ಬೆಳಗಾವಿಯ ಹಲಗಾ ಗ್ರಾಮವು ಡಿಜಿಟಲ್ ವ್ಯಸನಕ್ಕೆ ಕಡಿವಾಣ ಹಾಕಲು 'ಡಿಜಿಟಲ್ ಆಫ್' ಎಂಬ ಮಾದರಿ ಪ್ರಯೋಗವನ್ನು ಆರಂಭಿಸಿದೆ. ಪ್ರತಿದಿನ ಸಂಜೆ 7 ರಿಂದ 9 ರವರೆಗೆ ಸೈರನ್ ಮೊಳಗಿಸಿ, ಗ್ರಾಮಸ್ಥರು ಮೊಬೈಲ್ ಮತ್ತು ಟಿವಿಗಳನ್ನು ಆಫ್ ಮಾಡಿ ಮಕ್ಕಳು ಓದುತ್ತಾರೆ. 

ಬೆಳಗಾವಿ (ಡಿ.22): ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಮೊಬೈಲ್ ಮತ್ತು ಟಿವಿಯ ಮಾಯಾಲೋಕಕ್ಕೆ ಅಂಟಿಕೊಂಡಿದ್ದಾರೆ. ಈ ಡಿಜಿಟಲ್ ವ್ಯಸನವು ಮಕ್ಕಳ ಓದಿನ ಮೇಲೆ ಮತ್ತು ಕುಟುಂಬದ ಬಾಂಧವ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದನ್ನು ಮನಗಂಡ ಬೆಳಗಾವಿ ತಾಲೂಕಿನ ಹಲಗಾ ಗ್ರಾಮಸ್ಥರು ಒಂದು ಕ್ರಾಂತಿಕಾರಿ ಮತ್ತು ಮಾದರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇ 'ಡಿಜಿಟಲ್ ಆಫ್' ಪ್ರಯೋಗ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಿದು ಡಿಜಿಟಲ್ ಆಫ್ ಪ್ರಯೋಗ?

ಮಹಾರಾಷ್ಟ್ರದ ಹಳ್ಳಿಯೊಂದರ ಮಾದರಿಯನ್ನು ಅನುಸರಿಸಿರುವ ಹಲಗಾ ಗ್ರಾಮಸ್ಥರು, ಪ್ರತಿದಿನ ಸಂಜೆ 2 ಗಂಟೆಗಳ ಕಾಲ ಯಾವುದೇ ಡಿಜಿಟಲ್ ಸಾಧನಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ. ಡಿಸೆಂಬರ್ 17 ರಿಂದ ಅಧಿಕೃತವಾಗಿ ಆರಂಭವಾಗಿರುವ ಈ ಅಭಿಯಾನದ ಅನ್ವಯ, ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಗ್ರಾಮದ ಎಲ್ಲ ಮನೆಗಳಲ್ಲಿ ಮೊಬೈಲ್ ಮತ್ತು ಟಿವಿಗಳನ್ನು ಸ್ವಿಚ್ ಆಫ್ ಮಾಡಲಾಗುತ್ತದೆ.

ಸೈರನ್ ಮೊಳಗಿದರೆ ಸಾಕು ಎಲ್ಲವೂ ಬಂದ್

ಗ್ರಾಮ ಪಂಚಾಯಿತಿಯ ವತಿಯಿಂದ ಪ್ರತಿದಿನ ಸಂಜೆ 7 ಗಂಟೆಗೆ ಸರಿಯಾಗಿ ಗ್ರಾಮದಲ್ಲಿ ಸೈರನ್ ಮೊಳಗಿಸಲಾಗುತ್ತದೆ. ಈ ಸೈರನ್ ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ಟಿವಿ ಆಫ್ ಮಾಡುತ್ತಾರೆ ಮತ್ತು ಮೊಬೈಲ್ ಪಕ್ಕಕ್ಕಿಡುತ್ತಾರೆ. ಮತ್ತೆ ರಾತ್ರಿ 9 ಗಂಟೆಗೆ ಸೈರನ್ ಮೊಳಗಿದ ನಂತರವಷ್ಟೇ ಡಿಜಿಟಲ್ ಸಾಧನಗಳ ಬಳಕೆಗೆ ಅವಕಾಶವಿರುತ್ತದೆ.

ಮಕ್ಕಳ ಓದಿಗೆ ಹೆಚ್ಚಿನ ಆದ್ಯತೆ

ಈ ಎರಡು ಗಂಟೆಗಳ ಅವಧಿಯನ್ನು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಡಲಾಗಿದೆ. ಪೋಷಕರು ತಮ್ಮ ಮಕ್ಕಳ ಜೊತೆ ಕುಳಿತು ಅವರ ಪಾಠ ಪ್ರವಚನಗಳ ಕಡೆ ಗಮನ ಹರಿಸುತ್ತಾರೆ. ಮೊಬೈಲ್ ಕಿರಿಕಿರಿ ಇಲ್ಲದ ಕಾರಣ ಮಕ್ಕಳು ಏಕಾಗ್ರತೆಯಿಂದ ಓದುತ್ತಿದ್ದಾರೆ. ಓದಿನ ಜೊತೆಗೆ ಹಿರಿಯರೊಂದಿಗೆ ಕಾಲ ಕಳೆಯುವುದು, ಸಾಂಸ್ಕೃತಿಕ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಸಮಯವನ್ನು ಬಳಸಲಾಗುತ್ತಿದೆ.

ಗ್ರಾಮಸ್ಥರ ಅಭೂತಪೂರ್ವ ಬೆಂಬಲ

ಗ್ರಾಮ ಪಂಚಾಯಿತಿಯ ಈ ನಿರ್ಧಾರಕ್ಕೆ ಇಡೀ ಗ್ರಾಮವೇ ಸಾಥ್ ನೀಡಿದೆ. ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ, ಈಗ ಎಲ್ಲರೂ ಇದಕ್ಕೆ ಒಗ್ಗಿಕೊಂಡಿದ್ದಾರೆ. 'ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮತ್ತು ಮನೆಯಲ್ಲಿ ನೆಮ್ಮದಿಯ ವಾತಾವರಣ ನಿರ್ಮಾಣಕ್ಕಾಗಿ ಈ ನಿರ್ಧಾರ ಅವಶ್ಯಕವಾಗಿತ್ತು' ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ಯುಗದಲ್ಲಿ ಮೊಬೈಲ್ ಹವ್ಯಾಸದಿಂದ ದೂರ ಸರಿಯುವುದು ಕಷ್ಟದ ಮಾತಾಗಿರುವಾಗ, ಹಲಗಾ ಗ್ರಾಮದ ಈ ಪ್ರಯತ್ನ ರಾಜ್ಯದ ಇತರ ಗ್ರಾಮಗಳಿಗೂ ದಾರಿದೀಪವಾಗಿದೆ. ಸೈಬರ್ ಜಗತ್ತಿನಿಂದ ಹೊರಬಂದು ನೈಜ ಜೀವನದತ್ತ ಸಾಗುತ್ತಿರುವ ಈ ಗ್ರಾಮದ ನಡೆ ನಿಜಕ್ಕೂ ಶ್ಲಾಘನೀಯ.