ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಪವಿತ್ರಾಗೌಡ, ಜೈಲಿನ ಊಟದಿಂದ ಅಲರ್ಜಿಯಾಗಿದೆ ಎಂದು ಮನೆಯೂಟಕ್ಕೆ ಮನವಿ ಮಾಡಿದ್ದರು. ವಕೀಲರು ಮತ್ತು ಜೈಲು ಅಧಿಕಾರಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಪವಿತ್ರಾಗೌಡ ಸೇರಿದಂತೆ ಮೂವರು ಆರೋಪಿಗಳಿಗೆ ವಾರಕ್ಕೊಮ್ಮೆ ಮಾತ್ರ ಮನೆಯೂಟ ನೀಡಲು ಅನುಮತಿ ನೀಡಿದೆ.

ಬೆಂಗಳೂರು (ಜ.12): ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ವಿಚಾರಣೆ ಚುರುಕುಗೊಂಡಿದ್ದು, ಆರೋಪಿ ಪವಿತ್ರಾಗೌಡ ಅವರಿಗೆ ಮನೆಯೂಟ ನೀಡುವ ವಿಚಾರದಲ್ಲಿ ಇಂದು ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ಜೈಲೂಟ ತಿಂದು ಅಲರ್ಜಿಯಾಗಿ ಮೈಯೆಲ್ಲೆಲ್ಲಾ ಗುಳ್ಳೆಗಳಾಗಿವೆ ಎಂದಿದ್ದ ಪವಿತ್ರಾ ಗೌಡಗೆ ಇದೀಗ ವಾರಕ್ಕೊಮ್ಮೆ ಮನೆ ಊಟ ನೀಡುವಂತೆ ಜೈಲಿನ ಅಧಿಕಾರಿಗಳಿಗೆ ಆದೇಶವನ್ನು ನೀಡಿದೆ.

ವಾರಕ್ಕೊಮ್ಮೆ ಮಾತ್ರ ಸವಿಯುವ ಭಾಗ್ಯ?

ಸದ್ಯದ ಮಾಹಿತಿಯ ಪ್ರಕಾರ, ಪವಿತ್ರಾಗೌಡ, ನಾಗರಾಜ್ ಮತ್ತು ಲಕ್ಷ್ಮಣ್‌ ಅವರಿಗೆ ವಾರಕ್ಕೊಮ್ಮೆ ಮಾತ್ರ ಮನೆಯೂಟ ಸವಿಯಲು ಕೋರ್ಟ್ ಅವಕಾಶ ನೀಡಿದೆ. ಒಂದು ವೇಳೆ ಆರೋಗ್ಯದಲ್ಲಿ ಗಂಭೀರ ವ್ಯತ್ಯಾಸ ಕಂಡುಬಂದರೆ ಮಾತ್ರ ವೈದ್ಯರ ಸಲಹೆಯ ಮೇರೆಗೆ ಪ್ರತಿದಿನ ಮನೆಯೂಟ ನೀಡಬಹುದು ಎಂದು ಆದೇಶಿಸಲಾಗಿದೆ. ಈ ಕಟ್ಟುನಿಟ್ಟಿನ ಆದೇಶವನ್ನು ಪಾಲಿಸಲು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜೈಲು ಅಧಿಕಾರಿಗಳು ಮತ್ತು ವಕೀಲರ ವಾದ-ಪ್ರತಿವಾದ

ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ಅವರು ಕೋರ್ಟ್‌ನಲ್ಲಿ ವಾದ ಮಂಡಿಸಿ, 'ಜೈಲಿನಲ್ಲಿ ಊಟ ಸರಿಯಿಲ್ಲ, ಅನೇಕರಿಗೆ ಮನೆಯೂಟದ ಸೌಲಭ್ಯವಿದೆ. ಕೋರ್ಟ್ ಆದೇಶವಿದ್ದರೂ ಪವಿತ್ರಾಗೌಡ ಅವರಿಗೆ ಅಧಿಕಾರಿಗಳು ಮನೆಯೂಟ ನೀಡುತ್ತಿಲ್ಲ, ಅವರ ಜನ್ಮದಿನದಂದೂ ಅವಕಾಶ ಕೊಟ್ಟಿಲ್ಲ' ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿವಾದ ಮಂಡಿಸಿದ ಜೈಲು ಅಧಿಕಾರಿಗಳು, 'ಜೈಲಿನಲ್ಲಿ 4,700 ಕೈದಿಗಳಿದ್ದು, ಎಲ್ಲರಿಗೂ ಉತ್ತಮ ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತಿದೆ. ಪವಿತ್ರಾ ಗೌಡಗೆ ವಿಶೇಷ ರಿಯಾಯಿತಿ ನೀಡಿ ಮನೆಯೂಟ ಕೊಟ್ಟರೆ, ಇತರ ಕೈದಿಗಳೂ ಇದೇ ಬೇಡಿಕೆ ಇಡುತ್ತಾರೆ. ಇದು ಭದ್ರತೆ ಮತ್ತು ಶಿಸ್ತಿನ ದೃಷ್ಟಿಯಿಂದ ಸರಿಯಲ್ಲ' ಎಂದು ಮನವಿ ಮಾಡಿದರು. 57ನೇ ಸೆಷನ್ಸ್ ಕೋರ್ಟ್ ಎರಡೂ ಕಡೆಯ ವಾದ ಆಲಿಸಿ ಆದೇಶವನ್ನು ಇಂದಿಗೆ ಕಾಯ್ದಿರಿಸಿ ಕೊನೆಗೆ ವಾರಕ್ಕೊಮ್ಮೆ ಮನೆ ಊಟಕ್ಕೆ ಆದೇಶ ನೀಡಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಹಾಜರು

ಇನ್ನು ಈ ಪ್ರಕರಣದ ಟ್ರಯಲ್ ವಿಚಾರಣೆಯನ್ನು ಕೋರ್ಟ್ ನಾಳೆಗೆ ಮುಂದೂಡಿದೆ. ಜೈಲಿನಿಂದ ನಟ ದರ್ಶನ್ ಮತ್ತು ಪವಿತ್ರಾಗೌಡ ಸೇರಿದಂತೆ 7 ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರೆ, ಉಳಿದ 10 ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇದೇ ವೇಳೆ ಆರೋಪಿ ಪ್ರದೂಷ್ ತನ್ನ ತಂದೆಯ ತಿಥಿ ಕಾರ್ಯದ ನಿಮಿತ್ತ ಜನವರಿ 17 ರಿಂದ 22 ರವರೆಗೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯೂ ನಾಳೆಗೆ ನಡೆಯಲಿದೆ.