ಹತ್ಯೆಗೀಡಾದ ಪಾಂಗಳದ ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೋಮವಾರ ಭೇಟಿ ನೀಡಿ ಸೌಜನ್ಯ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು.

ಬೆಳ್ತಂಗಡಿ : ಹತ್ಯೆಗೀಡಾದ ಪಾಂಗಳದ ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೋಮವಾರ ಭೇಟಿ ನೀಡಿ ಸೌಜನ್ಯ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ, ಕುಸುಮಾವತಿ ಅವರು ತಮ್ಮ ವಿರುದ್ಧ ನಡೆಯುತ್ತಿರುವ ಅಪಪ್ರಚಾರಗಳ ಬಗ್ಗೆ ವಿಜಯೇಂದ್ರ ಅವರ ಗಮನ ಸೆಳೆದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧರ್ಮಸ್ಥಳ ವಿರುದ್ಧದ ಅಪಪ್ರಚಾರ ಖಂಡಿಸಿ ಬಿಜೆಪಿ ವತಿಯಿಂದ ಸೋಮವಾರ ‘ಧರ್ಮಸ್ಥಳ ಚಲೋ’ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶದ ಬಳಿಕ ವಿಜಯೇಂದ್ರ ಹಾಗೂ ಇತರ ನಾಯಕರು ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದರು. ಸೌಜನ್ಯ ಪರ ಹೋರಾಟದಲ್ಲಿ ಜತೆಗಿರುವುದಾಗಿ ಭರವಸೆ ನೀಡಿದರು. ಈ ವೇಳೆ ವಿಜಯೇಂದ್ರ ಮುಂದೆ, ‘ನನ್ನ ಮಗಳ ಸಾವಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ’ ಎಂದು ತಾಯಿ ಕುಸುಮಾವತಿ ಕಣ್ಣೀರು ಹಾಕಿದರು.

ಬಳಿಕ ಮಾತನಾಡಿದ ವಿಜಯೇಂದ್ರ, ಸೌಜನ್ಯ ವಿಚಾರದ ಬಗ್ಗೆ ಬೇಸರವಿದೆ. ಈ ಪ್ರಕರಣದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದರೆ, ಅದರ ಸಂಪೂರ್ಣ ಖರ್ಚು- ವೆಚ್ಚಗಳ ಜವಾಬ್ದಾರಿಯನ್ನು ಬಿಜೆಪಿ ವಹಿಸಿಕೊಳ್ಳಲಿದೆ. ಜೊತೆಗೆ, ಕಾನೂನು ಹೋರಾಟಕ್ಕೆ ಅಗತ್ಯ ಸಹಕಾರವನ್ನು ನೀಡಲಿದೆ ಎಂದರು. ಸಂಸದ‌ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪಕ್ಷದ ಮುಖಂಡರು ವಿಜಯೇಂದ್ರಗೆ ಸಾಥ್‌ ನೀಡಿದರು.