ ಕ್ರಮವನ್ನು ಕೈಗೊಂಡು ಸಿಬ್ಬಂದಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುತ್ತಿರುವ ಬಿಎಂಟಿಸಿ ಸಿಬ್ಬಂದಿ ಕಂಡಕ್ಟರ್ ಹಾಗೂ ಡ್ರವೈವರ್‌ಗಳ ಮೇಲೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ವಿನಾ ಕಾರಣ/ ಕ್ಷುಲ್ಲಕ ಕಾರಣಾಕ್ಕೆ ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಿದ್ದಾರೆ. ಬಿಎಂಟಿಸಿ ಬಸ್‌ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಹಗಲಿರುಳು ದುಡಿದು, ಪುನಃ ಅವರಿಂದಲೇ ಹಲ್ಲೆಗೆ ಒಳಗಾಗುತ್ತಿರುವುದು ಶೋಚನೀಯವಾಗಿದೆ. ಕಳೆದೊಂದು ತಿಂಗಳಲ್ಲಿ ನಗರದಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ಒಟ್ಟು ಮೂರು ಹಲ್ಲೆ ಪ್ರಕರಣಗಳು ನಡೆದಿವೆ. ಈ ಬಗ್ಗೆ ಈಗಾಗಲೇ ಘಟಕ ಅಧಿಕಾರಿಗಳಿಂದ ದೂರು ದಾಖಲಾಗಿದ್ದು, ಸಂಬಂಧಪಟ್ಟ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪತ್ರದ ಮೂಲಕ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: ಸಚಿವ ಜಮೀರ್ ಅಹಮದ್, ಆಧುನಿಕ ಟಿಪ್ಪು ಸುಲ್ತಾನ್ ಆಗಲು ಹೊರಟಿದ್ದಾರೆ: ಆರ್. ಅಶೋಕ್

ಹಲ್ಲೆ ನಡೆದ ಪ್ರಕರಣಗಳ ವಿವರ ಉಲ್ಲೇಖ:
ದಿನಾಂಕ:01-10-2024, ಘಟಕ-13, ಕೆಎ-57 ಎಫ್-0015 ವಾಹನವು ಅನುಸೂಚಿ ಸಂಖ್ಯೆ.500-ಸಿಕೆ/13 ರಲ್ಲಿ ಆಚರಣೆಯಾಗುತ್ತಿದ್ದು, ಚಾಲಕರಾಗಿ ಶ್ರೀ ಸಿದ್ದಲಿಂಗಸ್ವಾಮಿ ಮತ್ತು ನಿರ್ವಾಹಕರಾಗಿ ಶ್ರೀ ಯೋಗೇಶ್, ಚಾಲಕ-ಕಂ-ನಿರ್ವಾಹ, ಬಿಲ್ಲೆ ಸಂಖ್ಯೆ.6899 ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ 5.50 ರಲ್ಲಿ ಐಟಿಪಿಎಲ್ ಬಸ್ ನಿಲುಗಡೆಯ ಬಳಿ ವಾಹನದ ಮಧ್ಯದ ಬಾಗಿಲಿನ ಬಳಿ ನಿಂತಿದ್ದ ಶ್ರೀ ಹರ್ಷ ಸಿನ್ಹ ಎಂಬ ಪ್ರಯಾಣಿಕರಿಗೆ ನಿರ್ವಾಹಕರು ಸುರಕ್ಷತೆಯ ಹಿತದೃಷ್ಟಿಯಿಂದ ಬಸ್ಸಿನ ಒಳಗೆ ಬರುವಂತೆ ತಿಳಿಸಿರುತ್ತಾರೆ. ಇದರಿಂದ ಏಕಾಏಕಿ ಕೆರಳಿದ ಪ್ರಯಾಣಿಕರು ಹಿಂಸಾತ್ಮಕವಾಗಿ ವರ್ತಿಸಿ ಸಂಸ್ಥೆಯ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದು, ಸಹ ಪ್ರಯಾಣಿಕರ ಮೇಲೆಯೂ ಸಹ ಹಲ್ಲೆ ಮಾಡಲು ಮುಂದಾಗಿ ಎಲ್ಲರೂ ತಕ್ಷಣ ಬಸ್ಸಿನಿಂದ ಕೆಳಗೆ ಇಳಿಯುವಂತೆ ತಾಕೀತು ಮಾಡಿರುತ್ತಾರೆ.

ದಿನಾಂಕ: 18-10-2024, ಘಟಕ-19, ಕೆಎ-57 ಎಫ್-1107 ವಾಹನವು ಅನುಸೂಚಿ ಸಂಖ್ಯೆ.500-ಇಬಿ/10 ರಲ್ಲಿ ಆಚರಣೆಯಾಗುತ್ತಿದ್ದು, ಮಧ್ಯಾಹ್ನ ಸುಮಾರು 2.30 ರ ಸಮಯದಲ್ಲಿ ಚಾಲಕ-ನಿರ್ವಾಹಕರು ಊಟ ಮಾಡುತ್ತಿದ್ದ ಸಮಯದಲ್ಲಿ ಶ್ರೀ ಹೇಮಂತ್ ಎಂಬುವವರು ನಿರ್ವಾಹಕರ ತಲೆಗೆ ಕಲ್ಲಿನಿಂದ ಹೊಡೆದು ಪರಾರಿಯಾಗಿದ್ದು, ಇತರೆ ಸಿಬ್ಬಂದಿಗಳ ಸಹಾಯದೊಂದಿಗೆ ಅವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಪೊಲೀಸರು ವಿಚಾರಿಸಲಾಗಿ ಮೂರು ದಿನಗಳ ಹಿಂದೆ ಪಾಸು ತೋರಿಸುವ ವಿಚಾರವಾಗಿ ನಿರ್ವಾಹಕರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವುದು ತಿಳಿದುಬಂದಿರುತ್ತದೆ.

ಇದನ್ನೂ ಓದಿ: 10 ರೂ. ನಾಣ್ಯಗಳ ಚಲಾವಣೆ ಬಗ್ಗೆ ಆರ್‌ಬಿಐ ಸ್ಪಷ್ಟನೆ

ದಿನಾಂಕ 26-10-2024, ಘಟಕ-30 ವಾಹನ ಸಖ್ಯೆ, ಕೆಎ-51 ಎಹೆಚ್6033, ಅನುಸೂಚಿ ಸಂಖ್ಯೆ.290-ಇ/26 ರಲ್ಲಿ ಆಚರಣೆಯಾಗುತ್ತಿದ್ದು, ಚಾಲಕರಾಗಿ ಗಗನ್ (ಖಾಸಗಿ ಚಾಲಕ) ಮತ್ತು ನಿರ್ವಾಹಕರಾಗಿ ಶಿವ ಕುಮಾರ್, ಚಾಲಕ-ಕಂ- ನಿರ್ವಾಹಕ, ಬಿಲ್ಲೆ ಸಂಖ್ಯೆ.6631 ಕರ್ತವ್ಯ ನಿರ್ವಹಿಸುತ್ತಿದ್ದರು. ವಾಹನವು ಯಲಹಂಕದಿಂದ ಶಿವಾಜಿನಗರಕ್ಕೆ ಬರುವಾಗ ಸಂಜೆ 5.25 ರಲ್ಲಿ ಟ್ಯಾನರಿ ರಸ್ತೆಯ ಕೆನರಾ ಬ್ಯಾಂಕ್ ಬಸ್ ನಿಲುಗಡೆಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಬಸ್ಸಿನ ಮುಂಭಾಗದಿಂದ ಬಸ್ಸಿಗೆ ಹತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಲಕರ ಮೇಲೆ ಹಲ್ಲೆ ನಡೆಸಿದ್ದು, ಇದನ್ನು ಪ್ರಶ್ನಿಸಿದ ನಿರ್ವಾಹಕರನ್ನೂ ಸಹ ಎಳೆದಾಡಿ ಹಲ್ಲೆ ನಡೆಸಿದ್ದು, ಸಮೀಪದಲ್ಲಿದ್ದ ತನಿಖಾದಳ ಸಿಬ್ಬಂದಿಗಳು ಚಾಲಕ-ನಿರ್ವಾಹಕರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿಸಿರುತ್ತಾರೆ.

ಈ ರೀತಿಯ ಪ್ರಕರಣಗಳು ಮರುಕಳಿಸುವುದರಿಂದ ಸಂಸ್ಥೆಯ ನೌಕರರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗುತ್ತಿರುವುದು ಖೇದಕರ. ಆದ್ದರಿಂದ ಈ ಬಗ್ಗೆ ತಾವು ಗಮನಹರಿಸಿ, ಇಂತಹ ಪ್ರಕರಣಗಳಲ್ಲಿ ತಪ್ಪು ಎಸಗಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಿ, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ನಡೆಯದಂತೆ ನಗರದ ಪೋಲಿಸ್ ಠಾಣೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಸಾರಿಗೆ ಸಿಬ್ಬಂದಿಗಳು ಒತ್ತಡ ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಕೋರಿದ್ದಾರೆ.

Latest Videos
Follow Us:
Download App:
  • android
  • ios