ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಮತ್ತು ಬಾಡಿವಾರ್ನ್ ಕ್ಯಾಮೆರಾ ಆಫ್ ಮಾಡಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಬೆಂಗಳೂರು (ಮಾ.30): ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ನಿಯಮಗಳ ಹೆಸರಿನಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಮತ್ತು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತ್ತುಗೊಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ (DCP Traffic West) ಅನೂಪ್ ಶೆಟ್ಟಿ ಈ ಅಮಾನತ್ತು ಆದೇಶ ಹೊರಡಿಸಿದ್ದಾರೆ. ಅಮಾನತ್ತಾದವರಲ್ಲಿ ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಎಎಸ್‌ಐ (ASI) ಸುರೇಶ್, ಕಾನ್ಸ್‌ಟೇಬಲ್‌ಗಳಾದ ಪ್ರಶಾಂತ್ ಹಾಗೂ ಸಾದಿಕ್ ಸೇರಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ ಒಂದಾದ ಚಾಲುಕ್ಯ ಸರ್ಕಲ್ ಸುತ್ತಮುತ್ತ ಕರ್ತವ್ಯ ನಿರ್ವಹಿಸುವಾಗ ಈ ಸಿಬ್ಬಂದಿಗಳು ವಾಹನ ಸವಾರರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂಬ ದೂರುಗಳು ಕೇಳಿ ಬಂದಿದ್ದವು. ಮುಖ್ಯವಾಗಿ, ಸಂಚಾರಿ ಪೊಲೀಸರು ಕರ್ತವ್ಯದ ವೇಳೆ ಕಡ್ಡಾಯವಾಗಿ ಧರಿಸಬೇಕಾದ 'ಬಾಡಿವಾರ್ನ್ ಕ್ಯಾಮೆರಾ'ಗಳನ್ನು (Body-Worn Cameras) ಉದ್ದೇಶಪೂರ್ವಕವಾಗಿ ಆಫ್ ಮಾಡಿ, ನಿಯಮ ಉಲ್ಲಂಘಿಸಿದ ಸವಾರರಿಂದ ಲಂಚ ಪಡೆಯುತ್ತಿದ್ದರು ಎಂಬ ಗಂಭೀರ ಆರೋಪ ಎದುರಿಸುತ್ತಿದ್ದರು.

ಸಾರ್ವಜನಿಕರ ದೂರು ಮತ್ತು ಇಲಾಖಾ ತನಿಖೆ:

ವಾಹನಗಳನ್ನು ತಡೆದು ಹಣ ವಸೂಲಿ ಮಾಡುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಇಲಾಖೆಯು ಆಂತರಿಕ ತನಿಖೆ ನಡೆಸಿತ್ತು. ತನಿಖೆಯ ವೇಳೆ ಈ ಮೂವರು ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿರುವುದು ಮತ್ತು ಲಂಚ ಪಡೆದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ ಮೂವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಡಿಸಿಪಿ ಅನೂಪ್ ಶೆಟ್ಟಿ ಆದೇಶಿಸಿದ್ದಾರೆ.

ಹಳೆಯ ಚಾಳಿ ಮುಂದುವರಿಸಿದ ಕಾನ್ಸ್‌ಟೇಬಲ್ ಸಾದಿಕ್:

ಅಮಾನತ್ತಾದವರ ಪೈಕಿ ಕಾನ್ಸ್‌ಟೇಬಲ್ ಸಾದಿಕ್ ಎಂಬಾತ ಈ ಹಿಂದೆಯೂ ಇಂತಹದ್ದೇ ಪ್ರಕರಣದಲ್ಲಿ ಸಿಲುಕಿದ್ದ ಎನ್ನಲಾಗಿದೆ. ಈತ ಈ ಹಿಂದೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೂ ಸಸ್ಪೆಂಡ್ ಆಗಿದ್ದ. ಅಲ್ಲಿಂದ ಹೈಗ್ರೌಂಡ್ಸ್ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದರೂ ತನ್ನ ಹಳೆಯ ಬುದ್ಧಿಯನ್ನು ಬಿಡದೆ ಲಂಚದ ಆಸೆಗೆ ಬಿದ್ದಿದ್ದ ಎಂದು ತಿಳಿದುಬಂದಿದೆ.

ಪೊಲೀಸ್ ಇಲಾಖೆಯ ಕಠಿಣ ಸಂದೇಶ:

ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯು ಪಾರದರ್ಶಕತೆಗಾಗಿ ಬಾಡಿವಾರ್ನ್ ಕ್ಯಾಮೆರಾಗಳನ್ನು ನೀಡಿದೆ. ಆದರೆ ಅದನ್ನು ಆಫ್ ಮಾಡಿ ಹಣ ವಸೂಲಿಗೆ ಇಳಿಯುವ ಭ್ರಷ್ಟ ಸಿಬ್ಬಂದಿಗಳಿಗೆ ಈ ಅಮಾನತ್ತು ಕ್ರಮವು ಒಂದು ಎಚ್ಚರಿಕೆಯ ಸಂದೇಶವಾಗಿದೆ. 'ಯಾವುದೇ ಸಿಬ್ಬಂದಿ ಲಂಚ ಅಥವಾ ಕಿರುಕುಳ ನೀಡುತ್ತಿದ್ದರೆ ಸಾರ್ವಜನಿಕರು ದೂರು ನೀಡಬಹುದು' ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.