ಚಿತ್ತಾಪುರದಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರಾದ ಕೃಷ್ಣಾ ಜೋಷಿ, ಸಂಘದ ನೂರರ ಸಂಭ್ರಮದ ಹಿನ್ನೆಲೆಯಲ್ಲಿ ಅದರ ಸಾಧನೆ ವಿವರಿಸಿದರು. ಅಸಂಘಟಿತ ಹಿಂದೂಗಳನ್ನು ಒಗ್ಗೂಡಿಸುವುದು ದೇಶ ವಿರೋಧಿ ಶಕ್ತಿಗಳನ್ನು ವಿರೋಧಿಸುವುದೇ ಸಂಘದ ಗುರಿ ಎಂದು ಅವರು ಪ್ರತಿಪಾದಿಸಿದರು.

ಚಿತ್ತಾಪುರ (ನ.16): ನಾವಿಂದು ಆರ್‌ಎಸ್‌ಎಸ್ ಶತಾಬ್ದಿ ಸಂಭ್ರಮದಲ್ಲಿದ್ದೇವೆ. ಸಂಘಕ್ಕೆ ನೂರು ವರ್ಷ ಆಗಿದೆ. ಸಂಘ ಏನು ಕೆಲಸ ಮಾಡಿದೆ ಅಂತ ಅನೇಕರು ಪ್ರಶ್ನೆ ಮಾಡ್ತಾರೆ. ನಿಜಕ್ಕೂ ಇವತ್ತು ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಸಂಚಲನ ಮೂಡಿಸಿದೆ ಎಂದು ಆರ್‌ಎಸ್‌ಎಸ್ ಪ್ರಮುಖ ಕೃಷ್ಣಾ ಜೋಷಿ ಹೇಳಿದರು.

ಇಂದು ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಬಳಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕೃಷ್ಣಾ ಜೋಷಿ ಅವರು, ಸ್ವಯಂ ಸೇವಕ ಸಂಘ 1925ರ ವಿಜಯದಶಮಿಯಂದು ಸಂಘ ಸ್ಥಾಪನೆ ಆಗಿದೆ. ಆದರೆ ಈಗ ಸಂಘ ಏನು ಮಾಡಿದೆ ಅಂತ ಪ್ರಶ್ನೆ ಮಾಡ್ತಿದ್ದಾರೆ. ಲಕ್ಷಾಂತರ ಜನರನ್ನು ಸ್ವಯಂಸೇವಕರನ್ನಾಗಿ ನಿರ್ಮಾಣ ಮಾಡಿದ್ದು ಸಂಘ. ಹಿಂದೂಗಳು ಸಂಘಟಿತರಾಗಿರಲಿಲ್ಲ. ಅಸಂಘಟಿತ ಹಿಂದೂಗಳನ್ನು ಸಂಘಟಿತರನ್ನಾಗಿ ಮಾಡಿದ್ದು ಸಂಘ ಎಂದು ಭಾಷಣದ ಮೂಲಕ ತಿರುಗೇಟು ನೀಡಿದರು.

ದೇಶ ಹಾಳಾಗೋದಕ್ಕೂ ಹಿಂದೂಗಳೇ ಕಾರಣ!

ಈ ದೇಶ ಯಾವಾಗ ವೈಭವಕ್ಕೆ ಹೋಗಿದೆಯೋ ಅದಕ್ಕೆ ಹಿಂದೂಗಳೇ ಕಾರಣ. ದೇಶ ಹಾಳಾಗೋದಕ್ಕೂ ಹಿಂದೂಗಳೇ ಕಾರಣ. ಹಿಂದೂಗಳನ್ನು ಸಂಘಟಿತರನ್ನಾಗಿ ಮಾಡಬೇಕು. ಸಂಘ ಏನೂ ಮಾಡ್ತು ಅಂದರೆ ಸ್ವಯಂಸೇವಕರನ್ನು ಬೆಳೆಸಿದೆ.ಅಖಂಡ ಭಾರತದ ಬಗ್ಗೆ ಪ್ರಸ್ತಾಪಿಸಿದ ಜೋಷಿ ಅವರು, ಅಸ್ಸಾಂ, ಮಣಿಪುರ, ಮೇಘಾಲಯ ಇವೆಲ್ಲ ಅಖಂಡ ಭಾರತ. ಆ ರಾಜ್ಯಗಳಲ್ಲಿ ಇಂದು ಹಿಂದೂತ್ವದ ಭಾವನೆ ತರುವಲ್ಲಿ ಸಂಘ ಯಶಸ್ವಿಯಾಗಿದೆ. ದೇಶವನ್ನು ಬಿಟ್ಟು ಹೋಗುವ ಪ್ರದೇಶವನ್ನು ಉಳಿಸಿಕೊಳ್ಳುವ ಕೆಲಸ ಸಂಘ ಮಾಡಿದೆ. ಸಂಘ ಏನು ಮಾಡಿದೆ ಎನ್ನುವುದಕ್ಕೆ ಇಂದು ಚಿತ್ತಾಪೂರ ಜನರ ಕೊಟ್ಟ ಅಭೂತ್ಪೂರ್ವ ಬೆಂಬಲವೇ ಹೇಳುತ್ತದೆ. ಇಂದಿನ ಚಿತ್ತಾಪೂರ ಜನರ ಬೆಂಬಲ ನೋಡಿದರೆ ಮತ್ತೆಂದೂ ಸಂಘ ಏನು ಮಾಡಿದೆ ಎಂದು ಪ್ರಶ್ನಿಸಬಾರದು ಎಂದು ತಿರುಗೇಟು ನೀಡಿದರು.

ಭಾರತ ಒಡೆಯಲು ಯತ್ನಿಸುವವರ ನಮ್ಮ ವಿರೋಧಿಗಳು:

ಭಾರತ ಮಾತೆಯ ಕೆಲಸ ಸಂಘ ಮಾಡಿದೆ.. ಮಾಡುತ್ತಿದೆ. ಸಾಮಾಜಿಕ ಪರಿವರ್ತನೆಯ ಚಟುವಟಿಕೆಗಳನ್ನು ಮಾಡುತ್ತಿದೆ. ಶಿಕ್ಷಣ, ಸುರಕ್ಷೆ, ಆರ್ಥಿಕ ಚಟುವಟಿಕೆ, ಸಾಮಾಜಿಕ ಚಟುವಟಿಕೆಗಳಲ್ಲಿ ಆರ್‌ಎಸ್‌ಎಸ್ ಆರು ಸಂಕುಲಗಳಾಗಿ 36 ಸಂಘಟನೆಗಳು ಕೆಲಸ ಮಾಡುತ್ತಿವೆ. ಜಗತ್ತಿನ 40 ದೇಶಗಳಲ್ಲಿ ಸಂಘ ತನ್ನ ಚಟುವಟಿಕೆಗಳನ್ನು ಮಾಡುತ್ತಾ ಹಿಂದೂಗಳ ಸಂಘಟಿಸುವ ಕೆಲಸ ಮಾಡುತ್ತಿದೆ. ಸಂಘ ಯಾರ ವಿರುದ್ಧವೂ ಅಲ್ಲ, ಭಾರತ ಒಡೆಯಲು ಯತ್ನಿಸುವವರು ಮಾತ್ರ ನಮ್ಮ ವಿರೋಧಿಗಳು. ರಾಮಜನ್ಮಭೂಮಿ, ಕಾಶ್ಮೀರ 370 ವಿಧಿ ರದ್ದತಿಯ ವಿಚಾರದಲ್ಲಿ ಸಂಘ ಕೆಲಸ ಮಾಡಿದೆ ಎಂದರು.

ಈ ಸಮಾರೋಪ ಸಮಾರಂಭವು ಚಿತ್ತಾಪುರದಲ್ಲಿ ಸಂಘದ ಚಟುವಟಿಕೆಗಳಿಗೆ ಹೊಸ ಉತ್ಸಾಹ ತಂದಿದ್ದು, ಸ್ಥಳೀಯರು ಸಂಘದ ಬೆಂಬಲಿಗರಾಗಿ ತಮ್ಮನ್ನು ತಾವು ಸ್ವಯಂ ಸೇವೆಗೆ ಸರ್ಪಿಸಿಕೊಂಡಿದ್ದಾರೆ.