Asianet Suvarna News Asianet Suvarna News

Bengaluru crime: ಸಾಲ ವಾಪಸ್‌ ಕೊಡದ್ದಕ್ಕೆ ಸ್ನೇಹಿತರ ಕಿಡ್ನಾಪ್‌!

ಹಣಕಾಸು ವಿವಾದದ ಹಿನ್ನಲೆಯಲ್ಲಿ ತಮ್ಮ ಪರಿಚಿತ ಉದ್ಯಮಿಗಳನ್ನು ಅಪಹರಿಸಿದ್ದ ಸಂತ್ರಸ್ತರ ನಾಲ್ವರು ಸ್ನೇಹಿತರನ್ನು ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Bengaluru crime: Kidnapping of friends for returning loan Rapid action by city police rav
Author
First Published Jul 16, 2023, 5:07 AM IST

ಬೆಂಗಳೂರು (ಜು.16) : ಹಣಕಾಸು ವಿವಾದದ ಹಿನ್ನಲೆಯಲ್ಲಿ ತಮ್ಮ ಪರಿಚಿತ ಉದ್ಯಮಿಗಳನ್ನು ಅಪಹರಿಸಿದ್ದ ಸಂತ್ರಸ್ತರ ನಾಲ್ವರು ಸ್ನೇಹಿತರನ್ನು ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಆಗ್ನೇಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ರಘುನಂದನ್‌ ಹಾಗೂ ಕಾರ್ತಿಕ್‌ ಅಪಹೃತರಾಗಿದ್ದು, ಅವರ ಸ್ನೇಹಿತರಾದ ಮಧುಸೂದನ್‌, ಯೋಗೇಶ್‌, ಆನಂದ್‌ ಬಾಬು ಹಾಗೂ ಜನಾರ್ದನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಎಚ್‌ಎಸ್‌ಆರ್‌ ಲೇಔಟ್‌ ಹ್ಯಾಂಗ್‌ ಓವರ್‌ ಪಬ್‌ ಬಳಿ ಗೆಳೆಯರನ್ನು ಶುಕ್ರವಾರ ರಾತ್ರಿ ಆರೋಪಿಗಳು ಕಾರಿನಲ್ಲಿ ಅಪಹರಿಸಿದ್ದರು. ಈ ಬಗ್ಗೆ ಟ್ವೀಟರ್‌ನಲ್ಲಿ ನಾಗರಿಕರೊಬ್ಬರು ವಿಡಿಯೋ ಸಮೇತ ದೂರು ನೀಡಿದರು. ಈ ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಜಾಗೃತರಾದ ಆಗ್ನೇಯ ವಿಭಾಗದ ಡಿಸಿಪಿ ಡಾ ಸಿ.ಕೆ.ಬಾಬು ಅವರು, ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆಗಿಳಿದರು. ಕೊನೆಗೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಮಾರತ್ತಹಳ್ಳಿ ಬಳಿ ಅಪಹರಣಕಾರರು ಪತ್ತೆಯಾಗಿದ್ದಾರೆ. ಹಣಕ್ಕಾಗಿ ಒತ್ತೆಯಾಗಿದ್ದ ಇಬ್ಬರು ಉದ್ಯಮಿಗಳನ್ನು ಸುರಕ್ಷಿತವಾಗಿ ಮರಳಿ ಮನೆಗೆ ತಲುಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Belgum crime: ಚಾಕೊಲೇಟ್‌ ಆಮಿಷವೊಡ್ಡಿ ಬಾಲಕಿ ಕಿಡ್ನಾಪ್‌ ಯತ್ನ

.30 ಲಕ್ಷ ವಿವಾದ:

ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ವ್ಯವಹಾರದಲ್ಲಿ ಆಂಧ್ರಪ್ರದೇಶದ ರಘುನಂದನ್‌ ಹಾಗೂ ಕಾರ್ತಿಕ್‌ ತೊಡಗಿದ್ದು, ಎಚ್‌ಎಸ್‌ಆರ್‌ ಲೇಔಟ್‌ ಸಮೀಪ ಅವರು ನೆಲೆಸಿದ್ದಾರೆ. ವರ್ಷದ ಹಿಂದೆ ತಮ್ಮ ಗೆಳೆಯರಾದ ಮಧುಸೂದನ್‌ ಹಾಗೂ ಆನಂದ್‌ ಬಾಬು ಅವರಿಂದ .30 ಲಕ್ಷ ಸಾಲ ಪಡೆದಿದ್ದರು. ಆದರೆ ಸಕಾಲಕ್ಕೆ ಹಣ ಮರಳಿಸದ ಕಾರಣಕ್ಕೆ ಈ ಸ್ನೇಹಿತರ ಮಧ್ಯೆ ಮನಸ್ತಾಪವಾಗಿತ್ತು. ಹಣ ಮರಳಿಸುವಂತೆ ವಿನಂತಿಸಿದರೂ ಕ್ಯಾರೇ ಎನ್ನದೆ ಹೋದಾಗ ಅಪಹರಿಸಿ ಒತ್ತೆಯಾಗಿಟ್ಟುಕೊಳ್ಳಲು ಮಧುಸೂದನ್‌ ಹಾಗೂ ಆನಂದ್‌ ಯೋಜಿಸಿದ್ದರು. ಅಂತೆಯೇ ಹಣಕಾಸು ಮಾತುಕತೆ ಸಲುವಾಗಿ ಶುಕ್ರವಾರ ರಾತ್ರಿ ಎಚ್‌ಎಸ್‌ಆರ್‌ ಲೇಔಟ್‌ನ ಹ್ಯಾಂಗ್‌ ಓವರ್‌ ಪಬ್‌ಗೆ ಎರಡು ಕಡೆಯವರು ಬಂದಿದ್ದರು. ಆಗ ಮಾತುಕತೆ ವೇಳೆ ಹಣ ನೀಡಲು ಒಪ್ಪದೆ ಹೋದಾಗ ಸಿಟ್ಟಿಗೆದ್ದ ಆರೋಪಿಗಳು, ತಮ್ಮ ಸ್ನೇಹಿತರನ್ನು ಪಬ್‌ನಿಂದ ಬಲವಂತವಾಗಿ ಹೊರಗೆ ಕರೆತಂದು ಕಾರಿಗೆ ಹತ್ತಿಸಿಕೊಂಡು ಹೊರಟ್ಟಿದ್ದಾರೆ. ಈ ಸಂದರ್ಭದಲ್ಲಿ ರಘುನಂದನ್‌ ಹಾಗೂ ಕಾರ್ತಿಕ್‌ ತೀವ್ರ ಪ್ರತಿರೋಧ ತೋರಿದ್ದಾರೆ. ಆಗ ತಳ್ಳಾಟ-ನೂಕಾಟ ನಡೆದು ಸಾರ್ವಜನಿಕರು ಜಮಾಯಿಸಿದ್ದಾರೆ. ಈ ಪ್ರತಿರೋಧದ ನಡುವೆಯೇ ಆ ಇಬ್ಬರನ್ನು ಕಾರಿಗೆ ಹತ್ತಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಘಟನೆ ಬಗ್ಗೆ ಟ್ವೀಟರ್‌ನಲ್ಲಿ ಪೊಲೀಸರಿಗೆ ನಾಗರಿಕರೊಬ್ಬರು ದೂರು ನೀಡಿದರು. ಕೂಡಲೇ ಜಾಗೃತರಾದ ಆಗ್ನೇಯ ವಿಭಾಗದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಕಾರಿನ ನೋಂದಣಿ ಸಂಖ್ಯೆ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ 12 ತಾಸಿನೊಳಗೆ ಆರೋಪಿಗಳನ್ನು ಪತ್ತೆ ಹಚ್ಚಿ ಅಪೃಹತರನ್ನು ರಕ್ಷಿಸಿದ್ದಾರೆ.

ಕಾರ್ಯಾಚರಣೆಗೆ ನೆರವಾಯ್ತು ಡಿಸಿಪಿ ಅವರ ಕಾಲ್ನಡಿಗೆ ಗಸ್ತು

ವಾರಾಂತ್ಯದ ಪಾರ್ಟಿಗಳ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕೋರಮಂಗಲ ವ್ಯಾಪ್ತಿಯಲ್ಲಿ ಶುಕ್ರವಾರ-ಶನಿವಾರ ರಾತ್ರಿ ಆಗ್ನೇಯ ವಿಭಾಗದ ಡಿಸಿಪಿ ಡಾ ಸಿ.ಕೆ.ಬಾಬು ಹಾಗೂ ಎಸಿಪಿ ಕಾಲ್ನಡಿಗೆಯಲ್ಲಿ ಗಸ್ತು ನಡೆಸಿದ್ದಾರೆ.

 

 

ಲೋನ್‌ ಕಟ್ಟದ ತಂದೆ, ರಿಕವರಿಗಾಗಿ ಆತನ ಮಗಳನ್ನೇ ಕಿಡ್ನಾಪ್‌ ಮಾಡಿದ ಏಜೆಂಟ್‌!

ಕೋರಮಂಗಲ ವ್ಯಾಪ್ತಿ ಪಬ್‌, ಹೋಟೆಲ್‌ ಹಾಗೂ ಕ್ಲಬ್‌ಗಳು ಹೆಚ್ಚಿದ್ದು, ಇಲ್ಲಿ ಶುಕ್ರವಾರ-ಶನಿವಾರ ರಾತ್ರಿ ಆಯೋಜಿಸುವ ಪಾರ್ಟಿಗಳಿಗೆ ಹೆಚ್ಚಿನ ಜನರು ಜಮಾಯಿಸುತ್ತಾರೆ. ಇದರಿಂದ ರಾತ್ರಿ ವೇಳೆ ಮದ್ಯದ ಅಮಲಿನಲ್ಲಿ ಗಲಾಟೆಗಳು ಹಾಗೂ ಅನುಚಿತ ಘಟನೆಗಳ ಬಗ್ಗೆ ವರದಿಯಾಗುತ್ತಿದ್ದವು. ಈ ಹಿನ್ನೆಲೆಯಲ್ಲಿ ನಾಗರಿಕರ ಸುರಕ್ಷತೆ ದೃಷ್ಟಿಯಿಂದ ಡಿಸಿಪಿ ಹಾಗೂ ಎಸಿಪಿ ಅವರು, ಕೋರಮಂಗಲದ ಪ್ರಮುಖ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ಗಸ್ತು ನಡೆಸಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸಿದ್ದರು. ಅಂತೆಯೇ ಶುಕ್ರವಾರ ರಾತ್ರಿ ಡಿಸಿಪಿ ಸಿ.ಕೆ.ಬಾಬು ಅವರು ಗಸ್ತಿನಲ್ಲಿದ್ದಾಗಲೇ ಎಚ್‌ಎಸ್‌ಆರ್‌ ಲೇಔಟ್‌ ವ್ಯಾಪ್ತಿ ಉದ್ಯಮಿಗಳ ಅಪಹರಣ ಘಟನೆ ಮಾಹಿತಿ ತಿಳಿದು ಕ್ಷಿಪ್ರ ಕಾರ್ಯಾಚರಣೆ ಹಮ್ಮಿಕೊಂಡಿದ್ದಾರೆ.

Follow Us:
Download App:
  • android
  • ios