ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಎಸ್‌ಐಆರ್‌ ಪ್ರಕ್ರಿಯೆ ಕುರಿತು ಬಿಜೆಪಿ-ಜೆಡಿಎಸ್‌ ವಿರುದ್ಧ ಕಿಡಿಕಾರಿದ್ದು, ಮತದಾನದ ಹಕ್ಕನ್ನು ಕಸಿಯಲು ಯಾರಿಗೂ ಅಧಿಕಾರವಿಲ್ಲ ಎಂದು ಹೇಳಿದ್ದಾರೆ. ಆಯೋಗವು ನಿಯಮ ಉಲ್ಲಂಘಿಸಿದರೆ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. 

ಮತದಾನದ ಹಕ್ಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದು ಜೆಡಿಎಸ್‌ ಹಾಗೂ ಬಿಜೆಪಿ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ. ಅಲ್ಲದೇ ಎಸ್‌ಐಆರ್‌ ನಡೆಸುತ್ತಿರುವುದು ಚುನಾವಣೆ ಆಯೋಗವೇ ಅಥವಾ ಬಿಜೆಪಿ ಜೆಡಿಎಸ್‌ ಪಕ್ಷಗಳೋ ಎಂದು ಗರಂ ಆಗಿದ್ದಾರೆ. ಅಲ್ಲದೇ ಆರಂಭದಿಂದಲೇ ಎಸ್‌ಐಆರ್‌ ವಿರುದ್ಧ ಹಲವಾರು ಆಕ್ಷೇಪಗಳನ್ನು ಎತ್ತಿದ ಖರ್ಗೆ ಎಸ್‌ಐಆರ್‌ ನಿಯಮ ಉಲ್ಲಂಘನೆ ಆಗಿದ್ದೆ ಆದರೆ, ಕಾನೂನು ಹೋರಾಟದ ಮುನ್ಸೂಚನೆ ತಿಳಿಸಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೃಹ ಸಚಿವ ಖರ್ಗೆ ಹೇಳಿದ್ದೇನು?

ರಾಮನಗರದ ಕಲ್ಯಾಣ ಮಂಟಪದಲ್ಲಿ SIR ಪ್ರಕ್ರಿಯೆ ನಡೆಸಿದ ವಿಚಾರವಾಗಿ ಮಾತನಾಡಿದ ಖರ್ಗೆ ಇಲ್ಲಿ ಹೆಚ್ಡಿಕೆ ವರ್ಸಸ್ ಡಿಕೆ‌ ಅಂತೆಲ್ಲ ಇಲ್ಲ. ಎಲ್ಲವೂ ಕಾನೂನು ಮಾರ್ಗದಲ್ಲಿ ನಡೆಯಬೇಕು ನಡೆಯುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಹಿಂದೆ ಎಸ್‌ಐಆರ್‌ ನಾವು ಕೇಳಿದ 12 ಪ್ರಶ್ನೆಗಳಿಗೆ ಇನ್ನೂ ಸಹ ಉತ್ತರ ಬಂದಿಲ್ಲ ಎಂದಿದ್ದಾರೆ. ಎಲ್ಲದಕ್ಕೂ ಕಾನೂನೆ ಮಹೋನ್ನತವಾಗಿದ್ದಾಗ ಮತದಾನದ ಹಕ್ಕು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂದಿದ್ದಾರೆ.

ಸಿಎಂ ಸಮರ್ಥಿಸಿಕೊಂಡ ಖರ್ಗೆ!

ಇಲ್ಲಿ ಎಲ್ಲವೂ ಕಾನೂನಾತ್ಮಕವಾಗಿ ಸರಾಗವಾಗಿ ನಡೆಯಬೇಕೆಂಬುದು ಎಲ್ಲರ ಆಶಯ. ಅಷ್ಟೇ ಅಲ್ಲದೇ ಎಸ್‌ಐಆರ್‌ ಕಾನೂನಾತ್ಮಕವಾಗಿ ನಡೆಸಬೇಕಾದದ್ದು ಆಯೋಗದ ಕೆಲಸ ಸಿಎಂ ಕೆಲಸವಲ್ಲ.ಸಿಎಂ ಪ್ರತಿ ಭೂತ ನೋಡಲಿಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ. ಅಲ್ಲಲ್ಲಿ ಸಮುದಾಯ ಭವನ ಮಸೀದಿ, ಮಂದೀರಗಳಲ್ಲಿ ನಡೆಸಿದರೆ ಪ್ರಕ್ರಿಯೆ ಬೇಗ ಮುಗಿಯುತ್ತದೆ ಎಂದು ಸ್ಥಳೀಯ ನಾಯಕರು ಹೇಳಿರಬಹುದು ಎಂದಿದ್ದಾರೆ.

ಎಲ್ಲವನ್ನೂ ಬಿಜೆಪಿ-ಜೆಡಿಎಸ್ ಮಾಡುತ್ತಾ?

ಆಯೋಗಕ್ಕೆ ಕಳುಹಿಸಿದ ಆಕ್ಷೇಪಣೆಗಳು: ಎಸ್‌ಐಆರ್ ಪ್ರಕ್ರಿಯೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ಸಚಿವ ಸಂಪುಟವು ಒಟ್ಟು 12 ಪ್ರಮುಖ ಆಕ್ಷೇಪಣೆಗಳನ್ನು ಮುಖ್ಯ ಚುನಾವಣಾ ಆಯುಕ್ತರಿಗೆ (CEC) ಕಳುಹಿಸಿತ್ತು. ಆದರೆ ಆಯೋಗವು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಏಕಪಕ್ಷೀಯವಾಗಿ ಪ್ರಕ್ರಿಯೆ ಆರಂಭಿಸಿದೆ.

ತಂತ್ರಜ್ಞಾನದ ಬಳಕೆ!

ಮತದಾರರ ಪಟ್ಟಿಯಲ್ಲಿರುವ ವ್ಯತ್ಯಾಸಗಳನ್ನು ಪತ್ತೆಹಚ್ಚಲು ಆಯೋಗವು ಬಳಸುತ್ತಿರುವ ಕೃತಕ ಬುದ್ಧಿಮತ್ತೆ (AI) ಮತ್ತು ಸಾಫ್ಟ್‌ವೇರ್ ಉಪಕರಣಗಳನ್ನು ಸ್ವತಂತ್ರವಾಗಿ ಆಡಿಟ್ (ಪರೀಕ್ಷೆ) ಮಾಡಬೇಕು ಮತ್ತು ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.

ಮತದಾನದ ಹಕ್ಕು ಕಸಿದುಕೊಳ್ಳುವ ಭೀತಿ!

"ಕೇವಲ ಹೆಸರಿನ ಅಕ್ಷರ ದೋಷ ಅಥವಾ ಭಾಷಾಂತರದ ತಪ್ಪುಗಳಿಗಾಗಿ ಯಾರದೇ ಮತದಾನದ ಹಕ್ಕನ್ನು ಕಸಿದುಕೊಳ್ಳಬಾರದು" ಎಂದು ಹೇಳಿದ್ದಾರೆ. ಈ ಹಿಂದೆ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್‌ ನಡೆಸಿದಾಗ ಆದ ತಪ್ಪುಗಳು ಮತ್ತು ಕೋಟ್ಯಂತರ ಮತದಾರರ ಹೆಸರು ಕೈಬಿಟ್ಟುಹೋದ ಘಟನೆಗಳು ಕರ್ನಾಟಕದಲ್ಲಿ ಮರುಕಳಿಸಬಾರದು ಎಂದು ಎಚ್ಚರಿಸಿದ್ದಾರೆ.

ಸರ್ಕಾರಿ ಯೋಜನೆಗಳಿಂದ ವಂಚಿತರಾಗುವ ಆತಂಕ!

ಎಸ್‌ಐಆರ್‌ನಿಂದ ಹೊರಗುಳಿಯುವ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಆದ್ದರಿಂದ ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ!

ಚುನಾವಣಾ ಆಯೋಗವು ರಾಜ್ಯದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡದಿದ್ದರೆ, ಲಭ್ಯವಿರುವ ಎಲ್ಲಾ ಕಾನೂನು ಮತ್ತು ಸಾಂವಿಧಾನಿಕ ಆಯ್ಕೆಗಳನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.