Asianet Suvarna News Asianet Suvarna News

ಪೌಷ್ಟಿಕ ಆಹಾರ ಎಲ್ಲರಿಗೂ ಲಭಿಸಲು ಸರ್ಕಾರ ಕಾರ್ಯ ಪ್ರವೃತ್ತವಾಗಲಿ : ತೇಜಸ್ವಿನಿ ಅನಂತಕುಮಾರ್‌

  •  ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಬೇಕು
  • ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌  ಹೇಳಿಕೆ
  • ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯಾ ಪ್ರದೇಶದ ಜನಸಂಖ್ಯೆಯ ಆಧಾರದ ಮೇಲೆ ಕಮ್ಯೂನಿಟಿ ಕಿಚನ್‌ ಆರಂಭದ ಸಲಹೆ
Govts should work to provide nutritious food to all demands Tejaswini Ananthkumar snr
Author
Bengaluru, First Published Jun 7, 2021, 12:57 PM IST

ಬೆಂಗಳೂರು (ಜೂ. 06): ಬಿಸಿ ಮತ್ತು ಪೌಷ್ಟಿಕ ಆಹಾರ ಎಲ್ಲರಿಗೂ ಲಭಿಸುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿ ಕಾರ್ಯಕ್ರಮ  ಹಮ್ಮಿಕೊಳ್ಳಬೇಕು ಎಂದು ಅದಮ್ಯ ಚೇತನ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಅಭಿಪ್ರಾಯಪಟ್ಟರು. 

ಇಂದು ಅನಂತಕುಮಾರ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ 5 ನೇ ದೇಶ ಮೊದಲು – ಹಸಿವನ್ನು ಮೀರಿದ ಪೌಷ್ಠಿಕತೆ – ದೇಶದಲ್ಲಿ ಹೆಚ್ಚುವರಿ ಆಹಾರ ಮತ್ತು ಕಡಿಮೆ ಪೌಷ್ಟಿಕತೆಯ ಒಗಟು ವೆಬಿನಾರ್‌ ನಲ್ಲಿ ಅವರು  ಮಾತನಾಡಿದ ಅವರು ಪೌಷ್ಟಿಕ ಅಹಾರ ಲಭ್ಯತೆ ಕುರಿತು ತಿಳಿಸಿದರು.

ಅನಂತ್‌ಕುಮಾರ್ ಅವರ ಕನಸು 'ಅದಮ್ಯ ಚೇತನ' ಹುಟ್ಟಿದ್ದು ಹೇಗೆ? ತೇಜಸ್ವಿನಿಯವರು ಹೇಳ್ತಾರೆ...

ಪೌಷ್ಟಿಕತೆಯ ಸೂಚ್ಯಾಂಕದಲ್ಲಿ ಭಾರತದ ಸ್ಥಾನ ಅತ್ಯಂತ ಕೆಳಕ್ಕಿದೆ.  ಹಾಗೆಂದು ನಮ್ಮ ದೇಶದಲ್ಲಿ ಆಹಾರ ಉತ್ಪಾದನೆಯ ಪ್ರಮಾಣ ಕಡಿಮೆ ಎಂದು ಅರ್ಥವಲ್ಲ. ನಾವು ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚು ಆಹಾರ ಉತ್ಪಾದನೆ ಮಾಡುವ ರಾಷ್ಟ್ರವಾಗಿದ್ದೇವೆ. ಆದರೆ, ನಮ್ಮಲ್ಲಿ ಶೇಕಡಾ 40 ಆಹಾರ ಹಾಳಾಗುತ್ತಿದೆ. ಕೆಲವೆಡೆ ಆಹಾರ ಹಾಳಾದರೆ, ಕೆಲವೆಡೆ ಆಹಾರ ಸಿಗುತ್ತಿಲ್ಲ. ಈ ಅಂತರವನ್ನು ಕಡಿಮೆ ಮಾಡಬೇಕು. ಸರಿಯಾದ ಊಟ ಮಾಡಿಯೂ ಅಗತ್ಯ ಪೌಷ್ಟಿಕಾಂಶಗಳನ್ನು ಸೇವಿಸದೇ ಇರುವುದು ಅಪೌಷ್ಟಿಕತೆ. ನಾವು ನಮ್ಮ ಪ್ರಾಚೀನ ವೈವಿಧ್ಯಮಯ ಆಹಾರ ಪದ್ಧತಿಯಿಂದ ವಿಮುಖರಾಗುತ್ತಿದ್ದು, ಅವಸರದ ಹಾಗೂ ಸರಿಯಾದ ಪೌಷ್ಟಿಕತೆ ಇಲ್ಲದ ಆಹಾರ ಬಳುಸುತ್ತಿದ್ದೇವೆ. ಅದಮ್ಯ ಚೇತನ ಸಂಸ್ಥೆ ತನ್ನ ಬಿಸಿಯೂಟದಲ್ಲಿ ಪೌಷ್ಟಿಕತೆಯನ್ನು ಸೇರಿಸುವ ಮೂಲಕ ವಿದ್ಯಾರ್ಥಿಗಳು ಅಪೌಷ್ಟಿಕತೆಯಿಂದ ಬಳಲದೇ ಇರುವುದಕ್ಕೆ  ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು. 

ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಯಾ ಪ್ರದೇಶದ ಜನಸಂಖ್ಯೆಯ ಆಧಾರದ ಮೇಲೆ ಕಮ್ಯೂನಿಟಿ ಕಿಚನ್‌ಗಳನ್ನು ಪ್ರಾರಂಭಿಸಬೇಕು. ಪೌಷ್ಟಿಕತೆ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವ ಮೂಲಕ ಎಲ್ಲರಿಗೂ ಬಿಸಿ ಮತ್ತು ಪೌಷ್ಟಿಕ ಆಹಾರ ಕಡಿಮೆ ದರದಲ್ಲಿ ಅಥವಾ ಉಚಿತವಾಗಿ ದೊರಕಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. 

ದೀರ್ಘಾಯುಷ್ಯ, ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ 2 ಹಣ್ಣು, 3 ತರಕಾರಿ; ಹಾವರ್ಡ್ ವರದಿ! .

ಇದೇ ವೇಳೆ, ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಪೌಷ್ಟಿಕ ಮತ್ತು ಸಾತ್ವಿಕ ಆಹಾರ ಆಂದೋಲನಕ್ಕೆ ಚಾಲನೆ ನೀಡಲಾಯಿತು. 1000 ರೂಪಾಯಿಗಳನ್ನು ನೀಡಿ ಸದಸ್ಯರಾದವರಿಗೆ ನಮ್ಮ ಪ್ರಾಚೀನ ಆಹಾರ ಧಾನ್ಯಗಳನ್ನು ಒಳಗೊಂಡಂತಹ ಕಿಟ್‌ ನ್ನು ನೀಡಲಾಗುತ್ತದೆ. ಇದು ಸಾಂಕ್ರಾಮಿಕ ರೋಗದ ಸಮಯದಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿ ಎಂದರು. 

ಆರೋಗ್ಯ ಮತ್ತು ಶಿಕ್ಷಣವನ್ನು ದಾನದ ವರ್ಗದಲ್ಲಿ (ಚಾರಿಟಿ ಕೆಟಗರಿ) ಸೇರಿಸಿದ್ದು ತೆರಿಗೆಯಲ್ಲಿ ಹಲವಾರು ವಿನಾಯಿತಿಗಳನ್ನು ನೀಡಲಾಗಿದೆ. ಆದರೆ, ಆಹಾರವನ್ನು ದಾನವಾಗಿ ನೀಡುವಂತಹ ಸಂಸ್ಥೆಗಳಿಗೆ ಇನ್ನೂ ಯಾವುದೇ ವಿನಾಯಿತಿಗಳು ಇಲ್ಲದ ಕಾರಣ ಬಹಳಷ್ಟು ಜನರು ತಮಗೆ ಇಷ್ಟವಿದ್ದರೂ ಈ ಕಾರ್ಯದಲ್ಲಿ ತೊಡಗಿಕೊಳ್ಳದೇ ಇರುವಂತಾಗಿದೆ. ಆದ್ದರಿಂದ ದೇಶದ ಕಾನೂನು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಎಂದರು.

ಅಮೇರಿಕಾದ ವಿಶ್ವ ಭಾರತೀಯ ವಿಜ್ಞಾನಿಗಳು ಮತ್ತು ಟೆಕ್ನೋಕ್ರಾಟ್‌ಗಳ ಅಸೋಷಿಯೇಷನ್‌ ಸಂಚಾಲಕರು ಮತ್ತು ದೇಶದಲ್ಲಿ ಆಹಾರ ಕ್ರಾಂತಿ – ಪೌಷ್ಟಿಕತೆಯ ಮಿಷನ್ ಮುನ್ನಡೆಸುತ್ತಿರುವ ಡಾ. ಯೆಲ್ಲೋಜಿ ರಾವ್‌ ಮಿರ್ಜಾಕರ್‌ ಮಾತನಾಡಿ, ನಾವು ಹುಟ್ಟುವುದಕ್ಕೂ ಮುಂಚಿನಿಂದಲೂ ಸರಿಯಾದ ಪೌಷ್ಟಿಕತೆಯನ್ನ ಪಡೆದುಕೊಳ್ಳುವುದು ಬಹಳ ಅವಶ್ಯ ಎಂದು ಸಂಶೋಧನೆಗಳು ಹೇಳುತ್ತವೆ. ಅದರಲ್ಲೂ ಗರ್ಭ ಧರಿಸಿದಾಗ ತಾಯಿ ತೆಗೆದುಕೊಳ್ಳುವ ಆಹಾರ ಮಗುವಿನ ಬೆಳವಣಿಗೆಯಲ್ಲಿ ಬಹಳ ಮಹತ್ವದ ಕೆಲಸವನ್ನು ಮಾಡುತ್ತದೆ. ಅದೇ ಬೆಳವಣಿಗೆಯ ಹಂತದಲ್ಲಿರುವ ಮಗು ಅಪೌಷ್ಟಿಕತೆಯಿಂದ ಬಳಲಿದಾಗ ಮೆದುಳು ಕುಗ್ಗುವುದನ್ನೂ ಸಂಶೋದನೆಗಳು ತಿಳಿಸಿವೆ ಎಂದರು.

ದೇಶ ಅಪೌಷ್ಟಿಕತೆಯ ಸೂಚ್ಯಾಂಕದಲ್ಲಿ ಬಹಳ ಹಿಂದಿನ ಸ್ಥಾನದಲ್ಲಿದ್ದು, ನಮ್ಮಲ್ಲಿ ಬಹಳಷ್ಟು ಜನರು ಅಪೌಷ್ಟಿಕತೆಯಿಂದ ಬಳಲುತ್ತಿರುವುದನ್ನು ಕಾಣಬಹುದಾಗಿದೆ. ನಮ್ಮ ಪ್ರಾಚೀನ ಆಹಾರ ಪದ್ದತಿಯಲ್ಲಿ ಪೌಷ್ಟಿಕಾಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ವೈವಿಧ್ಯಮಯ ಆಹಾರ ಪದ್ದತಿಯನ್ನು ಅನುಸರಿಸಲಾಗುತ್ತಿತ್ತು. ಆದರೆ, ಕೇವಲ ಕಾರ್ಬೋಹೈಡ್ರೈಟ್‌ ಧಾನ್ಯಗಳ ಅತಿಯಾದ ಕೃಷಿಯಿಂದಾಗಿ ಪೌಷ್ಟಿಕ ಆಹಾರ ಧಾನ್ಯಗಳ ಕೊರತೆ ಹೆಚ್ಚಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ ಪೌಷ್ಟಿಕ ಆಹಾರ ಪದ್ದತಿಯ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಅನಂತಕುಮಾರ್‌ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೋ. ಪಿ.ವಿ ಕೃಷ್ಣ ಭಟ್‌,  ಡಾ ಬಿ.ಎಸ್‌ ಶ್ರೀನಾಥ್‌, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ಪ್ರದೀಪ್‌ ಓಕ್‌ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 800 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

Follow Us:
Download App:
  • android
  • ios