ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಿಂದುತ್ವದ ಹೆಸರಲ್ಲಿ ನಾಟಕವಾಡುತ್ತಿದ್ದಾರೆ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಹಿಂದುತ್ವಕ್ಕೆ ಹಾನಿ ಮಾಡಿದೆ ಎಂದು ಅವರು ಟೀಕಿಸಿದ್ದಾರೆ.

ಹುಬ್ಬಳ್ಳಿ (ಮಾ.5): ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಿಂದುತ್ವದ ಹೆಸರಲ್ಲಿ ನಾಟಕ ಮಾಡುತ್ತಿರುವುದನ್ನು ನಾನು ಒಪ್ಪುವುದಿಲ್ಲ. ಕಾಂಗ್ರೆಸ್ ಹಾಗೂ ಡಿ‌.ಕೆ. ಶಿವಕುಮಾರ ಹಿಂದುತ್ವಕ್ಕೆ ಹಾಗೂ ದೇಶಕ್ಕೆ ಬಹುದೊಡ್ಡ ಹಾನಿ ಮಾಡಿದವರು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುತ್ವಕ್ಕೆ ಹಾನಿ ಮಾಡಿ ಈಗ ನಾಟಕ ಮಾಡುತ್ತಿರುವುದು ಸರಿಯಲ್ಲ. ಇದನ್ನು ನಮ್ಮ ಹಿಂದೂ ಸಮಾಜ ಒಪ್ಪುವುದಿಲ್ಲ. ಇದೆಲ್ಲ ಅಧಿಕಾರಕ್ಕಾಗಿ ಮಾಡುತ್ತಿರುವ ನಾಟಕ ಎಂದು ಕಿಡಿಕಾರಿದರು.

ಹಿಂದೂ ನಾಯಕರ ಕೊಲೆಯಾದ ಸಂದರ್ಭದಲ್ಲಿ ನೀವು ನಡೆದುಕೊಂಡ ರೀತಿ, ನಿಮ್ಮ ಪ್ರತಿಕ್ರಿಯೆ ಹೇಗಿತ್ತು ಸ್ವಲ್ಪ ಪೂರ್ವಾಪರ ನೋಡಿಕೊಳ್ಳಿ. ಈಗ ಹಿಂದುತ್ವದ ನಾಟಕ ಆಡುವುದು ಸರಿಯಲ್ಲ ಎಂದರು.

ಇದನ್ನೂ ಓದಿ: ಉದಯಗಿರಿ ಪ್ರಕರಣ: ಮೌಲ್ವಿ ಗಡಿಪಾರು ಮಾಡದೇ, ಸತೀಶ್‌ರನ್ನ ಗಡಿಪಾರು ಹೇಗೆ ಮಾಡ್ತೀರಾ?: ಪೊಲೀಸರ ನಡೆ ವಿರುದ್ಧ ಮುತಾಲಿಕ್ ಆಕ್ರೋಶ

ಶಿವಮೊಗ್ಗ ನಿರ್ಬಂಧಕ್ಕೆ ಆಕ್ರೋಶ

ಶಿವಮೊಗ್ಗಕ್ಕೆ ಪ್ರಮೋದ್ ಮುತಾಲಿಕ್ ನಿರ್ಬಂಧ ಕುರಿತು ಕೇಳಿದ ಪ್ರಶ್ನೆಗೆ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಶಿವಮೊಗ್ಗ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾನೂನನ್ನು ಅರ್ಥ ಮಾಡಿಕೊಂಡಿಲ್ಲ. ಒಬ್ಬ ಮುತಾಲಿಕ್ ನನ್ನು ತಡೆಯಲಾಗದ ಪೊಲೀಸ್‌ ಇಲಾಖೆ ಉಗ್ರರನ್ನು ತಡೆಯುತ್ತೀರಾ? ನಾನಂತೂ ಉಗ್ರನಲ್ಲ, ದೇಶ- ಧರ್ಮಕ್ಕೋಸ್ಕರ ಹೋರಾಡುವಂತವನು ಎಂದು ಸ್ಪಷ್ಟಪಡಿಸಿದರು.

ಡಿಸಿ, ಎಸ್ಪಿಗೆ ಕಾನೂನು ಅರಿವಿಲ್ಲ

ರಾಜ್ಯದಲ್ಲಿ ಲವ್ ಜಿಹಾದ್ ಎನ್ನುವ ಭಯಾನಕ ವೈರಸ್ ಹರಡುತ್ತಿದ್ದು, ಹಿಂದೂ ಹೆಣ್ಣು ಮಕ್ಕಳ ರಕ್ತ ಹೀರುತ್ತಿದೆ. ಅವರ ಸುರಕ್ಷತೆಗಾಗಿ ನಾವು ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಅದು ಬಹಿರಂಗವಾಗಿಯಲ್ಲ, ಒಳಗಡೆ ಕಾರ್ಯಕ್ರಮ ಮಾಡಿದರೆ ಹೇಗೆ ಗಲಭೆಯಾಗುತ್ತದೆ? ಶಿವಮೊಗ್ಗ ಜಿಲ್ಲಾಧಿಕಾರಿ, ಎಸ್ಪಿಗೆ ಕಾನೂನು ಅರಿವು ಇದೆಯಾ? ಎಂದು ಮುತಾಲಿಕ್ ಪ್ರಶ್ನಿಸಿದರು.

ಇದನ್ನೂ ಓದಿ:  ಸಿದ್ದಗಂಗಾ ಮಠಕ್ಕೆ ಬಿಲ್ ಕಳಿಸ್ತೀರಿ, ಚರ್ಚ್ ಮಸೀದಿಗಳಿಗೇಕಿಲ್ಲ? ಕಾಂಗ್ರೆಸ್ ಸರ್ಕಾರದ ವಿರುದ್ಧ ಮುತಾಲಿಕ್ ಆಕ್ರೋಶ

ಹಿಂದೂ ವಿರೋಧಿ ನೀತಿ

30ವರ್ಷಗಳಿಂದ 32 ಜಿಲ್ಲೆಗಳಿಂದಲೂ ನಾನು ಗಡಿಪಾರಿನ ಶಿಕ್ಷೆ ಅನುಭವಿಸುತ್ತಿದ್ದೇನೆ. ಇದರಿಂದ ನನ್ನ ಧ್ವನಿ ಅಡಗಿಸಬಹುದು ಅನ್ನುವುದು ಭ್ರಮೆ. ನನ್ನ ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಮುಸ್ಲಿಂ ತುಷ್ಟೀಕರಣ, ವೋಟ್ ಬ್ಯಾಂಕ್ ಗಮನದಲ್ಲಿಟ್ಟುಕೊಂಡು ಇಂತಹ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಈಗಾಗಲೇ ದೇಶಾದ್ಯಂತ ಸಾಕಷ್ಟು ಕೆಳಮಟ್ಟಕ್ಕೆ ಹೋಗಿದೆ. ಇನ್ನೂ ಬುದ್ಧಿ ಕಲಿಯದೆ ಹೋದರೆ ಸಂಪೂರ್ಣ ಸಮಾಧಿಯಾಗುತ್ತದೆ ಎಂದರು.