ಸಿದ್ದಗಂಗಾ ಮಠಕ್ಕೆ ಬಿಲ್ ಕಳಿಸಿರುವ ಸರ್ಕಾರದ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಷಾಂತರ ಬಾಲಕರಿಗೆ ಉಚಿತ ಸೇವೆ ನೀಡುತ್ತಿರುವ ಮಠಕ್ಕೆ ಬಿಲ್ ಕಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಹೇಳಿದ್ದಾರೆ. ಮಠಕ್ಕೆ ಕಳಿಸಿದಂತೆ ರಾಜ್ಯದ ಎಲ್ಲ ಮಸೀದಿ, ಚರ್ಚ್‌ಗಳಿಗೂ ಬಿಲ್ ಕಳಿಸಿ ನೋಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಬಾಗಲಕೋಟೆ (ಡಿ.28): ಲಕ್ಷಾಂತರ ಬಾಲಕರಿಗೆ ಜಾತಿ, ಭೇದ, ಭಾವ ಇಲ್ಲದೇ ಶಿಕ್ಷಣ, ಉಚಿತ ಊಟ ವಸತಿ ನೀಡುತ್ತಿರುವ ಮಠಕ್ಕೆ ಸರ್ಕಾರ ಬಿಲ್ ಕಳಿಸಿರುವುದು ಅಕ್ಷಮ್ಯ ಅಪರಾಧ. ಮಠಕ್ಕೆ ಎಷ್ಟು ಮಸೀದಿ, ಚರ್ಚ್‌ಗಳಿಗೆ ಈ ರೀತಿ ನೋಟಿಸ್ ಕೊಟ್ಟಿದ್ದೀರಿ. ಮಠಕ್ಕೆ ಕಳಿಸಿದಂತೆ ರಾಜ್ಯದ ಎಲ್ಲ ಮಸೀದಿ, ಚರ್ಚ್‌ಗಳಿಗೆ ಕಳಿಸಿ ನೋಡೋಣ ಎಂದು ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

Add Asianetnews Kannada as a Preferred SourcegooglePreferred

ಸಿದ್ದಗಂಗಾ ಮಠಕ್ಕೆ ಬಿಲ್ ನೋಟಿಸ್ ವಿಚಾರವಾಗಿ ಇಂದು ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸರ್ಕಾರ ಮಾಡದಷ್ಟು ಸೇವೆಯನ್ನು ಶಿಕ್ಷಣ, ವಸತಿ ಸೇವೆಯನ್ನು 30-40 ವರ್ಷಗಳಿಂದ ಮಠ ಮಾಡುತ್ತಾ ಬಂದಿದೆ. ಲಕ್ಷಾಂತರ ಬಡ ಕುಟುಂಬದಿಂದ ಬಂದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಊಟ ಒದಗಿಸುತ್ತಿದೆ. ಅಂಥ ಮಠಕ್ಕೆ ನೋಟಿಸ್ ಕಳಿಸುತ್ತೀರೆಂದರೆ ನಿಮ್ಮದೆಂಥ ಮನಸ್ಥಿತಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಜಮೀರ್ ಒಬ್ಬ ನಾಲಾಯಕ್, ಮತಾಂಧ; ಪ್ರಮೋದ್ ಮುತಾಲಿಕ್ ವಾಗ್ದಾಳಿ | ಬಿಜೆಪಿ ವಿರುದ್ಧವೂ ಕಿಡಿ

ಈ ಸರ್ಕಾರ ಮಠಗಳಿಗೆ ನೋಟಿಸ್ ಕಳಿಸುವ ಮೂಲಕ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ. ಮಠಗಳಿಗೆ ನೋಟಿಸ್ ಕಳಿಸಿದರೆ ಚರ್ಚ್, ಮಸೀದಿಗಳಿಗೂ ಕಳಿಸಬೇಕಲ್ಲವ? ರಾಜ್ಯದಲ್ಲಿ ಎಷ್ಟು ಚರ್ಚ್, ಮಸೀದಿಗಳಿಗೆ ಬಿಲ್ ಕಳಿಸಿದ್ದೀರಿ ಹೇಳಿ ನೋಡೋಣ ಎಂದು ಪ್ರಶ್ನಿಸಿದ ಮುತಾಲಿಕ್, ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ, ಅವರಿಗೊಂದು ಕಾನೂನು, ಹಿಂದೂಗಳಿಗೊಂದು ಕಾನೂನು. ನಾವಿದನ್ನು ಕ್ಷಮಿಸುವುದಿಲ್ಲ ಮಠಕ್ಕೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.