ವಾಣಿಜ್ಯ ತೆರಿಗೆ ಇಲಾಖೆಯು ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿಗಳ ಬೃಹತ್ ಜಿಎಸ್ಟಿ ವಂಚನೆ ಜಾಲವನ್ನು ಪತ್ತೆಹಚ್ಚಿದೆ. ಈ ಸಂಬಂಧ, ನಕಲಿ ಕಂಪನಿಗಳನ್ನು ಸೃಷ್ಟಿಸಿ ಸುಳ್ಳು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನೀಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ತೌಕೀರ್ ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ 410 ಕೋಟಿ ರು. ಜಿಎಸ್ಟಿ ವಂಚನೆ ಜಾಲ ಪತ್ತೆ ಮಾಡಿದ್ದು, ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದೆ.
ಹಲವು ರಾಜ್ಯಗಳಲ್ಲಿ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ರಚಿಸಿ ಸಾಗಿಸುತ್ತಿದ್ದ ಸಂಬಂಧ ಮೊಹಮ್ಮದ್ ತೌಕೀರ್ (42) ಎಂಬಾತನನ್ನು ಬಂಧಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಕಲಿ ಕಂಪನಿಗಳನ್ನು ಸ್ಥಾಪಿಸಿ, ಭಾರೀ ಪ್ರಮಾಣದ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಹಾರ ಮಾಡುತ್ತಿದ್ದ ಆರೋಪದ ಮೇಲೆ ಮೊಹಮ್ಮದ್ ತೌಕೀರ್ನನ್ನು ಬಂಧಿಸಲಾಗಿದ್ದು, ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಈತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ನಕಲಿ ತೆರಿಗೆ ಬಿಲ್, 410 ಕೋಟಿ ರು. ಆರ್ಥಿಕ ವಂಚನೆ
ತನಿಖೆ ವೇಳೆ ಮೊಹಮ್ಮದ್ ತೌಕೀರ್, ಆತನ ಸಹಚರ ಶೇಖ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಈ ಜಾಲದ ಪ್ರಮುಖ ಸೂತ್ರಧಾರರು ಎಂಬುದು ಗೊತ್ತಗಾಗಿದೆ. ಈ ಇಬ್ಬರು ಆರೋಪಿಗಳು ಅನೇಕ ನಕಲಿ ವ್ಯಾಪಾರ ಸಂಸ್ಥೆಗಳನ್ನು ಸ್ಥಾಪಿಸಿ, ವಾಸ್ತವಿಕ ಸರಕು ಪೂರೈಕೆ ಇಲ್ಲದೆ ನಕಲಿ ತೆರಿಗೆ ಬಿಲ್ಗಳನ್ನು ನೀಡುವ ಮೂಲಕ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಸಂಸ್ಥೆಗಳಿಗೆ ಇನ್ಪುಟ್ ಕ್ರೆಡಿಟ್ ರಚಿಸಿ ಹಂಚಿದ್ದಾರೆ. ಈ ಜಾಲ 410 ಕೋಟಿ ರು. ಆರ್ಥಿಕ ವಂಚನೆ ವ್ಯವಹಾರ ಮಾಡಿದ್ದು, ಇದರಲ್ಲಿ 102.5 ಕೋಟಿ ರು. ಸುಳ್ಳು ಇನ್ಪುಟ್ ಕ್ರೆಡಿಡ್ ಕೂಡ ಸೇರಿಕೊಂಡಿದೆ ಎಂದು ಇಲಾಖೆ ತಿಳಿಸಿದೆ.
ಆರೋಪಿಗಳು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು. ಮೊಹಮ್ಮದ್ ತೌಕೀರ್ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಶೇಖ್ ಜಾಕೀರ್ ಆಂಧ್ರಪ್ರದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾನೆ. ಶೇಖ್ ಜಾಕೀರ್ ಹುಸೇನ್ ವಿದೇಶಕ್ಕೆ ಪರಾರಿಯಾಗಿದ್ದು, ಆತನ ಪತ್ತೆ ಹಚ್ಚಿ ಬಂಧನಕ್ಕೆ ಕಾನೂನು ಪ್ರಯತ್ನಗಳು ಮುಂದುವರಿದಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮತ್ತೆ ಗಂಟೆಗಟ್ಟಲೇ ಸುತ್ತಾಡಿದ ಫ್ಲೈ-91; ಇದೇ ಅವಧಿ ಲ್ಯಾಂಡ್-ಟೇಕಾಫ್ ಆದ ಇಂಡಿಗೋ ಪ್ಲೇನ್


