Asianet Suvarna News Asianet Suvarna News

Term End of 25 MLCs: ಅವಧಿ ಮುಗಿದ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ!

ಬುಧವಾರ ವಿಕಾಸಸೌಧದಲ್ಲಿ  ಪರಿಷತ್‌ ಅವಧಿ ಮುಕ್ತಾಯವಾಗಿರುವ ಸದಸ್ಯರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ನಡೆಯಿತು.

Farewell ceremony  organised Wednesday for MLCs retiring from Karnataka legislative Council mnj
Author
Bengaluru, First Published Jan 6, 2022, 5:35 AM IST

ಬೆಂಗಳೂರು (ಜ. 6): ವಿಧಾನಪರಿಷತ್‌ (Legislative Council) ಸದಸ್ಯರ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ (Vikasa Soudha) ಪರಿಷತ್‌ ಅವಧಿ ಮುಕ್ತಾಯವಾಗಿರುವ ಸದಸ್ಯರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಾದ ನಿರ್ಣಯಗಳನ್ನು ಮರು ದೃಢೀಕರಣ ಮಾಡುವ ಗುರುತರ ಜವಾಬ್ದಾರಿ ವಿಧಾನಪರಿಷತ್‌ನದ್ದಾಗಿದೆ (Council). 

ಪರಿಷತ್‌ಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಪರಿಷತ್‌ನ ಇತಿಹಾಸ, ಪರಂಪರೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆಯ ಜತೆಗೆ ವಿಧಾನಪರಿಷತ್‌ನ ಅಗತ್ಯವಿದೆಯೇ ಎಂಬ ಚರ್ಚೆ ಆಯಾ ಸಂದರ್ಭದಲ್ಲಿ ಹುಟ್ಟಿಕೊಂಡಿದೆ. ಪರಿಸ್ಥಿತಿ, ಸಂದರ್ಭ ಆಧರಿಸಿ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಪರಿಷತ್‌ನ ಮೌಲ್ಯ ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಇದನ್ನೂ ಓದಿ: Term End of 25 MLCs: ಮೇಲ್ಮನೆಯ 25 ಸದಸ್ಯರು ನಿವೃತ್ತಿ, 20 ಹೊಸ ಎಂಟ್ರಿ: ಇಲ್ಲಿದೆ ಪಟ್ಟಿ!

ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಮಾತನಾಡಿ, ಪರಿಷತ್‌ನೊಂದಿಗೆ ನನಗೆ ಭಾವನಾತ್ಮಕ ಸಂಬಂಧ ಇದೆ. ನಿವೃತ್ತರಾಗುವವರು ಮುಂದಿನ ದಿನದಲ್ಲಿ ಯಾವುದಾದರೂ ಸದನಕ್ಕೆ ಬರುವಂತಾಗಲಿ. ಇತ್ತೀಚೆಗೆ ಮೇಲ್ಮನೆ, ವಿಧಾನಸಭೆ, ಲೋಕಸಭೆಯಲ್ಲಿ ಸೋತವರು, ಪ್ರಭಾವಿ ರಾಜಕಾರಣಿಗಳ ಕುಟುಂಬಸ್ಥರು ಇಲ್ಲಿಗೆ ಬರುವಂತಾಗಿದೆ. ಇದು ನೋವಿದೆ ಎಂದರು. ಪರಿಷತ್‌ನಲ್ಲಿ ಹಿಂದೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಾಕಷ್ಟುಗಂಭೀರ ಚರ್ಚೆ ನಡೆಸಲಾಗುತ್ತಿತ್ತು. ಹಾಸ್ಯ, ವಾದ-ವಿವಾದ ಎಲ್ಲವೂ ಇರುತ್ತಿತ್ತು. ಪರಿಷತ್‌ ಸದಸ್ಯರನ್ನು ವಿಧಾನಸಭೆ ಸದಸ್ಯರ ಸಮಾನ ಗೌರವ ಇರಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಪರಿಷತ್‌ನ ಘನತೆ ಉಳಿಸಬೇಕು ಎಂದು ನುಡಿದರು.

ಇದನ್ನೂ ಓದಿ: Scrapping Legislative Council: ಗೆದ್ದವರೆಲ್ಲಾ ಹಣ ಖರ್ಚು ಮಾಡಿದ್ದಾರೆ, ಪರಿಷತ್‌ ರದ್ದು ಚರ್ಚೆ ಅಗತ್ಯ: ಈಶ್ವರಪ್ಪ

ಪರಿಷತ್‌ನ ಸಭಾನಾಯಕ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವ್ಯವಸ್ಥೆಯನ್ನು ವಿಮರ್ಶೆ ಮಾಡುವ ಸಂದರ್ಭ ಬಂದಾಗ ಪರಿಷತ್‌ ಇಂದಿಗೂ ಬಹಳ ಎತ್ತರದಲ್ಲಿದೆ. ಕೆಲವು ಸಂದರ್ಭದಲ್ಲಿ ಪರಿಷತ್‌ ಕೆಟ್ಟಿದೆ ಎಂಬ ಭಾವನೆ ಬಂದರೂ ಶಕ್ತಿ ಕಳೆದುಕೊಂಡಿಲ್ಲ. ಹಲವು ಗಣ್ಯರು ಪ್ರತಿನಿಧಿಸಿ ಬಿಟ್ಟು ಹೋದ ಮೌಲ್ಯ ಇದೆ. ಆದರೆ, ಚುನಾವಣೆಗೆ ನಡೆದ ವೆಚ್ಚಗಳ ವಿಚಾರದಲ್ಲಿ ಶಸ್ತ್ರಚಿಕಿತ್ಸೆ ಅಗತ್ಯ ಇದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿಗಳಾದ ಡಿ.ಎಚ್‌.ಶಂಕರಮೂರ್ತಿ, ಬಿ.ಎಲ್‌.ಶಂಕರ ಉಪಸ್ಥಿತರಿದ್ದರು.

25 ಸದಸ್ಯರು  ನಿವೃತ್ತಿ

ಕಳೆದ 24 ವರ್ಷಗಳಿಂದ ನಿರಂತರವಾಗಿ ಪರಿಷತ್‌ (Legislative Council) ಸದಸ್ಯರಾಗಿ, ಪ್ರತಿಪಕ್ಷದ ನಾಯಕರಾಗಿದ್ದ ಎಸ್‌.ಆರ್‌.ಪಾಟೀಲ್‌, ಎರಡು ಅವಧಿಗೆ ಸದಸ್ಯರಾಗಿದ್ದ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಪ್ರತಿಪಕ್ಷದ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ, ಶಾಸಕರಾಗಿ, ಪರಿಷತ್‌ ಸದಸ್ಯರಾಗಿ, ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್‌ ಪಕ್ಷದ ಕೆ. ಪ್ರತಾಪಚಂದ್ರ ಶೆಟ್ಟಿ ಜ.5 ರಂದು ನಿವೃತ್ತರಾಗಲಿದ್ದಾರೆ.

ಇನ್ನು ಹಿರಿಯ ಸದಸ್ಯ ಕೆ.ಸಿ. ಕೊಂಡಯ್ಯ, ಕೃಷಿ ಕುರಿತು ಪ್ರಭಾವಶಾಲಿಯಾಗಿ ಚರ್ಚೆ ಮಾಡುತ್ತಿದ್ದ ಬಸವರಾಜ ಪಾಟೀಲ್‌ ಇಟಗಿ, ಹಿಂದುಳಿದ ವರ್ಗದ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುತ್ತಿದ್ದ ಶ್ರೀಕಾಂತ್‌ ಘೋಟ್ನೇಕರ್‌, ಆರ್‌. ಧರ್ಮಸೇನ, ಶಿಕ್ಷಣದ ಕುರಿತು ಗಮನ ಸೆಳೆಯುತ್ತಿದ್ದ ಜೆಡಿಎಸ್‌ ಸದಸ್ಯ ಎನ್‌. ಅಪ್ಪಾಜಿಗೌಡ ಸೇರಿದಂತೆ 25 ಸದಸ್ಯರು ನಿವೃತ್ತರಾಗಲಿದ್ದಾರೆ.ಉಳಿದಂತೆ ವಿಜಯಸಿಂಗ್‌,ಜಿ. ರಘು ಆಚಾರ್‌, ಆರ್‌. ಪ್ರಸನ್ನಕುಮಾರ್‌, ಎಂ.ಎ. ಗೋಪಾಲಸ್ವಾಮಿ, ಕಾಂತರಾಜ್‌, ಸಿ.ಆರ್‌. ಮನೋಹರ್‌, ಎಂ.ಪಿ. ಸುನೀಲ್‌ ಸುಬ್ರಮಣಿ, ಎಸ್‌ ನಾಗರಾಜ್‌ (ಸಂದೇಶ ನಾಗರಾಜ್‌) ಅವರು ನಿವೃತ್ತರಾಗಲಿದ್ದಾರೆ. ಕಾಂಗ್ರೆಸ್‌ ಸದಸ್ಯರಾಗಿದ್ದ ಶ್ರೀನಿವಾಸ ಮಾನೆ ಹಾನಗಲ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಯ್ಕೆಯಾದ ನಂತರ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Follow Us:
Download App:
  • android
  • ios