ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆ, ಕಾಲೇಜುಗಳು ಇರುವಂಥ ಜಮೀನುಗಳನ್ನು ಕೆಲವರು ದಾನ ನೀಡಿರುತ್ತಾರೆ. ಆದರೆ ಆಗ ಇಲಾಖೆ ಹೆಸರಿಗೆ ಮಾಡಿಸಿಕೊಂಡಿರುವುದಿಲ್ಲ.

ವಿಧಾನಸಭೆ (ಮಾ.25): ರಾಜ್ಯದ ಸರ್ಕಾರಿ ಶಾಲೆ, ಪಿಯು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿರುವ ಜಾಗದ ದಾಖಲೆಗಳು ಶಿಕ್ಷಣ ಇಲಾಖೆ ಹೆಸರಲ್ಲಿಲ್ಲದಿದ್ದರೂ ಅವುಗಳನ್ನು ಸರ್ಕಾರದ ಆಸ್ತಿಯಾಗಿ ಸಕ್ರಮಗೊಳಿಸುವ 2026ನೇ ಸಾಲಿನ ‘ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆ ಭೂಮಿಗಳ ರಕ್ಷಣೆ ಮತ್ತು ಸಕ್ರಮಾತಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

Add Asianetnews Kannada as a Preferred SourcegooglePreferred

ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಶಾಲೆ, ಕಾಲೇಜುಗಳು ಇರುವಂಥ ಜಮೀನುಗಳನ್ನು ಕೆಲವರು ದಾನ ನೀಡಿರುತ್ತಾರೆ. ಆದರೆ ಆಗ ಇಲಾಖೆ ಹೆಸರಿಗೆ ಮಾಡಿಸಿಕೊಂಡಿರುವುದಿಲ್ಲ. ಅಂಥ ಜಮೀನುಗಳಿಗೆ ದಾನ ಮಾಡಿದವರ ವಾರಸುದಾರರು ತಕರಾರು ಮಾಡುತ್ತಿರುವ ನಿದರ್ಶನಗಳಿವೆ. ಅಂಥ ಆಸ್ತಿಗಳನ್ನೆಲ್ಲ ಸಂರಕ್ಷಿಸಿ ಸರ್ಕಾರಿ ಇಲಾಖೆ ಹೆಸರಿಗೆ ಮಾಡಿಕೊಳ್ಳಲು ವಿಧೇಯಕ ತರಲಾಗಿದೆ ಎಂದು ವಿವರಣೆ ನೀಡಿದರು.

ಈ ವೇಳೆ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ವಿಧೇಯಕ ಸದುದ್ದೇಶದಿಂದ ಕೂಡಿದ್ದು ನಾವು ಬೆಂಬಲ ನೀಡುತ್ತಿದ್ದೇವೆ. ಈ ಕಾಯಿದೆ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಜತೆಗೆ ಕೆಲವರು ಶಾಲೆ, ಕಾಲೇಜು ಜಾಗ ಉಳುಮೆ ಮಾಡಿ ಸಾಗುವಳಿ ಪತ್ರಕ್ಕೆ ಕಾಯುತ್ತಿದ್ದಾರೆ. ಅಂತಹವರಿಗೆ ಅವಕಾಶ ಮಾಡಿಕೊಡಬೇಡಿ ಎಂದರು. ಸ್ಪೀಕರ್ ಯು.ಟಿ. ಖಾದರ್‌, ನಮ್ಮ ಕ್ಷೇತ್ರದಲ್ಲೂ ಈ ಸಮಸ್ಯೆ ಇತ್ತು. ವಿಧೇಯಕ ತಂದಿರುವ ನಿಮಗೆ ಎಲ್ಲರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಏನಿದು ವಿಧೇಯಕ?

ವಿಧೇಯಕದಲ್ಲಿ ರಾಜ್ಯದ ಯಾವುದೇ ಸ್ಥಿರಾಸ್ಥಿ ಮೇಲೆ ಸರ್ಕಾರಿ ಶಾಲೆ, ಪಿಯು ಕಾಲೇಜುಗಳು ಕನಿಷ್ಠ 12 ವರ್ಷಗಳಿಂದ ಕಾರ್ಯನಿರ್ವಹಿಸಿದರೆ ಆ ಭೂಮಿ ಇನ್ನು ಮುಂದೆ ಸರ್ಕಾರಿ ಜಾಗ ಅಥವಾ ಸಂಬಂಧಪಟ್ಟ ಪ್ರಾಧಿಕಾರದ ಆಸ್ತಿಯಾಗಲಿದೆ. ಸ್ಥಿರಾಸ್ತಿ ಮೇಲೆ ಯಾವುದೇ ಋಣಭಾರ ಇರಲಿ, ಕ್ಲೇಮುಗಳಿರಲಿ ಅಥವಾ ಯಾರದ್ದೇ ಉತ್ತರಾಧಿಕಾರ ಇರಲಿ ಅವೆಲ್ಲವೂ ಮುಕ್ತಗೊಳ್ಳಲಿವೆ. ಸದರಿ ಆಸ್ತಿ ಸರ್ಕಾರಿ ಆಸ್ತಿಯಾಗಿ ಪರಿವರ್ತನೆಯಾಗಲಿದೆ.

ಒಂದು ಬಾರಿ ಭೂಮಿ ಸರ್ಕಾರಿ ಭೂಮಿಯಾದ ಬಳಿಕ ಯಾವುದೇ ವ್ಯಕ್ತಿ ಹಕ್ಕು, ಹಕ್ಕುಸ್ವಾಮ್ಯ ಕ್ಲೇಮು ಮಾಡಿ ರಾಜ್ಯ ಸರ್ಕಾರ ಅಥವಾ ಪ್ರಾಧಿಕಾರದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವಂತಿಲ್ಲ ಎಂದು ವಿಧೇಯಕದಲ್ಲಿ ಹೇಳಲಾಗಿದೆ.